-->
ನ್ಯಾಯದೇವತೆಯ ರಥ ಎಳೆದ ದಕ್ಷಿಣ ಕನ್ನಡ ಜಿಲ್ಲೆಯ ಮಹನೀಯರುಗಳ ಪರಿಚಯ ಮಾಲಿಕೆ: ಜ. ಜಿ.ಕೆ. ಗೋವಿಂದ ಭಟ್‌

ನ್ಯಾಯದೇವತೆಯ ರಥ ಎಳೆದ ದಕ್ಷಿಣ ಕನ್ನಡ ಜಿಲ್ಲೆಯ ಮಹನೀಯರುಗಳ ಪರಿಚಯ ಮಾಲಿಕೆ: ಜ. ಜಿ.ಕೆ. ಗೋವಿಂದ ಭಟ್‌

ನ್ಯಾಯದೇವತೆಯ ರಥ ಎಳೆದ ದಕ್ಷಿಣ ಕನ್ನಡ ಜಿಲ್ಲೆಯ ಮಹನೀಯರುಗಳ ಪರಿಚಯ ಮಾಲಿಕೆ: ಜ. ಜಿ.ಕೆ. ಗೋವಿಂದ ಭಟ್‌


ಜಸ್ಟೀಸ್ ಜಿ.ಕೆ.ಗೋವಿಂದ ಭಟ್, ಚೀಫ್ ಜಸ್ಟೀಸ್; ಹೈಕೋರ್ಟ್ ಆಫ್‌ ಕರ್ನಾಟಕ





ನ್ಯಾಯಮೂರ್ತಿ ಜಿ.ಕೆ.ಗೋವಿಂದ ಭಟ್ ಇವರು ದಿನಾಂಕ 16.12.1916 ರಂದು ದಕ್ಷಿಣ ಕನ್ನಡ ಜಿಲ್ಲೆಯ ಪ್ರತಿಷ್ಠಿತ ಹವ್ಯಕ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು. ಪ್ರಾರಂಭಿಕ ಶಿಕ್ಷಣವನ್ನು ಮಂಗಳೂರಿನಲ್ಲಿ ಪಡೆದ ಇವರು ಮದರಾಸಿನಲ್ಲಿ ತಮ್ಮ ಪದವಿಯ ವ್ಯಾಸಂಗವನ್ನು ಪೂರೈಸಿದರು. ಮದರಾಸ್ ವಿಶ್ವ ವಿದ್ಯಾಲಯದಿಂದ ಕಾನೂನು ಪದವಿಯನ್ನು ಪಡೆದರು.



1940 ನೆಯ ಇಸವಿಯಲ್ಲಿ ಮದ್ರಾಸ್ ಹೈಕೋರ್ಟಿನ ವಕೀಲರಾಗಿ ನೋಂದಾಯಿಸಿಕೊಂಡು ಮ೦ಗಳುಾರಿನಲ್ಲಿ ವಕೀಲ ವೃತ್ತಿಯನ್ನು ಪ್ರಾರಂಭಿಸಿದರು. 1954ರ ವರೆಗೆ ಮಂಗಳೂರಿನಲ್ಲಿ ಸಿವಿಲ್ ವಿಭಾಗದಲ್ಲಿ ವಕೀಲರಾಗಿ ವೃತ್ತಿಯನ್ನು ನಿರ್ವಹಿಸಿದರು.


ಉನ್ನತ ನ್ಯಾಯಾ೦ಗದಲ್ಲಿ ಸೇವೆ ಸಲ್ಲಿಸಬೇಕು ಎಂಬ ಉದ್ದೇಶದಿಂದ 1954 ರಲ್ಲಿ ಮದರಾಸಿಗೆ ತಮ್ಮ ಕಚೇರಿಯನ್ನು ಸ್ಥಳಾಂತರಿಸಿ ಮದ್ರಾಸ್ ಹೈಕೋರ್ಟ್ ನಲ್ಲಿ ವಕೀಲ ವೃತ್ತಿಯನ್ನು ನಿರ್ವಹಿಸಿದರು.



ರಾಜ್ಯ ಪುನರ್ವಿಂಗಡಣೆಯ ಬಳಿಕ ಉದಯವಾದ ನೂತನ ಮೈಸೂರು ರಾಜ್ಯದಲ್ಲಿ ತಮ್ಮ ವಕೀಲ ವೃತ್ತಿಯ ಸೇವೆಯನ್ನು ಮುಂದುವರಿಸಲು ಇಚ್ಛಿಸಿದ ಇವರು 1956 ರಲ್ಲಿ ಬೆಂಗಳೂರಿಗೆ ತಮ್ಮ ಕಚೇರಿಯನ್ನು ಸ್ಥಳಾಂತರಿಸಿದರು.



