ಸಹಜೀವನದಲ್ಲಿ ಜನಿಸಿದ ಮಗುವಿಗೂ ಜೀವನಾಂಶ: ಕೌಟುಂಬಿಕ ನ್ಯಾಯಾಲಯದ ಆದೇಶ ಎತ್ತಿ ಹಿಡಿದ ಕರ್ನಾಟಕ ಹೈಕೋರ್ಟ್
ಸಹಜೀವನದಲ್ಲಿ ಜನಿಸಿದ ಮಗುವಿಗೂ ಜೀವನಾಂಶ: ಕೌಟುಂಬಿಕ ನ್ಯಾಯಾಲಯದ ಆದೇಶ ಎತ್ತಿ ಹಿಡಿದ ಕರ್ನಾಟಕ ಹೈಕೋರ್ಟ್
ಮದುವೆಯಾಗುವ ಭರವಸೆ ನೀಡಿ ಯುವತಿಯೊಂದಿಗೆ ಸಹಜೀವನ (ಲಿವ್ ಇನ್ ರಿಲೇಶನ್) ನಡೆಸಿದ ಕಾರಣಕ್ಕೆ ಹುಟ್ಟಿದ ಮಗನಿಗೆ ಜೀವನಾಂಶ ಪಾವತಿಸುವುದಿಲ್ಲ ಎಂದು ಹಠ ಹಿಡಿದಿದ್ದ ಮಾಜಿ ಮುಖ್ಯ ಶಿಕ್ಷಕನಿಗೆ ಹೈಕೋರ್ಟ್ ಮಾಸಿಕ 3000 ಜೀವನಾಂಶ ನೀಡುವಂತೆ ತಾಕೀತು ಮಾಡಿದೆ.
ಮಗನಿಗೆ ಜೀವನಾಂಶ ಪಾವತಿಸಲು ಒಪ್ಪದೇ ಮೊಂಡುವಾದ ಮಾಡಿದ್ದ ತುಮಕೂರು ಜಿಲ್ಲೆಯ 48 ವರ್ಷದ ರಮೇಶ್ ಎಂಬುವವರಿಗೆ ಹೈಕೋರ್ಟ್ ಈ ಆದೇಶ ಮಾಡಿದೆ.
ಮಗ ರಕ್ಷಿತೆಗೆ ಮಾಸಿಕ ರೂ. 3000/- ಜೀವನಾಂಶ ಪಾವತಿಸುವಂತೆ 2018ರಲ್ಲಿ ಕೌಟುಂಬಿಕ ನ್ಯಾಯಾಲಯ ನಿರ್ದೇಶನ ನೀಡಿತ್ತು. ಈ ಆದೇಶವನ್ನು ರದ್ದುಪಡಿಸಬೇಕು ಎಂದು ಹೋರಿ ರಮೇಶ್ ಅವರು ಕರ್ನಾಟಕ ಹೈಕೋರ್ಟಿಗೆ ತಕರಾರು ಅರ್ಜಿ ಸಲ್ಲಿಸಿದ್ದರು.
ಡಿಎನ್ಎ ಪರೀಕ್ಷೆಯಲ್ಲಿ ರಕ್ಷಿತ್ ಎಂಬ ಬಾಲಕ ಅರ್ಜಿದಾರ ರಮೇಶ್ ಅವರ ಪುತ್ರ ಎಂಬುದು ಸಾಬೀತಾಗಿದೆ. ಮಗನ ಜೀವನ ನಿರ್ವಹಣೆ ಮಾಡುವುದು ತಂದೆಯ ಜವಾಬ್ದಾರಿಯಾಗಿದೆ. ಈ ಎಲ್ಲಾ ಅಂಶಗಳನ್ನು ಪರಿಗಣಿಸಿ ಮಗನಿಗೆ 3000 ಜೀವನ ಅಂಶ ನೀಡುವಂತೆ ಕೌಟುಂಬಿಕ ನ್ಯಾಯಾಲಯ ಆದೇಶ ನೀಡಿದ್ದು ಇದು ಸೂಕ್ತವಾಗಿದೆ ಮತ್ತು ಮಧ್ಯಪ್ರವೇಶಕ್ಕೆ ಸಕಾರಣವಿಲ್ಲ ಎಂದು ಹೈಕೋರ್ಟ್ ತಿಳಿಸಿದೆ.
ರಕ್ಷಿತ್ ತಾಯಿ ದಾಖಲಿಸಿದ್ದ ಕ್ರಿಮಿನಲ್ ಪ್ರಕರಣದಲ್ಲಿ ಖುಲಾಸೆ ಆಗಿರುವುದರಿಂದ ರಕ್ಷಿತ್ ಗೆ ಜೀವನಾಂಶ ಪಾವತಿಸುವ ಅಗತ್ಯವಿಲ್ಲ ಎಂದು ರಮೇಶ್ ಮಂಡಿಸಿದ್ದ ವಾದವನ್ನು ಹೈಕೋರ್ಟ್ ನ್ಯಾಯಪೀಠ ಸಾರಸಗಟಾಗಿ ತಿರಸ್ಕರಿಸಿದೆ.
