-->
ಕಾನೂನು ದಿನ: ಸಂವಿಧಾನವನ್ನು ಶಿಥಿಲಗೊಳಿಸುವ ಪ್ರಯತ್ನ ನಡೆಯುತ್ತಲೇ ಇದೆ-ಹೈಕೋರ್ಟ್ ನ್ಯಾ. ಕೃಷ್ಣ ಎಸ್. ದೀಕ್ಷಿತ್

ಕಾನೂನು ದಿನ: ಸಂವಿಧಾನವನ್ನು ಶಿಥಿಲಗೊಳಿಸುವ ಪ್ರಯತ್ನ ನಡೆಯುತ್ತಲೇ ಇದೆ-ಹೈಕೋರ್ಟ್ ನ್ಯಾ. ಕೃಷ್ಣ ಎಸ್. ದೀಕ್ಷಿತ್

ಕಾನೂನು ದಿನ: ಸಂವಿಧಾನವನ್ನು ಶಿಥಿಲಗೊಳಿಸುವ ಪ್ರಯತ್ನ ನಡೆಯುತ್ತಲೇ ಇದೆ-ಹೈಕೋರ್ಟ್ ನ್ಯಾ. ಕೃಷ್ಣ ಎಸ್. ದೀಕ್ಷಿತ್





ಸಂವಿಧಾನವನ್ನೇ ಮುಗಿಸುವ ಪ್ರಯತ್ನ ಆರಂಭದಿಂದ ಈಗಿನ ವರೆಗೆ ನಡೆಯುತ್ತಲೇ ಇದೆ. ಅದು ತನ್ನನ್ನು ತಾನೇ ರಕ್ಷಿಸಿಕೊಳ್ಳದು. ಅದರ ರಕ್ಷಣೆಗೆ ನಾವು ಎಚ್ಚರಿಕೆಯಿಂದ ಇರವೇಕು. ಸಂವಿಧಾನ ತನ್ನಷ್ಟಕ್ಕೆ ತಾನೇ ರಕ್ಷಿಸಿಕೊಳ್ಳುತ್ತದೆ ಎಂಬ ಭ್ರಮೆ ಬೇಡ ಎಂದು ಹೈಕೋರ್ಟ್ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಹೇಳಿದರು.



ಸಂವಿಧಾನವು ಎದುರಿಸಿರುವ ಹಾಗೂ ಎದುರಿಸಬಹುದಾದ ತೊಂದರೆಗಳ ಪರಿಚಯ ನಮಗೆ ಇರಬೇಕು. ಸಂವಿಧಾನವನ್ನು ನ್ಯಾಯಾಲಯ ರಕ್ಷಣೆ ಮಾಡುತ್ತದೆ ಎಂಬ ಭ್ರಮೆಯನ್ನೂ ಇಟ್ಟುಕೊಳ್ಳಬೇಡಿ. ಹೈಕೋರ್ಟ್ ನ್ಯಾಯಾಧೀಶನಾಗಿಯೇ ನಾನು ಈ ಮಾತುಗಳನ್ನು ಈ ವೇದಿಕೆಯಿಂದ ಹೇಳುತ್ತಿದ್ದೇನೆ ಎಂದು ಅವರು ಹೇಳಿದರು.



ಮಂಗಳೂರು ವಕೀಲರ ಸಂಘ ಮತ್ತು ದಕ್ಷಿಣ ಕನ್ನಡ ಜಿಲ್ಲಾಕಾನೂನು ಸೇವೆಗಳ ಪ್ರಾಧಿಕಾರದ ಆಶ್ರಯದಲ್ಲಿ ನಡೆದ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡುತ್ತಿದ್ದರು.






