ಜವಾಬ್ದಾರಿ ಮರೆತ ತಂದೆಗೆ ಮಗನ ಭೇಟಿ ಹಕ್ಕಿಲ್ಲ: ಪತ್ನಿಗೆ ಮಾಸಿಕ 30 ಸಾವಿರ ರೂ. ಜೀವನಾಂಶ ನೀಡಲು ಕರ್ನಾಟಕ ಹೈಕೋರ್ಟ್ ನಿರ್ದೇಶ
ಜವಾಬ್ದಾರಿ ಮರೆತ ತಂದೆಗೆ ಮಗನ ಭೇಟಿ ಹಕ್ಕಿಲ್ಲ: ಪತ್ನಿಗೆ ಮಾಸಿಕ 30 ಸಾವಿರ ರೂ. ಜೀವನಾಂಶ ನೀಡಲು ಕರ್ನಾಟಕ ಹೈಕೋರ್ಟ್ ನಿರ್ದೇಶ
ಜವಾಬ್ದಾರಿ ಮರೆತ ತಂದೆಗೆ ಮಗನ ಭೇಟಿ ಹಕ್ಕಿಲ್ಲ. ಪತ್ನಿಗೆ ಜೀವನಾಂಶ ನೀಡುವಂತೆ ನಿರ್ದೇಶಿಸಿದ ಕೋರ್ಟ್ ಆದೇಶವನ್ನು ಪಾಲಿಸದ ಪತಿಗೆ ಕರ್ನಾಟಕ ಹೈಕೋರ್ಟ್ ತರಾಟೆ ತೆಗೆದುಕೊಂಡಿದ್ದು, ಮಾಸಿಕ 30 ಸಾವಿರ ರೂ. ಕೊಡುವಂತೆ ಆದೇಶ ಹೊರಡಿಸಿದೆ.
ಕರ್ನಾಟಕ ಹೈಕೋರ್ಟ್ನ ನ್ಯಾಯಮೂರ್ತಿ ಡಾ. ಚಿಲ್ಲಾಕೂರು ಸುಮಲತಾ ಅವರಿದ್ದ ನ್ಯಾಯಪೀಠ ಈ ಆದೇಶ ಹೊರಡಿಸಿದೆ.
ಪತ್ನಿ ಮತ್ತು ಮಗುವಿಗೆ ಮಾಸಿಕ 30,000 ರೂ. ಜೀವನಾಂಶ ನೀಡುವಂತೆ ಕುಟುಂಬ ನ್ಯಾಯಾಲಯ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಅರ್ಜಿದಾರ ಪತಿ ಸೈಯದ್ ಕಮ್ರಾನ್ ಹೈಕೋರ್ಟ್ ಮೊರೆ ಹೋಗಿದ್ದರು. ಈ ಅರ್ಜಿಯನ್ನು ವಜಾಗೊಳಿಸಿದ ನ್ಯಾಯಪೀಠ, ಪತಿಗೆ ತರಾಟೆಗೆ ತೆಗೆದುಕೊಂಡಿತು.
ತನಗಾಗಿ ಐಷಾರಾಮಿ ಕಾರು ಖರೀದಿಸಲು ಬ್ಯಾಂಕಿನಿಂದ ಸಾಲ ಪಡೆದು ಮಾಸಿಕ 53,000 ರೂ. ಕಂತು ಪಾವತಿಸುತ್ತಿರುವ ತಂದೆ, ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಮಗುವಿನ ರಕ್ಷಣೆ ಮತ್ತು ಪತ್ನಿಯ ಜೀವನಕ್ಕಾಗಿ 30,000 ರೂ. ನೀಡಲು ಸಾಧ್ಯವಿಲ್ಲ ಎನ್ನುವುದು ಒಪ್ಪಲಾಗದು ಎಂದು ಕೋರ್ಟ್ ಹೇಳಿದೆ.
