![ಶಿಕ್ಷಣ ಮತ್ತು ಧರ್ಮಶ್ರದ್ಧೆ ಇದ್ದರೆ ಒಳ್ಳೆಯವನು ಎನ್ನಲಾಗದು: ಸುಪ್ರೀಂ ಕೋರ್ಟ್ ಶಿಕ್ಷಣ ಮತ್ತು ಧರ್ಮಶ್ರದ್ಧೆ ಇದ್ದರೆ ಒಳ್ಳೆಯವನು ಎನ್ನಲಾಗದು: ಸುಪ್ರೀಂ ಕೋರ್ಟ್](https://blogger.googleusercontent.com/img/b/R29vZ2xl/AVvXsEiyQStJQ7h5WHhTHMX5nN9yam7us4wwKoQ00z9Xy5ZS-rmPhpokl-AJBJdFpU6aALvd1ISr_Icige2zZ6c0lfEWKD255oKTi2r3w1JFlqe4Wg7iWYIJykmFr260cAnMdyVTGvXVi26bobs8sUPe0sQeNV20PhKlWLHJJJrRM9apq1VYy2qw_021wUJX56jI/w640-h480/images.jpg)
ಶಿಕ್ಷಣ ಮತ್ತು ಧರ್ಮಶ್ರದ್ಧೆ ಇದ್ದರೆ ಒಳ್ಳೆಯವನು ಎನ್ನಲಾಗದು: ಸುಪ್ರೀಂ ಕೋರ್ಟ್
ಶಿಕ್ಷಣ ಮತ್ತು ಧರ್ಮಶ್ರದ್ಧೆ ಇದ್ದರೆ ಒಳ್ಳೆಯವನು ಎನ್ನಲಾಗದು: ಸುಪ್ರೀಂ ಕೋರ್ಟ್
ಉತ್ತಮ ಶಿಕ್ಷಣ ಪಡೆದಿದ್ದಾನೆ ಮತ್ತು ದೇವರದಲ್ಲಿ ಭಕ್ತಿ ಇದೆ ಎಂಬ ಕಾರಣಕ್ಕೆ ಒಬ್ಬ ವ್ಯಕ್ತಿಯನ್ನು ಆತ ಒಳ್ಳೆಯವನು ಎಂದು ಹೇಳಲಾಗದು ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.
ಸುಪ್ರೀಂ ಕೋರ್ಟ್ನ ನ್ಯಾ. ಎಂ.ಎಂ. ಸುಂದರೇಶ್ ಮತ್ತು ನ್ಯಾ. ಜೆ.ಬಿ. ಪರ್ದೀವಾಲಾ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಮಹತ್ವದ ತೀರ್ಪು ನೀಡಿದೆ.
ಮಹಿಳೆಯೊಬ್ಬರನ್ನು ಅತ್ಯಾಚಾರ ಮಾಡಿ ಕೊಲೆ ಮಾಡಿದ ಆರೋಪ ಇರುವ ಹರ್ವಿಂದರ್ ಸಿಂಗ್ ಆಲಿಯಾಸ್ ಬಚ್ಚು ಎಂಬಾತನನ್ನು ಖುಲಾಸೆಗೊಳಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶವನ್ನು ಹಿಮಾಚಲ ಪ್ರದೇಶ ಹೈಕೋರ್ಟ್ ವಜಾಗೊಳಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೇಲ್ಮನವಿ ಅರ್ಜಿಯನ್ನು ನ್ಯಾಯಪೀಠ ಇತ್ಯರ್ಥ ಮಾಡಿತು.
ವ್ಯಕ್ತಿಯ ಶಿಕ್ಷಣ ಮತ್ತು ದೇವರ ಮೇಲಿನ ಶ್ರದ್ಧೆ, ನಂಬಿಕೆಯ ಆಧಾರದಲ್ಲಿ ಆತನ ಚಾರಿತ್ರ್ಯವನ್ನು ನಿರ್ಣಯಿಸಲಾಗದು ಎಂದು ನ್ಯಾಯಪೀಠ ಸ್ಪಷ್ಟವಾಗಿ ಹೇಳಿತು.
ಸಾಕ್ಷಿಯಾಗಿದ್ದ ವ್ಯಕ್ತಿಯು ಒಳ್ಳೆಯವನು, ಸುಶಿಕ್ಷಿತ ಎಂಬ ಕಾರಣ ಕೊಟ್ಟು ಹೈಕೋರ್ಟ್ ಮಾನ್ಯತೆ ನೀಡಿತ್ತು. ಆದರೆ, ಸಾಕ್ಷಿಯು ಸುಶಿಕ್ಷತ ಮತ್ತು ಒಳ್ಳೆಯವನಾಗಿದ್ದರೂ ಆತನ ನಡವಳಿಕೆ ಶಂಕಾಸ್ಪದವಾಗಿತ್ತು ಎಂದು ಸುಪ್ರೀಂ ಕೋರ್ಟ್ ಹೇಳಿತು.
ವ್ಯಕ್ತಿಯ ನಡತೆಯನ್ನು ರೂಪಿಸಿಕೊಳ್ಳಬೇಕು ಮತ್ತು ಖ್ಯಾತಿಯನ್ನು ಗಳಿಸಿಕೊಳ್ಳಬೇಕು. ನಡತೆಯ ಕಾರಣಕ್ಕೆ ಖ್ಯಾತಿ ದೊರೆಯಬಹುದು. ಆದರೆ, ಈ ಎರಡೂ ಭಿನ್ನ ವಿಷಯಗಳು ಎಂದು ನ್ಯಾಯಪೀಠ ಮಾರ್ಮಿಕವಾಗಿ ನುಡಿಯಿತು.
ವ್ಯಕ್ತಿಯೊಬ್ಬನ ಖ್ಯಾತಿಗೆ ಸಂಬಂಧಿಸಿದಂತೆ ಹೈಕೋರ್ಟ್ನ ಗ್ರಹಿಕೆ ತಪ್ಪಾಗಿದೆ. ವಿಚಾರಣಾ ನ್ಯಾಯಾಲಯವು ಆತ ಮಂಡಿಸಿದ ಸಾಕ್ಷ್ಯವನ್ನು ಸಮರ್ಪಕವಾಗಿ ಮರು ಪರಿಶೀಲನೆ ನಡೆಸಿಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತು.
ಸೂಕ್ತ ಸಾಕ್ಷ್ಯ ಒದಗಿಸುವಲ್ಲಿ ಪ್ರಾಸಿಕ್ಯೂಶನ್ ವಿಫಲವಾಗಿದೆ ಎಂದು ಹೇಳಿ ಹೈಕೋರ್ಟ್ನಿಂದ ಜೀವಾವಧಿ ಶಿಕ್ಷೆಗೊಳಗಾಗಿದ್ದ ವ್ಯಕ್ತಿಯನ್ನು ನ್ಯಾಯಪೀಠ ಖುಲಾಸೆಗೊಳಿಸಿತು.