ಸಂವಿಧಾನದ ರಚನೆಯಲ್ಲಿ ಕರಾವಳಿ ಕರ್ನಾಟಕದ ಅನರ್ಘ್ಯ ರತ್ನಗಳ ಪಾತ್ರವನ್ನು ಸ್ಮರಿಸಿದ ಅವರು, ಬೆನೆಗಲ್ ನರಸಿಂಗ ರಾವ್, ಬೆನೆಗಲ್ ಶಿವರಾವ್ ಮತ್ತು ಬೆನಗಲ್ ರಾಮರಾವ್ ಅವರನ್ನು ಕರಾವಳಿ ದೇಶಕ್ಕೆ ಕೊಡುಗೆಯಾಗಿ ನೀಡಿದೆ ಎಂದು ಸ್ಮರಿಸಿದರು. ಸಂವಿಧಾನ ಶಿಲ್ಪಿ ಭಾರತರತ್ನ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಮಹೋನ್ನತ ವ್ಯಕ್ತಿ ಎಂದು ಬಣ್ಣಿಸಿದ ಅವರು, ಸಂವಿಧಾನ ವಿಶ್ವಶ್ರೇಷ್ಟ ಎಂದು ಹೇಳಿದರು.



ಸಂವಿಧಾನ ರಚನೆಯಾದ ಸಂದರ್ಭದಲ್ಲಿ ಏನೆಲ್ಲ ಅಡ್ಡಿ ಆತಂಕಗಳನ್ನು ಎದುರಿಸಿ ಬಲಶಾಲಿಯಾಗಿ ಬಂದಿದೆ ಎಂಬುದನ್ನು ಉದಾಹರಣೆಗಳ ಮೂಲಕ ಅವರು ಎಳೆಎಳೆಯಾಗಿ ಬಿಚ್ಚಿಟ್ಟರು.



ಕೇಶವ ಸಿಂಗ್ ಪ್ರಕರಣದಿಂದ ಹಿಡಿದು, ಶಂಶೇರ್ ಸಿಂಗ್ ಪ್ರಕರಣ, ಕೇಶವಾನಂದ ಭಾರತಿ ಪ್ರಕರಣಗಳ ಉದಾಹರಣೆಗಳನ್ನು ನೀಡಿ ಆಗಿನ ಸಂದರ್ಭದಲ್ಲಿ ವಿವಿಧ ನ್ಯಾಯಮೂರ್ತಿಗಳು ನೀಡಿದ ತೀರ್ಪನ್ನು ವಿವರಿಸಿದರು.



ಕೇಶವ ಸಿಂಗ್ ಪ್ರಕರಣ, ಕೇಶವಾನಂದ ಭಾರತಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ದಿಟ್ಟ ತೀರ್ಪು ನೀಡಿದ ನಂತರ ಕೂಡ ಸಂವಿಧಾನವನ್ನು ಶಿಥಿಲಗೊಳಿಸುವ ಪ್ರಯತ್ನಗಳು ನಡೆದಿವೆ. ತುರ್ತು ಪರಿಸ್ಥಿತಿ ಜಾಋಇಯಾದಾಗ ಎಲ್ಲ ರಾಜಕೀಯ ನಾಯಕರು ಜೈಲಿನಲ್ಲಿ ಇದ್ದರು. ಈ ವಿಚಾರ ರಾಷ್ಟ್ರಪತಿಗಳಿಗೇ ಗೊತ್ತಿರಲಿಲ್ಲ. ಜನರಿಗೆ ಸಂವಿಧಾನ ನೀಡಿದ್ದ ಹಕ್ಕುಗಳನ್ನು ಮೊಟಕುಗೊಳಿಸುವ ಪ್ರಯತ್ನ ನಡೆದಾಗಲೆಲ್ಲ ಸುಪ್ರೀಂ ಕೋರ್ಟ್ ಅವುಗಳನ್ನು ರಕ್ಷಿಸಿದೆ. ಆದರೂ ಇನ್ನು ಅಂಥದ್ದು ಮುಂದೆ ನಡೆಯದು ಎಂಬುವುದನ್ನು ನಂಬುವ ಹಾಗಿಲ್ಲ ಎಂದು ಪ್ರಸ್ತುತ ಪರಿಸ್ಥಿತಿಯಲ್ಲಿ ನಡೆಯಬಹುದಾದ ಸಾಧ್ಯತೆಗಳನ್ನು ವಿವರಿಸಿದರು.



