
ವಿಮಾ ಪರಿಹಾರಕ್ಕೆ ಹೆಣ್ಣು, ಗಂಡು ಭೇದವಿಲ್ಲ- ಮೃತರ ಪರಿಹಾರ ಪಡೆಯಲು ವಿವಾಹಿತ ಪುತ್ರಿಯರೂ ಅರ್ಹರು: ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು
ವಿಮಾ ಪರಿಹಾರಕ್ಕೆ ಹೆಣ್ಣು, ಗಂಡು ಭೇದವಿಲ್ಲ- ಮೃತರ ಪರಿಹಾರ ಪಡೆಯಲು ವಿವಾಹಿತ ಪುತ್ರಿಯರೂ ಅರ್ಹರು: ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು
ಅಪಘಾತ ಪ್ರಕರಣಗಳಲ್ಲಿ ಮೃತ ಸಂತ್ರಸ್ತರ ಪರಿಹಾರ ಪಡೆಯಲು ವಿವಾಹಿತ ಪುತ್ರಿಯರೂ ಅರ್ಹರಾಗಿದ್ಧಾರೆ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಅಪಘಾತ ಪ್ರಕರಣದಲ್ಲಿ ಮೃತ ಮಹಿಳೆಯ ವಿವಾಹಿತ ಪುತ್ರಿಯರಿಗೂ ಪರಿಹಾರ ಘೋಷಿಸಿದ್ದ ಮೋಟಾರು ಅಪಘಾತ ಪರಿಹಾರ ನ್ಯಾಯಮಂಡಳಿಯ ಆದೇಶ ಪ್ರಶ್ನಿಸಿ ವಿಮಾ ಸಂಸ್ಥೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್ನ ನ್ಯಾಯಮೂರ್ತಿ ಎಚ್.ಪಿ. ಸಂದೇಶ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ತೀರ್ಪು ನೀಡಿದೆ.
ಪೋಷಕರು ಮೃತಪಟ್ಟ ಸಂದರ್ಭದಲ್ಲಿ ಅವರ ವಾರಿಸುದಾರರಿಗೆ ಪರಿಹಾರ ವಿತರಿಸುವಾಗ ಗಂಡು ಹೆಣ್ಣು ಮಕ್ಕಳು ಎಂಬ ಭೇದ ಎಣಿಸಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ಹೇಳಿದೆ.
2012ರಲ್ಲಿ ರೇಣುಕಾ ಎಂಬವರು ಹುಬ್ಬಳ್ಳಿಯಿಂದ ಯಮನೂರು ಮಾರ್ಗವಾಗಿ ಪ್ರಯಾಣಿಸುತ್ತಿದ್ದಾಗ ಅಪಘಾತಕ್ಕೀಡಾಗಿ ಮೃತಪಟ್ಟರು. ವಾಹನ ಅಪಘಾತ ಪರಿಹಾರ ಕೋರಿ ಅವರ ಪತಿ ಹಾಗೂ ವಿವಾಹಿತ ಹೆಣ್ಣು ಮಕ್ಕಳು ನ್ಯಾಯಮಂಡಳಿಗೆ ಅರ್ಜಿ ಸಲ್ಲಿಸಿದ್ದರು.
ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮಂಡಳಿ, ಪತಿ ಮತ್ತು ವಿವಾಹಿತ ಪುತ್ರಿಯರಿಗೆ ಒಟ್ಟು 5.91 ಲಕ್ಷ ರೂಪಾಯಿಯನ್ನು ಬಡ್ಡಿ ಸಹಿತ ಪಾವತಿಸುವಂತೆ ವಿಮಾ ಸಂಸ್ಥೆಗೆ ಆದೇಶ ನೀಡಿತ್ತು. ವಿವಾಹಿತ ಪುತ್ರಿಯರಿಗೂ ಪರಿಹಾರ ನೀಡಿದ್ದ ಆದೇಶ ಪ್ರಶ್ನಿಸಿ ವಿಮಾ ಸಂಸ್ಥೆ ಹೈಕೋರ್ಟ್ ಮೆಟ್ಟಿಲೇರಿತ್ತು.
