-->
ಸುಪ್ರೀಂ ಕೋರ್ಟ್ 50ನೇ ಸಿಜೆಐ ಆಗಿ ಡಾ. ಡಿ.ವೈ. ಚಂದ್ರಚೂಡ್: ಈ ಹುದ್ದೆಗೇರಿದ ಅಪರೂಪದ "ಅಪ್ಪ-ಮಗ ಜೋಡಿ"

ಸುಪ್ರೀಂ ಕೋರ್ಟ್ 50ನೇ ಸಿಜೆಐ ಆಗಿ ಡಾ. ಡಿ.ವೈ. ಚಂದ್ರಚೂಡ್: ಈ ಹುದ್ದೆಗೇರಿದ ಅಪರೂಪದ "ಅಪ್ಪ-ಮಗ ಜೋಡಿ"

ಸುಪ್ರೀಂ ಕೋರ್ಟ್ 50ನೇ ಸಿಜೆಐ ಆಗಿ ಡಾ. ಡಿ.ವೈ. ಚಂದ್ರಚೂಡ್: ಈ ಹುದ್ದೆಗೇರಿದ ಅಪರೂಪದ "ಅಪ್ಪ-ಮಗ ಜೋಡಿ"






ನ್ಯಾಯಮೂರ್ತಿ ಡಾ. ಧನಂಜಯ ಯಶವಂತ್ ಚಂದ್ರಚೂಡ್ ಭಾರತದ ಸುಪ್ರೀಂ ಕೋರ್ಟ್‌ನ 50ನೇ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕವಾಗಿದ್ದಾರೆ. ಈ ಬಗ್ಗೆ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ.



ನವೆಂಬರ್ 8, 2022ರಂದು ನಿವೃತ್ತರಾಗಲಿರುವ ಉದಯ್ ಉಮೇಶ್ ಲಲಿತ್ ಅವರ ಉತ್ತರಾಧಿಕಾರಿಯಾಗಲಿರುವ ಡಾ. ಡಿ.ವೈ. ಚಂದ್ರಚೂಡ್, ದೀರ್ಘ ಎರಡು ವರ್ಷಗಳ ಕಾಲ ಈ ಹುದ್ದೆಯಲ್ಲಿ ಮುಂದುವರಿದು, 2024 ರ ನವೆಂಬರ್ 10ರಂದು ಈ ಹುದ್ದೆಯಿಂದ ನಿವೃತ್ತಿ ಹೊಂದಲಿದ್ದಾರೆ.



ಅಕ್ಟೋಬರ್‌ 11ರಂದು ಸಂಪ್ರದಾಯದಂತೆ ಪ್ರಸ್ತುತ ಮುಖ್ಯ ಮುಖ್ಯ ನ್ಯಾಯಮೂರ್ತಿ ಯು.ಯು. ಲಲಿತ್‌, ತಮ್ಮ ಉತ್ತರಾಧಿಕಾರಿಯನ್ನಾಗಿ ನ್ಯಾ. ಚಂದ್ರಚೂಡ್‌ ಅವರ ಹೆಸರನ್ನು ಶಿಫಾರಸ್ಸು ಮಾಡಿದ್ದರು.



"ಭಾರತದ ಸಂವಿಧಾನದ 124ನೇ ವಿಧಿಯ ಕಲಂ (2) ಅಡಿ ನೀಡಲಾದ ಪ್ರದತ್ತ ಅಧಿಕಾರ ಚಲಾಯಿಸಿ ನ್ಯಾಯಮೂರ್ತಿ ಡಾ. ಧನಂಜಯ ಯಶವಂತ್‌ ಚಂದ್ರಚೂಡ್‌ ಅವರನ್ನು ಮುಖ್ಯ ನ್ಯಾಯಮೂರ್ತಿಯನ್ನಾಗಿ 2022ರ ನವೆಂಬರ್‌ 9ರಿಂದ ಅನ್ವಯವಾಗುವಂತೆ ನೇಮಿಸಿ ರಾಷ್ಟ್ರಪತಿ ಅವರು ಆದೇಶ ಮಾಡಿದ್ದಾರೆ" ಎಂದು ಕೇಂದ್ರ ಸರ್ಕಾರದ ಕಾನೂನು ಇಲಾಖೆ ತನ್ನ ಅಧಿಸೂಚನೆಯಲ್ಲಿ ತಿಳಿಸಿದೆ.



ನವದೆಹಲಿಯ ಸೈಂಟ್‌ ಸ್ಟೀಫನ್ಸ್‌ ಕಾಲೇಜಿನಿಂದ ಅರ್ಥಶಾಸ್ತ್ರದಲ್ಲಿ ಬಿ ಎ ಪದವಿ ಪಡೆದಿರುವ ಡಾ. ಧನಂಜಯ ಯಶವಂತ್ ಚಂದ್ರಚೂಡ್, ದೆಹಲಿ ವಿಶ್ವವಿದ್ಯಾಲಯದ ಕ್ಯಾಂಪಸ್‌ ಲಾ ಸೆಂಟರ್‌ನಿಂದ ಎಲ್‌ಎಲ್‌ಬಿ ಪದವಿ ಪಡೆದರು.



