-->
ಕರ್ನಾಟಕ ಸಿವಿಲ್ ಕೋರ್ಟ್ಸ್‌ ತಿದ್ದುಪಡಿ ಕಾಯ್ದೆ: ಪೂರ್ವಾನ್ವಯ ಅರ್ಜಿ ರದ್ದು- ಹೈಕೋರ್ಟ್‌ ತೀರ್ಪಿನ ಹೈಲೈಟ್ಸ್‌

ಕರ್ನಾಟಕ ಸಿವಿಲ್ ಕೋರ್ಟ್ಸ್‌ ತಿದ್ದುಪಡಿ ಕಾಯ್ದೆ: ಪೂರ್ವಾನ್ವಯ ಅರ್ಜಿ ರದ್ದು- ಹೈಕೋರ್ಟ್‌ ತೀರ್ಪಿನ ಹೈಲೈಟ್ಸ್‌

ಕರ್ನಾಟಕ ಸಿವಿಲ್ ಕೋರ್ಟ್ಸ್‌ ತಿದ್ದುಪಡಿ ಕಾಯ್ದೆ: ಪೂರ್ವಾನ್ವಯ ಅರ್ಜಿ ರದ್ದು- ಹೈಕೋರ್ಟ್‌ ತೀರ್ಪಿನ ಹೈಲೈಟ್ಸ್‌




ಕರ್ನಾಟಕ ಸಿವಿಲ್ ನ್ಯಾಯಾಲಯಗಳ ತಿದ್ದುಪಡಿ ಕಾಯ್ದೆ 2023 ಅನ್ನು ಎತ್ತಿ ಹಿಡಿದ ಕರ್ನಾಟಕ ಹೈಕೋರ್ಟ್, ತಿದ್ದುಪಡಿಯ ಪೂರ್ವಾನ್ವಯ ಅರ್ಜಿಯನ್ನು ಹೈಕೋರ್ಟ್ ರದ್ದುಪಡಿಸಿದೆ.


ಬಾಬುರಾವ್ ವರ್ಸಸ್ ದಿ ಸ್ಟೇಟ್ ಆಫ್ ಕರ್ನಾಟಕ ಪ್ರಕರಣದಲ್ಲಿ ಕರ್ನಾಟಕ ಸಿವಿಲ್ ನ್ಯಾಯಾಲಯಗಳ ಕಾಯ್ದೆ 1964 ಮತ್ತು ಕರ್ನಾಟಕ ಹೈಕೋರ್ಟ್ ಕಾಯ್ದೆ 1961 ರ ಕೆಲವು ತಿದ್ದುಪಡಿಗಳನ್ನು ಕರ್ನಾಟಕ ಹೈಕೋರ್ಟ್ ಎತ್ತಿ ಹಿಡಿದಿದೆ.


ತಿದ್ದುಪಡಿಯ ಪೂರ್ವಾನ್ವಯ ಅರ್ಜಿಯನ್ನು ರದ್ದುಪಡಿಸಿ ಸಿವಿಲ್ ನ್ಯಾಯಾಲಯಗಳ ವಿತ್ತೀಯ ನ್ಯಾಯ ವ್ಯಾಪ್ತಿ ಮತ್ತು ಮೇಲ್ಮನವಿ ನ್ಯಾಯ ವ್ಯಾಪ್ತಿಗೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರವು ಮಾಡಿದ ತಿದ್ದುಪಡಿಗಳನ್ನು ಹೈಕೋರ್ಟ್ ಎತ್ತಿ ಹಿಡಿದಿದೆ. ಜೊತೆಗೆ ಹೈಕೋರ್ಟ್ ಕಾಯ್ದೆ 1961ಕ್ಕೆ ಮಾಡಿದ ತಿದ್ದುಪಡಿಗಳನ್ನು ಕೂಡ ಎತ್ತಿ ಹಿಡಿದಿದೆ.


