-->
ಕೋಲಾರದ ಯುವತಿ 25ನೇ ವಯಸ್ಸಿಗೆ ಸಿವಿಲ್ ನ್ಯಾಯಾಧೀಶೆ: ಕೂಲಿಕಾರನ ಮಗಳ ಯಶಸ್ವೀ ಸಾಧನೆ!

ಕೋಲಾರದ ಯುವತಿ 25ನೇ ವಯಸ್ಸಿಗೆ ಸಿವಿಲ್ ನ್ಯಾಯಾಧೀಶೆ: ಕೂಲಿಕಾರನ ಮಗಳ ಯಶಸ್ವೀ ಸಾಧನೆ!

ಕೋಲಾರದ ಯುವತಿ 25ನೇ ವಯಸ್ಸಿಗೆ ಸಿವಿಲ್ ನ್ಯಾಯಾಧೀಶೆ: ಕೂಲಿಕಾರನ ಮಗಳ ಯಶಸ್ವೀ ಸಾಧನೆ!





ಕೋಲಾದ ಬಂಗಾರಪೇಟೆಯ 25ರ ಯುವ ವಕೀಲರಾದ ಗಾಯತ್ರಿ ಸಿವಿಲ್‌ ನ್ಯಾಯಾಧೀಶೆಯಾಗಿ ನೇಮಕಗೊಂಡಿದ್ದಾರೆ. ಎರಡನೇ ಪ್ರಯತ್ನದಲ್ಲೇ ಅವರ ಸಾಧನೆ ನಾಡಿಗೆ ಹೆಮ್ಮೆ ತಂದಿದೆ.



ಎನ್‌. ಗಾಯತ್ರಿ ಬಂಗಾರಪೇಟೆ ತಾಲೂಕಿನ ಯಳಬುರ್ಗಿ ಗ್ರಾಮದ ನಾರಾಯಣಸ್ವಾಮಿ ಹಾಗೂ ವೆಂಕಟರತ್ನಮ್ಮ ಅವರ ಪುತ್ರಿ. ಸಿವಿಲ್ ನ್ಯಾಯಾಧೀಶರಾಗಿ ನೇಮಕವಾದ ಗಾಯತ್ರಿ ಅವರು ಸಾಧನೆ ಹಿಂದೆ ಕಠಿಣ ಪರಿಶ್ರಮ ಇದೆ.



2021ರಲ್ಲಿ ಕಾನೂನು ಪದವಿ ಪಡೆದುಕೊಂಡಿರುವ ಎನ್‌. ಗಾಯತ್ರಿ ನ್ಯಾಯಾಧೀಶರಾಗುವ ಕನಸು ಕಂಡವರು.



ತಮ್ಮ ಕನಸನ್ನು ನನಸು ಮಾಡಿಕೊಳ್ಳುವ ನಿಟ್ಟಿನಲ್ಲಿ ಸತತ ಮತ್ತು ಸರಿಯಾದ ಪ್ರಯತ್ನದ ಮೂಲಕ 25ನೇ ವಯಸ್ಸಿಗೆ ಸಿವಿಲ್‌ ನ್ಯಾಯಾಲಯದ ನ್ಯಾಯಾಧೀಶೆ ಯಾಗಿ ಆಯ್ಕೆಯಾಗುವಲ್ಲಿ ಯಶಸ್ವಿಯಾಗಿದ್ದಾರೆ. 


2022ರಲ್ಲಿ ಮಾನ್ಯ ಕರ್ನಾಟಕ ಹೈಕೋರ್ಟ್‌ ರಾಜ್ಯದ ವಿವಿಧ ಜಿಲ್ಲೆಗಳ ಸಿವಿಲ್‌ ನ್ಯಾಯಾಧೀಶರ ಹುದ್ದೆಗಳಿಗೆ ನೇರ ನೇಮಕಾತಿಗಾಗಿ ಆನ್‌ಲೈನ್‌ ಮೂಲಕ ಅರ್ಜಿಗಳನ್ನು ಆಹ್ವಾನಿಸಿತ್ತು. ವಿವಿಧ ಹಂತಗಳ ಪರೀಕ್ಷೆ, ಸಂದರ್ಶನ ನಡೆದು ಈಗಷ್ಟೇ ಫ‌ಲಿತಾಂಶ ಪ್ರಕಟಗೊಂಡಿದೆ. ಈ ಪೈಕಿ ಆಯ್ಕೆಯಾದ ಯಶಸ್ವೀ ಅಭ್ಯರ್ಥಿಗಳ ಪೈಕಿ ಗಾಯತ್ರಿ ಅವರೂ ಒಬ್ಬರು.



