-->
"ವರ್ಗಾವಣೆ" ಸರಕಾರಿ ನೌಕರರ ಹಕ್ಕು ಅಲ್ಲ: ಸುಪ್ರೀಂಕೋರ್ಟ್ ಮಹತ್ವದ ತೀರ್ಪು

"ವರ್ಗಾವಣೆ" ಸರಕಾರಿ ನೌಕರರ ಹಕ್ಕು ಅಲ್ಲ: ಸುಪ್ರೀಂಕೋರ್ಟ್ ಮಹತ್ವದ ತೀರ್ಪು

ವರ್ಗಾವಣೆ ಸರಕಾರಿ ನೌಕರರ ಹಕ್ಕು ಅಲ್ಲ: ಸುಪ್ರೀಂಕೋರ್ಟ್ ಮಹತ್ವದ ತೀರ್ಪು


ಸರಕಾರಿ ನೌಕರರು ವರ್ಗಾವಣೆಯನ್ನು ತಮ್ಮಕ್ಕು ಎಂದು ಪ್ರತಿಪಾದಿಸುವಂತಿಲ್ಲ-- ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು






ವರ್ಗಾವಣೆಯಾದ ಸ್ಥಳದಲ್ಲಿ ಕರ್ತವ್ಯಕ್ಕೆ ಹಾಜರಾಗಲು ನಿರಾಕರಿಸುವುದು ಅಥವಾ ನಿರ್ದಿಷ್ಟ ಸ್ಥಳಕ್ಕೆ ವರ್ಗಾಯಿಸುವಂತೆ ಕೋರುವುದು ಸರಕಾರಿ ನೌಕರರ ಹಕ್ಕು ಎನ್ನಲಾಗದು ಎಂಬುದಾಗಿ ಮಾನ್ಯ ಸುಪ್ರೀಂಕೋರ್ಟಿನ ಗೌರವಾನ್ವಿತ ನ್ಯಾಯಮೂರ್ತಿಗಳಾದ ನ್ಯಾl ಎಂ.ಆರ್ ಶಾ ಮತ್ತು ನ್ಯಾl ಅನಿರುದ್ಧ ಬೋಸ್ ಇವರನ್ನೊಳಗೊಂಡ ವಿಭಾಗಿಯ ಪೀಠವು ನಮೃತ ವರ್ಮ ವಿರುದ್ಧ ಉತ್ತರಪ್ರದೇಶ ರಾಜ್ಯ ಸರ್ಕಾರ ಈ ಪ್ರಕರಣದಲ್ಲಿ ದಿನಾಂಕ 6.9.2021 ರಂದು ಮಹತ್ವದ ತೀರ್ಪು ನೀಡಿದೆ.