1962ರಲ್ಲಿ ಮೈಸೂರು ಹೈಕೋರ್ಟ್ ನ ಹೆಚ್ಚುವರಿ ನ್ಯಾಯಾಧೀಶರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಒಂದು ವರ್ಷದ ಬಳಿಕ ಖಾಯಂ ನ್ಯಾಯಾಧೀಶರಾಗಿ ನೇಮಕಗೊಂಡರು.



ಹೈಕೋರ್ಟ್ ನ್ಯಾಯಾಧೀಶರಾಗಿ ತಮ್ಮ ಅಧಿಕಾರಾವಧಿಯಲ್ಲಿ ಸಾ೦ವಿಧಾನಿಕ ವಿಷಯಗಳಿಗೆ ಸ೦ಬ೦ಧಿಸಿದ ಪ್ರಕರಣಗಳಲ್ಲಿ ಇವರು ನೀಡಿದ ತೀರ್ಪುಗಳು ಜನಸಾಮಾನ್ಯರ ಪಾಲಿಗೆ ಬಹಳಷ್ಟು ಉಪಯುಕ್ತವಾಗಿವೆ.


ದಿನಾಂಕ 7.6.1973 ರ೦ದು ಮೈಸೂರು ಹೈಕೋರ್ಟ್ ನ ಮುಖ್ಯ ನ್ಯಾಯಾಧೀಶರಾಗಿ ಅಧಿಕಾರ ವಹಿಸಿಕೊಂಡರು.


ದಿನಾಂಕ 1.11.1973 ರ೦ದು ಆಗಿನ ಮುಖ್ಯಮಂತ್ರಿಗಳಾದ ಡಿ.ದೇವರಾಜ್ ಅರಸ್ ಅವರ ಪ್ರಯತ್ನದ ಫಲವಾಗಿ ಮೈಸೂರು ರಾಜ್ಯದ ಹೆಸರು ಕನಾ೯ಟಕ ಎಂದು ಪುನರ್ನಾಮಕರಣಗೊ೦ಡಿತು. 


ಮುಖ್ಯ ನ್ಯಾಯಮೂರ್ತಿ ಜಿ.ಕೆ.ಗೋವಿಂದ ಭಟ್ ಅವರ ಅವಧಿಯಲ್ಲಿ ಮೈಸೂರು ಹೈಕೋರ್ಟ್ ನ ಹೆಸರು ಕರ್ನಾಟಕ ಹೈಕೋರ್ಟ್ ಎಂದು ಪುನರ್ನಾಮಕರಣಗೊ೦ಡಿತು. ಭಾರತದ ಹಲವಾರು ರಾಜ್ಯಗಳು ಪುನರ್ನಾಮಕರಣ ಹೊಂದಿದರೂ ಅಲ್ಲಿನ ಹೈಕೋರ್ಟ್ ನ ಹೆಸರು ಬದಲಾಗದೆ ಇರುವುದನ್ನು ಇಲ್ಲಿ ಸ್ಮರಿಸಬಹುದು.



ದಿನಾಂಕ 1.4.1974 ರಲ್ಲಿ ಡಿ.ದೇವರಾಜ್ ಅರಸ್ ಸರಕಾರವು ಕನಾ೯ಟಕ ರಾಜ್ಯದಲ್ಲಿ ಭೂ ಸುಧಾರಣಾ ಕಾನೂನು ಜಾರಿಗೊಳಿಸಿತು.ಜಮೀನುದಾರರ ಹೆಸರಿನಲ್ಲಿದ್ದು ಗೇಣಿಗೆ ನೀಡಲಾಗಿದ್ದ ಕೃಷಿ ಜಮೀನಿನ ಒಡೆತನ ಸರಕಾರಕ್ಕೆ ನಿಹಿತವಾಯಿತು.


ಭಾರತದಾದ್ಯಂತ ವಿವಿಧ ರಾಜ್ಯಗಳಲ್ಲಿ ಕೂಡಾ ಇದೇ ಅವಧಿಯಲ್ಲಿ ಭೂ ಸುಧಾರಣಾ ಕಾನೂನುಗಳನ್ನು ಜಾರಿಗೊಳಿಸಲಾಯಿತು.


ವಿವಿಧ ರಾಜ್ಯಗಳ ಬಾಧಿತ ಜಮೀನುದಾರರು ಆಯಾ ರಾಜ್ಯದ ಹೈಕೋರ್ಟ್ ಗಳಲ್ಲಿ ಕಾಯಿದೆಯನ್ನು ರದ್ದುಗೊಳಿಸುವ೦ತೆ ಕೋರಿ ರಿಟ್‍ ಅಜಿ೯ಗಳನ್ನು ದಾಖಲಿಸಿದರು.


