
ಪುತ್ರಿ ಮೇಲೆ ಲೈಂಗಿಕ ದೌರ್ಜನ್ಯ: ನ್ಯಾಯಾಧೀಶರ ವಿರುದ್ಧದ ಪ್ರಕರಣ ರದ್ದುಪಡಿಸಲು ನಿರಾಕರಿಸಿದ ಸುಪ್ರೀಂ ಕೋರ್ಟ್!
ಪುತ್ರಿ ಮೇಲೆ ಲೈಂಗಿಕ ದೌರ್ಜನ್ಯ: ನ್ಯಾಯಾಧೀಶರ ವಿರುದ್ಧದ ಪ್ರಕರಣ ರದ್ದುಪಡಿಸಲು ನಿರಾಕರಿಸಿದ ಸುಪ್ರೀಂ ಕೋರ್ಟ್!
ಸ್ವಂತ ಪುತ್ರಿಯೇ ತಂದೆ ಮೇಲೆ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದು, ನ್ಯಾಯಾಧೀಶರೂ ಆಗಿರುವ ತಂದೆಯ ವಿರುದ್ಧದ ಕ್ರಿಮಿನಲ್ ಮೊಕದ್ದಮೆ ರದ್ದುಪಡಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.
ಸುಪ್ರೀಂ ಕೋರ್ಟ್ನ ನ್ಯಾಯಮೂರ್ತಿಗಳಾದ ಶ್ರೀ ಪ್ರಶಾಂತ್ ಕುಮಾರ್ ಮಿಶ್ರಾ ಮತ್ತು ಮನಮೋಹನ್ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ತೀರ್ಪು ಪ್ರಕಟಿಸಿದೆ.
ನ್ಯಾಯಾಧೀಶರ ಮಗಳು ಮಾಡಿರುವ ಆರೋಪಗಳು ಆಘಾತಕಾರಿಯಾಗಿದ್ದು, ಸ್ವತಃ ತಂದೆಯೇ ದೌರ್ಜನ್ಯ ಎಸಗಿರುವುದು ಗಂಭೀರ ಪ್ರಕರಣ ಎಂದು ಸುಪ್ರೀಂ ಕೋರ್ಟ್ ವ್ಯಾಖ್ಯಾನಿಸಿದೆ. ಅಲ್ಲದೆ, ಕ್ರಿಮಿನಲ್ ವಿಚಾರಣೆಯಲ್ಲಿ ಮಧ್ಯಪ್ರವೇಶ ಮಾಡಲು ನಿರಾಕರಿಸಿತು.
ಏಪ್ರಿಲ್ 15ರಂದು ಬಾಂಬೆ ಹೈಕೋರ್ಟ್ ತನ್ನ ವಿರುದ್ಧದ ಆರೋಪಗಳನ್ನು ರದ್ದುಗೊಳಿಸಲು ನಿರಾಕರಿಸಿದ ಹಿನ್ನೆಲೆಯಲ್ಲಿ ಸದ್ರಿ ಹೈಕೋರ್ಟ್ ಆದೇಶದ ವಿರುದ್ಧ ನ್ಯಾಯಾಧೀಶರು ಸಲ್ಲಿಸಿದ ವಿಶೇಷ ಅನುಮತಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಪೀಠ ಈ ಆದೇಶ ಹೊರಡಿಸಿದೆ.
ನ್ಯಾಯಾಧೀಶರ ಪರ ವಾದ ಮಂಡಿಸಿದ ವಕೀಲರು, ಲೈಂಗಿಕ ದೌರ್ಜನ್ಯ ಆರೋಪದ ಈ ವಿಚಾರಣೆಯಿಂದ ಅವರ ವೃತ್ತಿ ಜೀವನ ಮತ್ತು ಬದುಕು ಹಾಳಾಗಿದೆ. ಪತ್ನಿಯೊಂದಿಗಿನ ದೀರ್ಘ ಕಾಲದ ವೈವಾಹಿಕ ವ್ಯಾಜ್ಯದ ಕಾರಣದಿಂದ ಈ ಆರೋಪ ಕೇಳಿ ಬರುತ್ತಿದೆ. ಇದೊಂದು ಸ್ಪಷ್ಟ ಪ್ರತಿದಾಳಿ. ತನ್ನ ಕಕ್ಷಿದಾರರಾದ ನ್ಯಾಯಾಧೀಶರ ತಂದೆ ಕೂಡ ಆತ್ಮಹತ್ಯೆ ಮಾಡಿಕೊಂಡರು ಎಂದು ಹೇಳಿದರು.
ಆದರೆ, ನ್ಯಾಯಧೀಶರ ಪುತ್ರಿ ತನ್ನ ಸ್ವಂತ ತಂದೆ ಮೇಲೆ ಮಾಡಿರುವ ಆರೋಪಗಳು ಗಂಭೀರವಾಗಿವೆ. ಹಾಗಾಗಿ, ಈ ಕ್ರಿಮಿನಲ್ ವಿಚಾರಣೆಯಲ್ಲಿ ಮಧ್ಯಪ್ರವೇಶ ಮಾಡುವುದಿಲ್ಲ ಎಂದು ಹೇಳಿದ ಸುಪ್ರೀಂ ಕೋರ್ಟ್, ಪುತ್ರ(ನ್ಯಾಯಾಧೀಶರ) ಕೃತ್ಯದಿಂದ ಬೇಸತ್ತು ತಂದೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದೂ ಅಭಿಪ್ರಾಯಿಸಿತು.
ಮಹಾರಾಷ್ಟ್ರದ ಭಂಡಾರದಲ್ಲಿ ಜನವರಿ 21, 2019ರಂದು ಎಫ್ಐಆರ್ ದಾಖಲಾಗಿತ್ತು. ಆದರೆ, ಮೇ 2014 ಮತ್ತು 2018ರ ನಡುವೆ ಈ ಆರೋಪ ಮಾಡಲಾಗಿದೆ ಎಂದು ನ್ಯಾಯಾಧೀಶರ ಪರ ವಕೀಲರು ಹೇಳಿದರು.
ಪ್ರಕರಣದ ತ್ವರಿತ ವಿಚಾರಣೆ ನಡೆಸುವಂತೆ ವಿಚಾರಣಾ ನ್ಯಾಯಾಲಯಕ್ಕೆ ನಿರ್ದೇಶನ ನೀಡಿತು. ಈ ತೀರ್ಪಿನಿಂದಾಗಿ, ನ್ಯಾಯಾಧೀಶರು ಪೋಕ್ಸೋ ನ್ಯಾಯಾಲಯದಲ್ಲಿ ಆರೋಪಿಯಂತೆ ವಿಚಾರಣೆ ಎದುರಿಸಬೇಕಾಗಿದೆ.