ಪ್ರಕರಣ: ನಮೃತ ವರ್ಮಾ Vs ಉತ್ತರಪ್ರದೇಶ ರಾಜ್ಯ ಸರ್ಕಾರ

ಸುಪ್ರೀಂ ಕೋರ್ಟ್, SLA 36717/2017 Dated 06-09-2021


ಉತ್ತರ ಪ್ರದೇಶ ರಾಜ್ಯದ ಉನ್ನತ ಶಿಕ್ಷಣ ಇಲಾಖೆಯಲ್ಲಿ ಉಪನ್ಯಾಸಕಿ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಅಮೃತ ವರ್ಮ ಅವರು ತನ್ನನ್ನು ಗೌತಮ ಬುದ್ಧ ನಗರ ನೋಯಿಡಾದಲ್ಲಿರುವ ರಾಜ್ ಕಿಯಾ ಸ್ನಾತಕೋತ್ತರ ಕಾಲೇಜಿಗೆ ವರ್ಗಾವಣೆ ಮಾಡುವಂತೆ ಕೋರಿ ಉತ್ತರ ಪ್ರದೇಶ ಸರಕಾರದ ಉನ್ನತ ಶಿಕ್ಷಣ ಇಲಾಖೆಯ ಮುಖ್ಯ ಕಾರ್ಯದರ್ಶಿಯವರಿಗೆ ಅರ್ಜಿ ಸಲ್ಲಿಸಿದ್ದರು. ಶ್ರೀಮತಿ ನಮೃತಾ ವರ್ಮ ಅವರು ನೋಯಿಡಾದಲ್ಲಿರುವ ರಾಜಕೀಯ ಸ್ನಾತಕೋತ್ತರ ಕಾಲೇಜಿನಲ್ಲಿ ಆರಂಭಿಕ ನೇಮಕಾತಿ ಹೊಂದಿ ಅಲ್ಲಿಯೇ 13 ವರ್ಷಗಳ ಕಾಲ ಸೇವೆ ಸಲ್ಲಿಸಿರುವುದರಿಂದ ಪುನಃ ಅವರನ್ನು ಅದೇ ಶಿಕ್ಷಣ ಸಂಸ್ಥೆಗೆ ವರ್ಗಾಯಿಸುವುದು ಸಮರ್ಥ ನೀಯಯವಲ್ಲ ಎಂಬ ಕಾರಣ ನೀಡಿ ಉತ್ತರ ಪ್ರದೇಶ ಸರಕಾರವು ಅವರ ಮನವಿಯನ್ನು ದಿನಾಂಕ 14.9.2017ರಂದು ತಿರಸ್ಕರಿಸಿತು.


ಸದರಿ ಆದೇಶದಿಂದ ಬಾಧಿತರಾದ ಶ್ರೀಮತಿ ನಮೃತ ವರ್ಮ ಅವರು ಅಲಹಾಬಾದ್ ಹೈಕೋರ್ಟಿನಲ್ಲಿ ರಿಟ್ ದಾಖಲಿಸಿ ತನ್ನನ್ನು ತಾನು ಕೋರಿದ ಕಾಲೇಜಿಗೆ ವರ್ಗಾಯಿಸುವಂತೆ ಸರಕಾರಕ್ಕೆ ನಿರ್ದೇಶನ ನೀಡಬೇಕೆಂದು ಪ್ರಾರ್ಥಿಸಿದರು. ಸದರಿ ರಿಟ್ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ ದಿನಾಂಕ 13.10.2017ರಂದು ವಜಾ ಗೊಳಿಸಿ ಉತ್ತರ ಪ್ರದೇಶ ಸರಕಾರದ ಆದೇಶವನ್ನು ಎತ್ತಿ ಹಿಡಿಯಿತು.