ಪ್ರಕರಣದ ಹಿನ್ನೆಲೆ


ಕರ್ನಾಟಕ ಸಿವಿಲ್ ನ್ಯಾಯಾಲಯಗಳ ಅಧಿನಿಯಮ 1964 ಕ್ಕೆ ತಿದ್ದುಪಡಿ ತರಲು ದಿನಾಂಕ 12.12.2023 ರಂದು ಕರ್ನಾಟಕ ರಾಜ್ಯ ವಿಧಾನಸಭೆಯಲ್ಲಿ ಕರ್ನಾಟಕ ಸಿವಿಲ್ ನ್ಯಾಯಾಲಯಗಳ (ತಿದ್ದುಪಡಿ) ವಿಧೇಯಕ 2023 ನ್ನು ಮಂಡಿಸಿ ಅಂಗೀಕರಿಸಲಾಯಿತು.ಈ ತಿದ್ದುಪಡಿಗೆ ರಾಜ್ಯಪಾಲರು ದಿನಾಂಕ 20.3.2024ರಂದು ಅನುಮತಿ ನೀಡಿರುತ್ತಾರೆ.


ದಿನಾಂಕ 19.6.2024 ರ ರಾಜ್ಯ ಪತ್ರದಲ್ಲಿ ಈ ತಿದ್ದುಪಡಿ ಪ್ರಕಟವಾಗಿದ್ದು ನಿಯಮಗಳು ತಕ್ಷಣದಿಂದ ಜಾರಿಗೆ ಬರಲಿವೆ ಎಂದು ತಿಳಿಸಲಾಗಿತ್ತು.


ತಳಹಂತದ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯದ ವಿತ್ತೀಯ ಅಧಿಕಾರ ವ್ಯಾಪ್ತಿಯನ್ನು ಹೆಚ್ಚಿಸಲು ಹಾಗೂ ಉಚ್ಚ ನ್ಯಾಯಾಲಯದಲ್ಲಿ ವಿಚಾರಣೆಗೆ ಬಾಕಿ ಇರುವ ಅಧಿಕ ಪ್ರಕರಣಗಳ ಹೊರೆಯನ್ನು ತಗ್ಗಿಸಲು ತಿದ್ದುಪಡಿಯನ್ನು ಜಾರಿಗೆ ತರಲಾಗಿತ್ತು.


ಮೊದಲನೇ ತಿದ್ದುಪಡಿ


1. ವಿತ್ತೀಯ ಅಧಿಕಾರ ವ್ಯಾಪ್ತಿಯ ಕುರಿತು ಕರ್ನಾಟಕ ಸಿವಿಲ್ ನ್ಯಾಯಾಲಯಗಳ ಕಾಯ್ದೆ 1964ರ ಪ್ರಕರಣ 17ರ ಪ್ರಕಾರ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯಕ್ಕೆ 5 ಲಕ್ಷಗಳಿಗೆ ಮೀರದ ವಿಷಯ ಮೊಬಲಗು ಅಥವಾ ಎಲ್ಲಾ ಮೂಲದಾವೆಗಳಿಗೆ ಹಾಗೂ ವ್ಯವಹರಣೆಗಳಿಗೆ ಅಧಿಕಾರ ವ್ಯಾಪ್ತಿ ಪ್ರಾಪ್ತವಾಗಿತ್ತು. ಪ್ರಸ್ತುತ ತಿದ್ದುಪಡಿಯ ಮೂಲಕ 5 ಲಕ್ಷಗಳಿಗೆ ಬದಲಾಗಿ 15 ಲಕ್ಷಗಳಿಗೆ ಸಿವಿಲ್ ನ್ಯಾಯಾಲಯಗಳ ಅಧಿಕಾರ ವ್ಯಾಪ್ತಿಯನ್ನು ಹೆಚ್ಚಿಸಲಾಗಿದೆ. ದಿನಾಂಕ 19.6.2024 ರಿಂದ 15 ಲಕ್ಷದೊಳಗಿನ ಮೌಲ್ಯದ ದಾವೆಗಳನ್ನು ತಳ ಹಂತದ ಸಿವಿಲ್ ನ್ಯಾಯಾಲಯದಲ್ಲಿ (ಹಿಂದಿನ ಹೆಸರು ಮುನ್ಸೀಫ್ ನ್ಯಾಯಾಲಯ) ದಾಖಲಿಸತಕ್ಕದ್ದಾಗಿದೆ.


