-->
ನ್ಯಾಯದೇವತೆಯ ರಥ ಎಳೆದ ದಕ್ಷಿಣ ಕನ್ನಡ ಜಿಲ್ಲೆಯ ಮಹನೀಯರ ಪರಿಚಯ ಮಾಲಿಕೆ: ಸರ್ ಬೆನಗಲ್ ನರಸಿಂಗ ರಾವ್

ನ್ಯಾಯದೇವತೆಯ ರಥ ಎಳೆದ ದಕ್ಷಿಣ ಕನ್ನಡ ಜಿಲ್ಲೆಯ ಮಹನೀಯರ ಪರಿಚಯ ಮಾಲಿಕೆ: ಸರ್ ಬೆನಗಲ್ ನರಸಿಂಗ ರಾವ್

ನ್ಯಾಯದೇವತೆಯ ರಥ ಎಳೆದ ದಕ್ಷಿಣ ಕನ್ನಡ ಜಿಲ್ಲೆಯ ಮಹನೀಯ ಪರಿಚಯ ಮಾಲಿಕೆ: ಸರ್ ಬೆನಗಲ್ ನರಸಿಂಗ ರಾವ್





ಸರ್ ಬಿ. ಎನ್. ರಾವ್ (ಸರ್ ಬೆನಗಲ್ ನರಸಿಂಗ ರಾವ್)


Judge - International Court of Justice -Hague ( Netherlands)


Chief justice - High Court of Calcutta


ಸರ್ ಬೆನಗಲ್ ನರಸಿಂಗ ರಾವ್.. ಅವರು ಭಾರತದ ನ್ಯಾಯ ಮತ್ತು ಆಡಳಿತ ವ್ಯವಸ್ಥೆಗೆ ನೀಡಿದ ಕೊಡುಗೆ ಅನುಪಮವಾದುದು. ಭಾರತದ ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ಜೀವನ ಪೂರ್ತಿ ತಮ್ಮನ್ನು ತೊಡಗಿಸಿಕೊಂಡ ಸರ್ ಬಿ. ಎನ್. ರಾವ್ ಭಾರತ ದೇಶದ ಅನರ್ಘ್ಯ ರತ್ನಗಳಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿದ್ದಾರೆ.


ಬೆನಗಲ್- ಇದು ಕಾಕ೯ಳ ಮತ್ತು ಮಂಗಳೂರುಗಳ ಮಧ್ಯೆ ಇರುವ ಪುಟ್ಟದೊಂದು ಹಳ್ಳಿ. ಈ ಹಳ್ಳಿಯ ಕುಲೀನ ಸ್ಮಾರ್ತ ಗೌಡ ಸಾರಸ್ವತ ಬ್ರಾಹ್ಮಣ ಮನೆತನದಲ್ಲಿ (ಚಿತ್ರಾಪುರ ಸಾರಸ್ವತ ಬ್ರಾಹ್ಮಣ) ದಿನಾಂಕ 1887ರ ಫೆಬ್ರವರಿ 26 ರಂದು ಇವರ ಜನನವಾಯಿತು.


ನರಸಿಂಗರಾಯರ ತಂದೆ ರಾಘವೇಂದ್ರ ರಾಯರು. ಸುತ್ತಮುತ್ತಲಿನ ಹಳ್ಳಿಗೆಲ್ಲ ಪ್ರಸಿದ್ಧ ವೈದ್ಯರು. ನರಸಿಂಗರಾಯರು ಮಂಗಳೂರಿನ ಕೆನರಾ ಶಾಲೆಯಲ್ಲಿ ಕಲಿಯುತ್ತಿದ್ದವರು 1901ರಲ್ಲಿ ನಡೆದ ಮೆಟ್ರಿಕ್ಯುಲೇಶನ್ ಪರೀಕ್ಷೆಯಲ್ಲಿ ಇಡೀ ಮದ್ರಾಸ್ ಪ್ರಾಂತ್ಯಕ್ಕೇ ಮೊದಲ ಸ್ಥಾನ ಪಡೆದು ಬಿಟ್ಟರು. ಅಲ್ಲಿಂದ ಮದ್ರಾಸಿಗೆ ಹೋಗಿ ಪ್ರತಿಷ್ಠಿತ ಪ್ರೆಸಿಡೆನ್ಸಿ ಕಾಲೇಜು ಸೇರಿದ್ದಾಯಿತು. ಅಲ್ಲಿ ಇಂಗ್ಲೀಷ್, ಸಂಸ್ಕೃತ ಮತ್ತು ಗಣಿತ ವಿಷಯಗಳನ್ನು ಅಭ್ಯಾಸ ಮಾಡಿ ಎಫ್ಎ ಪರೀಕ್ಷೆಯಲ್ಲಿ ಮತ್ತೆ ಇಡೀ ಪ್ರಾಂತ್ಯಕ್ಕೆ ಪ್ರಥಮ ಸ್ಥಾನ ಪಡೆದದ್ದೂ ಆಯಿತು.


