-->
High Court Round-up : ಹಿಜಾಬ್ ಮಹಿಳೆಯ ಆಯ್ಕೆಯಾಗಬೇಕು.. ಸರ್ಕಾರದ ವಾದ; ಹೈಕೋರ್ಟ್ ರೌಂಡಪ್

High Court Round-up : ಹಿಜಾಬ್ ಮಹಿಳೆಯ ಆಯ್ಕೆಯಾಗಬೇಕು.. ಸರ್ಕಾರದ ವಾದ; ಹೈಕೋರ್ಟ್ ರೌಂಡಪ್

ಹಿಜಾಬ್ ಮಹಿಳೆಯ ಆಯ್ಕೆಯಾಗಬೇಕು.. ಸರ್ಕಾರದ ವಾದ; ಹೈಕೋರ್ಟ್ ರೌಂಡಪ್




ಶಿಕ್ಷಣ ಸಮಸ್ಥೆಗಳಲ್ಲಿ ಹಿಜಬ್ ಧರಿಸುವ ಬಗ್ಗೆ ಕರ್ನಾಟಕ ಹೈಕೋರ್ಟ್‌ನಲ್ಲಿ ವಾದ ಪ್ರತಿವಾದಗಳು ಮಹತ್ವದ ಘಟ್ಟವನ್ನು ತಲುಪಿದೆ. ಎಂಟನೇ ದಿನದ ವಿಚಾರಣೆಯ ಮುಖ್ಯಾಂಶಗಳು ಹೀಗಿವೆ...





ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಮೌಖಿಕ ಅಭಿಪ್ರಾಯ ವ್ಯಕ್ತಪಡಿಸಿ, ಪ್ರಕರಣವನ್ನು ಮುಂದಿನ ವಾರಕ್ಕೆ ವಿಸ್ತರಿಸುವುದು ಬೇಡ. ಅರ್ಜಿದಾರರು, ಪ್ರತಿವಾದಿಗಳು ಕ್ಷಿಪ್ರವಾಗಿ ವಾದ ಮಂಡಿಸಿ. ಲಿಖಿತ ಆಕ್ಷೇಪಣೆಗಳನ್ನು ತ್ವರಿತವಾಗಿ ಸಲ್ಲಿಸಿ. ಈ ವಾರವೇ ಪ್ರಕರಣವನ್ನು ಇತ್ಯರ್ಥಪಡಿಸೋಣ ಎಂದು ಹೇಳಿದರು.



ಹಿಜಾಬ್ ಶಾಲೆ ಒಳಗಷ್ಟೇ ಬೇಡ: ಸರ್ಕಾರದ ವಾದ

ಶಾಲೆಯಲ್ಲಿ ಹಿಜಾಬ್ ಧರಿಸುವ ಬಗ್ಗೆ ಸರ್ಕಾರ ಯಾವುದೇ ಆದೇಶ ಹೊರಡಿಸಿಲ್ಲ. ಶಿಕ್ಷಣ ಸಂಸ್ಥೆಗಳಿಗೆ ಈ ಬಗ್ಗೆ ಅಧಿಕಾರ ನೀಡಲಾಗಿದೆ. ಶಾಲೆಯ ಒಳಗೆ ಹಿಜಾಬ್ ಧರಿಸದಂತೆ ಶಿಕ್ಷಣ ಸಂಸ್ಥೆಗಳು ಹೇಳಿವೆ. ಅವರಿಗೆ ಶಾಲೆವರೆಗೂ ಹಾಕಿಕೊಂಡು ಬರಲು ಯಾವುದೇ ಅಭ್ಯಂತರವಿಲ್ಲ. ಸಾಂಸ್ಥಿಕ ಶಿಸ್ತು ಪಾಲಿಸುವ ಸಂದರ್ಭದಲ್ಲಿ ವೈಯಕ್ತಿಕ ಆಚರಣೆಗಳಿಗೆ ಅವಕಾಶ ಇರುವುದಿಲ್ಲ ಎಂದು ಹೈಕೋರ್ಟ್‌ನಲ್ಲಿ ಸರ್ಕಾರದ ಪರ ವಾದ ಮಂಡಿಸಿದ ಅಡ್ವೊಕೇಟ್ ಜನರಲ್ ಪ್ರಭುಲಿಂಗ ಕೆ. ನಾವದಗಿ ವಾದಿಸಿದರು.ಅಲ್ಲದೆ, ತಮ್ಮ ವಾದಕ್ಕೆ ಪೂರಕವಾದ ಕೆಲ ಮಹತ್ವದ ತೀರ್ಪುಗಳನ್ನು ಉದ್ಧರಿಸಿದರು.