ಎರಡನೆಯ ತಿದ್ದುಪಡಿ


ಮೇಲ್ಮನವಿಗೆ ಸಂಬಂಧಪಟ್ಟಂತೆ ಕರ್ನಾಟಕ ಸಿವಿಲ್ ನ್ಯಾಯಾಲಯಗಳ ಕಾಯ್ದೆ 1964ರ ಪ್ರಕರಣ 19ರ ಪ್ರಕಾರ ಹಿರಿಯ ಸಿವಿಲ್ ನ್ಯಾಯಾಧೀಶರು ಮಾಡಿದ ಡಿಕ್ರಿಗಳು ಮತ್ತು ಆದೇಶಕ್ಕೆ ಸಂಬಂಧಿಸಿದಂತೆ ಮೂಲದಾವೆ ಅಥವಾ ವ್ಯವಹರಣೆಯ ವಸ್ತು, ವಿಷಯದ ಮೊಬಲಗು 10 ಲಕ್ಷ ಗಳಿಗಿಂತ ಕಡಿಮೆ ಇದ್ದಲ್ಲಿ ಜಿಲ್ಲಾ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಬೇಕಾಗಿತ್ತು.


10 ಲಕ್ಷಕ್ಕಿಂತ ಹೆಚ್ಚಿನ ಮೌಲ್ಯವುಳ್ಳ ದಾವೆಗೆ ಸಂಬಂಧಪಟ್ಟಂತೆ ಮೇಲ್ಮನವಿಯನ್ನು ಉಚ್ಚ ನ್ಯಾಯಾಲಯಕ್ಕೆ ಸಲ್ಲಿಸಬೇಕಾಗಿತ್ತು. ಪ್ರಸ್ತುತ ತಿದ್ದುಪಡಿಯು ಹಿರಿಯ ಸಿವಿಲ್ ನ್ಯಾಯಾಧೀಶರು ಹೊರಡಿಸಿದ ಡಿಕ್ರಿಗಳು ಮತ್ತು ಆದೇಶಗಳ ವಿರುದ್ಧ ಕಾನೂನಿನ ಮೂಲಕ ಮೇಲ್ಮನವಿಗೆ ಅವಕಾಶವಿದ್ದಲ್ಲಿ ಅಂಥ ಮೇಲ್ಮನವಿಗಳನ್ನು ಜಿಲ್ಲಾ ನ್ಯಾಯಾಲಯದಲ್ಲಿ ಮಾತ್ರ ಸಲ್ಲಿಸತಕ್ಕದ್ದಾಗಿದೆ. ಉಚ್ಚ ನ್ಯಾಯಾಲಯಕ್ಕೆ ಸಲ್ಲಿಸುವಂತಿಲ್ಲ.


ಈ ತಿದ್ದುಪಡಿಗಳನ್ನು ಪ್ರಶ್ನಿಸಿ ಕರ್ನಾಟಕ ಹೈಕೋರ್ಟ್ ನ ಕಲಬುರ್ಗಿ ಪೀಠದಲ್ಲಿ ರಿಟ್ ಅರ್ಜಿ ದಾಖಲಿಸಲಾಗಿತ್ತು. ಬಾಬುರಾವ್ ವರ್ಸಸ್ ದಿ ಸ್ಟೇಟ್ ಆಫ್ ಕರ್ನಾಟಕ ಎಂಬ ಶೀರ್ಷಿಕೆಯ ಈ ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್ ನ ನ್ಯಾಯಮೂರ್ತಿಗಳಾದ ಶ್ರೀ ಎಂ ಐ ಅರುಣ್ ಅವರಿದ್ದ ಏಕ ಸದಸ್ಯ ಪೀಠವು ದಿನಾಂಕ 24.09.2025ರಂದು ತೀರ್ಪು ನೀಡಿ ತಿದ್ದುಪಡಿಗಳನ್ನು ಎತ್ತಿ ಹಿಡಿದಿದೆ.


ಹೈಕೋರ್ಟ್ ತೀರ್ಪಿನ ಮುಖ್ಯಾಂಶಗಳು


1) ಪೂರ್ವಾನ್ವಯದ ಪರಿಣಾಮವನ್ನು ರದ್ದುಪಡಿಸಿದೆ


ದಿನಾಂಕ 28.8.2007 ರಿಂದ ಅನ್ವಯವಾಗುವಂತೆ ಮಾಡಿದ ತಿದ್ದುಪಡಿಯನ್ನು ಹೈಕೋರ್ಟ್ ರದ್ದುಗೊಳಿಸಿದೆ. ತಿದ್ದುಪಡಿಯು ದಿನಾಂಕ 19.6.2024 ರಿಂದ ಅನ್ವಯವಾಗಲಿದೆ.