ವಾರ್ಷಿಕ 28 ಲಕ್ಷ ರೂ. ಆದಾಯ ಇರುವ ಅರ್ಜಿದಾರರಿಗೆ ಕುಟುಂಬದ ರಕ್ಷಣೆಯು ತಂದೆಯ ಪ್ರಥಮ ಕರ್ತವ್ಯ ಎಂದು ಬುದ್ದಿಮಾತು ಹೇಳಿದ ನ್ಯಾಯಪೀಠ, ಆಟಿಸಂ ಪೀಡಿತ ಮಗು ಮತ್ತು ಪತ್ನಿಯ ನಿರ್ವಹಣೆಗೆ 30,000 ರೂ. ನೀಡುವಂತೆ ಖಡಕ್ ನಿರ್ದೇಶನ ನೀಡಿತು.
ಸ್ವಯಂ ಇಚ್ಚೆಯಿಂದ ತಮ್ಮನ್ನು ತೊರೆದು ಪತ್ನಿ ಮಗುವಿನ ಜೊತೆಗೆ ಮನೆ ಬಿಟ್ಟು ಹೋಗಿದ್ದಾರೆ. ಆದರೂ ಪತಿ ಸ್ವಯಂಪ್ರೇರಿತರಾಗಿ 5,000 ರೂ. ನೀಡುತ್ತಿದ್ದೇನೆ, ಪತ್ನಿ ಸುಶಿಕ್ಷಿತರಾಗಿದ್ದು ದುಡಿಯುವ ಸಾಮರ್ಥ್ಯ ಹೊಂದಿದ್ದಾರೆ. ವ್ಯಾಪಾರದಲ್ಲಿ ನಷ್ಟವಾಗಿರುವುದರಿಂದ ಇಷ್ಟು ದೊಡ್ಡ ಮೊತ್ತ ನೀಡಲು ಸಾಧ್ಯವಿಲ್ಲ" ಎಂದು ಪತಿ ಹೈಕೋರ್ಟ್ನಲ್ಲಿ ವಾದ ಮಾಡಿದ್ದರು.
ಅದಕ್ಕೆ ಪ್ರತಿವಾದ ಮಂಡಿಸಿದ ಪತ್ನಿ, ಅರ್ಜಿದಾರರು ಕಂಪನಿಯೊಂದರ ನಿರ್ದೇಶಕರಾಗಿದ್ದು ಕೈತುಂಬಾ ಆದಾಯ ಗಳಿಸುತ್ತಿದ್ದಾರೆ (ತೆರಿಗೆ ದಾಖಲೆಗಳ ಪ್ರಕಾರ ಮಾಸಿಕ 2 ಲಕ್ಷಕ್ಕೂ ಹೆಚ್ಚು). 7 ವರ್ಷದ ಮಗು ಆಟಿಸಂ ಸ್ಪೆಕ್ಟಮ್ ಡಿಸಾರ್ಡರ್ನಿಂದ ಬಳಲುತ್ತಿದ್ದು, ಚಿಕಿತ್ಸೆಗೆ ಭಾರಿ ವೆಚ್ಚವಾಗುತ್ತಿದೆ. ಪತ್ನಿಗೆ ಯಾವುದೇ ಆದಾಯದ ಮೂಲವಿಲ್ಲದ ಕಾರಣ ಕುಟುಂಬ ನ್ಯಾಯಾಲಯದ ಆದೇಶ ಸರಿಯಾಗಿದೆ ಎಂದು ಹೇಳಿದ್ದರು.
ನ್ಯಾಯಾಲಯವು ದಾಖಲೆಗಳನ್ನು ಪರಿಶೀಲಿಸಿದಾಗ, ಪತಿಯ ವಾರ್ಷಿಕ ಆದಾಯ ಕಳೆದ ವರ್ಷಗಳಲ್ಲಿ 14 ಲಕ್ಷದಿಂದ 28 ಲಕ್ಷ ರೂ.ವರೆಗೆ ಇರುವುದು ಕಂಡುಬಂದಿದೆ. ಇದರ ಆಧಾರದ ಮೇಲೆ ಆತ ತಿಂಗಳಿಗೆ ಕನಿಷ್ಠ 2 ಲಕ್ಷ ರೂ. ಸಂಪಾದಿಸುತ್ತಿರುವುದು ಸ್ಪಷ್ಟವಾಗಿದೆ ಎಂದು ನ್ಯಾಯಪೀಠ ತಿಳಿಸಿದೆ.