![ಅನುಕಂಪದ ನೌಕರಿ ಹಕ್ಕಲ್ಲ, ಕುಟುಂಬದಲ್ಲಿ ಒಬ್ಬ ನೌಕರನಾಗಿದ್ದರೆ ಮತ್ತೊಬ್ಬರಿಗೆ ಅನುಕಂಪದ ಅಗತ್ಯವಿಲ್ಲ: ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ಅನುಕಂಪದ ನೌಕರಿ ಹಕ್ಕಲ್ಲ, ಕುಟುಂಬದಲ್ಲಿ ಒಬ್ಬ ನೌಕರನಾಗಿದ್ದರೆ ಮತ್ತೊಬ್ಬರಿಗೆ ಅನುಕಂಪದ ಅಗತ್ಯವಿಲ್ಲ: ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು](https://blogger.googleusercontent.com/img/b/R29vZ2xl/AVvXsEijxyPM4RrIuAlOnklrvsrpT3NCnREiBrTVaihfz2S6S6kkzJl-KmX3pNUIf-Gak_eIIvnSFeSBgXdly3FUFdJA-S10Z_3Tn9l7akh_6kTh6Hd1W9ChGZ-dx1l2BTu2wRao0XWmjuPCx5Vvn6dE8MXRJvKif9pc7tHGTsg2roILaA2ynyQAcEIXLBSWj3Em/w640-h362/Karnataka%20High%20Court.jpg)
ಅನುಕಂಪದ ನೌಕರಿ ಹಕ್ಕಲ್ಲ, ಕುಟುಂಬದಲ್ಲಿ ಒಬ್ಬ ನೌಕರನಾಗಿದ್ದರೆ ಮತ್ತೊಬ್ಬರಿಗೆ ಅನುಕಂಪದ ಅಗತ್ಯವಿಲ್ಲ: ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು
ಅನುಕಂಪದ ನೌಕರಿ ಹಕ್ಕಲ್ಲ, ಕುಟುಂಬದಲ್ಲಿ ಒಬ್ಬ ನೌಕರನಾಗಿದ್ದರೆ ಮತ್ತೊಬ್ಬರಿಗೆ ಅನುಕಂಪದ ಅಗತ್ಯವಿಲ್ಲ: ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು
ಅನುಕಂಪದ ಆಧಾರದಲ್ಲಿ ಉದ್ಯೋಗಾವಕಾಶ ಪಡೆಯುವುದು ಅಭ್ಯರ್ಥಿಯ ಹಕ್ಕು ಅಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಕುಟುಂಬದ ಸದಸ್ಯರು ಈಗಾಗಲೇ ಒಂದು ಸಂಸ್ಥೆಯಲ್ಲಿ ನೌಕರರಾಗಿದ್ದರೆ ಅದೇ ಸಂಸ್ಥೆಯಲ್ಲಿ ಅನುಕಂಪದ ಆಧಾರದಲ್ಲಿ ಮತ್ತೊಬ್ಬ ಸದಸ್ಯರಿಗೆ ಉದ್ಯೋಗವನ್ನು ನೀಡಲಾಗದು ಎಂದು ಕರ್ನಾಟಕ ಹೈಕೋರ್ಟ್ ವಿಭಾಗೀಯ ನ್ಯಾಯಪೀಠ ತನ್ನ ಆದೇಶದಲ್ಲಿ ಸ್ಪಷ್ಟಪಡಿಸಿದೆ.
ಅನುಕಂಪದ ಆಧಾರದಲ್ಲಿ ಉದ್ಯೋಗಾವಕಾಶ ನೀಡಲು ನಿರಾಕರಿಸಿದ್ದ ಕರ್ನಾಟಕ ವಿದ್ಯುತ್ ಸರಬರಾಜು ಮಂಡಳಿ (ಕೆಪಿಟಿಸಿಎಲ್) ಕ್ರಮವನ್ನು ಪ್ರಶ್ನಿಸಿ ರಂಗನಾಥ್ ಎಂಬವರು ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ಆಗಿನ ಮುಖ್ಯ ನ್ಯಾಯಮೂರ್ತಿ ಅಲೋಕ್ ಆರಾದೆ ಮತ್ತು ಎಸ್. ವಿಶ್ವಜಿತ್ ಶೆಟ್ಟಿ ಅವರಿದ್ದ ವಿಭಾಗಿಯ ನ್ಯಾಯ ಪೀಠ ಈ ಮಹತ್ವದ ತೀರ್ಪು ನೀಡಿದೆ.
