ನ್ಯಾಯವಾದಿಗಳ ಮೇಲೆ ಕತ್ತಿ ಝಳಪಿಸಿ ಹಲ್ಲೆ: ಇಬ್ಬರು ವಕೀಲರ ವಿರುದ್ಧ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿದ ಹೈಕೋರ್ಟ್
ನ್ಯಾಯವಾದಿಗಳ ಮೇಲೆ ಕತ್ತಿ ಝಳಪಿಸಿ ಹಲ್ಲೆ: ಇಬ್ಬರು ವಕೀಲರ ವಿರುದ್ಧ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿದ ಹೈಕೋರ್ಟ್
ನ್ಯಾಯಾಲಯದ ಆವರಣದೊಳಗೆ ಕತ್ತಿ ಝಳಪಿಸಿ ನ್ಯಾಯವಾದಿಗಳ ಮೇಲೆ ದಾಳಿ ನಡೆಸಿದ ಘಟನೆಗೆ ಸಂಬಂಧಿಸಿದಂತೆ ಆರೋಪಿ ವಕೀಲರಿಬ್ಬರ ವಿರುದ್ಧ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದೆ.
ಹೈಕೋರ್ಟ್ ವಕೀಲರ ಸಂಘದ ಮನವಿಯನ್ನು ಆಲಿಸಿದ ಮುಖ್ಯ ನ್ಯಾಯಮೂರ್ತಿ ಶೀಲ್ ನಾಗು ಮತ್ತು ನ್ಯಾಯಮೂರ್ತಿ ಸಂಜೀವ್ ಬೆರಿ ಅವರಿದ್ದ ವಿಭಾಗೀಯ ನ್ಯಾಯಪೀಠ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸುವಂತೆ ಆದೇಶ ನೀಡಿತು. ಈ ಘಟನೆಗೆ ಪ್ರತಿಕ್ರಿಯೆ ಸಲ್ಲಿಸುವಂತೆ ಚಂಡೀಗಢ ಪೊಲೀಸರಿಗೆ ಹೈಕೋರ್ಟ್ ಸೂಚನೆ ನೀಡಿದೆ.
ಇದೇ ವೇಳೆ, ಹೈಕೋರ್ಟ್ ವಕೀಲರ ಸಂಘ ತನ್ನ ಕಾರ್ಯದರ್ಶಿ ಮತ್ತು ವಕೀಲರ ಮೇಲೆ ದಾಳಿ ನಡೆಸಿದ್ದಾರೆ ಎನ್ನಲಾದ ಆರೋಪಿ ವಕೀಲರಾದ ರವನೀತ್ ಕೌರ್ ಮತ್ತು ಸಿಮ್ರನ್ ಜಿತ್ ಸಿಂಗ್ ಬ್ಲಸ್ಸಿ ಅವರಿಗೆ ನೀಡಲಾಗಿರುವ ಸನದನ್ನು ಅಮಾನತುಗೊಳಿಸಿದೆ.
ವಕೀಲರನ್ನು ಬೆದರಿಸಲು ಮತ್ತು ವಕೀಲರೊಬ್ಬರ ಮೇಲೆ ದಾಳಿ ನಡೆಸಲು ಕೌರು ಅವರು ಸೆಪ್ಟೆಂಬರ್ 17ರಂದು ಬ್ಲಸ್ಸಿ ಅವರನ್ನು ಪ್ರಚೋದಿಸಿದ್ದರು ಎಂದು ಸಂಘವು ದೂರು ನೀಡಿತ್ತು. ಇಬ್ಬರ ವಿರುದ್ಧ ಎಫ್ಐಆರ್ ದಾಖಲಿಸಿದ್ದರೂ ಬ್ಲಸ್ಸಿ ಅವರನ್ನು ಮಾತ್ರ ಬಂಧಿಸಲಾಗಿದೆ. ಆದರೆ, ಕೌರ್ ಅವರನ್ನೂ ಬಂಧಿಸಬೇಕು ಎಂದು ಸಂಘ ಕೋರಿಕೊಂಡಿತ್ತು.
ಕೌರ್ ಅವರು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿರುವ ಮಾನಹಾನಿಕರ ಹೇಳಿಕೆಯನ್ನು ತೆಗೆದುಹಾಕಿ ಅವರ ವಿರುದ್ಧ ಪ್ರತಿಬಂಧಕಾದೇಶ ನೀಡುವಂತೆ ಮನವಿ ಮಾಡಿತ್ತು.
ಚಂಡೀಗಢ ಕೇಂದ್ರಾಡಳಿತ ಪ್ರದೇಶ ಸರ್ಕಾರವನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಅಮಿತ್ ಝಂಜಿ ಮತ್ತು ಸಂಘದ ಅಧ್ಯಕ್ಷ ಸರ್ತೇಜ್ ಸಿಂಗ್ ನರೂಲಾ ಅವರ ವಾದ ಆಲಿಸಿದ ನ್ಯಾಯಾಲಯ, ಬ್ಲಸ್ಸಿ ಅವರ ದೂರು ಆಧರಿಸಿ ಯಾವುದೇ ಕ್ರಮ ಕೈಗೊಳ್ಳಬಾರದು ಮತ್ತು ಕೌರ್ ಅವರು ಪ್ರಕಟಿಸಿದ್ದ ಹೇಳಿಕೆಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ಆದೇಶ ನೀಡಿತು.