ಅಕ್ರಮ ಕ್ಲಿನಿಕ್ ತೆರೆದು ಜನರಿಗೆ ವಂಚನೆ: ವೈದ್ಯನ ವಿರುದ್ಧದ ಪ್ರಕರಣ ರದ್ದುಪಡಿಸಲು ಕರ್ನಾಟಕ ಹೈಕೋರ್ಟ್ ನಿರಾಕರಣೆ
ಅಕ್ರಮ ಕ್ಲಿನಿಕ್ ತೆರೆದು ಜನರಿಗೆ ವಂಚನೆ: ವೈದ್ಯನ ವಿರುದ್ಧದ ಪ್ರಕರಣ ರದ್ದುಪಡಿಸಲು ಕರ್ನಾಟಕ ಹೈಕೋರ್ಟ್ ನಿರಾಕರಣೆ
ಕಾನೂನುಬಾಹಿರವಾಗಿ ಕ್ಲಿನಿಕ್ ನಡೆಸುತ್ತಾ ಜನರನ್ನು ವಂಚಿಸಿದ ಆರೋಪದ ಮೇಲೆ ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಜಯನಗರದ ನಯನಾ ಕ್ಲಿನಿಕ್ನ ಡಾ.ಎಂ.ಕೆ. ಮಂಡಲ್ (ಮಿಲನ್ ಮಂಡಲ್) ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಪ್ರಕರಣ ರದ್ದುಪಡಿಸಲು ಹೈಕೋರ್ಟ್ ನಿರಾಕರಿಸಿದೆ.
ಕರ್ನಾಟಕ ಹೈಕೋರ್ಟ್ನ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ತೀರ್ಪು ನಿಡಿದೆ.
ಅಕ್ರಮ ಕ್ಲಿನಿಕ್ ಮೂಲಕ ಜನರಿಗೆ ವಂಚನೆ
ಹಿರಿಯೂರು ಪೊಲೀಸ್ ಠಾಣೆಯಲ್ಲಿ ತಮ್ಮ ವಿರುದ್ಧ ದಾಖಲಾಗಿರುವ ಎಫ್ಐಆರ್ ಅನ್ನು ರದ್ದುಪಡಿಸಬೇಕು ಎಂದು ಕೋರಿ ಡಾ. ಎಂ.ಕೆ. ಮಂಡಲ್ ಆಲಿಯಾಸ್ ಮಿಲನ್ ಮಂಡಲ್ ಅರ್ಜಿ ಸಲ್ಲಿಸಿದ್ದರು.
ಕಳೆದ ವಿಚಾರಣೆ ವೇಳೆ ನ್ಯಾಯಪೀಠ, ''ಅನುಭವಿ ಮತ್ತು ವಂಶಪಾರಂಪರಿಕ ವೈದ್ಯರ ಸಂಘದಿಂದ ತಾವು ಸರ್ಟಿಫಿಕೇಟ್ ಪಡೆದಿರುವುದಾಗಿ ಅರ್ಜಿದಾರರು ಅರ್ಜಿಯಲ್ಲಿ 'ಉಲ್ಲೇಖಿಸಿದ್ದಾರೆ. ಹಾಗಾದರೆ, ಅರ್ಜಿದಾರರಿಗೆ ವೈದ್ಯಕೀಯ ಪದವಿ ನೀಡಿದ್ದು ಯಾರು, ಯಾರು ಬೇಕಾದರೂ ವೈದ್ಯರೆಂದು ಕರೆದುಕೊಳ್ಳಬಹುದೇ? ಅರ್ಹತೆ ಇಲ್ಲದೆ ಸಾರ್ವಜನಿಕರಿಗೆ ಪಿಸ್ತುಲಾ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಇದು ವಂಚನೆಯಲ್ಲದೇ ಇನ್ನೇನು?'' ಎಂದು ಅರ್ಜಿದಾರರನ್ನು ನ್ಯಾಯಪೀಠ ತೀಕ್ಷ್ಣವಾಗಿ ಪ್ರಶ್ನಿಸಿತ್ತು.
ಪ್ರಕರಣದ ವಿವರ
ಹಿರಿಯೂರು ಪಟ್ಟಣದ ವೀರೇಶ್ ಎಂಬುವವರು ಹಿರಿಯೂರು ಸರಕಾರಿ ಆಸ್ಪತ್ರೆಯ ತಾಲೂಕು ವೈದ್ಯಾಧಿಕಾರಿ ಜಿ. ವೆಂಕಟೇಶ್ಗೆ ದೂರು ನೀಡಿದ್ದರು.
ವೈದ್ಯ ಡಾ. ಮಂಡಲ್, ಹುಳಿಯಾರು ರಸ್ತೆಯ ಎಸ್ಬಿಐ ಬ್ಯಾಂಕ್ ಪಕ್ಕದಲ್ಲಿರುವ ನಯನಾ ಕ್ಲಿನಿಕ್ ನಡೆಸುತ್ತಿದ್ದಾರೆ. ಅವರು ಯಾವುದೇ ವಿಶ್ವವಿದ್ಯಾಲಯದಿಂದ ವೈದ್ಯಕೀಯ ಪದವಿ ಪಡೆಯದೆ ಕೆಪಿಎಂಇ ಪ್ರಾಧಿಕಾರದಿಂದ ನೋಂದಣಿಯಾಗದೆ, ವೈದ್ಯಕೀಯ ನಿಪುಣತೆಯಿಲ್ಲದೆ ಹಾಗೂ ಆರೋಗ್ಯ ಇಲಾಖೆಯಿಂದ ಪರವಾನಗಿ ಪಡೆಯದೆ ಸಾರ್ವಜನಿಕರಿಗೆ ವೈದ್ಯಕೀಯ ಚಿಕಿತ್ಸೆ ನೀಡುತ್ತಿದ್ದಾರೆ ಎಂದು ಅವರು ದೂರಿನಲ್ಲಿ ಆರೋಪಿಸಿದ್ದರು.
ನಮ್ಮ ತಂದೆ ಪಾಂಡುರಂಗಪ್ಪ ಶನಿದೇವರಹಟ್ಟಿ ಅವರಿಗೆ ಡಾ.ಮಂಡಲ್ 2021ರ ಜ.21ರಂದು ಪಿಸ್ತುಲಾ ಕಾಯಿಲೆಗೆ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಆದರೆ, ರೋಗಿಯ ಆಂತರಿಕ ಸ್ಟಿಂಕ್ಟರ್ ಹಾಳಾಗಿದೆ,'' ಎಂದು ಆರೋಪಿಸಿದ್ದರು. ಈ ದೂರು ಆಧರಿಸಿ ಜಿ.ವೆಂಕಟೇಶ್ 2025ರ ನ.25 ರಂದು ಹಿರಿಯೂರು ಟೌನ್ ಠಾಣೆಗೆ ದೂರು ನೀಡಿದ್ದರು.