ಆ ಬಳಿಕ, ಎಲ್‌ಎಲ್‌ಎಂ ಪದವಿಯನ್ನು ಪೂರ್ಣಗೊಳಿಸಿದ ನ್ಯಾ. ಚಂದ್ರಚೂಡ್‌ ಅಮೆರಿಕದ ಹಾರ್ವರ್ಡ್‌ ಕಾನೂನು ಶಾಲೆಯಿಂದ ಡಾಕ್ಟರ್‌ ಇನ್‌ ಜುಡಿಷಿಯಲ್ ಸೈನ್ಸ್‌ ಪದವಿ ಪಡೆದರು.



ತಮ್ಮ ವೃತ್ತಿ ಜೀವನದ ಆರಂಭದಲ್ಲಿ, ಸುಪ್ರೀಂ ಕೋರ್ಟ್‌ ಮತ್ತು ಬಾಂಬೆ ಹೈಕೋರ್ಟ್‌ನಲ್ಲಿ ವಕೀಲರಾಗಿ ಸೇವೆ ಸಲ್ಲಿಸಿದ ನ್ಯಾ. ಡಾ. ಚಂದ್ರಚೂಡ್‌ ಅವರನ್ನು ಹಿರಿಯ ವಕೀಲರಾಗಿ 1998ರ ಜೂನ್‌ನಲ್ಲಿ ಬಾಂಬೆ ಹೈಕೋರ್ಟ್‌ ಪದೋನ್ನತಿ ನೀಡಿತ್ತು. ಆಗ ಅವರ ವಯಸ್ಸು ಕೇವಲ 39.



1998ರಿಂದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಆಗಿ ಅವರು ಕೆಲಸ ಮಾಡಿದ ಅವರು 2000 ಇಸವಿಯಲ್ಲಿ ಬಾಂಬೆ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಮೂರ್ತಿಯಾಗಿ ನೇಮಕಗೊಂಡರು. 42 ವರ್ಷ ತುಂಬುವುದರೊಳಗಾಗಿ ಅವರು ನ್ಯಾಯಮೂರ್ತಿಯ ಜವಾಬ್ದಾರಿಯನ್ನು ಹೆಗಲಿಗೇರಿಸಿಕೊಂಡರು.




2013ರ ಅಕ್ಟೋಬರ್‌ 31ರಂದು ನ್ಯಾ. ಚಂದ್ರಚೂಡ್‌ ಅಲಹಾಬಾದ್‌ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯನ್ನಾಗಿ ಪ್ರಮುಖ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿದರು.

ಅದಾದ ಸುಮಾರು ಮೂರು ವರ್ಷಗಳಲ್ಲಿ, ಅಂದರೆ 2016ರ ಮೇ 13ರಂದು ನ್ಯಾ. ಚಂದ್ರಚೂಡ್‌ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಯಾಗಿ ಪದೋನ್ನತಿ ಹೊಂದಿದರು.


ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದ ಅಪರೂಪದ ಅಪ್ಪ-ಮಗ ಜೋಡಿ

ಡಾ. ಡಿ.ವೈ. ಚಂದ್ರಚೂಡ್ ಅವರ ತಂದೆ ಯಶವಂತ್ ವಿ. ಚಂದ್ರಚೂಡ್ ಈ ಹಿಂದೆ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಹುದ್ದೆಯನ್ನು ನಿಭಾಯಿಸಿದವರು. ಈಗ ಅವರ ಮಗನೂ ಈ ಹುದ್ದೆಗೆ ಏರುವುದು ಖಚಿತವಾಗಿದೆ.



ಈ ಮೂಲಕ ಸುಪ್ರೀಂ ಕೋರ್ಟಿನ ಮಹೋನ್ನತ ಹುದ್ದೆಯನ್ನು ನಿಭಾಯಿಸಿದ ಅಪರೂಪದ ಅಪ್ಪ-ಮಗನ ಜೋಡಿಗೆ ಡಾ. ಡಿ.ವೈ ಚಂದ್ರಚೂಡ್ ತಮ್ಮ ತಂದೆಯ ಜೊತೆಗೆ ಪಾತ್ರರಾಗಿದ್ದಾರೆ.

