![ಸಾಲದ ಕಂತು ಕಟ್ಟದಿದ್ದರೆ ವಾಹನ ಜಫ್ತಿ, ಮುಟ್ಟುಗೋಲು ಮಾಡಬಹುದೇ..? ಸಾಲದ ಕಂತು ಕಟ್ಟದಿದ್ದರೆ ವಾಹನ ಜಫ್ತಿ, ಮುಟ್ಟುಗೋಲು ಮಾಡಬಹುದೇ..?](https://blogger.googleusercontent.com/img/b/R29vZ2xl/AVvXsEiUz1kuLEq2Gs2I-9d4Aqhr-H4EG3oGjnpfS4dUw6Xsb6OfSCjFlCcnpuHSILQKQ9WTMKV51CxAfNvAVkbgU81NVnvhn8y6MQ4Klt4FF0c8GzHVBehjeanT_vMKN0GQAzig0Iu8w042YPu3JJrGMBwoxw1-XYCI15QwS-LCdfPn74YZBJ293hUTKdntGQ/w640-h352/1234.jpg)
ಸಾಲದ ಕಂತು ಕಟ್ಟದಿದ್ದರೆ ವಾಹನ ಜಫ್ತಿ, ಮುಟ್ಟುಗೋಲು ಮಾಡಬಹುದೇ..?
ಸಾಲದ ಕಂತು ಕಟ್ಟದಿದ್ದರೆ ವಾಹನ ಜಫ್ತಿ, ಮುಟ್ಟುಗೋಲು ಮಾಡಬಹುದೇ..?
ಬ್ಯಾಂಕ್ ಯಾ ಹಣಕಾಸು ಸಂಸ್ಥೆಯಿಂದ ಸಾಲ ಪಡೆದು ವಾಹನ ಖರೀದಿಸಿದ ಬಳಿಕ ಸಾಲದ ಕಂತು ಕಟ್ಟದಿದ್ದರೆ ವಾಹನ ಮುಟ್ಟುಗೋಲು ಮಾಡಬಹುದೇ..? ಕಾನೂನು ದೃಷ್ಟಿಯಲ್ಲಿ ಅಭಿಪ್ರಾಯವೇನಿದೆ..?
ಈ ಬಗ್ಗೆ ಇತ್ತೀಚೆಗೆ ಪಾಟ್ನಾ ಹೈಕೋರ್ಟ್ ಒಂದು ಮಹತ್ವದ ತೀರ್ಪು ನೀಡಿದೆ. ವಾಹನ ಮಾಲೀಕರು ಸಾಲದ ಕಂತು ಕಟ್ಟದಿದ್ದರೆ ಗೂಂಡಾಗಳ ಮೂಲಕ ವಾಹನವನ್ನು ಬಲವಂತವಾಗಿ ಮುಟ್ಟುಗೋಲು ಹಾಕುವುದು ಕಾನೂನುಬಾಹಿರ ಎಂದು ಈ ತೀರ್ಪಿನಲ್ಲಿ ಹೇಳಲಾಗಿದೆ.
ಹೀಗೆ ಮಾಡುವುದು ಸಂವಿಧಾನದ 21ನೇ ವಿಧಿಯಡಿ ಪ್ರದತ್ತವಾಗಿರುವ ಜೀವನ ಮತ್ತು ಜೀವನೋಪಾಯದ ಹಕ್ಕಿನ ಉಲ್ಲಂಘನೆಯಾಗಿದೆ ಎಂದು ಪಾಟ್ನ ಹೈಕೋರ್ಟ್ ತನ್ನ ತೀರ್ಪಿನಲ್ಲಿ ಅಭಿಪ್ರಾಯಪಟ್ಟಿದೆ.
ದೇಶದ ವಿವಿಧ ಕಡೆಗಳಲ್ಲಿ ಖಾಸಗಿ ಫೈನಾನ್ಸ್ ಮತ್ತು ಹಣಕಾಸು ಸಂಸ್ಥೆಗಳು ನೀಡುತ್ತಿರುವ ಕಿರುಕುಳ, ವಾಹನ ಜಫ್ತಿ ಯಾ ಮುಟ್ಟುಗೋಲು ಹಾಕುತ್ತಿರುವ ಸಂದರ್ಭದಲ್ಲಿ ಈ ತೀರ್ಪು ಮಹತ್ವ ಪಡೆದುಕೊಂಡಿದೆ.
ವಾಹನದ ಸಾಲ ನೀಡಿದ ಬ್ಯಾಂಕ್ ಯಾ ಹಣಕಾಸು ಸಂಸ್ಥೆಗಳು ಭದ್ರತಾ ನಿಯಮಗಳ ಪ್ರಕಾರ ವಸೂಲಿ ಮಾಡಬೇಕು. ಜಿಲ್ಲಾ ಆಡಳಿತದ ನೆರವಿನಿಂದ, ಅಡಮಾನವಿಟ್ಟ ಆಸ್ತಿಗಳನ್ನು ಹರಾಜು ಹಾಕಿ ವಾಹನದ ಹಣವನ್ನು ವಸೂಲಿ ಮಾಡಬೇಕು ಎಂದು ನ್ಯಾ. ರಾಜೀವ್ ರಂಜನ್ ಪ್ರಸಾದ್ ಅವರಿದ್ದ ಏಕಸದಸ್ಯ ನ್ಯಾಯಪೀಠ ತೀರ್ಪು ನೀಡಿದೆ.
ಇದೇ ವೇಳೆ, ಬಲವಂತದ ವಾಹನ ಜಪ್ತಿ, ಮುಟ್ಟುಗೋಲು ಮಾಡುತ್ತಿರುವ ಹಣಕಾಸು ಸಂಸ್ಥೆಗಳ ಕ್ರಮವನ್ನು ಹೈಕೋರ್ಟ್ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ.
ರಿಕವರಿ ಏಜೆಂಟರು ಬಲವಂತವಾಗಿ ವಾಹನವನ್ನು ವಶಪಡಿಸಿಕೊಂಡ ವಿವಿಧ ಐದು ಪ್ರಕರಣಗಳ ಕುರಿತ ಅರ್ಜಿಗಳ ಇತ್ಯರ್ಥಕ್ಕೆ ವಿಚಾರಣೆ ನಡೆಸಿದ ನ್ಯಾಯಪೀಠ ಈ ಮಹತ್ವದ ತೀರ್ಪು ನೀಡಿದೆ.
.