
ಸುಪ್ರೀಂ ಮಧ್ಯಪ್ರವೇಶದ ಬಳಿಕ ಜಡ್ಜ್ಗೆ ಮಗುವಿನ ಆರೈಕೆ ರಜೆ ನೀಡಿದ ಜಾರ್ಖಂಡ್ ಹೈಕೋರ್ಟ್
ಸುಪ್ರೀಂ ಮಧ್ಯಪ್ರವೇಶದ ಬಳಿಕ ಜಡ್ಜ್ಗೆ ಮಗುವಿನ ಆರೈಕೆ ರಜೆ ನೀಡಿದ ಜಾರ್ಖಂಡ್ ಹೈಕೋರ್ಟ್
ಸುಪ್ರೀಂ ಕೋರ್ಟ್ ಮಧ್ಯಪ್ರವೇಶದ ಬಳಿಕ ಜಿಲ್ಲಾ ನ್ಯಾಯಾಧೀಶರರೊಬ್ಬರಿಗೆ ತಮ್ಮ ಮಗುವಿನ ಆರೈಕೆಗೆ ಕೋರಿ ಸಲ್ಲಿಸಿದ್ದ ರಜೆ ಅರ್ಜಿಯನ್ನು ಜಾರ್ಖಂಡ್ ಹೈಕೋರ್ಟ್ ಭಾಗಶಃ ಪುರಸ್ಕರಿಸಿದೆ.
ಒಂಟಿ ಪೋಷಕರಾಗಿದ್ದ ಜಿಲ್ಲಾ ನ್ಯಾಯಾಧೀಶೆ ಕಾಶಿಕಾ ಪ್ರಸಾದ್ ಮಕ್ಕಳ ಆರೈಕೆಗೆ ರಜೆ ಕೋರಿದ್ದರು. ಆದರೆ, ಈ ರಜೆಯನ್ನು ನಿರಾಕರಿಸಲಾಗಿತ್ತು. ಈ ಬಗ್ಗೆ ಅವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು..
ಪ್ರಕರಣದ ಹಿಂದಿನ ವಿಚಾರಣೆಯ ವೇಳೆ, ರಜೆ ಕೋರಿದ್ದ ಅರ್ಜಿಯನ್ನು ಮರು ಪರಿಶೀಲಿಸುವಂತೆ ಸುಪ್ರೀಂ ಕೋರ್ಟ್ ಹೈಕೋರ್ಟ್ಗೆ ಸೂಚನೆ ನೀಡಿತ್ತು, ಮತ್ತು ವರದಿಯನ್ನು ನೀಡುವಂತೆ ಹೇಳಿತ್ತು.
ಇದೀಗ, ಹೈಕೋರ್ಟ್ ಡಿಸ್ಟ್ರಿಕ್ಟ್ ಜಡ್ಜ್ ಅವರಿಗೆ ಮಕ್ಕಳ ಆರೈಕೆ ರಜೆಯನ್ನು ಮಂಜೂರು ಮಾಡಿದ್ದರೂ ಅದು ಅರ್ಜಿಯಲ್ಲಿ ಕೋರಲಾಗಿದ್ದ ದಿನಗಳಿಗಿಂತ ಗಮನಾರ್ಹವಾಗಿ ಕಡಿಮೆಯಾಗಿದೆ ಎಂದು ಜಡ್ಜ್ ಪರ ವಕೀಲರು ನ್ಯಾಯಪೀಠಕ್ಕೆ ಮಾಹಿತಿ ನೀಡಿದರು. 194 ದಿನಗಳ ರಜೆ ಕೇಳಿದ್ದರೂ ಹೈಕೋರ್ಟ್ 92 ದಿನಗಳ ರಜೆಯನ್ನಷ್ಟೇ ಮಂಜೂರು ಮಾಡಿದೆ ಎಂದು ಮಾಹಿತಿ ನೀಡಲಾಯಿತು.
ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಬಳಿಕ ತನಗೆ ಸಂಬಂಧಿಸಿದ ವಾರ್ಷಿಕ ಗೌಪ್ಯತಾ ವರದಿಯಲ್ಲಿ ಪ್ರತಿಕೂಲ ಟೀಕೆ ಮಾಡಲಾಗಿದೆ. ನ್ಯಾಯಾಧೀಶೆಯ ಕಾರ್ಯಕ್ಷಮತೆಯ ವರದಿಯ ಬಗ್ಗೆ ಕಳೆದ ವಿಚಾರಣೆಯ ವೇಳೆ ನ್ಯಾಯಪೀಠಕ್ಕೆ ವಿವರಣೆ ನೀಡಲಾಗಿದೆ ಎಂಬುದನ್ನು ಜಡ್ಜ್ ಪರ ವಕೀಲರು ಗಮನ ಸೆಳೆದರು. ಈ ಬಗ್ಗೆ ಪ್ರತ್ಯೇಕ ಅರ್ಜಿ ಸಲ್ಲಿಸುವಂತೆ ನ್ಯಾಯಪೀಠ ಸೂಚಿಸಿತು.
ಜಾರ್ಖಂಡ್ ಹೈಕೋರ್ಟ್ ಆಡಳಿತಾತ್ಮಕ ವಿಭಾಗದ ಪರ ವಾದ ಮಂಡಿಸಿದ ವಕೀಲರು, ನ್ಯಾಯಾಧೀಶರಿಗೆ ವಿಸ್ತೃತ ರಜೆ ನೀಡುವುದು ಸಮರ್ಥನೀಯವಲ್ಲದ ಪೂರ್ವನಿದರ್ಶನವನ್ನು ಹುಟ್ಟು ಹಾಕಬಹುದು ಎಂದು ಹೇಳಿದರು. ಅಲ್ಲದೆ, ವರ್ಗಾವಣೆ ಆದೇಶದ ಕಾರಣಕ್ಕೆ ಪ್ರಸ್ತುತ ಮೊಕದ್ದಮೆಯನ್ನು ಹೂಡಲಾಗಿದೆ ಎಂಬುದನ್ನು ತಿಳಿಸಿದರು.
ವಾದವನ್ನು ಆಲಿಸಿದ ಸುಪ್ರೀಂ ಕೋರ್ಟ್, ಮಂಜೂರು ಮಾಡಲಾದ 92 ದಿನಗಳ ರಜೆಯನ್ನು ಈಗ ಮುಂದುವರಿಸಬಹುದು ಎಂದು ಹೇಳಿತು. ಹೈಕೋರ್ಟ್ ನಾಲ್ಕು ವಾರಗಳಲ್ಲಿ ಪ್ರತಿ ಅಫಿಡವಿಟ್ ಸಲ್ಲಿಸುವಂತೆ ಸೂಚಿಸಿತು.