ಅರ್ಜಿದಾರರ ಸಹೋದರ ಈಗಾಗಲೇ ಕೆಪಿಟಿಸಿಎಲ್ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇದೀಗ ಅನುಕಂಪದ ಆಧಾರದಲ್ಲಿ ಅದೇ ಸಂಸ್ಥೆಯಲ್ಲಿ ಮತ್ತೊಂದು ಹುದ್ದೆಗಾಗಿ ಅರ್ಜಿದಾರರು ಮುಂದಾಗಿದ್ದಾರೆ. ಅದಕ್ಕೆ ಆಸ್ಪದ ನೀಡಲು ಸಾಧ್ಯವಿಲ್ಲ ಎಂದು ತಿಳಿಸಿ ವಿಭಾಗೀಯ ನ್ಯಾಯಪೀಠ ಅರ್ಜಿಯನ್ನು ವಜಾಗೊಳಿಸಿದೆ.
ಪ್ರಕರಣದ ವಿವರ
ಅರ್ಜಿದಾರರಾದ ರಂಗನಾಥ್ ಅವರ ತಂದೆ ಎನ್. ರಾಮಯ್ಯ ಅವರು ಕೆಪಿಟಿಸಿಎಲ್ ನಲ್ಲಿ ಸೇವೆ ಸಲ್ಲಿಸುತ್ತಿದ್ದರು. 2002ರ ಅಕ್ಟೋಬರ್ 7ರಂದು ನಾಪತ್ತೆಯಾಗಿದ್ದರು. ಬಳಿಕ 2010ರಲ್ಲಿ ಅನುಕಂಪದ ಆಧಾರದಲ್ಲಿ ಉದ್ಯೋಗ ನೀಡುವಂತೆ ಕೋರಿ ರಂಗನಾಥ್ ಅವರ ತಾಯಿ, ಕೆಪಿಟಿಸಿಎಲ್ಕೆ ಮನವಿ ಮಾಡಿದ್ದರು. ಈ ಮನವಿಯನ್ನು ಕೆಪಿಟಿಸಿಎಲ್ ತಿರಸ್ಕರಿಸಿತ್ತು.
ನಂತರ ರಂಗನಾಥ್ ಅವರು ತಂದೆ ನಾಪತ್ತೆಯಾಗಿದ್ದ ಹಿನ್ನೆಲೆಯಲ್ಲಿ ನ್ಯಾಯಾಲಯದ ಮೂಲಕ ಬಿಬಿಎಂಪಿ ಯಿಂದ ತಂದೆಯ ಮರಣ ಪ್ರಮಾಣ ಪತ್ರವನ್ನು 2011ರಲ್ಲಿ ಪಡೆದಿದ್ದರು. 2012ರಲ್ಲಿ ಹೈಕೋರ್ಟ್ ಅಲ್ಲಿ ಅರ್ಜಿ ಸಲ್ಲಿಸಿದ್ದ ರಂಗನಾಥ್ ಅನುಕಂಪದ ಆಧಾರದಲ್ಲಿ ತಂದೆಯ ಹುದ್ದೆಗೆ ನೇಮಕ ಮಾಡಿಕೊಳ್ಳುವಂತೆ ಕೆಪಿಟಿಸಿಎಲ್ ಗೆ ಸೂಚನೆ ನಿರ್ದೇಶನ ನೀಡಬೇಕು ಎಂದು ತಮ್ಮ ಅರ್ಜಿಯಲ್ಲಿ ಕೋರಿದರು.
