![20 ವರ್ಷಗಳ ಹೋರಾಟಕ್ಕೆ ತೆರೆ- ಪೌರ ಕಾರ್ಮಿಕರ ಸೇವೆ ಕಾಯಂ- ಹೈಕೋರ್ಟ್ ಮಹತ್ವದ ಆದೇಶ 20 ವರ್ಷಗಳ ಹೋರಾಟಕ್ಕೆ ತೆರೆ- ಪೌರ ಕಾರ್ಮಿಕರ ಸೇವೆ ಕಾಯಂ- ಹೈಕೋರ್ಟ್ ಮಹತ್ವದ ಆದೇಶ](https://blogger.googleusercontent.com/img/b/R29vZ2xl/AVvXsEjTKYlPLla4aYBOJ4-XnNIL0lywcVE2KSg9UIGu9NoXlhpE9cF1dMH_DNg8UxDx5TAEhhRq70zh1q9y9KC5l_xkb8UbvTY-S6g8fNuXNEh-gCDxGltunf11ri-04kPa_DALEh7ps3WFxhdxSKyackYlSdXal0E-1xXwo1thr2xafvHouRfNcbdIJzNEKg/w640-h356/1235.jpg)
20 ವರ್ಷಗಳ ಹೋರಾಟಕ್ಕೆ ತೆರೆ- ಪೌರ ಕಾರ್ಮಿಕರ ಸೇವೆ ಕಾಯಂ- ಹೈಕೋರ್ಟ್ ಮಹತ್ವದ ಆದೇಶ
20 ವರ್ಷಗಳ ಹೋರಾಟಕ್ಕೆ ತೆರೆ- ಪೌರ ಕಾರ್ಮಿಕರ ಸೇವೆ ಕಾಯಂ- ಹೈಕೋರ್ಟ್ ಮಹತ್ವದ ಆದೇಶ
ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪೊಂದರಲ್ಲಿ ತುಮಕೂರು ನಗರ ಪಾಲಿಕೆಯಲ್ಲಿ ದಿನಗೂಲಿ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿದ್ದ 250 ಪೌರಕಾರ್ಮಿಕರ ಸೇವೆ ಕಾಯಂಗೊಳಿಸುವಂತೆ ಆದೇಶಿಸಿದೆ. ಈ ಮೂಲಕ ಕಳೆದ 20 ವರ್ಷಗಳಿಂದ ನಡೆಯುತ್ತಿದ್ದ ಕಾನೂನು ಸಮರಕ್ಕೆ ಹೈಕೋರ್ಚ್ ಅಂತಿಮ ಮುದ್ರೆ ಹಾಕಿದೆ.
ಪ್ರಕರಣದಲ್ಲಿ ವ್ಯಾಜ್ಯದಾರರಾದ 250 ಪೌರ ಕಾರ್ಮಿಕರ ಸೇವೆಯನ್ನು ಖಾಯಂಗೊಳಿಸಬೇಕು. ಈ ನೌಕರರು, ಅವರು ಕೆಲಸಕ್ಕೆ ಸೇರಿದ ದಿನಾಂಕದಿಂದ ಪೂರ್ವಾನ್ವಯಗೊಳಿಸಿ ಈ ಆದೇಶ ಜಾರಿಗೊಳಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ. ಮುಂದಿನ ಮೂರು ತಿಂಗಳಲ್ಲಿ ಈ ಆದೇಶವನ್ನು ಜಾರಿಗೊಳಿಸುವಂತೆ ಅದು ತುಮಕೂರು ನಗರ ಪಾಲಿಕೆ (ಹಿಂದಿನ ನಗರಸಭೆ)ಗೆ ನಿರ್ದೇಶನ ನೀಡಿದೆ.
ತುಮಕೂರು ನಗರ ಪಾಲಿಕೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಸೂರಜ್ ಗೋವಿಂದರಾಜ್ ನೇತೃತ್ವದ ನ್ಯಾಯಪೀಠ ಈ ಆದೇಶ ಮಾಡಿದ್ದು, ಪೌರ ಕಾರ್ಮಿಕರ ಕೆಲಸಕ್ಕೆ ಸಮಾನ ವೇತನ ಹಾಗೂ ಹಿಂಬಾಕಿ ಪಾವತಿಸಬೇಕು. ಜೊತೆಗೆ ಅವರಿಗೆ ಎಲ್ಲ ಕಾನೂನುಬದ್ಧ ಸೌಲಭ್ಯ ನೀಡಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಪೌರ ಕಾರ್ಮಿಕರು 20 ವರ್ಷಗಳಿಂದ ನಗರ ಪಾಲಿಕೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಸುದೀರ್ಘ 20 ವರ್ಷಗಳನ್ನು 'ತಾತ್ಕಾಲಿಕ ಸಮಯ' ಎಂದು ಪರಿಗಣಿಸಲಾಗದು. ವಾದದಲ್ಲಿ ಹೇಳಿದಂತೆ, ಗುತ್ತಿಗೆದಾರರು ಬದಲಾದರೂ ಪೌರ ಕಾರ್ಮಿಕರು ಬದಲಾಗಿಲ್ಲ. ಈ ಪೌರ ಕಾರ್ಮಿಕರ ಹಕ್ಕುಗಳು ಮತ್ತು ಹಿತಾಸಕ್ತಿಯನ್ನು ನ್ಯಾಯಾಲಯ ರಕ್ಷಿಸಬೇಕಿದೆ. ಕೇವಲ ಅತ್ಯಲ್ಪ ಸಂಬಳ ನೀಡುವ ಹುನ್ನಾರದಿಂದ ಈ ಪೌರ ಕಾರ್ಮಿಕರನ್ನು ಕಾಂಟ್ರ್ಯಾಕ್ಟ್ ಆಧಾರದಲ್ಲಿ ನಿಯುಕ್ತಿಗೊಳಿಸಲಾಗಿದೆ ಎಂದು ಪಾಲಿಕೆಯ ಧೋರಣೆಯನ್ನು ನ್ಯಾಯಪೀಠ ಕಟುವಾಗಿ ಟೀಕಿಸಿದೆ.