ವಿವಾಹಿತ ಪುತ್ರಿಯರು ಮೃತ ರೇಣುಕಾ ಅವರನ್ನು ಅವಲಂಬಿಸಿಲ್ಲ, ಹಾಗಾಗಿ, ಪರಿಹಾರಕ್ಕೆ ಅವರು ಅರ್ಹರಲ್ಲ ಎಂದು ವಿಮಾ ಸಂಸ್ಥೆ ವಾದ ಮಂಡಿಸಿತ್ತು.
ಆದರೆ, ಅವಲಂಬನೆ ಎಂಬುದು ಕೇವಲ ಆರ್ಥಿಕ ವಿಚಾರವನ್ನು ಮಾತ್ರ ಒಳಗೊಂಡಿಲ್ಲ ಅದು ಭಾವನಾತ್ಮಕ ವಿಚಾರಗಳಲ್ಲಿಯೂ ಅವಲಂಬನೆಗಳಿರುತ್ತದೆ. ಇನ್ನು ವಿವಾಹಿತ ಹೆಣ್ಣು ಮಕ್ಕಳು ಪರಿಹಾರ ಕೋರಲು ಅರ್ಹರಲ್ಲ ಎಂಬ ವಿಮಾ ಸಂಸ್ಥೆಯ ವಾದ ಸ್ವೀಕಾರಾರ್ಹವಲ್ಲ. ಗಂಡು ಮಕ್ಕಳು ಪರಿಹಾರ ಕೋರಬಹುದು ಎನ್ನುವುದಾದರೆ ವಿವಾಹಿತ ಹೆಣ್ಣು ಮಕ್ಕಳೂ ಪರಿಹಾರ ಕೋರಲು ಅರ್ಹರಾಗಿರುತ್ತಾರೆ. ಗಂಡು ಮತ್ತು ಹೆಣ್ಣು ಮಕ್ಕಳ ನಡುವೆ ತಾರತಮ್ಯ ಮಾಡಲು ಬರುವುದಿಲ್ಲ ಎಂದು ನ್ಯಾಯಪೀಠ ಖಡಕ್ ಆಗಿ ತೀರ್ಪಿನಲ್ಲಿ ದಾಖಲಿಸಿದೆ.
ನ್ಯಾಷನಲ್ ಇನ್ಶುರೆನ್ಸ್ Vs ಬೀರೇಂದರ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪನ್ನು ಉಲ್ಲೇಖಿಸಿದ ನ್ಯಾಯಪೀಠ, ಮೃತ ವ್ಯಕ್ತಿಯ ವಾರಿಸುದಾರರು ಪರಿಹಾರ ಕೋರಿ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ ಎಂದು ಸ್ಪಷ್ಟಪಡಿಸಿದೆ.
ವಯಸ್ಕ, ವಿವಾಹಿತ ಮತ್ತು ಸಂಪಾದನೆ ಮಾಡುತ್ತಿರುವ ಮಕ್ಕಳೂ ಪರಿಹಾರ ಕೋರಿ ಅರ್ಜಿ ಸಲ್ಲಿಸಬಹುದು. ಅರ್ಜಿದಾರರು ಮೃತ ವ್ಯಕ್ತಿಯ ಅವಲಂಬಿತರೇ ಎಂಬ ಒಂದೇ ಅಂಶದ ಮೇಲೆ ಪರಿಹಾರ ನಿಗದಿ ಮಾಡಬೇಕು ಎಂಬುದು ಸರಿಯಲ್ಲ. ಈ ಕಾರಣದಿಂದ ವಿವಾಹಿತ ಪುತ್ರಿಯರೂ ಪರಿಹಾರಕ್ಕೆ ಅರ್ಹರಾಗಿದ್ದಾರೆ ಎಂದು ಹೇಳಿ ವಿಮಾ ಸಂಸ್ಥೆಯ ಅರ್ಜಿಯನ್ನು ತಿರಸ್ಕರಿಸಿತು.