ಈ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ನ್ಯಾಯಪೀಠ, ಅರ್ಜಿದಾರರ ಮನವಿಯನ್ನು ಕಾನೂನು ಪ್ರಕಾರ ಪರಿಗಣಿಸುವಂತೆ ಕೆಪಿಟಿಸಿಎಲ್ ಗೆ ನಿರ್ದೇಶನ ನೀಡಿತ್ತು
ಅರ್ಜಿಯನ್ನು ಪರಿಶೀಲಿಸಿದ ಕೆಪಿಟಿಸಿಎಲ್ ರಂಗನಾಥ್ ಕುಟುಂಬದ ಸದಸ್ಯರು ಇದೇ ಸಂಸ್ಥೆಯಲ್ಲಿ ಸೇವೆ ಸಾಧಿಸುತ್ತಿದ್ದಾರೆ ಆದ ಕಾರಣ ಮತ್ತೊಬ್ಬರಿಗೆ ಅನುಕಂಪದ ಆಧಾರದಲ್ಲಿ ಉದ್ಯೋಗ ಅವಕಾಶ ಕಲ್ಪಿಸಲು ಸಾಧ್ಯವಾಗದು ಎಂದು ತಿಳಿಸಿ ಮನವಿಯನ್ನು ತಿರಸ್ಕರಿಸಿತ್ತು
ಕೆಪಿಟಿಸಿಎಲ್ನ ಈ ನಿರ್ಧಾರವನ್ನು ಪ್ರಶ್ನಿಸಿ ರಂಗನಾಥ್ ಅವರು ಹೈಕೋರ್ಟಿಗೆ ಮರೆ ಹೋಗಿದ್ದರು. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ ಏಕ ಸದಸ್ಯ ಪೀಠ ಕೆಪಿಟಿಸಿಎಲ್ ನ ನಿರ್ಣಯವನ್ನು ಎತ್ತಿ ಹಿಡಿದು ಅರ್ಜಿಯನ್ನು 2014ರಲ್ಲಿ ವಜಾ ಗೊಳಿಸಿತು. ಇದನ್ನು ಪ್ರಶ್ನಿಸಿ ರಂಗನಾಥ್ ವಿಭಾಗೀಯ ನ್ಯಾಯ ಪೀಠಕ್ಕೆ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು
ಹೈಕೋರ್ಟ್ ನೀಡಿದ ತೀರ್ಪಿನ ಪ್ರಮುಖ ಅಂಶಗಳು
ಅರ್ಜಿದಾರರ ಕುಟುಂಬದ ಸದಸ್ಯರು ಈಗಾಗಲೇ ಸರಕಾರದ ಅಧೀನ ಸಂಸ್ಥೆ ಒಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ ಈ ಸಂದರ್ಭದಲ್ಲಿ ಆ ಕುಟುಂಬದ ಮತ್ತೊಬ್ಬ ಸದಸ್ಯನಿಗೆ ಅದೇ ಸಂಸ್ಥೆಯಲ್ಲಿ ಅನುಕಂಪದ ಆಧಾರದಲ್ಲಿ ಉದ್ಯೋಗ ಕಲ್ಪಿಸಲಾಗದು ಅನುಕಂಪದ ಆಧಾರಿತ ಉದ್ಯೋಗ ಪಡೆಯುವುದು ಹಕ್ಕಲ್ಲ ಎಂದು ನ್ಯಾಯ ಪೀಠ ಸ್ಪಷ್ಟಪಡಿಸಿದೆ.
ಮೇಲ್ಮನವಿ ದಾರದ ಸಹೋದರ ಈಗಾಗಲೇ ಕೆಪಿಟಿಸಿಎಲ್ ನಲ್ಲಿ ಉದ್ಯೋಗ ಮಾಡುತ್ತಿದ್ದಾರೆ ಆದ್ದರಿಂದ ಅದೇ ಸಂಸ್ಥೆಯಲ್ಲಿ ಮೇಲ್ಮನವಿದಾರರಿಗೂ ಅನುಕಂಪದ ಆಧಾರದಲ್ಲಿ ಮತ್ತೊಂದು ಉದ್ಯೋಗ ನೀಡಲಾಗದು ಹಾಗಾಗಿ ಅರ್ಜಿದಾರರ ಮನವಿಯನ್ನು ಪರಿಗಣಿಸಲು ಸಾಧ್ಯವಿಲ್ಲ ಅದರಂತೆ ಏಕ ಸದಸ್ಯ ನ್ಯಾಯಪೀಠ ನೀಡಿದ ಆದೇಶದಲ್ಲಿ ಯಾವುದೇ ದೋಷಗಳು ಕಂಡುಬರುವುದಿಲ್ಲ ಮತ್ತು ಮಧ್ಯಪ್ರವೇಶಕ್ಕೆ ಅವಕಾಶ ಇಲ್ಲ ಎಂದು ಮೇಲ್ಮನವಿಯನ್ನು ತಿರಸ್ಕರಿಸಿದ್ದು, ಪ್ರಕರಣವನ್ನು ಇತ್ಯರ್ಥಗೊಳಿಸಿದೆ.