![ಚೆಕ್ ಅಮಾನ್ಯ ಪ್ರಕರಣ: ಫಿರ್ಯಾದಿಯಲ್ಲಿ ಬ್ಯಾಂಕ್ ಹೆಸರು ತಪ್ಪು- ತಿದ್ದುಪಡಿಗೆ ಅವಕಾಶ ಇದೆ ಎಂದ ಹೈಕೋರ್ಟ್ ಚೆಕ್ ಅಮಾನ್ಯ ಪ್ರಕರಣ: ಫಿರ್ಯಾದಿಯಲ್ಲಿ ಬ್ಯಾಂಕ್ ಹೆಸರು ತಪ್ಪು- ತಿದ್ದುಪಡಿಗೆ ಅವಕಾಶ ಇದೆ ಎಂದ ಹೈಕೋರ್ಟ್](https://blogger.googleusercontent.com/img/b/R29vZ2xl/AVvXsEgwqg7Kh4vZteppoq4e2SHq8YQRXwmzjnFU6we6CrAvQlY6YInT0KSgN0zef0BMAPKU1HxWRcZJhtg3PRK6kp5EwfZSQTYQ-ooPJKn66s4b5aYz3YXGHazHJRd-PF0I3FPciTT76cwNfsXA9M4tIP9cTNC83EdeCZ-aZe0IreutRsGOQ2nKSk7BVIEiGw/w582-h640/Justice%20and%20Equity.jpg.jpg)
ಚೆಕ್ ಅಮಾನ್ಯ ಪ್ರಕರಣ: ಫಿರ್ಯಾದಿಯಲ್ಲಿ ಬ್ಯಾಂಕ್ ಹೆಸರು ತಪ್ಪು- ತಿದ್ದುಪಡಿಗೆ ಅವಕಾಶ ಇದೆ ಎಂದ ಹೈಕೋರ್ಟ್
ಚೆಕ್ ಅಮಾನ್ಯ ಪ್ರಕರಣ: ಫಿರ್ಯಾದಿಯಲ್ಲಿ ಬ್ಯಾಂಕ್ ಹೆಸರು ತಪ್ಪು- ತಿದ್ದುಪಡಿಗೆ ಅವಕಾಶ ಇದೆ ಎಂದ ಹೈಕೋರ್ಟ್
ಚೆಕ್ ಅಮಾನ್ಯ ಪ್ರಕರಣದಲ್ಲಿ ದೂರುದಾರರು ವಿಚಾರಣಾ ನ್ಯಾಯಾಲಯಕ್ಕೆ ಸಲ್ಲಿಸಿದ ಫಿರ್ಯಾದಿಯಲ್ಲಿ ಅಮಾನ್ಯಗೊಂಡ ಚೆಕ್ಗೆ ಸಂಬಂಧಿಸಿದ ಬ್ಯಾಂಕ್ ಹೆಸರು ತಪ್ಪಾಗಿ ನಮೂದಾಗಿದ್ದು, ಈ ಕುರಿತಂತೆ ತಿದ್ದುಪಡಿ ಮಾಡಲು ದೂರುದಾರರಿಗೆ ಅವಕಾಶ ಇದೆ ಎಂದು ಮಧ್ಯಪ್ರದೇಶ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಸುಪ್ರೀಂ ಕೋರ್ಟಿನ ತೀರ್ಪನ್ನು ಉಲ್ಲೇಖಿಸಿದ ಹೈಕೋರ್ಟ್ ನ್ಯಾ. ದಿನೇಶ್ ಕುಮಾರ್ ಪಾಲೀವಾಲ್ ನೇತೃತ್ವದ ನ್ಯಾಯಪೀಠ ಈ ತೀರ್ಪು ನೀಡಿದೆ.
ಸದ್ರಿ ಪ್ರಕರಣದಲ್ಲಿ ಖಾತೆ ಮುಚ್ಚಲಾಗಿದೆ ಎಂಬ ಷರಾದೊಂದಿಗೆ ಚೆಕ್ ಅಮಾನ್ಯಗೊಂಡಿತ್ತು. ದೂರುದಾರರು ಫಿರ್ಯಾದಿಯನ್ನು ಸಲ್ಲಿಸುವಾಗ ಎಚ್ಡಿಎಫ್ಸಿ ಬ್ಯಾಂಕ್ ಎಂಬ ಹೆಸರನ್ನು ನಮೂದಿಸುವ ಬದಲು ತಪ್ಪಾಗಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ಎಂಬುದಾಗಿ ನಮೂದಿಸಿದ್ದರು.
ವಿಚಾರಣಾ ಹಂತದಲ್ಲಿ ದೂರುದಾರರು ನ್ಯಾಯಾಲಯಕ್ಕೆ ಅರ್ಜಿಯನ್ನು ಸಲ್ಲಿಸಿ ತಿದ್ದುಪಡಿಯನ್ನು ಕೋರಿಕೊಂಡಿದ್ದರು. ಎದುರುದಾರರ ಪರ ವಕೀಲರು ಈ ಅರ್ಜಿಗೆ ಗಂಭೀರ ತಕರಾರನ್ನು ಹಾಕಿ, ಇದು ದೂರಿನ ಸ್ವರೂಪವನ್ನೇ ಬದಲಾಯಿಸುತ್ತದೆ ಎಂದು ಹೇಳಿದರು. ಆದರೂ, ಈ ಅರ್ಜಿಯನ್ನು ಜೆಎಂಎಫ್ಸಿ ನ್ಯಾಯಾಲಯ ಪುರಸ್ಕರಿಸಿತ್ತು.
