![ನ್ಯಾಯಾಧೀಶರ ವೃತ್ತಿ ಕಠಿಣ! : ಜಡ್ಜ್ಗಳ ಸಂಕಷ್ಟ ತೆರೆದಿಟ್ಟ ಮುಖ್ಯ ನ್ಯಾಯಮೂರ್ತಿ ಎನ್. ವಿ. ರಮಣ! ನ್ಯಾಯಾಧೀಶರ ವೃತ್ತಿ ಕಠಿಣ! : ಜಡ್ಜ್ಗಳ ಸಂಕಷ್ಟ ತೆರೆದಿಟ್ಟ ಮುಖ್ಯ ನ್ಯಾಯಮೂರ್ತಿ ಎನ್. ವಿ. ರಮಣ!](https://blogger.googleusercontent.com/img/b/R29vZ2xl/AVvXsEhmB98938_s5AfRxIjnPGbDlG3JndzSNoszwI-ltF0tsm3xCbn0zHbh70lZSJLefF_iMgZ1c7JoDs0rZQGibO-JlltvF34unEskjrhoOLjZ7PHHOLaIDJ8ddlVUuA_bQOVmThPIK0rJZt4N0EuWnwDStLbclOH2vgtfBYztAFsMCaty1R9bPBVFhHkh7Q/w640-h426/N%20V%20Ramana.jpg)
ನ್ಯಾಯಾಧೀಶರ ವೃತ್ತಿ ಕಠಿಣ! : ಜಡ್ಜ್ಗಳ ಸಂಕಷ್ಟ ತೆರೆದಿಟ್ಟ ಮುಖ್ಯ ನ್ಯಾಯಮೂರ್ತಿ ಎನ್. ವಿ. ರಮಣ!
ನ್ಯಾಯಾಧೀಶರ ವೃತ್ತಿ ಕಠಿಣ- ಜಡ್ಜ್ಗಳ ಸಂಕಷ್ಟ ತೆರೆದಿಟ್ಟ ಮುಖ್ಯ ನ್ಯಾಯಮೂರ್ತಿ ಎನ್. ವಿ. ರಮಣ!
ವೃತ್ತಿಪರ ಜೀವನದಲ್ಲಿ ಕರ್ತವ್ಯನಿರತ ನ್ಯಾಯಾಧೀಶರು ಕಠಿಣವಾದ ತೊಂದರೆಗಳನ್ನು ಎದುರಿಸುತ್ತಾರೆ. ಆದರೆ, ಅವರು ಐಷಾರಾಮಿ ಜೀವನ ನಡೆಸುತ್ತಾರೆ ಎಂಬ ಭಾವನೆ ಸಮಾಜದಲ್ಲಿ ಜನರಿಗೆ ಇದೆ. ಇದು ಕೇವಲ ಮಿಥ್ಯೆ ಮಾತ್ರ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ಹೇಳಿದ್ದಾರೆ.
ರಾಂಚಿಯಲ್ಲಿ ನಡೆದ 'ಜಸ್ಟೀಸ್ ಎಸ್ ಬಿ ಸಿನ್ಹಾ ಸ್ಮಾರಕ ಉಪನ್ಯಾಸ' ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನ್ಯಾಯಾಧೀಶರು ಹಲವು ವರ್ಷಗಳಿಂದ ತಾವು ರೂಪಿಸಿಕೊಂಡ ಸಾಮಾಜಿಕ ಸಂಬಂಧಗಳನ್ನು ತ್ಯಜಿಸಬೇಕಾಗುತ್ತದೆ ಎಂದು ಹೇಳಿದರು.
"ನ್ಯಾಯಾಧೀಶರಾದ ನಾವು ಕಾಗದ ಪತ್ರ ಓದಲು, ನಾಳೆ ನಡೆಯಲಿರುವ ಪ್ರಕರಣಗಳ ಬಗ್ಗೆ ಟಿಪ್ಪಣಿ ಬರೆದುಕೊಳ್ಳಲು ತಯಾರಿ ನಡೆಸುತ್ತೇವೆ. ಇದು ಹಲವು ಗಂಟೆಗಳ ಕಾಲ ನಡೆಯುತ್ತದೆ. ಇವತ್ತಿನ ಕೋರ್ಟ್ ಕಲಾಪ ಮುಗಿದ ಕೂಡಲೇ ನಾಳೆಯ ತಯಾರಿ ಶುರುವಾಗತ್ತದೆ. ಬಹುತೇಕ ದಿನ ಈ ತಯಾರಿ ಮಧ್ಯ ರಾತ್ರಿ ತನಕವೂ ನಡೆಯುತ್ತದೆ. ಅಷ್ಟೇ ಅಲ್ಲ, ರಜೆ ದಿನ, ವೀಕೆಂಡ್ನಲ್ಲೂ ನಾವು ಕೆಲಸ ಮಾಡಬೇಕಾಗುತ್ತದೆ" ಎಂದು ಅವರು ನ್ಯಾಯಾಧೀಶರ ಸಂಕಷ್ಟಗಳನ್ನು ತೆರೆದಿಟ್ಟರು.
ನಮ್ಮ ಬಹುತೇಕ ರಜೆಗಳನ್ನು ಅಧ್ಯಯನ, ಸಂಶೋಧನೆ ಮತ್ತು ತೀರ್ಪು ಬರೆಯುವುದಕ್ಕೆ ಮೀಸಲಿಡುತ್ತೇವೆ. ಹೀಗೆ ಮಾಡುವಾಗ ನಮ್ಮ ವೈಯಕ್ತಿಕ ಜೀವನದ ಹಲವು ಸುಂದರ ಕ್ಷಣಗಳನ್ನು ನಾವು ಕಳೆದುಕೊಳ್ಳುತ್ತೇವೆ... ನಮ್ಮ ಆಪ್ತ ಕುಟುಂಬದ ಕಾರ್ಯಕ್ರಮವನ್ನೂ ನಾವು ಸ್ಕಿಪ್ ಮಾಡುತ್ತೇವೆ. ನಮ್ಮ ಆಪ್ತರು, ಸಂಬಂಧಿಕರು ಅಷ್ಟೇ ಏಕೆ ನಮ್ಮ ಮೊಮ್ಮಕ್ಕಳನ್ನೂ ನೋಡಲು ಸಮಯ ಇಲ್ಲದಾಗುತ್ತದೆ ಎಂದು ಅವರು ತಮ್ಮ ವೈಯಕ್ತಿಕ ಜೀವನದ ಕೆಲ ವಿಷಾದಕರ ಘಟನೆಗಳನ್ನು ಹಂಚಿಕೊಂಡರು.