![ಕೋರ್ಟ್ ಆದೇಶದ ವೆಬ್ಸೈಟ್ ಪ್ರತಿ ಪರಿಗಣನೆಗೆ ಅರ್ಹ, ದೃಢೀಕೃತ ಪ್ರತಿಗೆ ಕಾಯಬೇಕಿಲ್ಲ: ಹೈಕೋರ್ಟ್ ಕೋರ್ಟ್ ಆದೇಶದ ವೆಬ್ಸೈಟ್ ಪ್ರತಿ ಪರಿಗಣನೆಗೆ ಅರ್ಹ, ದೃಢೀಕೃತ ಪ್ರತಿಗೆ ಕಾಯಬೇಕಿಲ್ಲ: ಹೈಕೋರ್ಟ್](https://blogger.googleusercontent.com/img/b/R29vZ2xl/AVvXsEjaPkam_G5tpy-ZIYJ9UWyAeR7dqlFxrIjYzKKecVndgplmT4GS2HYsD6RbBAfQTbkrTFLlS0cHWx_7_6ccAzjDR8KR7IF0XhQUDL-5lHKOYXgVHq3mARsyi8WNGiBcy6vPRwYZnRCT2YTlh5LfD94-xkabLoE8YFs-ZzzZEockbNiVCWRIMpYHdwlCaw/w640-h430/Law%20Legal%20Court%20(2).jpg)
ಕೋರ್ಟ್ ಆದೇಶದ ವೆಬ್ಸೈಟ್ ಪ್ರತಿ ಪರಿಗಣನೆಗೆ ಅರ್ಹ, ದೃಢೀಕೃತ ಪ್ರತಿಗೆ ಕಾಯಬೇಕಿಲ್ಲ: ಹೈಕೋರ್ಟ್
ಕೋರ್ಟ್ ಆದೇಶದ ವೆಬ್ಸೈಟ್ ಪ್ರತಿ ಪರಿಗಣನೆಗೆ ಅರ್ಹ, ದೃಢೀಕೃತ ಪ್ರತಿಗೆ ಕಾಯಬೇಕಿಲ್ಲ: ಹೈಕೋರ್ಟ್
ವೆಬ್ಸೈಟ್ನಿಂದ ಡೌನ್ಲೋಡ್ ಮಾಡಲಾದ ನ್ಯಾಯಾಲಯಗಳ ಆದೇಶದ ಪ್ರತಿಯನ್ನು ನ್ಯಾಯಾಲಯಗಳು ಪರಿಗಣಿಸಬಹುದು. ದೃಢೀಕೃತ ಪ್ರತಿಗೆ ಕಾಯುವ ಅಗತ್ಯವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಸ್ಪಷ್ಟಪಡಿಸಿದೆ.
ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ನೇತೃತ್ವದ ಏಕಸದಸ್ಯ ಪೀಠ ಈ ಆದೇಶ ಮಾಡಿದ್ದು, ಆದೇಶದ ಪ್ರತಿಯನ್ನು ಅರ್ಜಿದಾರರಿಂದ ಪಡೆದ ಪ್ರತಿವಾದಿಗಳು ಬಳಿಕ ಆದೇಶ ಪಾಲಿಸಬೇಕು. ಆದೇಶದ ಬಗ್ಗೆ ಅನುಮಾನಗಳಿದ್ದರೆ ಅಧಿಕೃತ ವೆಬ್ಸೈಟ್ನಲ್ಲಿ ಈ ಆದೇಶವನ್ನು ಪರಿಶೀಲಿಸಬಹುದು ಎಂದು ಹೇಳಿದೆ.
ಹಾಸನದ ಸಕಲೇಶಪುರ ತಾಲೂಕಿನ ದೋಣಿಗಾಲ್ ನಿವಾಸಿ ರಾಣಿ ಮಲ್ಲೇಶ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಪೀಠ ಈ ಆದೇಶ ಮಾಡಿದೆ.
