
ಪ್ರೀತಿಸಿ ಮದುವೆ ನಿರಾಕರಿಸುವುದು ಭಾರತೀಯ ದಂಡ ಸಂಹಿತೆ ಸೆಕ್ಷನ್ 420 ಅಡಿ ವಂಚನೆಯಲ್ಲ: ಕರ್ನಾಟಕ ಹೈಕೋರ್ಟ್
ಪ್ರೀತಿಸಿ ಮದುವೆ ನಿರಾಕರಿಸುವುದು ಭಾರತೀಯ ದಂಡ ಸಂಹಿತೆ ಸೆಕ್ಷನ್ 420 ಅಡಿ ವಂಚನೆಯಲ್ಲ: ಕರ್ನಾಟಕ ಹೈಕೋರ್ಟ್
ಮದುವೆಯಾಗುವ ಭರವಸೆ ನೀಡಿ ಪ್ರೀತಿಸಿ ಬಳಿಕ ಆ ಭರವಸೆಯನ್ನು ಈಡೇರಿಸದೆ ಮದುವೆ ನಿರಾಕರಿಸುವುದು ಭಾರತೀಯ ದಂಡ ಸಂಹಿತೆ ಸೆಕ್ಷನ್ 420 ಅಡಿ ವಂಚನೆಯಲ್ಲ ಎಂದು ಕರ್ನಾಟಕ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಕರ್ನಾಟಕ ಹೈಕೋರ್ಟ್ನ ನ್ಯಾಯಮೂರ್ತಿ ಕೆ. ನಟರಾಜನ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ತೀರ್ಪು ಪ್ರಕಟಿಸಿದೆ.
ಬೆಂಗಳೂರಿನ ಕೆ.ಆರ್. ಪುರ ನಿವಾಸಿ ವೆಂಕಟೇಶ್ ಅವರು ತಮ್ಮ ವಿರುದ್ಧ ಯುವತಿ ದಾಖಲಿಸಿದ್ದ ಎಫ್ಐಆರ್ ರದ್ದುಡಪಡಿಸುವಂತೆ ಕೊರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠ ಈ ಆದೇಶ ಹೊರಡಿಸಿದೆ.
ಅರ್ಜಿದಾರ ವ್ಯಕ್ತಿ ಯುವತಿಗೆ ಮದುವೆಯಾಗುವ ಭರವಸೆ ನೀಡಿ ಬಳಿಕ ಅದನ್ನು ಉಲ್ಲಂಘಿಸಿದ್ದಾರೆ. ಆದರೆ, ಮದುವೆಯಾಗುವ ಭರವಸೆ ನೀಡಿ ಅದನ್ನು ಈಡೇರಿಸದಿದ್ದರೆ ಅದು ವಂಚನೆ ಎನ್ನಲಾಗದು ಎಂದು ನ್ಯಾಯಪೀಠ ಹೇಳಿದೆ.
ಭಾರತೀಯ ದಂಡ ಸಂಹಿತೆಯ ಸೆಕ್ಷನ್ 415ರಲ್ಲಿ ವಂಚನೆಯ ಕುರಿತು ವ್ಯಾಖ್ಯಾನ ನೀಡಲಾಗಿದೆ. ಆ ವ್ಯಾಖ್ಯಾನದ ವ್ಯಾಪ್ತಿಗೆ ಮದುವೆ ಭರವಸೆ ಮುರಿಯುವುದನ್ನು ಸೇರಿಸಲಾಗದು. ಮೋಸ ಮಾಡುವ ಉದ್ದೇಶದಿಂದಲೇ ಒಪ್ಪಂದ ಮಾಡಿಕೊಂಡು ಬಳಿಕ ಅದನ್ನು ಉಲ್ಲಂಘಿಸಿದಾಗ ಮಾತ್ರ ಕ್ರಿಮಿನಲ್ ಪ್ರಕರಣ ದಾಖಲಿಸಬಹುದು ಎಂದು ಅದು ಅಭಿಪ್ರಾಯಪಟ್ಟಿದೆ.
ಸದ್ರಿ ಪ್ರಕರಣದಲ್ಲಿ, ಅರ್ಜಿದಾರ ವ್ಯಕ್ತಿ ಮೋಸ ಮಾಡುವ ಉದ್ದೇಶದಿಂದಲೇ ಹೀಗೆ ಮಾಡಿದ್ದಾನೆ ಎಂಬುದನ್ನು ಯುವತಿ ತೋರಿಸಿಲ್ಲ. ಹಾಗಾಗಿ, ಎಫ್ಐಆರ್ನ್ನು ರದ್ದುಪಡಿಸಲಾಗಿದೆ ಎಂದು ಹೈಕೋರ್ಟ್ ನ್ಯಾಯಪೀಠ ತನ್ನ ತೀರ್ಪಿನಲ್ಲಿ ದಾಖಲಿಸಿದೆ.
ಪ್ರಕರಣದ ವಿವರ:
2020ರ ಮೇ 5ರಂದು ಬೆಂಗಳೂರಿನ ರಾಮಮೂರ್ತಿ ನಗರದ ಯುವತಿ ಕೆ.ಆರ್. ಪುರಂ ನಿವಾಸಿಗಳಾದ ವೆಂಕಟೇಶ್ ಹಾಗೂ ಅವರ ಕುಟುಂಬ ಸದಸ್ಯರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರು. ವೆಂಕಟೇಶ್ ಮತ್ತು ತಾನು ಕಳೆದ ಎಂಟು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದು, ಆತ ಮದುವೆಯಾಗುವ ಭರವಸೆ ನೀಡಿದ್ದ. ಇದೀಗ ನನ್ನನ್ನು ವಂಚಿಸಿ ಬೇರೊಬ್ಬರನ್ನು ಮದುವೆಯಾಗಿದ್ಧಾನೆ. ಇದರಲ್ಲಿ ಅವರ ಕುಟುಂಬ ಸದಸ್ಯರ ಪಾತ್ರವೂ ಇದೆ. ಹಾಗಾಗಿ, ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಹೇಳಿದ್ದರು.
ಯುವತಿಯ ದೂರಿನ ಮೇರೆಗೆ ರಾಮಮೂರ್ತಿ ನಗರ ಠಾಣೆ ಪೊಲೀಸರು ವೆಂಕಟೇಶ್ ಮತ್ತು ಅವರ ಕುಟುಂಬದ ಸದಸ್ಯರ ವಿರುದ್ಧ ಸೆಕ್ಷನ್ 420, 506 ಹಾಗೂ 34ರ ಅಡಿಯಲ್ಲಿ ಎಫ್ಐಆರ್ ದಾಖಲಿಸಿದ್ದರು.
ಈ ಎಫ್ಐಆರ್ ರದ್ದು ಮಾಡಬೇಕು ಎಂದು ಕೋರಿ, ವೆಂಕಟೇಶ್ ಮತ್ತು ಇತರರು ಹೈಕೋರ್ಟ್ನಲ್ಲಿ ಕ್ರಿಮಿನಲ್ ಅರ್ಜಿಯನ್ನು ಸಲ್ಲಿಸಿದ್ದರು.
ವೆಂಕಟೇಶ್ Vs ಕರ್ನಾಟಕ ರಾಜ್ಯ
ಕರ್ನಾಟಕ ಹೈಕೋರ್ಟ್: Crl.P. 5865/2021 Dated 13-01-2022