ವಿದ್ಯಾರ್ಥಿ ವೇತನ ಸಿಕ್ಕಿದ್ದರಿಂದ ನರಸಿಂಗ ರಾಯರು ಇಂಗ್ಲೆಂಡಿಗೆ ಹೋದರು. ಅಲ್ಲಿ ಪ್ರತಿಶ್ಠಿತ ಟ್ರಿನಿಟಿ ಕಾಲೇಜಿನಲ್ಲಿ ಮೂರು ವರ್ಷ ಪದವಿ ವ್ಯಾಸಂಗ ಮಾಡಿ 1909 ರಲ್ಲಿ ಟ್ರೈಪೋಸ್ ಪಾಸು ಮಾಡಿದರು. ಅದೇ ವರ್ಷ ಭಾರತೀಯ ನಾಗರಿಕ ಸೇವಾ ಪರೀಕ್ಷೆಗಳನ್ನು ಬರೆದು ಅದನ್ನೂ ಪಾಸು ಮಾಡಿಕೊಂಡು ಆಗಿನ ಬ್ರಿಟಿಷ್ ಭಾರತದ ರಾಜಧಾನಿ ಕಲ್ಕತ್ತಕ್ಕೆ ನ್ಯಾಯಾಧೀಶನಾಗಿ ಆಯ್ಕೆಯಾಗಿ ಬಂದ ನರಸಿಂಗರಾಯರು ಆ ಕಾಲದಲ್ಲಿ ಮಾಡಿದ ಬಹು ದೊಡ್ಡ ಕೆಲಸವೆಂದರೆ ಭಾರತದ ಕಾನೂನು ಸಂಹಿತೆಯನ್ನು ಹೊಸದಾಗಿ ಬರೆದದ್ದು.


ಭಾರತದ ವ್ಯವಸ್ಥೆಗೆ ಸರಿಯಾಗಿ ಕಾನೂನನ್ನು ಅಳವಡಿಸಿ ಬರೆದಂತಹ ಸಿವಿಲ್ ಪ್ರೊಸೀಜರ್ ಕೋಡ್; ಕ್ರಿಮಿನಲ್ ಪ್ರೊಸೀಜರ್ ಕೋಡ್; ಭಾರತೀಯ ಸಾಕ್ಷ್ಯ ಅಧಿನಿಯಮ; ಭಾರತೀಯ ದಂಡ ಸಂಹಿತೆ ಮುಂತಾದವುಗಳನ್ನು ಇಂದು ಕೂಡ ನ್ಯಾಯ ತೀಮಾ೯ನದಲ್ಲಿ ಭಾರತದ ನ್ಯಾಯಾಲಯಗಳಲ್ಲಿ ಬಳಸುತ್ತಿದ್ದಾರೆ.


ಬ್ರಿಟಿಷ್ ಸರಕಾರ ವಹಿಸಿದ್ದ ಈ ಕೆಲಸವನ್ನು ದಾಖಲೆಯ ಎರಡು ವರ್ಷದಲ್ಲಿ ಮುಗಿಸಿದ್ದಕ್ಕಾಗಿ ರಾಯರಿಗೆ ನೈಟ್-ಹುಡ್ ಬಿರುದು ಕೊಡಲಾಯಿತು. ಹೆಸರಿನ ಹಿಂದೆ 'ಸರ್' ಎಂಬ ಉಪಾಧಿ ಸೇರಿ ಕೊಂಡಿತು.


ನಂತರ ಬ್ರಿಟಿಷ್ ಸರಕಾರವು ರಾಯರನ್ನು ಸಿಂಧ್ ಪ್ರಾಂತ್ಯಕ್ಕೆ ಕರೆಸಿಕೊಂಡಿತು. ಆ ಪ್ರಾಂತ್ಯದ ನಗರ ಮತ್ತು ಹಳ್ಳಿಗಳಿಗೆ ನದಿ ನೀರನ್ನು ಯಾವ ರೀತಿಯಲ್ಲಿ ಹಂಚಿಕೆ ಮಾಡಬೇಕು ಎಂಬ ಬಗ್ಗೆ ಅಧ್ಯಯನ ಮಾಡಿ ವರದಿ ನೀಡಬೇಕು ಎಂದು ಕೇಳಿಕೊಂಡಿತು. ನರಸಿಂಗರಾಯರು ಅದನ್ನೂ ಅತ್ಯಂತ ಶ್ರದ್ಧೆಯಿಂದ ಮಾಡಿ ವರದಿ ಒಪ್ಪಿಸಿದರು.