ನಾಗರಿಕರು ಎಚ್ಚರದಿಂದ ಇದ್ದರೆ ಮಾತ್ರ ಸಂವಿಧಾನವನ್ನು ಉಳಿಸಬಹುದು. ಇಲ್ಲದಿದ್ದರೆ ಇದರ ಬಗ್ಗೆ ಮನಬಂದಂತೆ ವ್ಯಾಖ್ಯಾನ ನೀಡಿ ಸಂವಿಧಾನದ ಆಶಯಗಳನ್ನು ಛಿದ್ರ ಮಾಡಬಹುದು. ಕೊನೆಗೆ ಇದು ತಾಕಲಾಟಕ್ಕೆ ಹೋಗಿ ನಿಲ್ಲುತ್ತದೆ. ಅಧಿಕಾರದಲ್ಲಿ ಇರುವ ಪಕ್ಷ ತುಂಬ ಪ್ರಬಲವಾಗಿದ್ದರೆ ಅವರಿಗೆ ಬೇಕಾದಂತೆ ಸಂವಿಧಾನವನ್ನು ಬದಲಿಸಬಹುದು, ವ್ಯಾಖ್ಯಾನ ಮಾಡಬಹುದು. ಅದು ಇಂದಿನವರು ಇರಬಹುದು, ಹಿಂದಿನವರೂ ಇರಬಹುದು, ನಾಳೆ ಬರುವವರೂ ಇರಬಹುದು. ಅಧಿಕಾರದ ಬಲದ ಮೇಲೆ ಅದು ಅವಲಂಬಿತವಾಗುತ್ತದೆ ಎಂದು ನ್ಯಾ. ಕೃಷ್ಣ ದೀಕ್ಷಿತ್ ಎಚ್ಚರಿಸಿದರು.



ಈಗ ಎಷ್ಟು ಮಂದಿ ಜೈಲಿನಲ್ಲಿ ಇದ್ದಾರೆ. ಎಷ್ಟು ಮಂದಿ ಕೇಂದ್ರ ಸಚಿವರು, ಮುಖ್ಯಮಂತ್ರಿಗಳು, ಕ್ಯಾಬಿನೆಟ್ ಸಚಿವರು, ಉನ್ನತ ಅಧಿಕಾರಿಗಳು ಜೈಲಿನಲ್ಲಿ ಇದ್ದಾರೆ. ಶಿಕ್ಷೆ ಅನುಭವಿಸುತ್ತಿದ್ದಾರೆ ಎಂಬುದನ್ನು ಒಮ್ಮೆ ಯೋಚಿಸಿ. ಸಂಸತ್ತಿನಲ್ಲಿ ಹಣದ ವ್ಯಾಪಾರ ನಡೆದರೂ ಕೇಳುವಂತಿಲ್ಲ ಎನ್ನುವಷ್ಟು ಧೈರ್ಯ ಅಧಿಕಾರಸ್ಥರಿಗೆ ಇದೆ. ನಿಮ್ಮ ನ್ಯಾಯಾಲಯಗಳ ಕಲಾಪದಲ್ಲಿ ನಾವು ಮೂಗು ತೂರಿಸುತ್ತೇವಾ.. ಎಂದು ಕೇಳುತ್ತಾರೆ. ಇಂತಹ ಸ್ಥಿತಿಯಲ್ಲಿ ಸಂವಿಧಾನವನ್ನು ನಾಳೆ ಹೇಗೆ ರಕ್ಷಿಸಬಲ್ಲಿರಿ ಎಂದು ಪ್ರಶ್ನಿಸಿದರು.







Ads on article

Advertise in articles 1

advertising articles 2

Advertise under the article