
ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ದಾಳಿ: ಗಣಿ ಇಲಾಖೆಯ ಉಪನಿರ್ದೇಶಕಿ ಸಹಿತ ಮೂವರ ಬಂಧನ
ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ದಾಳಿ: ಗಣಿ ಇಲಾಖೆಯ ಉಪನಿರ್ದೇಶಕಿ ಸಹಿತ ಮೂವರ ಬಂಧನ
ಮನೆ ನಿರ್ಮಿಸುವ ಸಲುವಾಗಿ ನಿವೇಶನ ಸ್ಥಳದಲ್ಲಿದ್ದ ಕಟ್ಟಡದ ಕಲ್ಲು ತೆಗೆದು ಸಮತಟ್ಟುಗೊಳಿಸುವುದಕ್ಕಾಗಿ ಅನುಮತಿ ನೀಡಲು ಚಾಲಕನ ಮೂಲಕ ಲಂಚ ಪಡೆಯುತ್ತಿದ್ದ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಉಪನಿರ್ದೇಶಕಿ ಕೃಷ್ಣವೇಣಿ ಸಹಿತ ಮೂವರು ಆರೋಪಿಗಳನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.
ಬಂದಿತರನ್ನು ಮಂಗಳೂರು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಪ್ರಭಾರ ಉಪ ನಿರ್ದೇಶಕಿ ಕೃಷ್ಣವೇಣಿ, ಕಚೇರಿಯ ಸಿಬ್ಬಂದಿ ಪ್ರದೀಪ್ ಹಾಗೂ ಚಾಲಕ ಮಧು ಎಂದು ಗುರುತಿಸಲಾಗಿದೆ.
ಉಳ್ಳಾಲ ತಾಲೂಕು ಇರಾ ಗ್ರಾಮದಲ್ಲಿ ಮನೆ ನಿರ್ಮಿಸಲು ಆ ನಿವೇಶನದ ಜಿಪಿಎ ಹಕ್ಕುದಾರರು ಬಯಸಿದ್ದರು. ಕಟ್ಟಡ ನಿರ್ಮಿಸುವ ಮೊದಲು ಆ ಸ್ಥಳದಲ್ಲಿ ಇದ್ದ ಕಲ್ಲುಗಳನ್ನು ತೆರವುಗೊಳಿಸಿ ಜಾಗವನ್ನು ಸಮತಟ್ಟು ಮಾಡಬೇಕಿತ್ತು. ಇದಕ್ಕಾಗಿ ಅನುಮತಿ ಪಡೆಯಲು ಅವರು ಗಣಿ ಮತ್ತು ಭೂವಿಜ್ಞಾನ ಇಲಾಖೆಯನ್ನು ಸಂಪರ್ಕಿಸಿದ್ದರು.
ಕಳೆದ ವರ್ಷ, 2024ರ ಅಕ್ಟೋಬರ್ 28ರಂದು ಸಲ್ಲಿಸಿದ್ದ ಅರ್ಜಿಯನ್ನು ವಿಲೇವಾರಿ ಮಾಡದೆ ಉಪ ನಿರ್ದೇಶಕ ಕೃಷ್ಣವೇಣಿ ಬಾಕಿ ಇರಿಸಿದ್ದರು. ಈ ಅರ್ಜಿಯನ್ನು ಪುರಸ್ಕರಿಸಲು ಐವತ್ತು ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಸಲ್ಲಿಸಿದ್ದರು.
ಈ ಬಗ್ಗೆ ವಿಚಾರಿಸಲು ಅರ್ಜಿದಾರರು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಕಚೇರಿಗೆ ತೆರಳಿದ್ದಾಗ ಈ ಕಡತಕ್ಕೆ ರೂ. 50,000/- ಪಡೆದುಕೊಳ್ಳಿ ನಂತರ ಸಹಿ ಹಾಕುತ್ತೇನೆ ಎಂದು ಕೃಷ್ಣವೇಣಿ ಸಿಬ್ಬಂದಿ ಪ್ರದೀಪ್ ಎಂಬವರನ್ನು ಕರೆಸಿ, ಅವರ ಸಮ್ಮುಖದಲ್ಲಿ ಬೇಡಿಕೆ ಇಟ್ಟಿದ್ದರು.
ಅರ್ಜಿದಾರರು ಈ ಬಗ್ಗೆ ಲೋಕಾಯುಕ್ತ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿತ್ತು.
ಕೃಷ್ಣವೇಣಿ ಅವರು ಚಾಲಕ ಮಧು ಅವರ ಮೂಲಕ ಐವತ್ತು ಸಾವಿರ ರೂಪಾಯಿ ಲಂಚದ ಹಣ ಪಡೆದಿದ್ದಾರೆ. ಆ ಸಂದರ್ಭದಲ್ಲಿ ಕಾರ್ಯಾಚರಣೆ ನಡೆಸಿದ ಲೋಕಾಯುಕ್ತ ಪೊಲೀಸರು ಕೃಷ್ಣವೇಣಿ, ಪ್ರದೀಪ್ ಮತ್ತು ಮಧು ಎಂಬವರನ್ನು ವಶಕ್ಕೆ ತೆಗೆದುಕೊಂಡು ತನಿಖೆ ನಡೆಸುತ್ತಿದ್ದಾರೆ.
ಕೃಷ್ಣವೇಣಿ ಈ ಹಿಂದೆಯೂ ಲಂಚದ ಆರೋಪದ ಮೇಲೆ ಲೋಕಾಯುಕ್ತ ಪೊಲೀಸರ ಕಾರ್ಯಾಚರಣೆಯಲ್ಲಿ ಬಂಧಿತರಾಗಿದ್ದರು.