ಗಣಿತದಲ್ಲಿ ಅಪ್ರತಿಮ ಪಂಡಿತರಾಗಿದ್ದ ಅವರು ಸುಮಾರು ಇಪ್ಪತ್ತು- ಮೂವತ್ತು ವರ್ಷಗಳ ಎಲ್ಲಾ ಅಂಕಿ-ಅಂಶಗಳನ್ನು ಒಟ್ಟು ಹಾಕಿ ಆಳವಾದ ಅಧ್ಯಯನ ಮಾಡಿ ಬರೆದ ಆ ವರದಿಯ ಆಧಾರದಲ್ಲೇ ಇಂದಿಗೂ ಭಾರತ-ಪಾಕಿಸ್ತಾನಗಳ ನಡುವೆ ನೀರಿನ ಹಂಚಿಕೆ ನಡೆಯುತ್ತಿದೆ.


ಸಾಂಪ್ರದಾಯಿಕ ಎದುರಾಳಿ ಆಗಿರುವ, ಈ ದೇಶಗಳ ಮಧ್ಯೆ ಕಳೆದ 75 ವರ್ಷಗಳಲ್ಲಿ ನೀರಿನ ಹಂಚಿಕೆಯ ವಿಷಯದಲ್ಲಿ ಇದುವರೆಗೆ ಯಾವುದೇ ಸಮಸ್ಯೆ ಉದ್ಭವವಾಗಿಲ್ಲ... ಇದಕ್ಕೆ ಪ್ರಮುಖ ಕಾರಣ ಸರ್ ಬೆನಗಲ್ ನರಸಿಂಗ ರಾಯರ ದೂರದೃಷ್ಟಿ ಮಾತ್ರ.


ನದಿನೀರಿನ ವರದಿ ಕೊಟ್ಟ ಮೇಲೆ ಸರಕಾರ ಅವರನ್ನು ಮತ್ತೆ ಕಲ್ಕತ್ತಕ್ಕೆ ಕರೆಸಿ ಹೈಕೋರ್ಟ್ ಮುಖ್ಯ ನ್ಯಾಯಾಧೀಶರನ್ನಾಗಿ ನೇಮಿಸಿತು. 1944 ರಲ್ಲಿ ಅವರು ಆ ಹುದ್ದೆಯಿಂದ ನಿವೃತ್ತಿ ಹೊಂದಿದ ನಂತರ ಜಮ್ಮು ಮತ್ತು ಕಾಶ್ಮೀರದ ಪ್ರಧಾನ ಮಂತ್ರಿಯಾಗಿ ಆಯ್ಕೆಯಾದರು!


1946 ರಲ್ಲಿ, ಬ್ರಿಟಿಷ್ ಸರಕಾರ ಭಾರತಕ್ಕೆ ಅಧಿಕಾರ ಹಸ್ತಾಂತರಿಸುವುದು ಬಹುತೇಕ ಖಚಿತವಾದ ಮೇಲೆ ನರಸಿಂಗರಾಯರನ್ನು ಭಾರತದ ಸಂವಿಧಾನ ಸಮಿತಿಯ ಸಲಹೆಗಾರರನ್ನಾಗಿ ನೇಮಿಸಲಾಯಿತು. ಬ್ರಿಟಿಷ್ ಭಾರತದ ಸಂವಿಧಾನ Government of India Act 1935 ರಚನೆಯಲ್ಲಿ ರಾಯರು ವಹಿಸಿದ ಮಹತ್ವದ ಪಾತ್ರವನ್ನು ಪರಿಗಣಿಸಿದ ಸರಕಾರವು ರಾಯರೇ ಸಮರ್ಥ ವ್ಯಕ್ತಿ ಎಂಬ ನಿಷ್ಕರ್ಷೆಗೆ ಬಂದಿತ್ತು. ತನ್ನ ಇಡೀ ಜೀವನದ ಸೇವಾ ವಧಿಯಲ್ಲಿ ಸುಮಾರು 3 ದಶಕಗಳ ಕಾಲ ನ್ಯಾಯಾಂಗಕ್ಕೆ ಅನುಪಮ ಸೇವೆ ಸಲ್ಲಿಸಿದ ಬೆನಗಲ್ ರಾಯರಿಗಿಂತ ಸೂಕ್ತ ವ್ಯಕ್ತಿ ಬೇರೆ ಯಾರು ತಾನೆ ಇರಲು ಸಾಧ್ಯ?


