![NI Act: ಲೋಕ ಅದಾಲತ್ ರಾಜಿ ಇತ್ಯರ್ಥ ರದ್ದು: ಕ್ರಿಮಿನಲ್ ಪ್ರಕರಣ ಮರುಸ್ಥಾಪನೆ- ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು NI Act: ಲೋಕ ಅದಾಲತ್ ರಾಜಿ ಇತ್ಯರ್ಥ ರದ್ದು: ಕ್ರಿಮಿನಲ್ ಪ್ರಕರಣ ಮರುಸ್ಥಾಪನೆ- ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು](https://blogger.googleusercontent.com/img/b/R29vZ2xl/AVvXsEjmb1-LsuZWNoRyd0bqCXzQKMOx9suLkfKB-T1ngp59WRBehwoOyv9qKQ3JoOP6IelIOzp_Fk6hXTfLyJnJ-OWfizkNK_1qa8SQkogAjrzZY521GymmGips1ZI6J99hUOEa2RDhAA5u4N4IjTjCAkHuxZZ6cvKaD0ZfQgawq3oOBHjrb8i7HnTMaOdo1ltU/w470-h640/High_Court_of_Karnataka.jpg)
NI Act: ಲೋಕ ಅದಾಲತ್ ರಾಜಿ ಇತ್ಯರ್ಥ ರದ್ದು: ಕ್ರಿಮಿನಲ್ ಪ್ರಕರಣ ಮರುಸ್ಥಾಪನೆ- ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು
NI Act: ಲೋಕ ಅದಾಲತ್ ರಾಜಿ ಇತ್ಯರ್ಥ ರದ್ದು: ಕ್ರಿಮಿನಲ್ ಪ್ರಕರಣ ಮರುಸ್ಥಾಪನೆ- ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು
ಮಹತ್ವದ ಬೆಳವಣಿಗೆಯೊಂದರಲ್ಲಿ ಲೋಕ ಅದಾಲತ್ನಲ್ಲಿ ಇತ್ಯರ್ಥವಾದ ರಾಜಿ ಒಪ್ಪಂದವನ್ನು ಬದಿಗಿರಿಸಿದ ಕರ್ನಾಟಕ ಹೈಕೋರ್ಟ್, ಚೆಕ್ ಅಮಾನ್ಯ ಪ್ರಕರಣವೊಂದರ ಕ್ರಿಮಿನಲ್ ಪ್ರಕ್ರಿಯೆಯನ್ನು ಪುರಸ್ಥಾಪಿಸಿ ಆದೇಶ ಹೊರಡಿಸಿದೆ.
ಅಪರೂಪದ ನಿದರ್ಶನವೊಂದರಲ್ಲಿ 80ರ ಹರೆಯದ ಹೇಮಚಂದ್ರ ಎಂ.ಕುಪ್ಪಳ್ಳಿ ಸಲ್ಲಿಸಿದ್ದ ಅರ್ಜಿಯನ್ನು ಭಾಗಶಃ ಪುರಸ್ಕರಿಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಮಹತ್ವದ ಆದೇಶ ನೀಡಿದ್ದಾರೆ.
ಚೆಕ್ ಅಮಾನ್ಯ ಪ್ರಕರಣದಲ್ಲಿ ಉಭಯ ಪಕ್ಷಕಾರರು ಲೋಕ ಅದಾಲತ್ ಮುಂದೆ ಪ್ರಕರಣವನ್ನು ಸೌಹಾರ್ದಯುತವಾಗಿ ಇತ್ಯರ್ಥ ಮಾಡಿಕೊಂಡಿದ್ದರು. ರಾಜಿ ಪತ್ರಕ್ಕೆ ಸಹಿಯನ್ನೂ ಹಾಕಿಕೊಂಡಿದ್ದು, ಪ್ರಕರಣವನ್ನು ಮಾನ್ಯ ವಿಚಾರಣಾ ನ್ಯಾಯಾಲಯ ಮುಕ್ತಾಯಗೊಳಿಸಿತ್ತು.
ರಾಜಿ ಸಂಧಾನ ನಡೆಸಿ ಲೋಕ ಅದಾಲತ್ನಲ್ಲಿ ಪ್ರಕರಣವನ್ನು ಇತ್ಯರ್ಥಗೊಳಿಸಿದ ಬಳಿಕ ಆರೋಪಿ ಕಳೆದ ಆರು ವರ್ಷಗಳಿಂದ ನಾಪತ್ತೆಯಾಗಿದ್ದರು. ಅಲ್ಲದೆ, ದೂರುದಾರರಿಗೆ ಕೊಡಬೇಕಾದ (ಕೊಡಲು ಒಪ್ಪಿಕೊಂಡಿರುವ) ರೂ. 29 ಲಕ್ಷ ಹಣವನ್ನು ನೀಡಲು ವಿಫಲರಾಗಿದ್ದರು.
M/s R.B. ಗ್ರೀನ್ ಫೀಲ್ಡ್ ಆಗ್ರೋ ಇನ್ಫ್ರಾ ಪ್ರೈವೇಟ್ನ ಮಾಲೀಕ ರಕ್ಷಿತ್ ವಿರುದ್ಧ ಕ್ರಿಮಿನಲ್ ಮೊಕದ್ದಮೆಯನ್ನು ಹೈಕೋರ್ಟ್ ಮರುಸ್ಥಾಪನೆ ಮಾಡಿರುವ ನ್ಯಾಯಪೀಠ, "ಅಪರಾಧಕ್ಕಾಗಿ ಶಿಕ್ಷೆಗೊಳಗಾದ ಆರೋಪಿಯು ಮುಕ್ತವಾಗಿ ಸಮಾಜದಲ್ಲಿ ತಿರುಗಾಡುತ್ತಿದ್ದಾನೆ. ಇದೇ ವೇಳೆ, ತನ್ನ ಪರ ತೀರ್ಪು ಇದ್ದರೂ ಸಂತ್ರಸ್ತ ದೂರುದಾರರು ರಾಜಿ ಇತ್ಯರ್ಥದಿಂದ ತಮ್ಮ ಹಣವನ್ನು ಆರೋಪಿಯಿಂದ ಪಡೆದುಕೊಳ್ಳಲು ಹೆಣಗಾಡುತ್ತಿದ್ದಾರೆ" ಎಂದು ನ್ಯಾಯಪೀಠ ಗಮನಿಸಿದೆ.