ಅಲಹಾಬಾದ್ ಹೈಕೋರ್ಟಿನ ಆದೇಶದಿಂದ ಬಾಧಿತರಾದ ಶ್ರೀಮತಿ ನಮೃತಾ ವರ್ಮ ಅವರು ಭಾರತದ ಸರ್ವೋಚ್ಚ ನ್ಯಾಯಾಲಯದಲ್ಲಿ ವಿಶೇಷ ಮೇಲ್ಮನವಿ ಅರ್ಜಿ ಸಂಖ್ಯೆ 36717/2017 ಅನ್ನು ಸಲ್ಲಿಸಿದರು. ಅಮೃತ ವರ್ಮ ಅವರ ಪರವಾಗಿ ವಕೀಲರು ಮಂಡಿಸಿದ ವಾದದ ಪ್ರಕಾರ ಮೇಲ್ಮನವಿದಾರರು ಪ್ರಸ್ತುತ ಕಳೆದ ನಾಲ್ಕು ವರ್ಷಗಳಿಂದ ಅಂರೋಹ ಎಂಬಲ್ಲಿನ ಕಾಲೇಜಿನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ‌. ಸರಕಾರದ ವರ್ಗಾವಣೆ ನೀತಿ ಅನ್ವಯ ನಾಲ್ಕು ವರ್ಷಗಳ ಬಳಿಕ ಸರಕಾರಿ ನೌಕರನಿಗೆ ವರ್ಗಾವಣೆ ಪಡೆಯುವ ಅವಕಾಶವಿದೆ. ಆದುದರಿಂದ ಮನವಿದಾರರು ತನ್ನನ್ನು ನೋಯಿಡಾದಲ್ಲಿರುವ ರಾಜ್ ಕೀಯ ಸ್ನಾತಕೋತ್ತರ ಕಾಲೇಜಿಗೆ ವರ್ಗಾಯಿಸುವಂತೆ ಸರಕಾರಕ್ಕೆ ನೀಡಿರುವ ಮನವಿ ನ್ಯಾಯೋಚಿತವಾಗಿದೆ. ಆದರೆ ಸರಕಾರವು ಸದರಿ ಮನವಿಯನ್ನು ಸೂಕ್ತ ಕಾರಣಗಳಿಲ್ಲದೆ ತಿರಸ್ಕರಿಸಿದೆ. ಸರಕಾರದ ಆದೇಶವನ್ನು ಮಾನ್ಯ ಅಲಹಾಬಾದ್ ಹೈಕೋರ್ಟ್ ಕೂಡ ಯಾವುದೇ ವಿಮರ್ಶೆ ಇಲ್ಲದೆ ಸಮರ್ಥಿಸಿದೆ. ಇದರಿಂದ ಅರ್ಜಿದಾರರಿಗೆ ತುಂಬಲಾರದ ಕಷ್ಟ ನಷ್ಟಗಳು ಉಂಟಾಗಿದೆ. ಆದುದರಿಂದ ಮೇಲ್ಮನವಿಯನ್ನು ಪುರಸ್ಕರಿಸಿ ಅರ್ಜಿದಾರರು ಕೋರಿರುವ ಸ್ಥಳಕ್ಕೆ ವರ್ಗಾವಣೆ ಮಾಡುವಂತೆ ಸಂಬಂಧಪಟ್ಟ ಪ್ರಾಧಿಕಾರಕ್ಕೆ ಸೂಕ್ತ ನಿರ್ದೇಶನ ನೀಡಬೇಕೆಂದು ಪ್ರಾರ್ಥಿಸಿದರು.



ಸರಕಾರದ ಪರವಾಗಿ ಸರಕಾರಿ ವಕೀಲರು ಮಂಡಿಸಿದ ವಾದದ ಪ್ರಕಾರ ಅರ್ಜಿದಾರರು ದಿನಾಂಕ 18.12.2000ದಂದು ಉಪನ್ಯಾಸಕಿಯಾಗಿ ನೋಯಿಡಾದಲ್ಲಿರುವ ರಾಕೀಯ ಸ್ನಾತಕೋತ್ತರ ಕಾಲೇಜಿನಲ್ಲಿ ಸೇವೆಗೆ ಸೇರಿದ್ದು 18.12.2000 ರಿಂದ 11.8.2013 ರ ವರೆಗೆ ಸತತ 13 ವರ್ಷಗಳ ಕಾಲ ಸದರಿ ಕಾಲೇಜಿನಲ್ಲಿ ಸೇವೆ ಸಲ್ಲಿಸಿರುತ್ತಾರೆ. ಬಳಿಕ ಅಂರೋಹ ಎಂಬಲ್ಲಿಗೆ ವರ್ಗಾವಣೆ ಹೊಂದಿ ಕಳೆದ ನಾಲ್ಕು ವರ್ಷಗಳಿಂದ ಅಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ನಾಲ್ಕು ವರ್ಷಗಳ ಬಳಿಕ ಪುನಃ ತಾನು ಈ ಹಿಂದೆ ಸೇವೆ ಸಲ್ಲಿಸುತ್ತಿದ್ದ ನೋಯಿಡಾದ ಕಾಲೇಜಿಗೆ ವರ್ಗಾವಣೆ ನೀಡುವಂತೆ ಮನವಿ ಸಲ್ಲಿಸಿರುವುದು ಸರ್ವಥಾ ಸಮರ್ಥನೀಯವಲ್ಲ.