ಅಲ್ಪಸಂಖ್ಯಾತ ಸಂಸ್ಥೆಗಳಿಗೆ ಆದೇಶಿಸಿಲ್ಲ.

ಶಿಕ್ಷಣ ಸಂಸ್ಥೆಗಳೇ ಸಮವಸ್ತ್ರ ನಿಗದಿ ಮಾಡುತ್ತವೆ. ಸರ್ಕಾರ ಯಾವುದೇ ಸಮವಸ್ತ್ರ ನಿಗದಿಪಡಿಸಿಲ್ಲ ಎಂದ ನಾವಡಗಿ, ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳಿಗೆ ಯಾವುದೇ ಸಮವಸ್ತ್ರ ಧರಿಸುವಂತೆ ಆದೇಶಿಸಿಲ್ಲ ಎಂದು ಹೇಳಿದರು. 


ಅಲ್ಪಸಂಖ್ಯಾತ ಶೈಕ್ಷಣಿಕ ಸಂಸ್ಥೆಗಳಿಗೆ ನಿರ್ಬಂಧ ವಿಧಿಸಿರುವ ಕ್ರಮ ಸರಿಯಿಲ್ಲ ಎಂಬ ಎದುರುದಾರರ ಆಕ್ಷೇಪಕ್ಕೆ ಪ್ರತಿಕ್ರಿಯೆ ನೀಡಿದರು. ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳಿಗೆ ಅನ್ವಯವಾಗದ ಕಾರಣ ಅರ್ಜಿ ವಿಚಾರಣೆ ಅನಗತ್ಯ ತಿಳಿಸಿ ಹೈಕೋರ್ಟ್ ಅರ್ಜಿಯನ್ನು ಇತ್ಯರ್ಥಪಡಿಸಿತು.


ಹಿಜಬ್ ಮಹಿಳೆ ಆಯ್ಕೆಗೆ ಬಿಡಬೇಕು: ನಾವಡಗಿ

ಹಿಜಬ್ ಪರ ಅರ್ಜಿದಾರರು 'ಹಿಜಾಬ್' ಕಡ್ಡಾಯ ಧಾರ್ಮಿಕ ಆಚರಣೆ ಎಂದು ಸಂವಿಧಾನದ ವಿಧಿ 25ನ್ನು ಉಲ್ಲೇಖಿಸುತ್ತಾರೆ. ಇನ್ನೊಂದೆಡೆ, ಅಭಿವ್ಯಕ್ತಿ ಸ್ವಾತಂತ್ರ್ಯ ಎಂದೂ ಹೇಳುತ್ತಾರೆ. ಮುಸ್ಲಿಮರಲ್ಲಿ ಕೆಲವರು ಹಿಜಾಬ್ ಧರಿಸಲು ಒಲ್ಲದವರಿರಬಹುದು. ಆಗ, ವಿಧಿ 25ರಡಿ ಹಿಜಾಬ್ ಕಡ್ಡಾಯ ಧಾರ್ಮಿಕ ಆಚರಣೆ ಎಂದಾದರೆ ಅದು 19(1)(ಎ) ಅಡಿ ನೀಡಿರುವ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ವಿರುದ್ಧವಾಗುತ್ತದೆ ಎಂದು ನಾವಡಗಿ 'ಹಿಜಾಬ್' ಅಭಿವ್ಯಕ್ತಿ ಸ್ವಾತಂತ್ರ್ಯದ ಭಾಗ ಎಂಬ ವಾದಕ್ಕೆ ಪ್ರತಿವಾದ ಮಂಡಿಸಿದರು.


