![ಜನರ ಅರ್ಜಿಗಳನ್ನು ಸೂಕ್ತ ಸಮಯದಲ್ಲಿ ವಿಲೇವಾರಿ ಮಾಡಿ: ಸರ್ಕಾರಿ ಅಧಿಕಾರಿಗಳಿಗೆ ಚಾಟಿ ಬೀಸಿದ ಹೈಕೋರ್ಟ್ ಜನರ ಅರ್ಜಿಗಳನ್ನು ಸೂಕ್ತ ಸಮಯದಲ್ಲಿ ವಿಲೇವಾರಿ ಮಾಡಿ: ಸರ್ಕಾರಿ ಅಧಿಕಾರಿಗಳಿಗೆ ಚಾಟಿ ಬೀಸಿದ ಹೈಕೋರ್ಟ್](https://blogger.googleusercontent.com/img/b/R29vZ2xl/AVvXsEgEYCLfB9CYqqY3GHf_oypBW12v8-OSGa_LuthCcL1Az-h3cPuCqFx8VI0sYUpu08G9PuQABMVY-cFMD6RGELoSpF4scondP3syajW0uX1MVB8vecpJG9l5f1ARUrMc-6fT9CkClD8BOTRTxrH73asY1e2X-I4r7LfQEqTC4Jizizbe5YAX9KCo74FzRQ/w640-h338/high-court-karnataka.jpg)
ಜನರ ಅರ್ಜಿಗಳನ್ನು ಸೂಕ್ತ ಸಮಯದಲ್ಲಿ ವಿಲೇವಾರಿ ಮಾಡಿ: ಸರ್ಕಾರಿ ಅಧಿಕಾರಿಗಳಿಗೆ ಚಾಟಿ ಬೀಸಿದ ಹೈಕೋರ್ಟ್
ಜನರ ಅರ್ಜಿಗಳನ್ನು ಸೂಕ್ತ ಸಮಯದಲ್ಲಿ ವಿಲೇವಾರಿ ಮಾಡಿ: ಸರ್ಕಾರಿ ಅಧಿಕಾರಿಗಳಿಗೆ ಚಾಟಿ ಬೀಸಿದ ಹೈಕೋರ್ಟ್
ಸಾರ್ವಜನಿಕರ ಅರ್ಜಿಗಳನ್ನು ವಿಲೇ ಮಾಡದೆ ಉದಾಸೀನ ಮಾಡುವ ಸರ್ಕಾರಿ ಅಧಿಕಾರಿಗಳ ವಿರುದ್ಧ ಕರ್ನಾಟಕ ಹೈಕೋರ್ಟ್ ಚಾಟಿ ಬೀಸಿದೆ. ಸರ್ಕಾರಿ ಇಲಾಖೆಗೆ ಮನವಿ ಸಲ್ಲಿಸಿದರೆ, ಅದನ್ನು ನಿರ್ದಿಷ್ಟ ಸಮಯದಲ್ಲಿ ವಿಲೇವಾರಿ ಮಾಡಬೇಕು. ಅರ್ಜಿಯನ್ನು ತಿರಸ್ಕರಿಸುವುದು ಯಾ ಮುಂದಿನ ಕ್ರಮ ಜರುಗಿಸುವುದು ಅಗತ್ಯ ಎಂದು ಹೈಕೋರ್ಟ್ ತನ್ನ ಆದೇಶದಲ್ಲಿ ತಿಳಿಸಿದೆ.
ಜನ ಇಲಾಖೆಗೆ ಅರ್ಜಿ ಸಲ್ಲಿಸಿದಾಗ ಒಂದು ನಿರ್ದಿಷ್ಟ ಸಮಯದೊಳಗೆ ಅದನ್ನು ಒಪ್ಪಿಕೊಳ್ಳುವುದು ಯಾ ತಿರಸ್ಕರಿಸುವುದು ಅಗತ್ಯ. ಯಾವುದೇ ಮನವಿಯನ್ನು ಇಲಾಖಾ ಅಧಿಕಾರಿಗಳು ಇಟ್ಟುಕೊಂಡು ಸುಮ್ಮನೆ ಕೂರುವಂತಿಲ್ಲ. ಹಾಗೆ ಮುಂದುವರಿದರೆ, ಜನ ನ್ಯಾಯಾಲಯದ ಮೆಟ್ಟಿಲೇರುವುದು ಅನಿವಾರ್ಯವಾಗುತ್ತದೆ ಎಂದು ನ್ಯಾಯಪೀಠ ಹೇಳಿದೆ.
ಘಟನೆ ವಿವರ
ಹಾಸನ ಜಿಲ್ಲೆ ಸಕಲೇಶಪುರದ ದೋಣಿಗಲ್ ಗ್ರಾಮದ ರಾಣಿ ಮಲ್ಲೇಶ್ ಅವರು ಕೃಷಿ ಜಮೀನು ಹೊಂದಿದ್ದರು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪ್ರಾದೇಶಿಕ ಕಚೇರಿ, ಅದರ ಹಾಸನದ ಘಟಕದ ಯೋಜನಾಧಿಕಾರಿ, ರಾಷ್ಟ್ರೀಯ ಹೆದ್ದಾರಿ-75ರ ಹಾಸನ ವಿಭಾಗ ಸಕಲೇಶಪುರದ ವಿಶೇಷ ಭೂಸ್ವಾಧೀನ ಅಧಿಕಾರಿ ಅವರು ರಸ್ತೆ ಅಗಲೀಕರಣ ಮಾಡುವಾಗ ಸಮರ್ಪಕವಾಗಿ ಮಾಡಿಲ್ಲ ಎಂಬುದು ಅರ್ಜಿದಾರರ ದೂರು.
ಅವೈಜ್ಞಾನಿಕ ಒತ್ತುವರಿಯಿಂದ ನಾಲೆಯಲ್ಲಿ ನೀರು ತುಂಬಿ ತಮ್ಮ ಕಾಫಿ ತೋಟದ ಬೆಳೆ ನಾಶವಾಗಿದೆ. ಆದ್ದರಿಂದ, ಪರಿಹಾರ ಕೋರಿ ವಿಶೇಷ ಭೂಸ್ವಾಧೀನ ಅಧಿಕಾರಿಗೆ ಮನವಿ ಸಲ್ಲಿಸಿದ್ದರು. ಬಳಿಕ, ಕಾನೂನು ಪ್ರಕಾರ ನೋಟಿಸ್ ಕಳಿಸಿದ್ದರು. ಆದರೂ, ಸರ್ಕಾರಿ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಇದರಿಂದ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.