ಕರ್ನಾಟಕ ಹೈಕೋರ್ಟ್ ನಲ್ಲೂ ಭೂ ಸುಧಾರಣ ಕಾಯ್ದೆಯನ್ನು ರದ್ದುಗೊಳಿಸುವಂತೆ ಕೋರಿ ಜಮೀನುದಾರರ ಪರವಾಗಿ ಸಲ್ಲಿಸಿದ ರಿಟ್ ಪಿಟಿಷನ್ ಅನ್ನು ಆಲಿಸಿದ ಮುಖ್ಯ ನಾಯಮೂರ್ತಿ ಶ್ರೀ ಜಿ. ಕೆ. ಗೋವಿಂದ ಭಟ್ ಅವರ ನೇತೃತ್ವದ ಪೀಠ ಸರ್ವರಿಗೂ ಸಮಬಾಳು ಸಮಪಾಲು ಎಂಬ ಸರಕಾರದ ನಿಲುವನ್ನು ಎತ್ತಿ ಹಿಡಿದು ರಾಜ್ಯದ ದುರ್ಬಲ ಗೇಣಿದಾರರ ಬಾಳಿಗೆ ಬೆಳಕಾಗುವ ತೀರ್ಪನ್ನು ನೀಡಿತ್ತು. ನಮ್ಮ ರಾಜ್ಯದಲ್ಲಿ ಉಳುವವನೇ ಭೂಮಿಯ ಒಡೆಯನಾದ.



ನೆರೆಯ ಕೇರಳ ರಾಜ್ಯದಲ್ಲಿ ಭೂಸುಧಾರಣೆ ಕಾನೂನು ರದ್ದುಗೊಳಿಸುವ೦ತೆ ಕೋರಿ ಸಲ್ಲಿಸಿದ ರಿಟ್‍ ನಲ್ಲಿ ಕೇರಳ ಹೈಕೋರ್ಟ್ ಜಮೀನುದಾರರು ಹಾಗೂ ಗೇಣಿದಾರರು ಇವರಿಬ್ಬರ ಹಿತಾಸಕ್ತಿಗಳನ್ನು ಕಾಪಾಡುವ ತೀಪ೯ನ್ನು ನೀಡಿತು. ಆಂಧ್ರಪ್ರದೇಶ ಮತ್ತು ಬಿಹಾರ ರಾಜ್ಯಗಳ ಹೈಕೋರ್ಟ್ ತೀರ್ಪು ಸಂಪೂರ್ಣವಾಗಿ ಜಮೀನ್ದಾರರ ಹಿತಾಸಕ್ತಿಯನ್ನು ಕಾಪಾಡುವಂತಿತ್ತು.



ನ್ಯಾಯಮೂರ್ತಿ ಜಿ. ಕೆ. ಗೋವಿಂದ ಭಟ್ ಅವರ ನ್ಯಾಯಪೀಠ ನೀಡಿದ ತೀರ್ಪು ಬಡ ಗೇಣಿದಾರರ ಬಾಳನ್ನು ಬೆಳಗಿಸಿತು. ತತ್ಪರಿಣಾಮವಾಗಿ ಸಮಾಜದ ಎಲ್ಲಾ ವರ್ಗಗಳ ಜನರು ಎಲ್ಲಾ ಕ್ಷೇತ್ರಗಳಲ್ಲಿ ಮುಂಚೂಣಿಗೆ ಬರುವಂತಾಗಿ ಬಡತನ ನಿರ್ಮೂಲನೆಯಾಗಬೇಕೆ೦ಬ ಸರಕಾರದ ಉದಾತ್ತ ಧ್ಯೇಯೋದ್ದೇಶವು ನ್ಯಾಯಾಂಗದ ಆದೇಶದಿಂದ ಸಾಕಾರಗೊಂಡಿತು.



ದಿನಾಂಕ 7.6.1973 ರಿಂದ 15.12.1978 ರ ವರೆಗೆ ಸುಮಾರು ಐದೂವರೆ ವರ್ಷಗಳಷ್ಟು ಸುದೀರ್ಘ ಕಾಲ ಹೈಕೋರ್ಟಿನ ಮುಖ್ಯ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದ ಹೆಗ್ಗಳಿಕೆ ಇವರದ್ದು.



ದಿನಾಂಕ 25.6.1975 ರಿಂದ 21.3.1977 ರ ವರೆಗೆ ದೇಶಾದ್ಯಂತ ತುತು೯ ಪರಿಸ್ಥಿತಿ ಘೋಷಿಸಲ್ಪಟ್ಟಿತು. ಬದುಕುವ ಹಕ್ಕು ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಹಕ್ಕುಗಳನ್ನು ಹೊರತುಪಡಿಸಿ ಸಂವಿಧಾನವು ನೀಡಿದ ಉಳಿದ ಆರು ಮೂಲಭೂತ ಹಕ್ಕುಗಳನ್ನು ಮೊಟಕುಗೊಳಿಸಲಾಯಿತು.


