ಮರಣ ನೋಂದಣಿ ಹೊಸ ರೂಲ್ಸ್: ಪ್ರತಿ ಸಾವಿಗೂ ವೈದ್ಯಕೀಯ ಪ್ರಮಾಣಪತ್ರ ಕಡ್ಡಾಯ!
ಮರಣ ನೋಂದಣಿ ಹೊಸ ರೂಲ್ಸ್: ಪ್ರತಿ ಸಾವಿಗೂ ವೈದ್ಯಕೀಯ ಪ್ರಮಾಣಪತ್ರ ಕಡ್ಡಾಯ!
ರಾಜ್ಯದಲ್ಲಿ ಮರಣ ನೋಂದಣಿ ಮಾಡಲು ಹೊಸ ನಿಯಮವನ್ನು ಜಾರಿಗೊಳಿಸಲಾಗಿದೆ. ಇನ್ನು ಮುಂದೆ ಪ್ರತಿ ಸಾವಿಗೂ ವೈದ್ಯಕೀಯ ಪ್ರಮಾಣಪತ್ರ ಕಡ್ಡಾಯ! ರಾಜ್ಯದಲ್ಲಿ ಪ್ರತಿ ಸಾವಿಗೂ ನಿಖರ ಕಾರಣ ತಿಳಿದುಕೊಳ್ಳುವ ಉದ್ದೇಶದಿಂದ ಆರೋಗ್ಯ ಇಲಾಖೆ, ಮರಣ ಕಾರಣದ ವೈದ್ಯಕೀಯ ಪ್ರಮಾಣೀಕರಣ (ಎಂಸಿಸಿಡಿ) ಇಲಾಖೆ ಅನುಷ್ಠಾನಕ್ಕೆ ಮುಂದಾಗಿದೆ.
ರಾಜ್ಯದಲ್ಲಿ ನೋಂದಾಯಿತವಾಗುವ ಸಾವುಗಳಲ್ಲಿ ಶೇ 26.7ರಷ್ಟು ಸಾವುಗಳಿಗೆ ಮಾತ್ರ ವೈದ್ಯಕೀಯವಾಗಿ ಪ್ರಮಾಣಪತ್ರ ಲಭ್ಯ ಇವೆ. ಈ ಹಿನ್ನಲೆಯಲ್ಲಿ ಪ್ರತಿ ಸಾವಿನ ನಿಖರ ಕಾರಣ ತಿಳಿದುಕೊಳ್ಳುವ ಉದ್ದೇಶದಿಂದ ವೈದ್ಯಕೀಯ ಸಂಸ್ಥೆಗಳಲ್ಲಿನ ಸಾವುಗಳನ್ನು ಹೊರತು ಪಡಿಸಿ ಬೇರೆ ಯಾವುದೇ ಸ್ಥಳದಲ್ಲಿ ವ್ಯಕ್ತಿ ಮರಣ ಹೊಂದಿದರೂ ವೈದ್ಯಕೀಯ ಪ್ರಮಾಣಪತ್ರ ಸಲ್ಲಿಸಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿಯು ಆದೇಶ ಹೊರಡಿಸಿದ್ದಾರೆ.
ಮರಣ ಹೊಂದಿದ ವ್ಯಕ್ತಿಯನ್ನು ವೈದ್ಯರು ಪರೀಕ್ಷಿಸಿ, ನಮೂನೆ '4 ಎ' ನಲ್ಲಿ ಮರಣಕ್ಕೆ ಕಾರಣವೇನು ಎಂಬ ಕುರಿತಾದ ಪ್ರಮಾಣಪತ್ರವನ್ನು ಸಂಬಂಧಪಟ್ಟವರಿಗೆ ಉಚಿತವಾಗಿ ನೀಡಬೇಕೆಂದು ಆದೇಶದಲ್ಲಿ ತಿಳಿಸಲಾಗಿದೆ.
ಸಾವು ಸಂಭವಿಸಿದ 21 ದಿನದಲ್ಲಿ ಸಂಬಂಧಪಟ್ಟವರು ಮರಣ ನೋಂದಣಿ ಮಾಡುವುದು ಕಡ್ಡಾಯವಾಗಿದೆ. ಎಂಸಿಸಿಡಿ ನಮೂನೆಗಳನ್ನು ನೀಡಲು ನಿರ್ಲಕ್ಷಿಸುವ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದೆ.
ಸಾರ್ವಜನಿಕ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಸಾವು ಸಂಭವಿಸಿದ್ದಲ್ಲಿ ನಮೂನೆ-4ರಲ್ಲಿ ವೈದ್ಯಕೀಯ ಮರಣ ಕಾರಣದ ಕುರಿತಾದ ಪ್ರಮಾಣ ಪತ್ರವನ್ನು 'ಇ-ಜನ್ಮ' ಅನ್ಲೈನ್ನಲ್ಲಿ ಸಲ್ಲಿಸಬೇಕಾಗುತ್ತದೆ. ನಿರ್ದಿಷ್ಟ ತಿಂಗಳಲ್ಲಿ ಯಾವುದೇ ಸಾವುಗಳು ಸಂಭವಿಸದ ಸಂದರ್ಭಗಳಲ್ಲಿ 'ಶೂನ್ಯ' ವರದಿಯನ್ನು ಸಲ್ಲಿಸಬೇಕು. ಪ್ರತಿ ತಿಂಗಳ 10ರೊಳಗೆ ವರದಿ ನೀಡಬೇಕು ಎಂದು ಸೂಚಿಸಲಾಗಿದೆ.
ಈ ವ್ಯವಸ್ಥೆಯ ಅನುಷ್ಠಾನಕ್ಕೆ ಜಿಲ್ಲಾ ಆರೋಗ್ಯ ಅಧಿಕಾರಿ ನೇತೃತ್ವದಲ್ಲಿ ಜಿಲ್ಲಾ ಪರಿಶೀಲನಾ ಸಮಿತಿಯನ್ನು ರಚಿಸಲಾಗುತ್ತದೆ. ಈ ಸಮಿತಿಯು ಮೇಲ್ವಿಚಾರಣೆ, ಅನುಸರಣೆಯನ್ನು ಖಚಿತಪಡಿಸಿ ಕೊಳ್ಳಲು ಮತ್ತು ಸಲ್ಲಿಸಿದ ನಮೂನೆಗಳ ಮಾದರಿಯನ್ನು ಪರಿಶೀಲಿಸಲಿದೆ.