ವೆಬ್ಸೈಟ್ ಆದೇಶ ಪ್ರತಿಯೂ ಪರಿಗಣನೆಗೆ ಅರ್ಹವಾಗಿದೆ. ಅನುಮಾನ ಇದ್ದ ಪಕ್ಷದಲ್ಲಿ ಪ್ರಕರಣದಲ್ಲಿ ಸರ್ಕಾರವನ್ನು ಪ್ರತಿನಿಧಿಸಿರುವ ವಕೀಲರನ್ನು ಸಂಪರ್ಕಿಸಿ ಅನುಮಾನ ಬಗೆಹರಿಸಿಕೊಳ್ಳಬಹುದು. ಇಲ್ಲವೇ, ತೀರ್ಪಿನ ಪ್ರತಿಯಲ್ಲಿ ಇರುವ 'QR ಕೋಡ್' ಸ್ಕ್ಯಾನ್ ಹೈಕೋರ್ಟ್ ವೆಬ್ಸೈಟ್ಗೆ ಭೇಟಿ ನೀಡಿ ತೀರ್ಪನ್ನು ಪರಿಶೀಲಿಸಿಕೊಳ್ಳಬೇಕು ಎಂದು ಪೀಠ ತನ್ನ ಆದೇಶದಲ್ಲಿ ಸ್ಪಷ್ಟಪಡಿಸಿದೆ.
ಘಟನೆ ವಿವರ
ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ದೋಣಿಗಲ್ ನಿವಾಸಿ ರಾಣಿ ಮಲ್ಲೇಶ್ ಕೃಷಿ ಜಮೀನು ಮಾಲಕತ್ವ ಹೊಂದಿದ್ದರು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪ್ರಾದೇಶಿಕ ಕಚೇರಿ, ಅದರ ಹಾಸನದ ಘಟಕದ ಯೋಜನಾಧಿಕಾರಿ, ರಾಷ್ಟ್ರೀಯ ಹೆದ್ದಾರಿ-75ರ ಹಾಸನ ವಿಭಾಗ ಸಕಲೇಶಪುರದ ವಿಶೇಷ ಭೂಸ್ವಾಧೀನ ಅಧಿಕಾರಿ ಅವರು ರಸ್ತೆ ಅಗಲೀಕರಣ ಮಾಡುವಾಗ ಸಮರ್ಪಕವಾಗಿ ಮಾಡಿಲ್ಲ ಎಂಬುದಾಗಿ ಅರ್ಜಿದಾರರು ಅಳಲು ತೋಡಿಕೊಂಡಿದ್ದರು.
ಅವೈಜ್ಞಾನಿಕ ಒತ್ತುವರಿಯಿಂದ ನಾಲೆಯಲ್ಲಿ ನೀರು ತುಂಬಿ ತಮ್ಮ ಕಾಫಿ ತೋಟದ ಬೆಳೆ ನಾಶವಾಗಿದೆ. ಆದ್ದರಿಂದ, ಪರಿಹಾರ ಕೋರಿ ವಿಶೇಷ ಭೂಸ್ವಾಧೀನ ಅಧಿಕಾರಿಗೆ ಮನವಿ ಸಲ್ಲಿಸಿದ್ದರು. ಬಳಿಕ, ಕಾನೂನು ಪ್ರಕಾರ ನೋಟಿಸ್ ಕಳಿಸಿದ್ದರು. ಆದರೂ, ಸರ್ಕಾರಿ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಇದರಿಂದ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.
ಸೂಕ್ತ ಪರಿಹಾರ ನೀಡಬೇಕು ಎಂದು ಕೋರಿ ಅರ್ಜಿದಾರರು 2019ರ ಜನವರಿ 17 ಮತ್ತು ಏಪ್ರಿಲ್ 7ರಂದು ಸಲ್ಲಿಸಿರುವ ಮನವಿಗಳನ್ನು ಈ ಆದೇಶ ಸಿಕ್ಕ 8 ವಾರಗಳಲ್ಲಿ ಪರಿಗಣಿಸಿಬೇಕು ಎಂದು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ (NHAI) ಹೈಕೋರ್ಟ್ ನಿರ್ದೇಶನ ನೀಡಿದೆ.