![ವಾರಿಸುದಾರರು ಇಲ್ಲದೆ ಮಂಗಳೂರು ವಕೀಲರ ಶವ ಅನಾಥ! ಹಿರಿಯ ವಕೀಲರ ಶೋಕ ಸ್ಥಿತಿಗೆ ವಕೀಲರು ಆಘಾತ ವಾರಿಸುದಾರರು ಇಲ್ಲದೆ ಮಂಗಳೂರು ವಕೀಲರ ಶವ ಅನಾಥ! ಹಿರಿಯ ವಕೀಲರ ಶೋಕ ಸ್ಥಿತಿಗೆ ವಕೀಲರು ಆಘಾತ](https://blogger.googleusercontent.com/img/b/R29vZ2xl/AVvXsEgiMQUJGmXeXIP82VlRHVaDKJiD5kbxeGAR_Ld5v9tkI1P4c_MEZS3x6nza4n9WrU5NRbsHfonfT3dtEOBPVzIdZddf9lpTB2hhzUsVCqMmmeucEqFHcFGR9qKeATlE8RBd5kdRfDsBQ0Xnco50skTbgNjvTGJU-Hb7r4DoH22sWFkrmYT7_xaYKZi9ZMtq/s320/Advocate-Logo-PNG-HD.png)
ವಾರಿಸುದಾರರು ಇಲ್ಲದೆ ಮಂಗಳೂರು ವಕೀಲರ ಶವ ಅನಾಥ! ಹಿರಿಯ ವಕೀಲರ ಶೋಕ ಸ್ಥಿತಿಗೆ ವಕೀಲರು ಆಘಾತ
ವಾರಿಸುದಾರರು ಇಲ್ಲದೆ ಮಂಗಳೂರು ವಕೀಲರ ಶವ ಅನಾಥ! ಹಿರಿಯ ವಕೀಲರ ಶೋಕ ಸ್ಥಿತಿಗೆ ವಕೀಲರು ಆಘಾತ
ಮಂಗಳೂರು ವಕೀಲರ ಸಂಘದ ಹಿರಿಯ ಸದಸ್ಯರಾದ ಬಿ. ಹರೀಶ್ ಆಚಾರ್ಯ ಅವರು ತಮ್ಮ ಮನೆಯ ಮೆಟ್ಟಿಲಲ್ಲಿ ಬಿದ್ದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಲೋಕ ಅದಾಲತ್ ನಡೆದಿದ್ದ ಶನಿವಾರದಂದು ತಮ್ಮ ಕಚೇರಿಗೆ ಆಗಮಿಸಿದ್ದ ಅವರು, ಒಂದು ಲೀಟರ್ ನೀರಿನ ಬಾಟಲಿ ಖರೀದಿಸಿ ಮನೆಗೆ ಮರಳಿದ್ದರು. ಆ ಬಳಿಕ ಅವರನ್ನು ಯಾರೂ ಕಂಡಿರಲಿಲ್ಲ.
ಸ್ನೇಹಿತರು, ವಕೀಲರು ಅವರಿಗೆ ಎಷ್ಟು ಕರೆ ಮಾಡಿದರೂ ಪ್ರತಿಕ್ರಿಯೆ ಇರಲಿಲ್ಲ. ಓರಗೆಯ ಸ್ನೇಹಿತರು ಮತ್ತು ವಕೀಲರ ಜೊತೆಗೆ ಚಹಾ-ತಿಂಡಿ ಸೇವಿಸುವ ಅಭ್ಯಾಸ ಇಟ್ಟುಕೊಂಡಿದ್ದ ಹರೀಶಣ್ಣ ಎಂದೂ ಈ ಪದ್ಧತಿಯನ್ನು ಮಿಸ್ ಮಾಡಿಕೊಂಡಿರಲಿಲ್ಲ. ಇದ್ದಕ್ಕಿದ್ದಂತೆ ಅವರು ಕಾಣದಾಗಿರುವುದನ್ನು ಕಂಡ ವಕೀಲರು ತಮ್ಮ ಕಕ್ಷಿದಾರರನ್ನು ಮನೆಗೆ ಕಳುಹಿಸಿ ನೋಡಿಸಲಾಗಿ, ಅವರ ಕಾರು ಇದ್ದು ಮನೆಯಲ್ಲಿ ಇರಬಹುದು ಎಂಬ ವಿಷಯ ಗೊತ್ತಾಯಿತು.
ಕೊನೆಗೆ, ಮನೆಗೆ ಹೋಗಿ ನೋಡಿದಾಗ ಹರೀಶ್ ಆಚಾರ್ಯ ಶವವಾಗಿದ್ದರು.
ಒಬ್ಬಂಟಿಯಾಗಿಯೇ ಇದ್ದ ಅವರು ಪತ್ನಿಗೆ ವಿಚ್ಚೇದನ ನೀಡಿದ್ದರು. ಕೋಟಿಗಟ್ಟಲೆ ರೂ. ಬೆಲೆಬಾಳುವ ಸುಮಾರು 75 ಸೆಂಟ್ಸ್ ಜಾಗದಲ್ಲಿ ತಮ್ಮ ಹಿರಿಯರು ಕಟ್ಟಿಸಿದ್ದ ಹಳೆಯ ಮನೆಯಲ್ಲಿ ಅವರು ಏಕಾಂಗಿಯಾಗಿ ವಾಸ ಮಾಡಿಕೊಂಡಿದ್ದರು.
ಪೊಲೀಸರ ಸಮ್ಮುಖದಲ್ಲಿ ಬಾಗಿಲು ಒಡೆದು ಒಳ ಹೋದಾಗ ಟಿವಿ ಆನ್ ಆದ ಸ್ಥಿತಿಯಲ್ಲಿ ಇತ್ತು. ಅವರು ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಅವರ ತಂದೆಯೂ ವಕೀಲರಾಗಿದ್ದು, ಕೆಲ ವರ್ಷಗಳ ಹಿಂದೆ ನಿಧನರಾಗಿದ್ದರು. ಒಬ್ಬ ಮಗನ ಜೊತೆಗೆ ಅವರು ವಾಸವಾಗಿದ್ದರು.
ತುಸು ಮುಂಗೋಪಿಯಾದರೂ ಸರಳ, ಸ್ನೇಹ ಜೀವಿ. ಕಿರಿಯ ವಕೀಲರಿಗೆ ತಮ್ಮ ಅನುಭವವನ್ನು ಧಾರೆ ಎರೆದು ಸಲಹೆ ಸೂಚನೆ ನೀಡುತ್ತಿದ್ದ ಹರೀಶ್ ಆಚಾರ್ಯ ಅವರ ಅಂತ್ಯ ಶೋಚನೀಯವಾಗಿರುವುದು ವಕೀಲರನ್ನು ಆಘಾತಗೊಳಿಸಿದೆ. ಸಮೀಪದ ಸಂಬಂಧಿಗಳು ಶವ ಸಂಸ್ಕಾರಕ್ಕೆ ಮುಂದೆ ಬರದೇ ಇರುವುದರಿಂದ ಅವರ ಮೃತದೇಹವನ್ನು ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇಡಲಾಗಿದೆ. ಯಾರೂ ಮುಂದೆ ಬರದಿದ್ದರೆ ಮಂಗಳೂರು ವಕೀಲರ ಸಂಘದ ನೇತೃತ್ವದಲ್ಲಿ ಶವ ಸಂಸ್ಕಾರ ನಡೆಸಲು ಮಂಗಳೂರು ವಕೀಲರು ನಿರ್ಧರಿಸಿದ್ದಾರೆ.