![ಪೊಕ್ಸೋ ಪ್ರಕರಣ: ಲಂಚ ಪಡೆದ ವಿಶೇಷ ಸರ್ಕಾರಿ ಅಭಿಯೋಜಕಿ ಲೋಕಾಯುಕ್ತ ಬಲೆಗೆ ಪೊಕ್ಸೋ ಪ್ರಕರಣ: ಲಂಚ ಪಡೆದ ವಿಶೇಷ ಸರ್ಕಾರಿ ಅಭಿಯೋಜಕಿ ಲೋಕಾಯುಕ್ತ ಬಲೆಗೆ](https://blogger.googleusercontent.com/img/b/R29vZ2xl/AVvXsEifD4bJsdP33bo_bgRYAkGIlomHAScU_bjm6SYmhLVwyQzUp9rXTl8xr0yCIcQK0WwROwNrLVZsG8NYPjXrxlSx0FzeOHHVsJDww6UAvTGgD4uptZcvO-sz4mNDzrtDYsfunEXhokoPw1mHscLu-Zo3Y7r15qeKUFzoHGNQUciB1-qr_iDNBEiVtN67Bw/w640-h394/jail.jpg)
ಪೊಕ್ಸೋ ಪ್ರಕರಣ: ಲಂಚ ಪಡೆದ ವಿಶೇಷ ಸರ್ಕಾರಿ ಅಭಿಯೋಜಕಿ ಲೋಕಾಯುಕ್ತ ಬಲೆಗೆ
ಪೊಕ್ಸೋ ಪ್ರಕರಣ: ಲಂಚ ಪಡೆದ ವಿಶೇಷ ಸರ್ಕಾರಿ ಅಭಿಯೋಜಕಿ ಲೋಕಾಯುಕ್ತ ಬಲೆಗೆ
ಪೊಕ್ಸೋ ಪ್ರಕರಣದಲ್ಲಿ ಆರೋಪಿ ಕಡೆಯಿಂದ ಲಕ್ಷಗಟ್ಟಲೆ ಲಂಚ ಪಡೆದ ವಿಶೇಷ ಸರ್ಕಾರಿ ಅಭಿಯೋಜಕಿ ಲೋಕಾಯುಕ್ತ ಬಲೆಗೆ ಬಿದ್ದಿದ್ದು, ಆರೋಪಿಯನ್ನು ರೆಡ್ ಹ್ಯಾಂಡ್ ಆಗಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ದಾವಣಗೆರೆಯ ಪೊಕ್ಸೋ ವಿಶೇಷ ನ್ಯಾಯಾಲಯದ ವಿಶೇಷ ಸರ್ಕಾರಿ ಅಭಿಯೋಜಕಿ ರೇಖಾ ಕೋಟೆಗೌಡರ್ ಬಂಧನಕ್ಕೊಳಗಾದವರಾಗಿದ್ದಾರೆ.
ಪೊಕ್ಸೊ ಪ್ರಕರಣದ ವಿಚಾರಣೆಯಲ್ಲಿ ಆರೋಪಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಭರವಸೆ ನೀಡಿದ್ದು, ಅದಕ್ಕೆ ಪ್ರತಿಯಾಗಿ ವಿಶೇಷ ಸರಕಾರಿ ಅಭಿಯೋಜಕಿ ರೇಖಾ ಕೋಟೆಗೌಡರ್ ಲಂಚ ಪಡೆಯುತ್ತಿದ್ದರು.
ತಮ್ಮ ಮನೆಯಲ್ಲಿ ಲಂಚದ ಹಣವನ್ನು ಸ್ವೀಕರಿಸುತ್ತಿದ್ದ ಸಂದರ್ಭದಲ್ಲಿ ಅವರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ದಾವಣಗೆರೆಯ ಕಿತ್ತೂರು ಗ್ರಾಮದ ಆರೋಪಿ ಜಿ.ಟಿ. ಮದನ ಕುಮಾರ್ ವಿರುದ್ಧ 2021ರ ಜೂನ್ ನಲ್ಲಿ ಪೊಕ್ಸೊ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ರೇಖಾ ಅವರು ಒಟ್ಟು ಮೂರು ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು.
ಈ ಲಂಚದ ಭಾಗವಾಗಿ ಮುಂಗಡವಾಗಿ 1.13 ಲಕ್ಷ ಹಣವನ್ನು ನಗದಾಗಿ ಪಡೆದುಕೊಂಡಿದ್ದರು. ಉಳಿದ 1.87 ಲಕ್ಷ ಹಣ ನೀಡುವಂತೆ ದುಂಬಾಲು ಬಿದ್ದಿದ್ದಲ್ಲದೆ ಖಾತರಿಗಾಗಿ ಸಹಿ ಮಾಡಿದ ಖಾಲಿ ಚೆಕ್ ಪಡೆದಿದ್ದರು.
ರೇಖಾ ಅವರು ದಾವಣಗೆರೆಯ ತಮ್ಮ ನಿವಾಸದಲ್ಲಿ 1.87 ಲಕ್ಷ ರೂಪಾಯಿ ನಗದು ಹಣ ಪಡೆದುಕೊಂಡು ಖಾತರಿಗೋಸ್ಕರ ತಾವು ಪಡೆದ ಚೆಕ್ ವಾಪಸ್ ನೀಡುತ್ತಿದ್ದ ವೇಳೆ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು ಹಣದೊಂದಿಗೆ ಆರೋಪಿ ಸರ್ಕಾರಿ ವಕೀಲರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ದಾವಣಗೆರೆಯ ಲೋಕಾಯುಕ್ತ ಘಟಕದ ಪೊಲೀಸರು ಈ ಯಶಸ್ವಿ ದಾಳಿ ನಡೆಸಿ ಆರೋಪಿ ಸರಕಾರಿ ಅಭಿಯೋಜಕಿಯನ್ನು ಬಂಧಿಸಲಾಗಿದೆ.