ನರಸಿಂಗರಾಯರು ಸರಕಾರ ಕೇಳಿಕೊಂಡಂತೆ ಸಂವಿಧಾನದ ಕರಡು ಸಿದ್ಧಪಡಿಸಿದರು. ಇದರಲ್ಲಿ ಒಟ್ಟು 243 ವಿಧಿಗಳೂ 13 ಅನುಚ್ಛೇದಗಳೂ ಇದ್ದವು. ಇದನ್ನು ಮುಂದಿಟ್ಟುಕೊಂಡು ಸಂವಿಧಾನ ಕರಡು ರಚನಾ ಸಮಿತಿಯು ಸಂವಿಧಾನವನ್ನು ಬೆಳೆಸುವ, ತಿದ್ದುವ, ಪರಿಷ್ಕರಿಸುವ ಕೆಲಸವನ್ನು ಕೈಗೆತ್ತಿ ಕೊಂಡಿತು.


ಬಿ.ಎನ್. ರಾಯರು ಬರೆದ ಮೂಲ ಸಂವಿಧಾನಕ್ಕೆ ಕಾಲಾನಂತರ ಹಲವು ವಿಧಿಗಳನ್ನು ಸೇರ್ಪಡೆ ಮಾಡಲಾಯಿತು. ಕೆಲವನ್ನು ಪರಿಷ್ಕಾರ ಮಾಡಲಾಯಿತು. ಮೊದಲ ಕರಡು ಪ್ರತಿಯನ್ನು ಅದು ಸಂಸತ್ತಿಗೆ ಸಲ್ಲಿಸಿದಾಗ ಅದರಲ್ಲಿ 315 ವಿಧಿಗಳೂ 8 ಅನುಚ್ಛೇದಗಳು ಇದ್ದವು. ಕೊನೆಗೆ ಸಂಸತ್ತಿನ ಒಪ್ಪಿಗೆ ಪಡೆಯುವ ಸಮಯಕ್ಕೆ ಅದರಲ್ಲಿ ಮತ್ತಷ್ಟು ವಿಧಿಗಳು ಸೇರ್ಪಡೆಯಾಗಿ ಅವುಗಳ ಸಂಖ್ಯೆ 395 ಕ್ಕೆ ಏರಿತು. ತನ್ನ ಈ ಕರ್ತವ್ಯವನ್ನು ರಾಯರು ಒಂದೇ ಒಂದು ರುಾಪಾಯಿ ವೇತನ ಅಥವಾ ಸಂಭಾವನೆ ಪಡೆಯದೇ ಉಚಿತವಾಗಿ ನಡೆಸಿಕೊಟ್ಟರು ಎನ್ನುವುದು ಇನ್ನೊಂದು ಮಹತ್ವದ ಅಂಶ.


ತಮ್ಮ ಜೀವನದ ಮಹತ್ವದ ಕಾರ್ಯಗಳಲ್ಲಿ ಒಂದಾದ 'ಭಾರತದ ಸಂವಿಧಾನ' ರಚನೆಯ ಕೆಲಸ ಮುಗಿಸಿದ ಬಳಿಕ ನರಸಿಂಗರಾಯರು ವಿಶ್ವಸಂಸ್ಥೆಗೆ ಭಾರತದ ಶಾಶ್ವತ ಪ್ರತಿನಿಧಿಯಾಗಿ ಆಯ್ಕೆಯಾದರು. ಅದೇ ಸಮಯದಲ್ಲಿ ಬರ್ಮಾ ದೇಶ, ತನ್ನ ಸಂವಿಧಾನದ ಕರಡನ್ನು ಸಿದ್ಧಪಡಿಸಿ ಕೊಡಲು ರಾಯರನ್ನು ಕೇಳಿಕೊಂಡಿತು ! ಆ ಕೆಲಸವನ್ನೂ ರಾಯರು ಪೂರೈಸಿಕೊಟ್ಟರು.