ಉಭಯ ಪಕ್ಷಕಾರರ ವಾದವನ್ನು ಆಲಿಸಿದ ಮಾನ್ಯ ನ್ಯಾಯ ಪೀಠವು ವರ್ಗಾವಣೆಯ ಕುರಿತು ಮನವಿಯನ್ನು ತಿರಸ್ಕರಿಸಿದ ಸರಕಾರದ ಆದೇಶವನ್ನು ರದ್ದುಪಡಿಸಿ ಮೇಲ್ಮನವಿದಾರರು ಕೋರಿರುವ ಸ್ಥಳಕ್ಕೆ ವರ್ಗಾವಣೆ ಮಾಡುವಂತೆ ಸರಕಾರಕ್ಕೆ ನಿರ್ದೇಶನ ನೀಡಲು ಯಾವುದೇ ಸಕಾರಣಗಳು ಕಂಡುಬಂದಿಲ್ಲ. ಒಂದು ವೇಳೆ ಅರ್ಜಿದಾರರು ನಿಗದಿಪಡಿಸಿದ ಅವಶ್ಯಕ ವರ್ಷಗಳ ಸೇವೆ ಸಲ್ಲಿಸಿ ವರ್ಗಾವಣೆ ಕೋರಿದ್ದಲ್ಲಿ ಅವರನ್ನು ಈಗಾಗಲೇ 13 ವರ್ಷಗಳ ಕಾಲ ಸೇವೆ ಸಲ್ಲಿಸಿದ ಸ್ಥಳಕ್ಕೆ ವರ್ಗಾವಣೆ ಮಾಡುವ ಬದಲು ಬೇರೆ ಸ್ಥಳಕ್ಕೆ ವರ್ಗಾವಣೆ ಮಾಡಬಹುದೆಂಬ ಅಲಹಾಬಾದ್ ಹೈಕೋರ್ಟಿನ ಅಭಿಪ್ರಾಯಕ್ಕೆ ಮಾನ್ಯ ಸುಪ್ರೀಂ ಕೋರ್ಟ್ ಸಹಮತ ವ್ಯಕ್ತಪಡಿಸಿ ಮೇಲ್ಮನವಿಯನ್ನು ವಜಾ ಗೊಳಿಸಿತು.



ಮಾನ್ಯ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ಬೆಳಕಿನಲ್ಲಿ ದಿನಾಂಕ 10.2.2022 ರಂದು ಎಂ. ಕಾಚು ಫಾತಿಮಾ ವಿರುದ್ಧ ತಮಿಳುನಾಡು ರಾಜ್ಯ ಸರಕಾರ ಈ ಪ್ರಕರಣದಲ್ಲಿ ಮದ್ರಾಸ್ ಹೈಕೋರ್ಟಿನ ಮಧುರೈ ಪೀಠದ ನ್ಯಾಯಮೂರ್ತಿ ಎಸ್.ಎಂ. ಸುಬ್ರಹ್ಮಣ್ಯ ಇವರ ಏಕ ಸದಸ್ಯ ನ್ಯಾಯ ಪೀಠವು ಸರಕಾರಿ ನೌಕರ ವರ್ಗಾವಣೆಯನ್ನು ತನ್ನ ಹಕ್ಕು ಎಂದು ಪ್ರತಿಪಾದಿಸುವಂತಿಲ್ಲ ಎಂಬುದಾಗಿ ತೀರ್ಪು ನೀಡಿತು.


ಸರಕಾರಿ ಶಾಲಾ ಶಿಕ್ಷಕಿ ಶ್ರೀಮತಿ ಎಂ. ಕಾಚು ಫಾತಿಮಾ ಎಂಬವರು ದಂಪತಿ ಪ್ರಕರಣ ದಡಿ ವರ್ಗಾವಣೆಯ ಕೌನ್ಸಿಲಿಂಗ್ ವೇಳೆ ತಮ್ಮನ್ನು ವರ್ಗಾವಣೆ ಪಟ್ಟಿಯಲ್ಲಿ ಸೇರಿಸಬೇಕು ಹಾಗೂ ಆದ್ಯತೆಯಲ್ಲಿ ಪರಿಗಣಿಸಬೇಕೆಂದು ಕೋರಿ ಹೈಕೋರ್ಟ್ ಮೆಟ್ಟಲೇರಿದ್ದರು.


