-->
Karnataka HC on Stray Dogs - ಬೀದಿ ನಾಯಿಯಿಂದ ಗಾಯ, ಸಾವು ಸಂಭವಿಸಿದರೆ ಸ್ಥಳೀಯಾಡಳಿತವೇ ಹೊಣೆ: ಕರ್ನಾಟಕ ಹೈಕೋರ್ಟ್‌

Karnataka HC on Stray Dogs - ಬೀದಿ ನಾಯಿಯಿಂದ ಗಾಯ, ಸಾವು ಸಂಭವಿಸಿದರೆ ಸ್ಥಳೀಯಾಡಳಿತವೇ ಹೊಣೆ: ಕರ್ನಾಟಕ ಹೈಕೋರ್ಟ್‌

ಬೀದಿ ನಾಯಿಯಿಂದ ಗಾಯ, ಸಾವು ಸಂಭವಿಸಿದರೆ ಸ್ಥಳೀಯಾಡಳಿತವೇ ಹೊಣೆ: ಕರ್ನಾಟಕ ಹೈಕೋರ್ಟ್‌






ಬೀದಿ ನಾಯಿ ಹಾವಳಿಗೆ ಕರ್ನಾಟಕ ಹೈಕೋರ್ಟ್‌ ಕೆಂಡಾಮಂಡಲವಾಗಿದ್ದು, ಬೀದಿ ಶ್ವಾನದಿಂದ ಯಾರಾದರೂ ಗಾಯಗೊಂಡರೆ ಅಥವಾ ಸಾವಿಗೀಡಾದರೆ ಸ್ಥಳೀಯಾಡಳಿತವೇ ಹೊಣೆ ಎಂದು ಕರ್ನಾಟಕ ಹೈಕೋರ್ಟ್‌ ಧಾರವಾಡ ಪೀಠ ಮಹತ್ವದ ಆದೇಶ ಮಾಡಿದೆ.


ಬೀದಿ ನಾಯಿಗಳ ದಾಳಿಯಿಂದ ಹಾನಿಯಾದರೆ ಸಂಬಂಧಪಟ್ಟ ಜಿಲ್ಲಾ ಪಂಚಾಯಿತಿ, ಜಿಲ್ಲಾ ದಂಡಾಧಿಕಾರಿ ಮತ್ತು ಗ್ರಾಮ ಪಂಚಾಯಿತಿ ಹೊಣೆ ಹೊರಬೇಕಿದೆ ಎಂದು ಹೈಕೋರ್ಟ್ ಆದೇಶದಲ್ಲಿ ಹೇಳಿದೆ.


ಶ್ವಾನ ದಾಳಿಯಿಂದ 2 ವರ್ಷದ ಗಂಡು ಮಗುವನ್ನು ಕಳೆದುಕೊಂಡಿದ್ದ ಬೆಳಗಾವಿ ಬಾಳೆಕುಂದ್ರಿ ನಿವಾಸಿ ಯೂಸುಬ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಸೂರಜ್ ಗೋವಿಂದರಾಜ್ ನೇತೃತ್ವದ ನ್ಯಾಯಪೀಠ ಈ ಆದೇಶ ಮಾಡಿದೆ.


ಶ್ವಾನ ದಾಳಿಯಿಂದ ಮೃತನಾದ ಬಾಲಕನ ಕುಟುಂಬಕ್ಕೆ ಒಂದು ತಿಂಗಳ ಒಳಗೆ 10 ಲಕ್ಷ ರೂಪಾಯಿ ಪರಿಹಾರ ಕೊಡಬೇಕು. 2018ರ ನವೆಂಬರ್‌ 29ರಿಂದ ವಾರ್ಷಿಕ ಶೇ. 6ರಷ್ಟು ಬಡ್ಡಿ ಸಹಿತ ಪರಿಹಾರ ಪಾವತಿ ಮಾಡಬೇಕು ಎಂದು ನ್ಯಾಯಪೀಠ ತೀರ್ಪಿನಲ್ಲಿ ಹೇಳಿದೆ. ಸದ್ರಿ ಪ್ರಕರಣದಲ್ಲಿ, ಪರಿಹಾರದ ರೂಪದಲ್ಲಿ ಸಾವನ್ನಪ್ಪಿದ ಬಾಲಕನ ಕುಟುಂಬಕ್ಕೆ ನೀಡಲಾಗಿರುವ 1.5 ಲಕ್ಷ ರೂಪಾಯಿಯನ್ನು ಕಡಿತ ಮಾಡಬಹುದು ಎಂದು ಆದೇಶದಲ್ಲಿ ಹೇಳಲಾಗಿದೆ.


