-->
ವಕೀಲರ ವೃತ್ತಿ ಕುರಿತ ಸಂಸದ ಪ್ರತಾಪ ಸಿಂಹ ಅವಹೇಳನ: ರಾಜ್ಯಾದ್ಯಂತ ವಕೀಲರ ಆಕ್ರೋಶ

ವಕೀಲರ ವೃತ್ತಿ ಕುರಿತ ಸಂಸದ ಪ್ರತಾಪ ಸಿಂಹ ಅವಹೇಳನ: ರಾಜ್ಯಾದ್ಯಂತ ವಕೀಲರ ಆಕ್ರೋಶ

ವಕೀಲರ ವೃತ್ತಿ ಕುರಿತ ಸಂಸದ ಪ್ರತಾಪ ಸಿಂಹ ಅವಹೇಳನ: ರಾಜ್ಯಾದ್ಯಂತ ವಕೀಲರ ಆಕ್ರೋಶ






ವಕೀಲಿಕೆ ಕುರಿತು ತುಚ್ಛವಾಗಿ ಅಪಹಾಸ್ಯ ಮಾಡಿರುವ ಸಂಸದ ಪ್ರತಾಪ್ ಸಿಂಹ ಅವರ ವಿರುದ್ಧ ರಾಜ್ಯಾದ್ಯಂತ ವಕೀಲರ ಸಮುದಾಯದಿಂದ ಪ್ರತಿಭಟನೆ ವ್ಯಕ್ತವಾಗಿದೆ.



ವಕೀಲರ ವೃತ್ತಿ ಘನೆತೆ ಬಗ್ಗೆ ಅವಹೇಳನ ಮಾಡಿರುವ ಪ್ರತಾಪ ಸಿಂಹ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದು, ವಕೀಲರೇ ನ್ಯಾಯ ವ್ಯವಸ್ಥೆಯ ಬುನಾದಿ. ಈ ವೃತ್ತಿಯ ಬಗ್ಗೆ ಲಘುವಾಗಿ ಮಾತನಾಡಿದ ಸಂಸದ ಸಿಂಹ ತಕ್ಷಣ ವಕೀಲರ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿ ರಾಜ್ಯಾದ್ಯಂತ ಪ್ರತಿಭಟನೆ ನಡೆದಿದೆ.



ನ್ಯಾಯದೇಗುಲದಿಂದ ಪರಾರಿಯಾಗಿದ್ದು ಮರೆತುಹೋಯಿತಾ?

ಪ್ರತಾಪ್ ಸಿಂಹ ಹೇಳಿಕೆಯನ್ನು ಖಂಡಿಸಿರುವ ಬೆಂಗಳೂರು ವಕೀಲರ ಸಂಘದ ಮಾಜಿ ಅಧ್ಯಕ್ಷ ಎ.ಪಿ ರಂಗನಾಥ್, ಬೆಂಗಳೂರಿನ ಮ್ಯಾಜಿಸ್ಟ್ರೇಟ್ ಕೋರ್ಟ್‌ನಿಂದ ತಾವು ಪರಾರಿಯಾದ ಘಟನೆ ನೆನಪಿದೆ ಅಲ್ಲವೇ? ಎಂದು ಹಿಂದಿನ ಘಟನೆಯನ್ನು ನೆನಪಿಸಿದ್ದಾರೆ.


ನ್ಯಾಯಾಲಯದ ಬಗ್ಗೆ ಹೇಳಿಕೆ ನೀಡಲು ನೀವೇನು ನ್ಯಾಯವಾದಿಯೇ? ವಕೀಲ ಬಾಂಧವರಿಗೆ ಎಲ್ಲಾ ಕೋರ್ಟ್‌ಗಳೂ ಒಂದೇ. ಜಿಲ್ಲಾ, ತಾಲೂಕು ಕೋರ್ಟ್ ವಕೀಲರೇ ನ್ಯಾಯದಾನ ವ್ಯವಸ್ಥೆಯ ಬುನಾದಿ. ಅವರ ಕಾನೂನು ಜ್ಞಾನ ಅಪಾರ ಎಂದು ರಂಗನಾಥ್ ಹೇಳಿದ್ದು, ವಕೀಲರ ಕ್ಷಮೆ ಕೇಳುವಂತೆ ಆಗ್ರಹಿಸಿದ್ದಾರೆ.


ಲೂಸ್ ಟಾಕ್‌ ಬಿಡಿ, ತಾಕತ್ತಿದ್ದರೆ ಚರ್ಚೆಗೆ ಬನ್ನಿ: ವಕೀಲ ರಮೇಶ್ ನಾಯಕ್ ಸವಾಲು

"ಆರ್ಥಿಕತೆ ಬಗ್ಗೆ ವಕೀಲರಿಗೆ ಏನೂ ತಿಳಿದಿಲ್ಲವೇ? ಬೀದಿ ರಾಜಕೀಯ ಮಾಡುವ ತಮಗೆ ಎಲ್ಲವೂ ತಿಳಿದಿದೆಯೇ? ವಕೀಲರ ಬಗ್ಗೆ ಲಘುವಾಗಿ ಮಾತನಾಡೋದು ಬಿಡಿ, ಧೈರ್ಯವಿದ್ದಲ್ಲಿ ನನ್ನೊಂದಿಗೆ ಚರ್ಚೆಗೆ ಬನ್ನಿ" ಎಂದು ತುಮಕೂರು ವಕೀಲ ರಮೇಶ್ ನಾಯಕ್ ಸವಾಲು ಎಸೆದಿದ್ದಾರೆ.