ವಿಶ್ವಸಂಸ್ಥೆಯಲ್ಲಿ ಒಂದೊಂದೇ ಹುದ್ದೆಗಳನ್ನು ಏರುತ್ತಾಹೋಗಿ 1950 ರಲ್ಲಿ ಅದರ ಸೆಕ್ಯುರಿಟಿ ಕೌನ್ಸಿಲ್ಲಿನ ಅಧ್ಯಕ್ಷರಾಗಿ ಆಯ್ಕೆಯಾದರು. ಆಗ ಭಾರತಕ್ಕೆ ವಿಶ್ವಸಂಸ್ಥೆಯ ಸೆಕ್ಯುರಿಟಿ ಕೌನ್ಸಿಲ್ಲಿನ ಸದಸ್ಯ ರಾಷ್ಟ್ರವಾಗಲು ಚಿನ್ನದಂಥಾ ಅವಕಾಶ ಒದಗಿ ಬಂದಿತ್ತು. ಆದರೆ ಆ ಅದೃಷ್ಟವನ್ನು ನಮ್ಮ ದೇಶದ ಆಗಿನ ಪ್ರಧಾನಿ ನೆಹರೂ, ಕೃಷ್ಣಾರ್ಪಣ ಮಾಡಿದ್ದರಿಂದ 75 ವರ್ಷಗಳೇ ಕಳೆದರೂ ನಮಗೆ ವಿಶ್ವದ ಸೂಪರ್ ಪವರ್ ರಾಷ್ಟ್ರಗಳ ಪಟ್ಟಿಯಲ್ಲಿ ಗುರುತಿಸಿ ಕೊಳ್ಳಲು ಸಾಧ್ಯವಾಗಿಲ್ಲ.


1952 ರಲ್ಲಿ ವಿಶ್ವಸಂಸ್ಥೆಯ ಮಹಾ ಕಾರ್ಯದರ್ಶಿ ಆಗುವ ಅವಕಾಶ ರಾಯರಿಗೆ ಕೂದಲೆಳೆಯಲ್ಲಿ ಕೈತಪ್ಪಿ ಹೋಯಿತು. ಆದರೇನಂತೆ, ಅವರು ಹೇಗ್ ನ ಅಂತರ-ರಾಷ್ಟ್ರೀಯ ನ್ಯಾಯಾಲಯದ ನ್ಯಾಯಾಧೀಶರಾದರು. ಆದರೆ, ಆ ಹುದ್ದೆಯಲ್ಲಿ ಬಹುಕಾಲ ಮುಂದುವರಿಯಲು ಅದೃಷ್ಟ ಇರಲಿಲ್ಲವೋ ಏನೋ...1953ರ ನವೆಂಬರ್ 30 ರಂದು ಬೆನಗಲ್ ನರಸಿಂಗ ರಾಯರು ಜ್ಯೂರಿಕ್ ನಲ್ಲಿ ತನ್ನ 66 ನೆಯ ವಯಸ್ಸಿನಲ್ಲಿ ನಿಧನರಾದರು. ರಾಯರ ಅಕಾಲಿಕ ನಿಧನವು ವಿಶ್ವ ಸಮುದಾಯಕ್ಕೆ ಆದ ತುಂಬಲಾರದ ನಷ್ಟ ಎಂದು ಅಮೆರಿಕ; ರಷ್ಯಾ ಸಹಿತ ವಿಶ್ವದ ಎಲ್ಲಾ ಪ್ರಮುಖ ರಾಷ್ಟ್ರಗಳು ಕಂಬನಿ ಮಿಡಿದವು.


ನರಸಿಂಗ ರಾಯರ ಉಳಿದಿಬ್ಬರು ಸೋದರರೂ ಮಹಾರಥಿಗಳೇ. ಅವರ ಮೊದಲ ಸಹೋದರರಾದ ಬಿ. ರಾಮ ರಾವ್ ಅವರು ಭಾರತೀಯ ರಿಸರ್ವ್ ಬ್ಯಾಂಕಿನ ಗವರ್ನರ್ ಆಗಿದ್ದರು. ಎರಡನೆಯ ಸಹೋದರ ಶಿವರಾಯರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧರಾಗಿದ್ದ ಕಾರ್ಮಿಕ ಹೋರಾಟಗಾರರು. ಜೊತೆಗೆ ಮಂಗಳೂರಿನ ಪ್ರಥಮ ಸಂಸದರು ಆಗಿದ್ದವರು.

ತನ್ನ ರಾಜಕೀಯ ಜೀವನದ ಉತ್ತುಂಗದಲ್ಲಿದ್ದಾಗಲೇ ನಿವೃತ್ತಿ ಘೋಷಿಸಿ ಬದುಕಿನ ಕೊನೆಯ ಹದಿನೈದು ವರ್ಷಗಳನ್ನು ಸಂಶೋಧನೆಗೆ ಮೀಸಲಿಟ್ಟ ವಿಚಿತ್ರ ಮತ್ತು ಅಪರೂಪದ ರಾಜಕಾರಣಿ ಅವರು.