1978ರಿಂದ 1985ರ ವರೆಗೆ ಸುದೀರ್ಘ ಏಳು ವರ್ಷಗಳ ಕಾಲ ಈ ಹುದ್ದೆಯನ್ನು ನಿಭಾಯಿಸಿದ ಯಶವಂತ್ ಚಂದ್ರಚೂಡ್, 16ನೇ ಸಿಜೆಐ ಆಗಿ ಸ್ವಾತಂತ್ಯೋತ್ತರ ಭಾರತದಲ್ಲಿ ಸುದೀರ್ಘ ಅವಧಿಗೆ ಈ ಹುದ್ದೆಯನ್ನು ನಿಭಾಯಿಸಿದ ದಾಖಲೆ ನಿರ್ಮಿಸಿದ್ದರು.



ಇತ್ತೀಚಿನ ದಿನಗಳಲ್ಲಿ ಸುದೀರ್ಘ ಅವಧಿಗೆ (ಸುಮಾರು 2 ವರ್ಷ) ಈ ಹುದ್ದೆಯಲ್ಲಿ ಮುಂದುವರಿಯುವ ಮೂಲಕ ಮಗನೂ ಅಪ್ಪನ ಹಾದಿಯಲ್ಲಿ ಸಾಗಲಿದ್ದಾರೆ.



ಮೈಲುಗಲ್ಲಾದ ತೀರ್ಪುಗಳ ಹರಿಹಾರ

ಡಾ. ಧನಂಜಯ ಯಶವಂತ ಚಂದ್ರಚೂಡ್ ಇಲ್ಲಿಯವರೆಗೆ ಹಲವು ಲ್ಯಾಂಡ್‌ಮಾರ್ಕ್ ತೀರ್ಪುಗಳನ್ನು ನೀಡಿದ್ದಾರೆ. 



ಐತಿಹಾಸಿಕ ಅಯೋಧ್ಯೆ ವಿವಾದ, ಜಮ್ಮು ಕಾಶ್ಮೀರ ಕುರಿತ ಸೆಕ್ಷನ್ 377, ಮಹಿಳೆಯರ ಪ್ರವೇಶ ಕುರಿತ ಶಬರಿಮಲೆ ತೀರ್ಪು, ಹಾದಿಯಾ ಪ್ರಕರಣ, ಸಲಿಂಗಗಳ ಕುರಿತ ತೀರ್ಪು, ಸಿನಿಮಾ ಹಾಲ್‌ಗಳಲ್ಲಿ ರಾಷ್ಟ್ರಗೀತೆ, ಮಹಿಳೆಯರ ಗರ್ಭಪಾತದ ಹಕ್ಕು, ಎನ್‌ಐ ಆಕ್ಟ್‌ ಕುರಿತು ಹಲವು ತೀರ್ಪುಗಳು ಇವರ ಲೇಖನಿಯಿಂದ ಹೊರಬಿದ್ದಿದ್ದು, ಭಾರತದ ನ್ಯಾಯಾಂಗವನ್ನು ಶ್ರೀಮಂತಗೊಳಿಸಿದೆ.


ನ್ಯಾಯಾಂಗದಲ್ಲಿ ತಂತ್ರಜ್ಞಾನ ಅಳವಡಿಸಬೇಕು ಎಂದು ಪ್ರಬಲವಾಗಿ ವಾದಿಸಿದವರು ಚಂದ್ರಚೂಡ್. ಕೋವಿಡ್ ಲಾಕ್‌ಡೌನ್ ಸಂದರ್ಭದಲ್ಲಿ ಆನ್‌ಲೈನ್ ಕಲಾಪಕ್ಕೆ ಹೆಚ್ಚು ಒತ್ತು ನೀಡಿದ್ದ ಪ್ರಮುಖರು. 


ನ್ಯಾಯಾಲಯದ ಕಲಾಪವನ್ನು ಪತ್ರಕರ್ತರೊಬ್ಬರು ಮೊಬೈಲ್ ಶೂಟಿಂಗ್ ಮಾಡಿದ್ದನ್ನು ಗಮನಿಸಿದ್ದ ಚಂದ್ರಚೂಡ್ ನಾವೇ ಸ್ವತಃ ಕಲಾಪವನ್ನು ನೇರ ಪ್ರಸಾರ ಮಾಡುತ್ತೇವೆ ಎಂದು ಹೇಳಿ ಕಾನೂನು ಎಲ್ಲರಿಗೂ ಲಭಿಸಬೇಕು ಎಂದು ನುಡಿದಿದ್ದರು. ಅಶಕ್ತರು, ಮಹಿಳೆಯರ ಹಕ್ಕುಗಳ ಪರ ಸತತವಾಗಿ ಪ್ರಮುಖ ತೀರ್ಪು ನೀಡಿದ್ದ ಚಂದ್ರಚೂಡ್ ನ್ಯಾಯಾಂಗದಲ್ಲಿ ಮತ್ತಷ್ಟು ಸುಧಾರಣೆ ತರಲಿ ಎಂಬುದು ಎಲ್ಲರ ಹಾರೈಕೆ.



Ads on article

Advertise in articles 1

advertising articles 2

Advertise under the article