ಮೈಸೂರಲ್ಲಿ ವಕೀಲರ ಪ್ರತಿಭಟನೆ

ಸಂಸದನ ಲಘು ದಾಟಿಯ ಹೇಳಿಕೆ ಖಂಡಿಸಿ ಮೈಸೂರು ವಕೀಲರ ಸಂಘ ಪ್ರತಿಭಟನೆ ನಡೆಸಿದೆ. ಕೋರ್ಟ್ ಮುಂಭಾಗದ ಗಾಂಧೀಜಿ ಪುತ್ಥಳಿ ಬಳಿ ಜಮಾಯಿಸಿದ ವಕೀಲರು, ‘ದೇಶಕ್ಕೆ ವಕೀಲರ ಕೊಡುಗೆ ಅಪಾರ. ಅಂತಹ ವಕೀಲ ವೃತ್ತಿಯನ್ನು ರಾಜಕೀಯ ಲಾಭಕ್ಕೆ ಪ್ರತಾಪ್ ಸಿಂಹ ಹೀಯಾಳಿಸಿ ವಕೀಲ ಸಮುದಾಯಕ್ಕೆ ಅಪಮಾನ ಎಸಗಿದ್ದಾರೆ. ಅದಕ್ಕೆ ಅವರು ಸಾರ್ವಜನಿಕವಾಗಿ ಕ್ಷಮೆ ಯಾಚಿಸಬೇಕು. ಅಲ್ಲಿವರೆಗೆ, ಅವರಿಗೆ ಯಾವುದೇ ಕಾರ್ಯಕ್ರಮಗಳಿಗೂ ಆಹ್ವಾನ ಕೊಡುವುದಿಲ್ಲ. ಹಾಗೆಯೇ, ಚುನಾವಣಾ ಪ್ರಚಾರಕ್ಕೆ ಬರುವ ಬಿಜೆಪಿ ನಾಯಕರನ್ನು ನಮ್ಮ ಕೋರ್ಟ್ ಅವರಣಕ್ಕೆ ಬಿಡುವುದಿಲ್ಲ' ಎಂದು ಘೋಷಿಸಿದ್ದಾರೆ.


ಸಂಸದನ ವಿರುದ್ಧ ಬಿಜೆಪಿ ಶಾಸಕ ಎಚ್. ವಿಶ್ವನಾಥ್ ಆಕ್ರೋಶ

ಘನತೆವೆತ್ತ ವಕೀಲ ವೃತ್ತಿ ಬಗ್ಗೆ ಅವನಿಗೇನು ಗೊತ್ತು? ಎಂದು ಪ್ರತಾಪ್ ಸಿಂಹ ಹೇಳಿಕೆಗೆ ಬಿಜೆಪಿ ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಕಟುವಾಗಿ ಟೀಕಿಸಿದ್ದಾರೆ. 


"ಸಿದ್ದರಾಮಯ್ಯ, ನಾವೆಲ್ಲ ಒಟ್ಟಿಗೆ ಪ್ರಾಕ್ಟೀಸ್ ಮಾಡಿದ್ದೇವೆ. ಪ್ರತಾಪ ಸಿಂಹ ಒಬ್ಬ ಅಯೋಗ್ಯ. ಆತನಿಗೆ ವಕೀಲ ವೃತ್ತಿ ಬಗ್ಗೆ ಏನು ತಾನೆ ಗೊತ್ತಿದೆ? ಆತ ಲೋಕಸಭಾ ಸದಸ್ಯನಾದ ಬಳಿಕ ಮೈಸೂರಿನಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳೇ ಆಗಿಲ್ಲ. ಆದರೂ, ಮಹಾರಾಜರನ್ನು ಬಿಟ್ಟರೆ ನಾನೇ ಅತಿ ಹೆಚ್ಚು ಕೆಲಸ ಮಾಡಿದ್ದೇನೆ ಎಂದು ಜಂಭ ಕೊಚ್ಚಿಕೊಳ್ಳುತ್ತಿದ್ದಾನೆ. ಬಾಯಿಗೆ ಬಂದಂತೆ ಮಾತಾಡುತ್ತಾನೆ" ಎಂದು ಅವರು ತರಾಟೆಗೆ ತೆಗೆದುಕೊಂಡಿದ್ದಾರೆ.


ಘಟನೆಯ ಹಿನ್ನೆಲೆ

ರಾಜ್ಯಕ್ಕೆ ಕೇಂದ್ರ ಸರ್ಕಾರದಿಂದ ಬರಬೇಕಿದ್ದ ಹೆಚ್ಚಿನ ಅನುದಾನ ಬಂದಿಲ್ಲ. ತೆರಿಗೆ ಬಾಕಿಯನ್ನೂ ನೀಡಿಲ್ಲ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದರು.



ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಲೋಕಸಭಾ ಸದಸ್ಯ ಪ್ರತಾಪ್ ಸಿಂಹ, "ತಾಲ್ಲೂಕು ಕೋರ್ಟ್ ನಲ್ಲಿ ವಕೀಲಿಕೆ ಮಾಡಿಕೊಂಡಿದ್ದ ಸಿದ್ದರಾಮಯ್ಯಗೆ ದೇಶದ ಆರ್ಥಿಕತೆ ಹೇಗೆ ಗೊತ್ತಾಗುತ್ತದೆ?" ಎಂದು ಲಘುವಾಗಿ ಮಾತನಾಡಿದ್ದರು. ಈ ಹೇಳಿಕೆ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.

Ads on article

Advertise in articles 1

advertising articles 2

Advertise under the article

  

  

  

Join our WhatsApp Channel Powered By : Online Pudu