ಮೃತ ಬಾಲಕನ ಚಿಕಿತ್ಸೆಗೆ ಮಾಡಿದ ಖರ್ಚು ಹಾಗೂ ವೈದ್ಯಕೀಯ ಬಿಲ್‌ಗಳನ್ನು ಬೆಳಗಾವಿ ಜಿಲ್ಲಾ ಪಂಚಾಯತ್‌ಗೆ ಅರ್ಜಿದಾರರು ಸಲ್ಲಿಸಲು ಸೂಚಿಸಿದ್ದು, ಇದನ್ನು ಪರಿಗಣಿಸಿ ನಾಲ್ಕು ವಾರಗಳಲ್ಲಿ ಜಿಲ್ಲಾ ಪಂಚಾಯಿತಿಯು ವೆಚ್ಚದ ಹಣ ಪಾವತಿಸಬೇಕು. ಈ ಆದೇಶದ ಒಂದು ತಿಂಗಳ ಒಳಗೆ ಕಾನೂನು ಪ್ರಕ್ರಿಯೆಯ ಭಾಗವಾಗಿ 20 ಸಾವಿರ ರೂಪಾಯಿಯನ್ನು ಜಿಲ್ಲಾ ಪಂಚಾಯಿತಿಯು ಪಾವತಿಸಬೇಕು ಎಂದು ನ್ಯಾಯಾಲಯವು ಆದೇಶಿಸಿದೆ.


2022ರ ನವೆಂಬರ್‌ 7ರಂದು ಅನುಪಾಲನಾ ವರದಿ ಸಲ್ಲಿಸಬೇಕು ಎಂದು ಸರ್ಕಾರಕ್ಕೆ ಆದೇಶ ಮಾಡಿದೆ.


"ಮಗು ಅಕಾಲಿಕ ಸಾವನ್ನಪ್ಪಿದ್ದು, ಅರ್ಜಿದಾರರ ಕೊನೆಗಾಲದಲ್ಲಿ ಮಗು ಅವರಿಗೆ ನೆರವಾಗುವ ಸಾಧ್ಯತೆ ಮತ್ತು ಮಗುವಿನ ಪ್ರೀತಿ ಮತ್ತು ಬಾಂಧವ್ಯದ ನಷ್ಟ, ಅತ್ಯಂತ ಕ್ರೂರ ಮತ್ತು ಹೀನ ರೀತಿಯಲ್ಲಿ ಮಗು ಕಳೆದುಕೊಂಡಿರುವುದರಿಂದ ಕುಟುಂಬದ ಸದಸ್ಯರಿಗೆ ಆಗಿರುವ ನೋವನ್ನು ಪರಿಗಣಿಸಿ 10 ಲಕ್ಷ ರೂಪಾಯಿ ಪರಿಹಾರ ಪಾವತಿಸಲು ಆದೇಶ ಮಾಡಲಾಗಿದೆ" ಎಂದು ಪೀಠ ಆದೇಶದಲ್ಲಿ ವಿವರಿಸಿದೆ.


"ಶ್ವಾನಗಳಿಗೂ ಸಮಾಜದಲ್ಲಿ ಬದುಕುವ ಹಕ್ಕಿದೆ ಎಂಬುದನ್ನು ಜನರು ಅರ್ಥ ಮಾಡಿಕೊಳ್ಳಬೇಕು. ನಾಯಿಗಳ ಮೇಲೆ ಕಲ್ಲಿನಿಂದ ದಾಳಿ ಮಾಡುವುದು, ಅವುಗಳನ್ನು ಥಳಿಸುವುದನ್ನು ನಿಲ್ಲಿಸಬೇಕು. ಆಟವಾಡಲು ಅಥವಾ ಬೀದಿ ನಾಯಿಗಳಿಗೆ ತಿನಿಸು ನೀಡಲು ಮಕ್ಕಳು ಬೀದಿ ನಾಯಿಗಳ ಬಳಿ ಹೋಗದಂತೆ, ಹಿರಿಯರು ಗಮನ ಹರಿಸಬೇಕು” ಎಂಬುದು ಸೇರಿದಂತೆ ಹಲವು ನಿರ್ದೇಶನಗಳನ್ನು ನ್ಯಾಯಾಲಯ ನೀಡಿದೆ.