ಕಾರ್ಕಳದ ಬೆನಗಲ್ಲಿನಂಥ ಒಂದು ಪುಟ್ಟ ಊರಿನಿಂದ ವಿಶ್ವಸಂಸ್ಥೆ, ಅಂತರರಾಷ್ಟ್ರೀಯ ನ್ಯಾಯಾಲಯಗಳಂಥ ಎತ್ತರಗಳನ್ನು ಏರಿ, ಹಲವು ಪ್ರತಿಷ್ಠಿತ ಹುದ್ದೆಗಳನ್ನು ಅಲಂಕರಿಸಿದ, ಭಾರತದ ಸಂವಿಧಾನವನ್ನು ಬರೆಯುವಂಥ ಅವಕಾಶ ಪಡೆದ ಧೀಮಂತರು ನಮ್ಮ ದೇಶದಲ್ಲಿ ಹೆಚ್ಚಿಲ್ಲ. ಸಂಸತ್ತಿನ ಹೊರಗೆ ಅಂಬೇಡ್ಕರರ ಪಕ್ಕದಲ್ಲಿ ಹೆಗಲೆಣೆಯಾಗಿ ನಿಲ್ಲಬೇಕಿದ್ದ ಪ್ರತಿಮೆ ಬೆನಗಲ್ ನರಸಿಂಗರಾಯರದು !


ಸಂವಿಧಾನದ ಮೂಲ ಕರಡನ್ನು ರಚಿಸಿದ ಕರ್ನಾಟಕದ ಅನರ್ಘ್ಯ ರತ್ನ ಕನ್ನಡಿಗ ಸರ್ ಬೆನಗಲ್ ನರಸಿಂಹ ರಾವ್ ಅವರನ್ನು ರಾಜ್ಯ ವಿಧಾನ ಸಭಾ ಅಧಿವೇಶನದಲ್ಲಿ ಸ೦ವಿಧಾನ ಕುರಿತು ನಡೆದ ಚರ್ಚೆ ಸಂರ್ಭದಲ್ಲಿ ಮರೆತ ಕರಾವಳಿ ಜಿಲ್ಲೆಗಳ ಜನಪ್ರತಿನಿಧಿಗಳು:


2020 ನೇ ಮಾರ್ಚ್ ತಿಂಗಳ ಕನಾ೯ಟಕ ರಾಜ್ಯ ವಿಧಾನಸಭಾ ಅಧಿವೇಶನದಲ್ಲಿ ದೇಶದ ಸಂವಿಧಾನದ ಬಗ್ಗೆ ರಾಜ್ಯದ ಜನಪ್ರತಿನಿಧಿಗಳು ವಿಶೇಷ ಚರ್ಚೆ ನಡೆಸಿದರು. ಆದರೆ ಸ೦ವಿಧಾನದ ಸಲಹೆಗಾರರಾಗಿ ಸಂವಿಧಾನದ ಮೂಲ ಕರಡನ್ನು ರಚಿಸಿದ ನಮ್ಮ ಕರ್ನಾಟಕದ ಮಹಾನ್ ವ್ಯಕ್ತಿಯಾದ ಸರ್ ಬೆನಗಲ್ ನರಸಿಂಹ ರಾವ್ ಅವರನ್ನು ದೇಶಕ್ಕೆ ಮರು ನೆನಪಿಸುವ ಕೆಲಸವನ್ನು ನಮ್ಮ ಕರಾವಳಿಯ ಉಭಯ ಜಿಲ್ಲೆಗಳ ಜನಪ್ರತಿನಿಧಿಗಳಾರೂ ಮಾಡಿಲ್ಲ ಎನ್ನುವುದು ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯವರಾದ ನಮ್ಮ ಅಭಿಮಾನ-ಶೂನ್ಯತೆಯನ್ನು ಎತ್ತಿ ತೋರಿಸುತ್ತದೆ.


ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷರಾಗಿ ಸಂವಿಧಾನ ಶಿಲ್ಪಿ ಎಂದು ಖ್ಯಾತರಾದ ಡಾ. ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನವನ್ನು ರಾಷ್ಟ್ರಪತಿ ಬಾಬು ರಾಜೇಂದ್ರ ಪ್ರಸಾದ್ ಅವರಿಗೆ ಸಮರ್ಪಿಸಿದ ಸಂದರ್ಭದಲ್ಲಿ ಈ ಕೆಳಗಿನ ಮಾತುಗಳನ್ನು ಆಡಿದ್ದರು.


