'ಇಂಧನ ಉಳಿಸಿ' ಜಾಗೃತಿ: ಸೈಕಲ್ ತುಳಿದು ಹೈಕೋರ್ಟ್ಗೆ ಆಗಮಿಸಿದ ನ್ಯಾಯಮೂರ್ತಿ
'ಇಂಧನ ಉಳಿಸಿ' ಜಾಗೃತಿ: ಸೈಕಲ್ ತುಳಿದು ಹೈಕೋರ್ಟ್ಗೆ ಆಗಮಿಸಿದ ನ್ಯಾಯಮೂರ್ತಿ
'ಇಂಧನ ಉಳಿಸಿ' ಜಾಗೃತಿ ಅಭಿಯಾನದ ಹಿನ್ನೆಲೆಯಲ್ಲಿ ಹೈಕೋರ್ಟ್ ನ್ಯಾಯಮೂರ್ತಿಯೊಬ್ಬರು ಕರ್ತವ್ಯಕ್ಕೆ ಹಾಜರಾಗಲು ಸೈಕಲ್ ತುಳಿದು ಮನೆಯಿಂದ ಹೈಕೋರ್ಟ್ಗೆ ಆಗಮಿಸಿದರು.
ಮಧ್ಯಪ್ರದೇಶ ಹೈಕೋರ್ಟ್ನ ನ್ಯಾಯಮೂರ್ತಿ ದ್ವಾರಕಾದೀಶ್ ಬನ್ಸಾಲ್ ಅವರು ಸೈಕಲ್ ತುಳಿಯುವ ಮೂಲಕ ನ್ಯಾಯಾಲಯಕ್ಕೆ ಆಗಮಿಸಿ ಗಮನ ಸೆಳೆದಿದ್ದಾರೆ.
ಇನ್ಸ್ಟಾಗ್ರಾಮ್ ವಿಡಿಯೊದಲ್ಲಿ ನ್ಯಾಯಮೂರ್ತಿ ಅವರು ಸೈಕಲ್ ಸವಾರಿ ಮಾಡುತ್ತಾ, ಕಡಿಮೆ ದೂರದ ಪ್ರಯಾಣಕ್ಕೆ ಸೈಕಲ್ ಬಳಕೆಯನ್ನು ಉತ್ತೇಜಿಸುವ ಬಗ್ಗೆ ಪೋಸ್ಟ್ ಹಾಕಿಕೊಂಡಿದ್ದಾರೆ.
ಮಧ್ಯಪ್ರಾಚ್ಯದ ಉದ್ವಿಗ್ನತೆಯಿಂದಾಗಿ ಜಾಗತಿಕ ಇಂಧನ ಬಿಕ್ಕಟ್ಟು ಎದುರಾಗಿರುವ ಈ ಸಂದರ್ಭದಲ್ಲಿ ಇಂಧನ ಉಳಿತಾಯ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿದ್ದರು. ಈ ಕರೆಗೆ ಪೂರಕವಾಗಿ ನ್ಯಾಯಮೂರ್ತಿಗಳು ಈ ಕ್ರಮ ಅನುಸರಿಸಿದ್ದಾರೆ ಎನ್ನಲಾಗಿದೆ.
"ಒಂದು ಅಥವಾ ಎರಡು ಕಿ.ಮೀ. ಕಡಿಮೆ ದೂರದ ಪ್ರಯಾಣಕ್ಕಾಗಿ ಸೈಕಲ್ ಬಳಸುವ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ನಾನು ಸೈಕಲ್ನಲ್ಲಿ ಬರಲು ನಿರ್ಧರಿಸಿದ್ದೇನೆ. ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿ ಅವರು ಇಂಧನ ಉಳಿಸುವಂತೆ ಮನವಿ ಮಾಡಿದ್ದಾರೆ. ಅದನ್ನು ಗಮನದಲ್ಲಿಟ್ಟುಕೊಂಡು, ನಾನೂ ಕೂಡ ನನ್ನ ನಿವಾಸದಿಂದ ಹೈಕೋರ್ಟ್ಗೆ ಸೈಕಲ್ನಲ್ಲಿ ಬರಬೇಕು ಮತ್ತು ಸಾಮಾನ್ಯ ಜನರಿಗೆ ಸಂದೇಶ ನೀಡಬೇಕು ಎಂದು ನಿರ್ಧರಿಸಿದೆ,'' ಎಂದು ನ್ಯಾಯಮೂರ್ತಿ ದ್ವಾರಕಾದೀಶ್ ಬನ್ಸಾಲ್ ತಿಳಿಸಿದರು.