ಮಹಿಳೆಯ ಘನತೆಯನ್ನು ಗೌರವಿಸುತ್ತೇವೆ. ಹೀಗಾಗಿ, ಹಿಜಾಬ್ ಧರಿಸುವುದನ್ನು ಅವರ ಆಯ್ಕೆಗೆ ಬಿಡಬೇಕು. ಕಡ್ಡಾಯ ಮಾಡಬಾರದು ಎಂದು ಹೇಳಿ ಸರ್ಕಾರದ ಪರ ವಾದವನ್ನು ನಿಲ್ಲಿಸಿದರು.


ಶಾಲೆಗಳಲ್ಲಿ ಶಿಸ್ತು ತರಲು ಸಮವಸ್ತ್ರ ಬೇಕು

ನಮ್ಮದು ಬಹುಸಂಸ್ಕೃತಿ ದೇಶ. ವೈವಿಧ್ಯಮಯ ಸಾಂಸ್ಕೃತಿಕ ಹಿನ್ನೆಲೆ ನಮಗಿದೆ. ಯಾವುದೇ ಧರ್ಮ ದೊಡ್ಡದು ಅಥವಾ ಚಿಕ್ಕದು ಎಂಬುದಿಲ್ಲ. ಆದರೆ, ವಿದ್ಯಾರ್ಥಿಗಳಿಗೆ ಸ್ವತಂತ್ರ ಪ್ರಜ್ಞೆ ಇರಬೇಕು ಎಂದು ಉಡುಪಿಯ ಪಿಯು ಶಿಕ್ಷಕರ ಪರ ಹಿರಿಯ ವಕೀಲ ಆರ್. ವೆಂಕಟರಮಣಿ ವಾದ ಮಂಡಿಸಿದರು.


ಸಾರ್ವಜನಿಕ ಪ್ರದೇಶಕ್ಕೂ ಶಾಲೆಯ ವಾತಾವರಣಕ್ಕೂ ವ್ಯತ್ಯಾಸವಿರುತ್ತದೆ. ಇದನ್ನು ಅರ್ಥ ಮಾಡಿಕೊಳ್ಳಬೇಕು. ವಿದ್ಯಾರ್ಥಿಗಳು ಶಿಕ್ಷಣದ ಉದ್ದೇಶಕ್ಕಾಗಿ ಶಿಸ್ತು, ಸುವ್ಯವಸ್ಥೆ ಪಾಲಿಸಬೇಕು. ಸಂವಿಧಾನದ ವಿಧಿ 25(1) ರಂತೆ ಸಾರ್ವಜನಿಕ ಸುವ್ಯವಸ್ಥೆ, ನೈತಿಕತೆ ಹಾಗೂ ಆರೋಗ್ಯದ ವಿಚಾರ ಬಂದಾಗ ಸರ್ಕಾರ ಧಾರ್ಮಿಕ ವಿಷಯಗಳಲ್ಲಿ ಮಧ್ಯಪ್ರವೇಶಿಸಬಹುದು ಎಂದು ಅವರು ಹೇಳಿದರು.



ವಿದ್ಯಾರ್ಥಿಗಳಲ್ಲಿ ಶಿಸ್ತು ತರಲು ಶಿಕ್ಷಣ ಸಂಸ್ಥೆಗಳು ತಮ್ಮದೇ ಕೆಲ ನಿಯಮಗಳನ್ನು ಹೊಂದಿರುತ್ತವೆ. ಕುರಾನ್ ನಲ್ಲಿರುವ ಅಂಶಗಳ ಬಗ್ಗೆ ನಮ್ಮ ತಕರಾರಿಲ್ಲ. ಆದರೆ, ಸಾರ್ವಜನಿಕ ಪ್ರದೇಶಗಳಲ್ಲಿನ ಆಚರಣೆಗಳನ್ನು ಶಿಕ್ಷಣ ಸಂಸ್ಥೆಗಳ ಒಳಗೂ ಆಚರಿಸುತ್ತೇವೆ ಎನ್ನುವುದು ಸರಿಯಲ್ಲ. ಶಾಲೆಗಳ ಒಳಗೆ ಧಾರ್ಮಿಕ ಆಚರಣೆಗಳಿಗೆ ಆವಕಾಶವಿಲ್ಲ. ಇಲ್ಲಿ ಯಾರ ಹಕ್ಕುಗಳೂ ಉಲ್ಲಂಘನೆಯಾಗಿಲ್ಲ. ನ್ಯಾಯಾಲಯಗಳು ಹಕ್ಕುಗಳ ಉಲ್ಲಂಘನೆಯಾದಾಗ ಮಾತ್ರವೇ ಮಧ್ಯಪ್ರವೇಶಿಸಬಹುದು. ಆಡಳಿತ ಹೇಗೆ ನಡೆಸಬೇಕು ಎಂಬ ವಿಚಾರಗಳಲ್ಲಿ ಮಧ್ಯಪ್ರವೇಶಿಸಬಾರದು ಎಂದು ಮನವಿ ಮಾಡಿದರು.