ದೂರುದಾರರು ತಮ್ಮ ವಕೀಲರ ಮೂಲಕ ಆರೋಪಿಗೆ ಜಾರಿ ಮಾಡಿದ ಡಿಮ್ಯಾಂಡ್ ನೋಟೀಸ್ನಲ್ಲೂ ಬ್ಯಾಂಕ್ ಹೆಸರು ಪಂಜಾಬ್ ನ್ಯಾಷನಲ್ ಬ್ಯಾಂಕ್ ಎಂದಾಗಿತ್ತು ಮತ್ತು ಆ ದಾಖಲೆಯನ್ನು ವಿಚಾರಣಾ ನ್ಯಾಯಾಲಯ ನಿಶಾನೆಯಾಗಿ ಗುರುತಿಸಿತ್ತು. ದೂರುದಾರರ ಸಾಕ್ಷ್ಯ ವಿಚಾರಣೆಯಲ್ಲೂ ಬ್ಯಾಂಕ್ ಹೆಸರು ತಪ್ಪಾಗಿದ್ದು, ಪ್ರಮಾಣೀಕೃತ ಹೇಳಿಕೆಯನ್ನೂ ಅದೇ ತಪ್ಪು ಮರುಕಳಿಸಿತ್ತು. ಈ ಎಲ್ಲ ವಿಷಯಗಳ ಬಗ್ಗೆ ಆರೋಪಿ ಪರ ವಕೀಲರು ತಗಾದೆ ತೆಗೆದರೂ, ತಿದ್ದುಪಡಿ ಕೋರಿ ದೂರುದಾರರು ಸಲ್ಲಿಸಿದ ಅರ್ಜಿಯನ್ನು ಜೆಎಂಎಫ್ಸಿ ನ್ಯಾಯಾಲಯ ಪುರಸ್ಕರಿಸಿತ್ತು.
ನ್ಯಾಯಾಲಯದ ಈ ಆದೇಶವನ್ನು ಪ್ರಶ್ನಿಸಿ ಆರೋಪಿ ಹೈಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು.
ಗೋಕುಲ್ದಾಸ್ Vs ಅಟಲ್ ಬಿಹಾರಿ ಮತ್ತೊಬ್ಬರು (2017) 4 MPLJ 73 ಹಾಗೂ ಯು.ಪಿ. ಪೊಲ್ಯೂಷನ್ ಬೋರ್ಡ್ Vs ಮೋದಿ ಡಿಸ್ಟಿಲ್ಲರೀಸ್ (1987 3 SCC 684) ಪ್ರಕರಣದಲ್ಲಿ ಮಾನ್ಯ ಸರ್ವೋಚ್ಚ ನ್ಯಾಯಾಲಯ ಗಮನಿಸಿದಂತೆ, ತಿದ್ದುಪಡಿಗೆ ಅನುವು ಮಾಡಿಕೊಡಬಹುದು ಎಂದು ಹೇಳಿತ್ತು.
ಎದುರುದಾರರಿಗೆ ಯಾವುದೇ ಹಾನಿ ಉಂಟಾಗದಿದ್ದರೆ, ಅರ್ಜಿಯನ್ನು ಪರಿಗಣಿಸಿ ತಿದ್ದುಪಡಿ ಮಾಡಲು ಅವಕಾಶ ಕಲ್ಪಿಸಿಕೊಡಬಹುದು ಎಂದು ಮಾನ್ಯ ಸರ್ವೋಚ್ಚ ನ್ಯಾಯಾಲಯ ಎಸ್.ಆರ್. ಸುಕುಮಾರ್ Vs ಸುನ್ನದ್ ರಾಘುರಾವ್ (2015) 9 SCC 609 ಪ್ರಕರಣದಲ್ಲಿ ನೀಡಿದ್ದ ತೀರ್ಪನ್ನು ಹೈಕೋರ್ಟ್ ಗಮನಿಸಿತು.
ಸದ್ರಿ ಪ್ರಕರಣದಲ್ಲಿ ಚೆಕ್ ನಂಬರ್, ಚೆಕ್ ನೀಡಿಕೆಯಲ್ಲಿ ಯಾವುದೇ ವಿವಾದವಿರಲಿಲ್ಲ. ಹಾಗಾಗಿ ಗೋಕುಲ್ದಾಸ್ ಪ್ರಕರಣದ ಲಾಭ ಈ ಪ್ರಕರಣದಲ್ಲಿ ಮೇಲ್ಮನವಿದಾರರಿಗೆ ಸಿಗುವುದಿಲ್ಲ. ಟೈಪ್ ತಪ್ಪಿನಿಂದ ಈ ಪ್ರಮಾದ ಸಂಭವಿಸಿದೆ ಎಂಬ ಅರ್ಜಿಯಲ್ಲಿ ನೀಡಿದ ಕಾರಣವನ್ನು ಪುರಸ್ಕರಿಸಿದ ಹೈಕೋರ್ಟ್, "ಪ್ರಕರಣದಲ್ಲಿ ಆದೇಶ ಹೊರಡಿಸುವ ಮುನ್ನ ನ್ಯಾಯತೀರ್ಮಾನದ ಯಾವುದೇ ಸಂದರ್ಭದಲ್ಲಿ ದೂರನ್ನು ತಿದ್ದುಪಡಿ ಮಾಡಲು ಅವಕಾಶ ಇದೆ" ಎಂದು ಹೇಳಿ ಮೇಲ್ಮನವಿಯನ್ನು ತಿರಸ್ಕರಿಸಿತು.
ಪ್ರಕರಣ: ಭೂಪೇಂದ್ರ ಸಿಂಗ್ ಥಾಕೂರ್ Vs ಉಮೇಶ್ ಸಾಹೂ
ಮಧ್ಯಪ್ರದೇಶ ಹೈಕೋರ್ಟ್, MISC. CRIMINAL CASE No. 35101 of 2022 Dated 26-07-2022