ಬೆಂಗಳೂರಿನ ಸದಾಶಿವನಗರದ ಆರ್ಎಂವಿ ಬಡಾವಣೆ ನಿವಾಸಿ ರಕ್ಷಿತ್ (ಆರೋಪಿ) ಬೆಂಗಳೂರು ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ 2015ರಲ್ಲಿ ನೀಡಿದ್ದ ಆದೇಶದ ವಿರುದ್ಧ ಸೆಷನ್ಸ್ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದ್ದರು. ಅಲ್ಲೂ ರಕ್ಷಿತ್ ಅಪರಾಧಿ ಎಂದು ತೀರ್ಪು ನೀಡಿದ್ದು, ದೂರುದಾರರಿಗೆ ₹ 29.1 ಲಕ್ಷ ಪಾವತಿಸಲು ಸೂಚಿಸಿದ್ದು, ತಪ್ಪಿದಲ್ಲಿ ಅವರು 10 ತಿಂಗಳ ಅವಧಿಗೆ ಜೈಲು ಶಿಕ್ಷೆಯನ್ನು ಪ್ರಕಟಿಸಲಾಗಿತ್ತು.
ಆ ಬಳಿಕ, ಸೆಷನ್ಸ್ ನ್ಯಾಯಾಲಯವು ಪ್ರಕರಣವನ್ನು ಇತ್ಯರ್ಥಕ್ಕಾಗಿ ಲೋಕ್ ಅದಾಲತ್ನ ಮುಂದೆ ಇರಿಸಿತು. ದೂರುದಾರರು ಸಹ ಇತ್ಯರ್ಥಕ್ಕೆ ಒಪ್ಪಿಕೊಂಡು 2016 ರೊಳಗೆ ₹ 29 ಲಕ್ಷವನ್ನು ಕಂತುಗಳಲ್ಲಿ ಪಾವತಿಸಲು ಆರೋಪಿ ಒಪ್ಪಿಕೊಂಡಿದ್ದರು. ಒಪ್ಪಂದದ ಪ್ರಕಾರ, ರಕ್ಷಿತ್ ಅವರು ನವೆಂಬರ್ 2016 ರೊಳಗೆ ಒಪ್ಪಿತ ಮೊತ್ತವನ್ನು ಪಾವತಿಸಲು ವಿಫಲವಾದರೆ ಅವಾರ್ಡ್ ದಿನದಿಂದ 12% ದಂಡನಾ ಬಡ್ಡಿ ಸಹಿತ ₹ 30 ಲಕ್ಷ ಪಾವತಿಸಬೇಕಾಗಿತ್ತು.
ಕೋರ್ಟ್ನಲ್ಲೇ ವಂಚನೆ
ಆರೋಪಿ ಒಂದು ಪೈಸೆಯನ್ನೂ ಪಾವತಿಸದ ಕಾರಣ, ಅರ್ಜಿದಾರರು 2017 ರಲ್ಲಿ ಲೋಕ ಅದಾಲತ್ನಲ್ಲಿ ಇತ್ಯರ್ಥಕ್ಕಾಗಿ ಸೆಷನ್ಸ್ ನ್ಯಾಯಾಲಯವನ್ನು ಸಂಪರ್ಕಿಸಿದರು. ಆದಾಗ್ಯೂ, ರಕ್ಷಿತ್ ಅವರು ನ್ಯಾಯಾಲಯದ ನೋಟಿಸ್ಗಳಿಗೆ ಪ್ರತಿಕ್ರಿಯಿಸಲಿಲ್ಲ ಅಥವಾ ಕಳೆದ ಆರು ವರ್ಷಗಳಿಂದ ಆರೋಪಿ ನ್ಯಾಯಾಲಯದ ನೋಟೀಸ್ಗೂ ಸ್ಪಂದಿಸದೆ ತಲೆ ಮರೆಸಿಕೊಂಡಿದ್ದರು. ಅವರ ವಿರುದ್ಧ ಹೊರಡಿಸಲಾದ ಜಾಮೀನು ರಹಿತ ಬಂಧನ ವಾರಂಟ್ಗಳು ಸೇರಿದಂತೆ ವಾರೆಂಟ್ಗಳು, ಅವರು ನಿವಾಸದಲ್ಲಿ ಲಭ್ಯರಿಲ್ಲ ಎಂಬ ಕಾರಣಕ್ಕೆ ಜಾರಿಯಾಗಿರಲಿಲ್ಲ.
ಮೇಲ್ನೋಟಕ್ಕೆ ಆರೋಪಿ ರಕ್ಷಿತ್ ನಡವಳಿಕೆ ಕೋರ್ಟ್ಗೆ ಮಾಡಿರುವ ವಂಚನೆಗೆ ಸಮಾನವಾಗಿದೆ ಎಂದು ನ್ಯಾಯಮೂರ್ತಿ ನಾಗಪ್ರಸನ್ನ ಹೇಳಿದರು.