ಪ್ರಕರಣದ ವಿವರ
ರಮೇಶ್ 2012ರಲ್ಲಿ ಪೋಷಕರ ಮನೆಯಲ್ಲಿ ಒಂಟಿಯಾಗಿದ್ದ ಮೀನಾಕ್ಷಿ (ಹೆಸರು ಬದಲಾಯಿಸಿದೆ) ಎಂಬ ಯುವತಿ ಮೇಲೆ ಅತ್ಯಾಚಾರ ನಡೆಸಿದ್ದ. ಸಂತ್ರಸ್ತೆಯಿಂದ ಘಟನೆಯ ಮಾಹಿತಿ ಪಡೆದ ಪೋಷಕರು ಪೊಲಿಸರಿಗೆ ದೂರು ನೀಡಲು ಮುಂದಾಗಿದ್ದರು. ಆಗ ಸಂತ್ರಸ್ತೆ ಸಂಬಂಧಿಕರು ಮತ್ತು ಗ್ರಾಮದ ಹಿರಿಯರು ರಾಜಿ ಪಂಚಾಯತಿ ನಡೆಸಿದರು.
ದೂರು ದಾಖಲಿಸುವುದು ಬೇಡ, ಮೀನಾಕ್ಷಿಯನ್ನು ಮದುವೆಯಾಗುವುದಾಗಿ ರಮೇಶ್ ಒಪ್ಪಿಕೊಂಡಿದ್ದ. ಇದರಿಂದ ಪೊಲೀಸರಿಗೆ ದೂರು ನೀಡುವ ನಿರ್ಧಾರದಿಂದ ಪೋಷಕರು ಮತ್ತು ಸಂತ್ರಸ್ತೆ ಹಿಂದೆ ಸರಿದರು.
ಆ ಬಳಿಕ, ಮದುವೆಯಾಗದಿದ್ದರೂ ಕೆಲ ಸಮಯ ಮೀನಾಕ್ಷಿ ಜೊತೆಗೆ ರಮೇಶ್ ಸಹ ಜೀವನ ಮುಂದುವರಿಸಿದ್ದರು. ಮದುವೆಯಾಗಲು ಒತ್ತಡ ಹೆಚ್ಚಾದಾಗ, ರಮೇಶ್ ಆಕೆಯನ್ನು ಮದುವೆಯಾಗಲು ನಿರಾಕರಿಸಿದ. ಇದರಿಂದ 2013ರಲ್ಲಿ ಮೀನಾಕ್ಷಿ ಪೊಲೀಸರಿಗೆ ದೂರು ನೀಡಿದ್ದರು.
ತನಿಖೆ ನಡೆಸಿ ಪೊಲೀಸರು ಆರೋಪಿ ರಮೇಶ್ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಈ ಪ್ರಕರಣದ ಎಲ್ಲ ಆರೋಪಗಳಿಂದ ರಮೇಶ್ ಅವರನ್ನು ವಿಚಾರಣಾ ನ್ಯಾಯಾಲಯ ಖುಲಾಸೆಗೊಳಿಸಿತು.
ನಂತರ ರಮೇಶ್ ಬೆಳೆಸಿದ್ದ ಸಂಬಂಧದಿಂದ 2015ರಲ್ಲಿ ಗಂಡು ಮಗು ಜನಿಸಿತ್ತು. 2016ರಲ್ಲಿ ಮಗನಿಗೆ ಜೀವನಾಂಶ ನೀಡಲು ರಮೇಶ್ಗೆ ನಿರ್ದೇಶಿಸುವಂತೆ ಕೋರಿ ಮಗನ ರಕ್ಷಿತ್ ಹೆಸರಿನಲ್ಲಿ ಮೀನಾಕ್ಷಿ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
ರಮೇಶ್ ಮುಖ್ಯೋಪಾಧ್ಯಾಯರಾಗಿದ್ದು, ಮಾಸಿಕ 30 ಸಾವಿರ ರೂ. ವೇತನ ಪಡೆಯುತ್ತಿದ್ದಾರೆ ಎಂದು ತಿಳಿಸಿದ ಮೀನಾಕ್ಷಿ, ಮಗನ ಜೀವನ ನಿರ್ವಹಣೆಗೆ ಹಣಕಾಸು ತೊಂದರೆ ಇರುವುದರಿಂದ ಜೀವನಾಂಶ ಕೋರಿದ್ದರು.
ಈ ಅರ್ಜಿ ವಿಚಾರಣೆ ನಡೆಸಿದ ತುಮಕೂರು ಪ್ರಧಾನ ಕೌಟುಂಬಿಕ ನ್ಯಾಯಾಲಯ ಮಗನಿಗೆ ಮಾಸಿಕ ಮುರು ಸಾವಿರ ರೂ. ಜೀವನಾಂಶ ನೀಡುವಂತೆ ರಮೇಶ್ಗೆ ಆದೇಶ ನೀಡಿತ್ತು. ಈ ಆದೇಶವನ್ನು ಪ್ರಶ್ನಿಸಿ ರಮೇಶ್ ಹೈಕೋರ್ಟ್ ಮೆಟ್ಟಿಲೇರಿದ್ದರು.