ಕಡ್ಡಾಯ ಧಾರ್ಮಿಕ ಆಚರಣೆಗೂ ಸಂಪ್ರದಾಯಕ್ಕೂ ವ್ಯತ್ಯಾಸವಿದೆ

ಶಿಕ್ಷಣ ಸಂಸ್ಥೆಗಳ ಪರ ವಾದ ಮಂಡಿಸಿದ ಹಿರಿಯ ವಕೀಲ ಎಸ್,ಎಸ್ ನಾಗಾನಂದ್, ಕಡ್ಡಾಯ ಧಾರ್ಮಿಕ ಆಚರಣೆಗೂ, ಸಂಪ್ರದಾಯಗಳಿಗೂ ವ್ಯತ್ಯಾಸವಿದೆ. ಹಿಂದೂ ಧರ್ಮದಲ್ಲಿ ಕೆಲವು ಸಮುದಾಯದಲ್ಲಿ ತಾಳಿ ಬಳಸುವುದಿಲ್ಲ. ಕೆಲವು ಕಡೆ ಕಾಲುಂಗುರ ಧರಿಸುವುದಿಲ್ಲ. ಮತ್ತೆ ಕೆಲವು ಸಮುದಾಯದ ಮದುವೆಗಳಲ್ಲಿ ಸಪ್ತಪದಿ ತುಳಿಯುವುದಿಲ್ಲ. ಧಾರ್ಮಿಕ ಆಚರಣೆಗಳು ಹಾಗೂ ಸಂಪ್ರದಾಯಗಳನ್ನು ನಾವು ಗೌರವಿಸುತ್ತೇವೆ. ಹಾಗೆಂದು ಅವನ್ನು ಎಲ್ಲೆಡೆ ಆಚರಣೆ ಮಾಡುತ್ತೇವೆ ಎನ್ನುವುದು ಸರಿಯಲ್ಲ ಎಂದು ಅವರು ವಿವರಿಸಿದರು.


ಬ್ರಾಹ್ಮಣರಲ್ಲೂ ದಿನಕ್ಕೆ ಮೂರು ಬಾರಿ ಪ್ರಾರ್ಥನೆ ಸಂಪ್ರದಾಯ ಇದೆ. ವಕೀಲರಾದವರು ಕೋರ್ಟ್ ವಿಚಾರಣೆ ನಡುವೆಯೂ ಪಾರ್ಥನೆ ಸಲ್ಲಿಸಲು ಮುಂದಾಗಬಹುದೇ? ಒಂದು ವೇಳೆ, ಇದಕ್ಕೆ ನ್ಯಾಯಾಲಯ ಒಪ್ಪಲಿಲ್ಲ ಎಂದರೆ ಧಾರ್ಮಿಕ ಹಕ್ಕನ್ನು ಉಲ್ಲಂಘಿಸಲಾಗಿದೆ ಎಂದು ಹೇಳಬಹುದೇ? ಅಂತಯೇ ಶಿಕ್ಷಣ ಸಂಸ್ಥೆಗಳಲ್ಲಿಯೂ ಕೆಲವು ನಿಬಂಧನೆಗಳನ್ನು ಪಾಲಿಸಬೇಕಾಗುತ್ತದೆ ಎಂದು ಅವರು ವಿವರಿಸಿದರು.


Ads on article

Advertise in articles 1

advertising articles 2

Advertise under the article