ತೀರಾ ಬಡತನದ ಕುಟುಂಬದಿಂದ ಬಂದ ಎನ್‌. ಗಾಯತ್ರಿ ಬಂಗಾರಪೇಟೆ ತಾಲೂಕಿನ ಕಾರಹಳ್ಳಿಯ ಸರ್ಕಾರಿ ಶಾಲೆಯಲ್ಲಿ ಪ್ರಾಥಮಿಕ, ಮಾಧ್ಯಮಿಕ, ಪಿಯು ಶಿಕ್ಷಣ ಪಡೆದುಕೊಂಡವರು. ಕೋಲಾರದ ಮಹಿಳಾ ಕಾಲೇಜಿನಲ್ಲಿ ಬಿಕಾಂ ಪದವಿ ಮುಗಿಸಿದ ಗಾಯತ್ರಿ ಕೆಜಿಎಫ್‌ ಕೆಂಗಲ್‌ ಹನುಮಂತಯ್ಯ ಕಾನೂನು ಕಾಲೇಜಿನಲ್ಲಿ ಪದವಿ ಪೂರೈಸಿ ಕರ್ನಾಟಕಕ್ಕೆ ನಾಲ್ಕನೇ Rank ಗಳಿಸುವ ಮೂಲಕ ಗಮನ ಸೆಳೆದಿದ್ದಾರೆ.



ಕೋಲಾರದ ವಕೀಲ ಶಿವಸುಬ್ರಮಣ್ಯ ಬಳಿ ಕಿರಿಯ ವಕೀಲರಾಗಿ ವಕೀಲಿ ವೃತ್ತಿ ಮಾಡುತ್ತಿದ್ದರು. ನೂತನ ಸಿವಿಲ್‌ ನ್ಯಾಯಾಧೀಶೆಯಾಗಿ ಆಯ್ಕೆಯಾಗಿರುವ ಎನ್‌. ಗಾಯತ್ರಿ ಮೂಲತಃ ಯಲಬುರ್ಗಿ ಯವರಾಗಿದ್ದು, ಕಾರಹಳ್ಳಿ ಗ್ರಾಮದಲ್ಲಿ ಬಾಡಿಗೆ ಮನೆ ಯಲ್ಲಿ ವಾಸವಾಗಿದ್ದಾರೆ.



ತಂದೆ ನಾರಾಯಣಸ್ವಾಮಿ ಕೂಲಿ ಕಾರ್ಮಿಕರಾಗಿದ್ದು, ಕೂಲಿ ಮಾಡಿ ಜೀವನ ನಡೆಸುತ್ತಿದ್ದಾರೆ. ಮಗಳು ಬಡತನದಲ್ಲಿಯೇ ಹುಟ್ಟಿ ಬೆಳೆದು ಜಡ್ಜ್‌ ಆಗಬೇಕೆಂಬ ಕನಸನ್ನು ಸಾಧಿಸಬೇಕೆಂಬ ಛಲ ದಲ್ಲಿ ಯಶಸ್ವಿಯಾಗಿದ್ದಾರೆ.


ಗಾಯತ್ರಿ ಪ್ರತಿಕ್ರಿಯೆ..

ಗಾಯತ್ರಿ ಸಾಧನೆಗೆ ತಂದೆ, ತಾಯಿ, ಸಹ ಪಾಠಿಗಳು, ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ. ನಮ್ಮ ಕುಟುಂಬದಲ್ಲಿ ಉನ್ನತ ಶಿಕ್ಷಣ ಪಡೆದ ಮೊದಲ ವ್ಯಕ್ತಿ ನಾನು. ಅದರಲ್ಲೂ ಸಿವಿಲ್‌ ನ್ಯಾಯಾಧೀಶೆಯಾಗಿ ಆಯ್ಕೆಯಾಗಿದ್ದು ಒಂದು ದೊಡ್ಡ ಸಾಧನೆ. 


ಕಠಿಣ ಆರ್ಥಿಕ ಸಂದರ್ಭದಲ್ಲೂ ಕೂಲಿ ಮಾಡಿ ನಮ್ಮನ್ನು ಸಲಹಿದ, ನನಗೆ ಶಿಕ್ಷಣ ನೀಡಿ ಓದಿಸಿದ ತಂದೆ, ತಾಯಿಯವರಿಗೆ ನಾನು ಸದಾ ಋಣಿಯಾಗಿರುತ್ತೇನೆ. ಅನ್ಯಾಯಕ್ಕೆ ಒಳಗಾದವರಿಗೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ನನ್ನ ಮಿತಿಯಲ್ಲಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುವೆ. ನನ್ನೆಲ್ಲ ಸಾಧನೆಗೆ ಡಾ.ಬಿ.ಆರ್‌.ಅಂಬೇಡ್ಕರ್‌ ಅವರು ಸ್ಫೂರ್ತಿಯಾಗಿದ್ದು, ಅವರ ದಾರಿಯಲ್ಲಿ ಸಾಗುವೆ ಎಂದು ನೂತನವಾಗಿ ಆಯ್ಕೆಯಾಗಿರುವ ಸಿವಿಲ್ ನ್ಯಾಯಾಧೀಶರಾದ ಎನ್‌. ಗಾಯಿತ್ರಿ ಪ್ರತಿಕ್ರಿಯೆ ನೀಡಿದ್ದಾರೆ.





Ads on article

Advertise in articles 1

advertising articles 2

Advertise under the article