ಸಾರ್ವಜನಿಕ ಹಿತಾಸಕ್ತಿಯಿಂದ ವರ್ಗಾವಣೆ ಕೈಗೊಳ್ಳುವುದು ಸರಕಾರದ ಅಧಿಕಾರಕ್ಕೆ ಒಳಪಡುವಂತಹ ವಿಷಯವಾಗಿದೆ. ಸಾರ್ವಜನಿಕ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ದಕ್ಷ ಮತ್ತು ಪರಿಣಾಮಕಾರಿ ಆಡಳಿತವನ್ನು ಖಚಿತಪಡಿಸಿಕೊಳ್ಳಲು ಉದ್ಯೋಗಿಯನ್ನು ವರ್ಗಾವಣೆ ಮಾಡುವುದು ಯಾವುದೇ ಸರಕಾರದ ಪರಮಾಧಿಕಾರವಾಗಿದೆ ಎಂದು ನ್ಯಾಯಾಲಯವು ಅಭಿಪ್ರಾಯ ಪಟ್ಟಿತು. 



ಸರಕಾರಿ ಸೇವೆಯಲ್ಲಿ ವರ್ಗಾವಣೆ ಎಂಬುದು ಕೇವಲ ಪ್ರಾಸಂಗಿಕವಾದದ್ದು. ಅದರಲ್ಲಿ ನೀಡುವ ಯಾ ನೀಡಲಾಗುತ್ತಿರುವ ವಿನಾಯಿತಿಯನ್ನು ಎಂದಿಗೂ ಹಕ್ಕು ಎನ್ನಲಾಗದು ಎಂದು ನ್ಯಾಯ ಪೀಠ ತೀರ್ಪಿನಲ್ಲಿ ಹೇಳಿದೆ. ಸರಕಾರವು ಹೊರಡಿಸಿದ ವರ್ಗಾವಣೆ ಮಾರ್ಗಸೂಚಿ ಅನ್ವಯ ವರ್ಗಾವಣೆ ಪ್ರಕ್ರಿಯೆ ನಡೆಯತಕ್ಕದ್ದು. ಸದರಿ ಪ್ರಕ್ರಿಯೆಯಲ್ಲಿ ನ್ಯಾಯಾಲಯಗಳು ಮಧ್ಯಪ್ರವೇಶಿಸುವಂತಿಲ್ಲ ಎಂಬುದಾಗಿ ಹೈಕೋರ್ಟ್ ಅಭಿಪ್ರಾಯಪಟ್ಟು ಸರಕಾರಿ ನೌಕರ ಯಾವತ್ತೂ ವರ್ಗಾವಣೆಯನ್ನು ತನ್ನ ಹಕ್ಕೆಂದು ಪ್ರತಿಪಾದಿಸುವಂತಿಲ್ಲ ಎಂಬುದಾಗಿ ಮಹತ್ವದ ತೀರ್ಪನ್ನು ನೀಡಿದೆ.


✍ ಪ್ರಕಾಶ್ ನಾಯಕ್, ಶಿರಸ್ತೇದಾರರು, ಮಂಗಳೂರು ನ್ಯಾಯಾಲಯ ಸಂಕೀರ್ಣ


For Judgement Copy

ನಮೃತ ವರ್ಮಾ Vs ಉತ್ತರಪ್ರದೇಶ ರಾಜ್ಯ ಸರ್ಕಾರ




ಇದನ್ನೂ ಓದಿ:

ವರ್ಗಾವಣೆ ಸರ್ಕಾರಿ ನೌಕರರ ಹಕ್ಕು ಅಲ್ಲ: ಮದ್ರಾಸ್ ಹೈ ಕೋರ್ಟ್‌


Ads on article

Advertise in articles 1

advertising articles 2

Advertise under the article