ತಾವೆಲ್ಲರೂ ನನ್ನನ್ನು ಸಂವಿಧಾನ ಶಿಲ್ಪಿ ಎಂದು ಹೊಗಳುತ್ತಿದ್ದೀರಿ. ಆದರೆ ಈ ಕೀರ್ತಿಯ ಬಹುದೊಡ್ಡ ಪಾಲು ಸರ್ ಬಿ.ಎನ್.ರಾವ್ ಅವರಿಗೆ ಸಲ್ಲತಕ್ಕದ್ದು. ಏಕೆಂದರೆ ಸಂವಿಧಾನ ರಚನಾ ಸಮಿತಿಯ ಪರಾಮರ್ಶೆಗಾಗಿ ಸಂವಿಧಾನದ ಮೂಲ ಕರಡನ್ನು ರಚಿಸಿದವರು ಸರ್ ಬೆನಗಲ್ ನರಸಿಂಹರಾವ್ ಅವರು.


ಕೊನೆಯ ಪಕ್ಷ ಈಗಲಾದರೂ ನಮ್ಮ ಶಾಸಕರು; ಸಂಸದರು ಹಾಗೂ ಮುಂದಾಳುಗಳು ಒಬ್ಬ ಮಹಾನ್ ಮೇಧಾವಿ ಸತ್ಪುರುಷನನ್ನು ಹೊಸ ಪೀಳಿಗೆಗೆ ಪರಿಚಯಿಸುವ ಕಾರ್ಯ ಮಾಡಲಿ ಎಂದು ಆಶಿಸೋಣವೇ?


ಲೇಖನ ಬರಹ: ಶ್ರೀ ಪ್ರಕಾಶ್ ನಾಯಕ್, ಶಿರಸ್ತೇದಾರರು, ಮಂಗಳೂರು ನ್ಯಾಯಾಂಗ ಇಲಾಖೆ



ನ್ಯಾಯಾಂಗ ಅಧಿಕಾರಿಗಳಿಗೆ ಪರಿಷ್ಕೃತ ವೇತನ ನೀಡಲು ಕೇಂದ್ರ ರಾಜ್ಯ ಸರ್ಕಾರಗಳಿಗೆ ಸುಪ್ರೀಂ ಕೋರ್ಟ್ ಆದೇಶ

ನ್ಯಾಯಾಂಗ ಅಧಿಕಾರಿಗಳಿಗೆ 2016ರ ಜನವರಿ 1ರಿಂದ ಜಾರಿಗೆ ಬರುವಂತೆ ಪರಿಷ್ಕೃತ ವೇತನ ಪಾವತಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸುಪ್ರೀಂ ಕೋರ್ಟ್ ಆದೇಶಿಸಿದೆ.

2 ನೇ ರಾಷ್ಟ್ರೀಯ ವೇತನ ಆಯೋಗದ ಶಿಫಾರಸಿನಂತೆ ವೇತನ ಪರಿಷ್ಕರಿಸಿ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್. ವಿ ರಮಣ, ನ್ಯಾ. ಕೃಷ್ಣ ಮುರಾರಿ ಮತ್ತು ಹಿಮಾ ಕೊಹ್ಲಿ ಅವರ ನ್ಯಾಯಪೀಠ ಆದೇಶ ನೀಡಿದೆ.

ಪರಿಷ್ಕೃತ ವೇತನದ ಹಿಂಬಾಕಿಯನ್ನು ಮೂರು ಕಂತುಗಳಲ್ಲಿ ಪಾವತಿಸುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಸೂಚಿಸಿದೆ. ಇದರಲ್ಲಿ ಶೇ 25ರಷ್ಟು ಹಿಂಬಾಕಿಯನ್ನು ಮುಂದಿನ ಮೂರು ತಿಂಗಳಲ್ಲಿ ಹಾಗೂ ನಂತರದ ಮೂರು ತಿಂಗಳಲ್ಲಿ ಶೇ25ರಷ್ಟನ್ನು ಹಾಗೂ ಉಳಿದ ಬಾಕಿಯನ್ನು 2023ರ ಜೂನ್ ಒಳಗೆ ಪಾವತಿಸುವಂತೆ ಸುಪ್ರೀಂ ನಿರ್ದೇಶಿಸಿದೆ.