ನ್ಯಾಯಾಲಯ ಪ್ರಮುಖ ನಿರ್ದೇಶನಗಳು ಇಂತಿವೆ:

ಬೀದಿ ಶ್ವಾನಗಳ ಸಂಖ್ಯೆ ನಿಯಂತ್ರಿಸಬೇಕು. ಪ್ರಾಣಿ ಜನನ ನಿಯಂತ್ರಣ ನಿಯಮಗಳ ಅಡಿ ಬೀದಿ ನಾಯಿಗಳಿಗೆ ಸಂತಾನಶಕ್ತಿ ಹರಣ ಮತ್ತು ಲಸಿಕೆಯನ್ನು ಪ್ರಾಣಿ ಕಲ್ಯಾಣ ಸಂಸ್ಥೆಗಳು ಮತ್ತು ಮೇಲ್ವಿಚಾರಣಾ ಸಮಿತಿಗಳು ಖಾತ್ರಿಪಡಿಸಬೇಕು.

ಜಿಲ್ಲಾ, ತಾಲ್ಲೂಕು ಮತ್ತು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಈ ಕಾರ್ಯ ನಡೆಯಬೇಕು. ಈ ಕಾರ್ಯಕ್ಕೆ ವಿಕೇಂದ್ರಿಕರಣ ವ್ಯವಸ್ಥೆಯಡಿ NGO ಮತ್ತು ಇತರೆ ಸಂಸ್ಥೆಗಳನ್ನು ಬಳಸಿಕೊಳ್ಳಬೇಕು. ಕ್ರಮ ಕೈಗೊಂಡ ಬಗ್ಗೆ ಡಿಸಿ ಕಚೇರಿಗೆ ವರದಿ ಸಲ್ಲಿಸಬೇಕು.


ಪ್ರಾಣಿಗಳ ಜನನ ನಿಯಂತ್ರಣ ಕಾಯಿದೆಯ ನಿಯಮ 9 ಪ್ರಕಾರ ವಾಸಿಯಾಗದ ಕಾಯಿಲೆ ಅಥವಾ ಮಾರಣಾಂತಿಕ ಗಾಯಗಳಿಂದ ನರಳುತ್ತಿರುವ ಬೀದಿ ನಾಯಿಗಳಿಗೆ ತಜ್ಞ ಪಶು ವೈದ್ಯರಿಂದ ದಯಾ ಮರಣ ಕಲ್ಪಿಸಬೇಕು.


ಆಕ್ರಮಣಕಾರಿ ನಾಯಿಗಳ ಮತ್ತು ರೇಬಿಸ್ ರೋಗದಿಂದ ನರಳುತ್ತಿರುವ ನಾಯಿಗಳ ಕುರಿತು ದೂರುಗಳು ಬಂದರೆ ಸ್ಥಳೀಯ ಪೌರಾಡಳಿತ ಸಂಸ್ಥೆಗಳ ಶ್ವಾನ ದಳವು ಪರಿಶೀಲಿಸಬೇಕು. ನಾಯಿಗೆ ರೇಬಿಸ್ ಇದ್ದರೆ ಸಹಜ ಸಾವು ಬರುವವರೆಗೂ ಅದನ್ನು ಪ್ರತ್ಯೇಕವಾಗಿ ಇಡಬೇಕು.


ಶ್ವಾನ ಹಾವಳಿ ಬಗ್ಗೆ ನಾಗರಿಕರಿಗೆ ದೂರು ಸಲ್ಲಿಸಲು 'ದೂರು ಘಟಕ' ವ್ಯವಸ್ಥೆ ಮಾಡಬೇಕು.


ಜನ ವಸತಿ ಪ್ರದೇಶದಲ್ಲಿ ನಾಯಿಗಳು ಹಾವಳಿ ಹೆಚ್ಚಾಗದಂತೆ ಸಮರ್ಪಕವಾಗಿ ಕಸ ಸಂಗ್ರಹಿಸಿ ವಿಲೇವಾರಿ ಮಾಡಬೇಕು


ಜಿಲ್ಲಾ, ತಾಲ್ಲೂಕು ಮತ್ತು ಗ್ರಾಮ ಪಂಚಾಯತಿಗಳು ನಾಯಿ ದಾಳಿಗೆ ತುತ್ತಾದವರಿಗೆ ಪರಿಹಾರ ಕಲ್ಪಿಸಲು ಸೂಕ್ತ ಮಾರ್ಗಸೂಚಿ ರಚಿಸಬೇಕು.

Ads on article

Advertise in articles 1

advertising articles 2

Advertise under the article