
ಪೊಲೀಸ್ ಸಾಕ್ಷ್ಯ ನಂಬಲರ್ಹ; ರೂ. 500ರ ಖೋಟಾ ನೋಟು ಹೊಂದಿದ್ದ ವ್ಯಕ್ತಿಗೆ 5 ವರ್ಷ ಜೈಲು ಶಿಕ್ಷೆ ಖಾಯಂ- ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು
ಪೊಲೀಸ್ ಸಾಕ್ಷ್ಯ ನಂಬಲರ್ಹ; ರೂ. 500ರ ಖೋಟಾ ನೋಟು ಹೊಂದಿದ್ದ ವ್ಯಕ್ತಿಗೆ 5 ವರ್ಷ ಜೈಲು ಶಿಕ್ಷೆ ಖಾಯಂ- ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು
ರೂ. 500 ಮುಖಬೆಲೆಯ ಖೋಟಾ ನೋಟು ಅಂದರೆ ಕಲರ್ ಜೆರಾಕ್ಸ್ ಪ್ರತಿಗಳನ್ನು ಹೊಂದಿದ್ದ ವ್ಯಕ್ತಿಗೆ 5 ವರ್ಷ ಜೈಲು ಶಿಕ್ಷೆ ಮತ್ತು 3000/- ರೂ. ದಂಡ ವಿಧಿಸಿ ನೀಡಿದ್ದ ವಿಚಾರಣಾ ನ್ಯಾಯಾಲಯದ ತೀರ್ಪನ್ನು ಕರ್ನಾಟಕ ಹೈಕೋರ್ಟ್ ಎತ್ತಿ ಹಿಡಿದಿದೆ.
ಕರ್ನಾಟಕ ಹೈಕೋರ್ಟ್ನ ರಾಮಚಂದ್ರ ಡಿ. ಹುದ್ದಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ತೀರ್ಪು ನೀಡಿದೆ.
ವಿಚಾರಣಾ ನ್ಯಾಯಾಲಯದ ತೀರ್ಪನ್ನು ರದ್ದುಪಡಿಸಬೇಕು ಎಂದು ಕೋರಿ ಮೈಸೂರಿನ ಟಿ.ಎನ್. ಕುಮಾರ್ ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾಯಾಲಯ ಈ ತೀರ್ಪು ಪ್ರಕಟಿಸಿದೆ.
ಖೋಟಾ ನೋಟು ಹೊಂದಿದ್ದ ಮತ್ತು ಚಲಾವಣೆ ಮಾಡುತ್ತಿದ್ದ ಆರೋಪದಡಿ ಆರೋಪಿ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 489b, 489c ಅಡಿ ಪೊಲೀಸರು ಎಫ್ಐಆರ್ ದಾಖಲಿಸಿ ತನಿಖೆ ನಡೆಸಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಅದರಂತೆ ವಿಚಾರಣೆ ನಡೆಸಿದ್ದ ಮಾನ್ಯ ವಿಚಾರಣಾ ನ್ಯಾಯಾಲಯ ಆರೋಪಿಗೆ ಶಿಕ್ಷೆ ವಿಧಿಸಿತ್ತು.
ಸದ್ರಿ ಪ್ರಕರಣದಲ್ಲಿ ಪೊಲೀಸರೇ ಸಾಕ್ಷಿಗಳಾಗಿದ್ದರು. ಹಾಗಾಗಿ ಅವರ ಸಾಕ್ಷ್ಯವನ್ನು ಪರಿಗಣಿಸಬಾರದು ಎಂದು ಅರ್ಜಿದಾರರು ಕೋರಿದ್ದರು. ಆದರೆ, ಪೊಲೀಸ್ ಸಾಕ್ಷಿಗಳು ನಂಬಲರ್ಹ ಸಾಕ್ಷಿಗಳಲ್ಲ ಎಂದು ಊಹಿಸಲು ಸಾಧ್ಯವಿಲ್ಲ. ಭಾರತೀಯ ಸಾಕ್ಷ್ಯ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಪೊಲೀಸರ ಸಾಕ್ಷ್ಯವು ವಿಶ್ವಾಸಾರ್ಹವಾಗಿದ್ದರೆ, ಅಂತಹ ಸಾಕ್ಷ್ಯವನ್ನು ಒಪ್ಪಿಕೊಳ್ಳಬೇಕು ಎಂದು ಹೈಕೋರ್ಟ್ ತನ್ನ ತೀರ್ಪಿನಲ್ಲಿ ಹೇಳಿದೆ.
ಆರೋಪಿ ತನಗೆ ನೋಟುಗಳು ಹೇಗೆ ಬಂದವರು, ಅವುಗಳ ಮೂಲ ಎಲ್ಲಿಯದ್ದು ಎಂಬುದನ್ನು ಆರೋಪಿ ವಿವರಿಸಿಲ್ಲ. ಸಿಕ್ಕಿರುವ ಎಲ್ಲ 500 ಮುಖ ಬೆಲೆಯ ನೋಟುಗಳು ಒಂದೇ ನಂಬರ್ ಹೊಂದಿದ್ದು, ಅವುಗಳು ನಕಲಿ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸ್ಪಷ್ಟಪಡಿಸಿದೆ ಎಂಬುದನ್ನು ಹೈಕೋರ್ಟ್ ಗಮನಿಸಿತು.
ಆರೋಪಿಯನ್ನು ಪೊಲೀಸರು ಕಂಡಾಗ ಆತ ತಪ್ಪಿಸಿಕೊಂಡು ಓಡಿ ಹೋಗಲು ಪ್ರಯತ್ನಿಸಿದ್ದಾನೆ. ಆರೋಪಿ ಕಲರ್ ಜೆರಾಕ್ಸ್ ನೋಟುಗಳನ್ನು ಹೊಂದಿದ್ದು, ಅವುಗಳನ್ನು ಅಸಲಿ ಎಂದು ಬಿಂಬಿಸಿ ಚಲಾವಣೆ ಮಾಡಲು ಯತ್ನಿಸುತ್ತಿದ್ದ. ಇದೆಲ್ಲವನ್ನೂ ಗಮನಿಸಿದಾಗ ಆರೋಪಿ ಖೋಟಾ ನೋಟು ಚಲಾವಣೆ ಅಪರಾಧದಲ್ಲಿ ಭಾಗಿಯಾಗಿವುದು ಸ್ಪಷ್ಟ ಎಂದು ಸರ್ಕಾರದ ಪರ ವಕೀಲರು ವಾದ ಮಂಡಿಸಿದರು.
ವಾದ ಪ್ರತಿವಾದ ಆಲಿಸಿದ ಮಾನ್ಯ ನ್ಯಾಯಪೀಠ, ವಿಚಾರಣಾ ನ್ಯಾಯಾಲಯದ ತೀರ್ಪು ದೋಷಪೂರಿತವಾಗಿಲ್ಲ, ಮಧ್ಯಪ್ರವೇಶಿಸುವ ಅಗತ್ಯವಿಲ್ಲ ಎಂದು ತೀರ್ಮಾನಿಸಿ ವಿಚಾರಣಾ ನ್ಯಾಯಾಲಯದ ತೀರ್ಪನ್ನು ಎತ್ತಿ ಹಿಡಿಯಿತು.