![ವಿಳಂಬವಾಗಿ ನೀಡಿದ ದೂರು: FIR ರದ್ದುಗೊಳಿಸಿದ ಕರ್ನಾಟಕ ಹೈಕೋರ್ಟ್ ವಿಳಂಬವಾಗಿ ನೀಡಿದ ದೂರು: FIR ರದ್ದುಗೊಳಿಸಿದ ಕರ್ನಾಟಕ ಹೈಕೋರ್ಟ್](https://blogger.googleusercontent.com/img/b/R29vZ2xl/AVvXsEidJVY3453EDRNk9AjizyDg0v0tF9UwAU6focpomfLNOvwibiHKAfdhLojMYmJ3QHCz_wC79aGtABSFkRgUW27oFo4eFvjy8UdBSiZ5WgDghIJbSdF6a9ByhGlr5MlkF8J68LIEKaWO-5EHz-Axz7kSbdQdY6pol_rV36byCLFW0kYaxQxR_mAHsoW2lQ/w640-h338/high-court-karnataka.jpg)
ವಿಳಂಬವಾಗಿ ನೀಡಿದ ದೂರು: FIR ರದ್ದುಗೊಳಿಸಿದ ಕರ್ನಾಟಕ ಹೈಕೋರ್ಟ್
ವಿಳಂಬವಾಗಿ ನೀಡಿದ ದೂರು: FIR ರದ್ದುಗೊಳಿಸಿದ ಕರ್ನಾಟಕ ಹೈಕೋರ್ಟ್
ಸುಲಿಗೆ ಆರೋಪದ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರುದಾರರು ದೂರು ದಾಖಲಿಸಲು ವಿಳಂಬ ಮಾಡಿರುವುದನ್ನು ಗಂಭೀರವಾಗಿ ಪರಿಗಣಿಸಿದ ಕರ್ನಾಟಕ ಹೈಕೋರ್ಟ್ FIR ರದ್ದುಗೊಳಿಸಿ ಆದೇಶ ಹೊರಡಿಸಿದೆ. ವಿಳಂಬ ದೂರು ಹಲವು ಅನುಮಾನಗಳಿಗೆ ಆಸ್ಪದ ಮಾಡಿಕೊಟ್ಟಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ದಾವಣಗೆರೆಯ ಇಮ್ರಾನ್ ಸಿದ್ದಿಕಿ ವಿರುದ್ಧ ದಾಖಲಾದ 2 FIR ರದ್ದು ಕೋರಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಎಂ. ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಈ ತೀರ್ಪು ನೀಡಿದೆ.
ಪ್ರಕರಣದ ಹಿನ್ನೆಲೆ
ದಾವಣಗೆರೆಯ ವ್ಯಾಪಾರಿ ಮುಬಾರಕ್ ಎಂಬುವರು ಆರೋಪಿ ಇಮ್ರಾನ್ ಸಿದ್ದಿಕಿ ಎಂಬವರು ತಮ್ಮನ್ನು ಬೆದರಿಸಿ ಎರಡು ಲಕ್ಷ ರೂಪಾಯಿ ಸುಲಿಗೆ ಮಾಡಿದ್ದಾರೆ ಎಂದು ಆರೋಪಿಸಿ ದೂರು ನೀಡಿದ್ದರು. ಈ ದೂರನ್ನು ದಾಖಲಿಸಿದ ದಾವಣಗೆರೆ ಪೊಲೀಸರು ಆರೋಪಿ ಸಿದ್ದಿಕಿಯನ್ನು ಬಂಧಿಸಿದ್ದರು.
ಜಾಮೀನಿನ ಮೇಲೆ ಹೊರಬಂದ ಆರೋಪಿ ತಮಗೆ ಜೀವ ಬೆದರಿಕೆ ಹಾಕಿದರು ಮತ್ತು ಅವಮಾನ ಮಾಡಿದರು ಎಂದು ಮುಬಾರಕ್ ಮತ್ತೊಂದು ದೂರು ನೀಡಿದರು. ಆ ಪ್ರಕಾರ, ಪೊಲೀಸರು ಮತ್ತೊಂದು FIR ದಾಖಲಿಸಿದರು. ಈ FIR ಗಳ ರದ್ದು ಕೋರಿ ಆರೋಪಿ ಹೈಕೋರ್ಟ್ ಮೆಟ್ಟಿಲೇರಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಪೀಠ, ಇಮ್ರಾನ್ ಸಿದ್ದಿಕಿ ವಿರುದ್ಧ ಸುಲಿಗೆ ಆರೋಪ ಮಾಡಲಾಗಿದೆ. ಆದರೆ, ಈ ದೂರು ದಾಖಲಿಸಲು ಅವರು ಒಂಬತ್ತು ತಿಂಗಳು ವಿಳಂಬ ಮಾಡಿದ್ದಾರೆ ಎಂಬುದನ್ನು ನ್ಯಾಯಪೀಠ ಗಂಭೀರವಾಗಿ ಪರಿಗಣಿಸಿತು..
ಇಂತಹ ಪ್ರಕರಣಗಳಲ್ಲಿ ಘಟನೆ ನಡೆದ ತಕ್ಷಣವೇ ದೂರು ನೀಡಬೇಕು. ಅನಗತ್ಯ ವಿಳಂಬ ಮಾಡಿದರೆ ದೂರಿನ ಕುರಿತಂತೆಯೇ ಅನುಮಾನಗಳು ಬರುತ್ತವೆ. ದೂರುದಾರರು ಭಯದಿಂದ ದೂರು ನೀಡಲು ವಿಳಂಬ ಮಾಡಿದ್ದಾಗಿ ಹೇಳುತ್ತಾರೆ. ಆದರೆ ಆ ಭಯಕ್ಕೆ ಸ್ಪಷ್ಟ ಕಾರಣಗಳನ್ನು ವಿವರಿಸಿಲ್ಲ ಎಂದು ನ್ಯಾಯಪೀಠ ಗಮನಿಸಿತು.
ಮೇಲ್ನೋಟಕ್ಕೆ ದೂರುದಾರರು ಮಾಡಿದ ಆರೋಪದಲ್ಲಿ ಹುರುಳಿಲ್ಲ. ಹಾಗಾಗಿ, ಮುಂದಿನ ಕಾನೂನು ಪ್ರಕ್ರಿಯೆಗೆ ಅವಕಾಶ ನೀಡುವುದು ಸೂಕ್ತವಲ್ಲ ಎಂದು ಹೇಳಿ ಎಫ್ಐಆರ್ ರದ್ದುಪಡಿಸಿ ಆದೇಶಿಸಿದೆ.