ಪೀಠ ತನ್ನ ಆದೇಶದಲ್ಲಿ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ತಮ್ಮ ಉದ್ಯೋಗಿಳಿಗೆ 5-10 ವರ್ಷಗಳಿಗೊಮ್ಮೆ ವೇತನ ಪರಿಷ್ಕರಿಸುತ್ತವೆ. ಆದರೆ, ನ್ಯಾಯಾಂಗ ಅಧಿಕಾರಿಗಳು ಕೇಂದ್ರ ಅಥವಾ ರಾಜ್ಯದಿಂದ ರಚಿತವಾದ ಆಯೋಗಗಳ ವ್ಯಾಪ್ತಿಗೆ ಒಳಪಡುವುದಿಲ್ಲ.

2016ರಿಂದಲೂ ನ್ಯಾಯಾಂಗ ಅಧಿಕಾರಿಗಳು ಪರಿಷ್ಕೃತ ವೇತನಕ್ಕೆ ನಿರೀಕ್ಷಿಸುತ್ತಿದ್ದಾರೆ. ಹೀಗಾಗಿ ಕೂಡಲೇ ನ್ಯಾಯಾಂಗ ಅಧಿಕಾರಿಗಳ ಪರಿಷ್ಕೃತ ವೇತನವನ್ನು ಜಾರಿಗೊಳಿಸಬೇಕು ಎಂದು ಸುಪ್ರೀಂಕೋರ್ಟ್ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಆದೇಶಿಸಿದೆ.

ಅಖಿಲ ಭಾರತ ನ್ಯಾಯಾಧೀಶರ ಸಂಘ ಜಿಲ್ಲಾ ನ್ಯಾಯಾಧೀಶರ ಸೇವಾ ಸ್ಥಿತಿಗತಿ ಪರಿಶೀಲಿಸುವಂತೆ ಕೋರಿ ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಿದೆ. ಈ ಅರ್ಜಿ ವಿಚಾರಣೆ ವೇಳೆ ಅಮೈಕಸ್ ಕ್ಯೂರಿ ವಾದ ಮಂಡಿಸಿ, ಎರಡನೇ ರಾಷ್ಟ್ರೀಯ ನ್ಯಾಯಾಂಗ ವೇತನ ಆಯೋಗದ ಶಿಫಾರಸ್ಸಿನ ಪ್ರಕಾರ ನ್ಯಾಯಾಧೀಶರು ಪರಿಷ್ಕೃತ ವೇತನ ಶ್ರೇಣಿಗೆ ಅರ್ಹರಿದ್ದಾರೆ. ಆದರೆ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಣಕಾಸಿನ ಕೊರತೆ ಕಾರಣ ನೀಡಿ ಪರಿಷ್ಕೃತ ವೇತನ ನಿರಾಕರಿಸುತ್ತಿರುವುದು ಅನ್ಯಾಯ ಎಂದರು.

ದೇಶದ ನ್ಯಾಯಾಂಗ ಅಧಿಕಾರಿಗಳ ಸ್ಥಿತಿಗತಿ ಮತ್ತು ಅವರ ವೇತನ ಶ್ರೇಣಿ ಪರಿಶೀಲಿಸಲು ಸುಪ್ರೀಂಕೋರ್ಟ್ 2017ರಲ್ಲಿ ಎರಡನೇ ರಾಷ್ಟ್ರೀಯ ನ್ಯಾಯಾಂಗ ವೇತನ ಆಯೋಗ ರಚಿಸಿತ್ತು. ನ್ಯಾಯಮೂರ್ತಿಗಳಾದ ಜೆ. ಚಲಮೇಶ್ವರ್ ಹಾಗೂ ಅಬ್ದುಲ್ ನಜೀರ್ ಅವರನ್ನು ಒಳಗೊಂಡ ಪೀಠ ಆಯೋಗ ರಚಿಸಿ ಅದಕ್ಕೆ ಸುಪ್ರೀಂಕೋರ್ಟ್ ನ ನಿವೃತ್ತ ನ್ಯಾಯಮೂರ್ತಿ ಪಿ.ವಿ ರೆಡ್ಡಿ ಅವರನ್ನು ಅಧ್ಯಕ್ಷರನ್ನಾಗಿ ಹಾಗೂ ಕೇರಳ ಹೈಕೋರ್ಟ್ ನ ನಿವೃತ್ತ ನ್ಯಾಯಮೂರ್ತಿ ಮತ್ತು ಸುಪ್ರೀಂಕೋರ್ಟ್ ನ ಹಿರಿಯ ವಕೀಲರೊಬ್ಬರನ್ನು ಸದಸ್ಯರನ್ನಾಗಿ ನೇಮಿಸಿತ್ತು.


Ads on article

Advertise in articles 1

advertising articles 2

Advertise under the article