ಸಾಂವಿಧಾನಿಕ ಪರಿಹಾರ ಪಡೆಯುವ ಮೂಲಭೂತ ಹಕ್ಕು ಕೂಡ ಮೊಟಕುಗೊಳಿ ಸಿದುದರಿಂದ ಸಾಂವಿಧಾನಿಕ ಹಕ್ಕುಗಳ ರಕ್ಷಣೆಗಾಗಿ ಹೈಕೋರ್ಟ್ ಅಥವಾ ಸುಪ್ರೀಂ ಕೋರ್ಟಿಗೆ ಮೊರೆ ಹೋಗುವ ಅವಕಾಶ ಕೂಡ ಪ್ರಜೆಗಳಿಗೆ ಇಲ್ಲವಾಯಿತು. ತುರ್ತುಪರಿಸ್ಥಿತಿಯ ಅವಧಿಯಲ್ಲಿ ರಾಜ್ಯದ ಮುಖ್ಯ ನ್ಯಾಯಮೂರ್ತಿಗಳಾಗಿ ಶ್ರೀ ಜಿ.ಕೆ.ಗೋವಿಂದ ಭಟ್ ಅವರು ಕಾರ್ಯ ನಿವ೯ಹಿಸಿದರು.


ಕಾರ್ಮೋಡಕ್ಕೆ ಬೆಳ್ಳಿಗೆರೆ ಇದ್ದಂತೆ; ತುರ್ತು ಪರಿಸ್ಥಿತಿಯ ಕಾಲದಲ್ಲಿಯೂ ಸಾರ್ವಜನಿಕರ ಹಕ್ಕುಗಳನ್ನು ಕಸಿದುಕೊಂಡ ಅವಧಿಯಲ್ಲಿ ನ್ಯಾಯಿಕ ಪ್ರಬುದ್ಧತೆಯನ್ನು ಪ್ರದರ್ಶಿಸುವ ಮೂಲಕ ನ್ಯಾಯದೇವತೆಯ ರಥವನ್ನು ಯಶಸ್ವಿಯಾಗಿ ಎಳೆದಿರುವುದು ಅತ್ಯಂತ ಪ್ರಶಂಸನೀಯ ಕಾರ್ಯವಾಗಿದೆ.



70 ರ ದಶಕದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ವಕೀಲರು ಅಧೀನ ನ್ಯಾಯಾಂಗ ಸೇವೆಗೆ ಸೇರುವ ಇಚ್ಛೆಯನ್ನು ಹೊಂದಿರಲಿಲ್ಲ. ಇದಕ್ಕೆ ಮುಖ್ಯ ಕಾರಣ ನ್ಯಾಯಾಧೀಶರ ವೇತನ ಮತ್ತು ಸೇವಾ ಸ್ಥಿತಿಗತಿಗಳು ಸುಸ್ಥಿತಿಯಲ್ಲಿ ಇರಲಿಲ್ಲ. ಆದರೆ ಮುಖ್ಯ ನ್ಯಾಯಮೂರ್ತಿ ಜಿ. ಕೆ. ಗೋವಿಂದ ಭಟ್ ಅವರ ಅವಧಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಿಂದ ಹಲವಾರು ವಕೀಲರು ಮುನ್ಸಿಫ್ ಹುದ್ದೆಗೆ ಆಯ್ಕೆಯಾಗಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿ ಪ್ರಧಾನ ಜಿಲ್ಲಾ ನ್ಯಾಯಾಧೀಶರಾಗಿ ನಿವೃತ್ತರಾಗಿರುವುದು ನಮಗೆಲ್ಲರಿಗೂ ಅಭಿಮಾನದ ವಿಷಯವಾಗಿದೆ.


ರಾಜ್ಯ ಹೈಕೋರ್ಟ್ ನ ಇತಿಹಾಸದಲ್ಲಿ ಅತ್ಯಂತ ಸುದೀರ್ಘ ಅವಧಿಗೆ ಮುಖ್ಯ ನ್ಯಾಯಾಧೀಶರಾಗಿದ್ದರು ಎಂಬ ದಾಖಲೆಯೊಂದಿಗೆ ದಿನಾಂಕ 15.12.1978 ರಂದು ಹೈಕೋರ್ಟ್ ಮುಖ್ಯ ನ್ಯಾಯಾಧೀಶರ ಹುದ್ದೆಯಿಂದ ನಿವೃತ್ತರಾದರು.


✍️ ಪ್ರಕಾಶ್ ನಾಯಕ್, ಶಿರಸ್ತೇದಾರರು, ಮಂಗಳೂರು ನ್ಯಾಯಾಲಯ ಸಂಕೀರ್ಣ


Photo: Sri Prakash Nayak

Ads on article

Advertise in articles 1

advertising articles 2

Advertise under the article