ವಿಚಾರಣೆಯಲ್ಲಿ ಬಾಕಿ ಇರುವ ಪ್ರಕರಣಗಳು


ನೂತನ ತಿದ್ದುಪಡಿಯು ವಿಚಾರಣೆಯಲ್ಲಿ ಬಾಕಿ ಇರುವ ಮೊದಲ ಮೇಲ್ಮನವಿಗಳನ್ನು ಸೂಕ್ತ ನ್ಯಾಯ ವ್ಯಾಪ್ತಿಯ ನ್ಯಾಯಾಲಯಗಳಿಗೆ ವರ್ಗಾಯಿಸುವುದನ್ನು ಕಡ್ಡಾಯಗೊಳಿಸಿದೆ.


ಹೈಕೋರ್ಟ್ ನ್ಯಾಯ ವ್ಯಾಪ್ತಿ


ತಿದ್ದುಪಡಿಗಳು ಹೈಕೋರ್ಟ್ ಒಳಗೆ ಪ್ರಕರಣಗಳನ್ನು ಹೇಗೆ ನಿರ್ವಹಿಸಲಾಗುತ್ತದೆ ಎಂಬುದರ ಮೇಲೆ ಪರಿಣಾಮ ಬೀರುತ್ತವೆ. ಏಕ ಸದಸ್ಯ ಪೀಠ ಹಾಗೂ ವಿಭಾಗೀಯ ಪೀಠವು ಯಾವ ರೀತಿಯ ಮೇಲ್ಮನವಿಗಳನ್ನು ಆಲಿಸುತ್ತವೆ ಎಂಬುದರಲ್ಲಿ ಸಂಭಾವ್ಯವಾಗಿ ಬದಲಾವಣೆಯಾಗುವ ಸಾಧ್ಯತೆ ಇದೆ.


ಮೇಲ್ಮನವಿ ನ್ಯಾಯಾಲಯಗಳ ಪಾತ್ರ


ತಿದ್ದುಪಡಿಯ ಪರಿಣಾಮವಾಗಿ ಮೇಲ್ಮನವಿ ನ್ಯಾಯಾಲಯಗಳಾದ ಹಿರಿಯ ಸಿವಿಲ್ ನ್ಯಾಯಾಲಯ, ಜಿಲ್ಲಾ ನ್ಯಾಯಾಲಯ ಮತ್ತು ಉಚ್ಚ ನ್ಯಾಯಾಲಯಗಳಲ್ಲಿ ಯಾವ ರೀತಿಯ ಮೇಲ್ಮನವಿಗಳ ವಿಚಾರಣೆ ಮಾಡಲಾಗುತ್ತದೆ ಎಂಬ ಬಗ್ಗೆ ಸಂಭಾವ್ಯವಾಗಿ ಬದಲಾವಣೆಗಳಾಗುವ ಸಾಧ್ಯತೆ ಇದೆ.


ತಿದ್ದುಪಡಿಯ ಪರಿಣಾಮಗಳು


ತಿದ್ದುಪಡಿಯಿಂದ ತಳ ಹಂತದ ಸಿವಿಲ್ ನ್ಯಾಯಾಲಯ ಹಾಗೂ ಜಿಲ್ಲಾ ನ್ಯಾಯಾಲಯಗಳ ಕೆಲಸದ ಹೊರೆ ಹೆಚ್ಚಾಗಲಿದೆ.


15 ಲಕ್ಷಕ್ಕಿಂತಲೂ ಹೆಚ್ಚಿನ ಅನಿಯಮಿತ ಮೌಲ್ಯದ ದಾವೆಗಳನ್ನು ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ದಾಖಲಿಸತಕ್ಕದ್ದಾಗಿದೆ. ಸಿವಿಲ್ ನ್ಯಾಯಾಲಯಗಳ ಡಿಕ್ರಿ ಅಥವಾ ಆದೇಶದ ವಿರುದ್ಧ ಹಿರಿಯ ಸಿವಿಲ್ ನ್ಯಾಯಾಲಯಕ್ಕೆ ಮೇಲ್ಮನವಿಯನ್ನು ಈ ಹಿಂದಿನಂತೆ ಸಲ್ಲಿಸತಕ್ಕದ್ದಾಗಿದೆ. ಅದರಲ್ಲಿ ಯಾವುದೇ ಬದಲಾವಣೆ ಇಲ್ಲ.


✍️ ಪ್ರಕಾಶ್ ನಾಯಕ್, ಹಿರಿಯ ಶಿರಸ್ತೇದಾರರು, ದ.ಕ. ನ್ಯಾಯಾಂಗ ಇಲಾಖೆ


Ads on article

Advertise in articles 1

advertising articles 2

Advertise under the article