
'ಕಕ್ಷಿದಾರರಿಗೆ ಸಲಹೆ ನೀಡಿದಕ್ಕೆ' ವಕೀಲರಿಗೆ ಪೊಲೀಸರ ಸಮನ್ಸ್: ಸಮಗ್ರ ವಿಚಾರಣೆಗೆ ಮುಂದಾದ ಸುಪ್ರೀಂ ಕೋರ್ಟ್
'ಕಕ್ಷಿದಾರರಿಗೆ ಸಲಹೆ ನೀಡಿದಕ್ಕೆ' ವಕೀಲರಿಗೆ ಪೊಲೀಸರ ಸಮನ್ಸ್: ಸಮಗ್ರ ವಿಚಾರಣೆಗೆ ಮುಂದಾದ ಸುಪ್ರೀಂ ಕೋರ್ಟ್
ಕಕ್ಷಿದಾರರ ಪ್ರಕರಣಗಳಿಗೆ ಕಾನೂನು ಅಭಿಪ್ರಾಯ ನೀಡುವ ವಕೀಲರಿಗೆ ತನಿಖಾ ಸಂಸ್ಥೆಗಳು ಸಮನ್ಸ್ ಜಾರಿಗೊಳಿಸಲಾಗದು ಎಂದು ಸುಪ್ರೀಂ ಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಸುಪ್ರೀಂ ಕೋರ್ಟ್ನ ನ್ಯಾಯಮೂರ್ತಿಗಳಾದ ಶ್ರೀ ಕೆ.ವಿ. ವಿಶ್ವನಾಥನ್ ಮತ್ತು ಎನ್. ಕೋಟೀಶ್ವರ್ ಸಿಂಗ್ ಅವರಿದ್ದ ನ್ಯಾಯಪೀಠ ಈ ಅಭಿಪ್ರಾಯ ನೀಡಿದ್ದು, ಪ್ರಕರಣವನ್ನು ಸ್ವಯಂ ಪ್ರೇರಿತ ವಿಚಾರಣೆ ನಡೆಸಲು ನಿರ್ಧರಿಸಿದೆ.
ಕಕ್ಷಿದಾರರ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಕಾನೂನು ಸಲಹೆ ನೀಡಿದ್ದ ವಕೀಲರಿಗೆ ಗುಜರಾತ್ ಪೊಲೀಸರು ಸಮನ್ಸ್ ಜಾರಿಗೊಳಿಸಿದ್ದರು. ಈ ಕ್ರಮವನ್ನು ಪ್ರಶ್ನಿಸಿ ವಕೀಲರು ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಪೀಠ, ತನಿಖಾ ಸಂಸ್ಥೆಗಳು ಈ ರೀತಿ ಸಮನ್ಸ್ ಜಾರಿಗೊಳಿಸಿರುವುದು ಸಮರ್ಥನೀಯವಲ್ಲ ಎಂದು ಹೇಳಿದೆ. ಈ ಸ್ವಯಂ ಪ್ರೇರಿತ ವಿಚಾರಣೆಗೆ ಸಂಬಂಧಿಸಿದಂತೆ ದೇಶದ ಅಟಾರ್ನಿ ಜನರಲ್ ಆರ್. ವೆಂಕಟರಮಣಿ, ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಭಾರತೀಯ ವಕೀಲರ ಸಂಘ(ಬಿಸಿಐ)ದ ಅಧ್ಯಕ್ಷ ವಿಕಾಸ್ ಸಿಂಗ್ ಹಾಗೂ ಸುಪ್ರೀಂ ಕೋರ್ಟ್ ವಕೀಲರ ಸಂಘ(ಸ್ಕೋರಾ) ಅಧ್ಯಕ್ಷ ವಿಪಿನ್ ನಾಯರ್ ಅವರ ನೆರವನ್ನು ಕೋರಿದೆ.
# ಕೇವಲ ವಕೀಲರಾಗಿ ಕಕ್ಷಿದಾರರಿಗೆ ಸಲಹೆ ನೀಡುತ್ತಿರುವಾಗ ತನಿಖಾ ಸಂಸ್ಥೆ, ಪ್ರಾಸಿಕ್ಯೂಷನ್ ಇಲ್ಲವೇ ಪೊಲೀಸರು ನೇರವಾಗಿ ಆ ವಕೀಲರಿಗೆ ಸಮನ್ಸ್ ನೀಡಬಹುದೇ..?
# ಈ ಪ್ರಕರಣದಲ್ಲಿ ವಕೀಲರಷ್ಟೇ ಆಗಿರದೆ ಅದಕ್ಕೂ ಮಿಗಿಲಾದ ಪಾತ್ರ ನಿರ್ವಹಿಸಿದ ಬಗ್ಗೆ ತನಿಖಾ ಸಂಸ್ಥೆಗೆ ತಿಳಿದಿದ್ದರೆ ಅಂತಹ ಅಸಾಧಾರಣ ಸ್ಥಿತಿಯಲ್ಲಿ ತನಿಖಾ ಸಂಸ್ಥೆಗಳು ನೇರವಾಗಿ ಸಮನ್ಸ್ ಜಾರಿ ಮಾಡಬೇಕೇ
# ನ್ಯಾಯಾಂಗ ಮೇಲ್ವಿಚಾರಣೆಗೆ ಸೂಚಿಸಬೇಕೇ?
ಈ ಪ್ರಮುಖ ಪ್ರಶ್ನೆಗಳ ಬಗ್ಗೆ ವಿಚಾರಣೆ ನಡೆಯಲಿದೆ.
ನ್ಯಾಯದಾನಕ್ಕೆ ಅಡ್ಡಿಯಾಗುವ ಅಪಾಯ ಇರುವುದರಿಂದ ಈ ಎರಡು ವಿಚಾರಗಳಿಗೆ ಸಮಗ್ರವಾದ ಪರಿಹಾರ ಕಂಡುಕೊಳ್ಳಬೇಕಿದೆ ಎಂದು ನ್ಯಾಯಾಲಯ ಹೇಳಿದೆ. ಅದೇ ರೀತಿ, ಪ್ರಕರಣ ಮಹತ್ವದ್ದಾಗಿರುವುದರಿಂದ ಇದನ್ನು ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿಗಳಿಗೆ ವರ್ಗಾಯಿಸುವಂತೆ ನ್ಯಾಯಪೀಠ ಆದೇಶ ನೀಡಿದೆ.
ಇದೇ ವೇಳೆ, ಗುಜರಾತ್ ಪೊಲೀಸರು ನೀಡಿದ ಸಮನ್ಸ್ ಪ್ರಕರಣಕ್ಕೆ ಸಂಬಂಧಿಸಿದ ವಕೀಲರಿಗೆ ಮಧ್ಯಂತರ ಪರಿಹಾರ ನೀಡಿದ ನ್ಯಾಯಪೀಠ, ಹೈಕೋರ್ಟ್ ಆದೇಶ ಹಾಗೂ ಉಳಿದ ಎಲ್ಲ ನೋಟೀಸ್ಗಳಿಗೆ ತಡೆಯಾಜ್ಞೆ ನೀಡಿತು.