ಇದು 20 ವರ್ಷಗಳ ಹೋರಾಟ
ಹೌದು, ಇದು 20 ವರ್ಷಗಳ ಹೋರಾಟ! 2002ರಲ್ಲಿ ಆಗಿನ ತುಮಕೂರು ನಗರಸಭೆಯಲ್ಲಿ ಸುಮಾರು 250 ಪೌರ ಕಾರ್ಮಿಕರು ದಿನಗೂಲಿ ವೇತನದ ಆಧಾರದ ಮೇಲೆ ಕೆಲಸ ಮಾಡುತ್ತಿದ್ದರು. ಅವರ ಹುದ್ದೆಯನ್ನು ಖಾಯಂಗೊಳಿಸಲು ಎಂದು ಕೇಳಿಕೊಂಡು 'ನಗರಸಭೆ ಪೌರ ಕಾರ್ಮಿಕರ ಸಂಘ' ಮನವಿ ಸಲ್ಲಿಸಿತ್ತು. ಈ ಅರ್ಜಿಯನ್ನು ಸರ್ಕಾರ 2002ರ ನವೆಂಬರ್ನಲ್ಲಿ ಕೈಗಾರಿಕಾ ನ್ಯಾಯಮಂಡಳಿಗೆ ಶಿಫಾರಸು ಮಾಡಿತ್ತು.
ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮಂಡಳಿ, ಪೌರಕಾರ್ಮಿಕರು ಸೇವೆ ಕಾಯಂಗೆ ಅರ್ಹರಲ್ಲ ಎಂದು ತೀರ್ಪು ನೀಡಿತ್ತು. 2006ರ ಜುಲೈ 4ರಂದು ನೀಡಿದ ಈ ಆದೇಶವನ್ನು ಪ್ರಶ್ನಿಸಿ ಪೌರಕಾರ್ಮಿಕರ ಸಂಘದ ಅರ್ಜಿ ಹೈಕೋರ್ಟ್ ಮೆಟ್ಟಿಲೇರಿತ್ತು. ಏಕಸದಸ್ಯ ಪೀಠ ಈ ಅರ್ಜಿಯನ್ನು 2009ರಲ್ಲಿ ವಜಾಗೊಳಿಸಿತ್ತು. ಪಟ್ಟುಬಿಡದ ಕಾರ್ಮಿಕರ ಸಂಘ ಮೇಲ್ಮನವಿ ಮಾಡಿತು. ಇದನ್ನು ಪರಿಗಣಿಸಿದ್ದ ವಿಭಾಗೀಯ ಪೀಠ, ಪ್ರಕರಣವನ್ನು ಮತ್ತೊಮ್ಮೆ ಪರಿಶೀಲಿಸುವಂತೆ ನ್ಯಾಯಾಧಿಕರಣಕ್ಕೆ ನಿರ್ದೇಶಿಸಿತ್ತು.
ಹೀಗೆ, ಮತ್ತೆ ಹೊಸತಾಗಿ ಪ್ರಕರಣವನ್ನು ವಿಚಾರಣೆ ನಡೆಸಿದ ಕೈಗಾರಿಕಾ ಟ್ರಿಬ್ಯೂನಲ್ 26-09-2017ರಲ್ಲಿ ಮಹತ್ವದ ತೀರ್ಪು ನೀಡಿತು. ಈ ನೌಕರರ ಸೇವೆ ಕಾಯಂ ಮಾಡದೆ ದುಡಿಸಿಕೊಂಡಿರುವುದು, ಸಮಾನ ಕೆಲಸಕ್ಕೆ ಸಮಾನ ವೇತನ ನೀಡದಿರುವುದು, ಸಮವಸ್ತ್ರ, ಪಾದರಕ್ಷೆ, ಸುರಕ್ಷಿತ ಗ್ಲೌಸ್ ನೀಡದಿರುವುದು ನ್ಯಾಯಸಮ್ಮತವಲ್ಲ ಎಂದ ನ್ಯಾಯಮಂಡಳಿ, ನೌಕರರು ಕೆಲಸಕ್ಕೆ ಸೇರಿದ ದಿನದಿಂದ ಪೂರ್ವಾನ್ವಯವಾಗುವಂತೆ ಕಾಯಂ ಮಾಡಬೇಕು ಎಂದು ಆದೇಶಿಸಿತು.
ಅವರಿಗೆ ತಕ್ಕುದಾದ ಶ್ರೇಣಿಯ ಉದ್ಯೋಗಕ್ಕೆ ಸಮಾನ ವೇತನ, ಬ್ಯಾಕ್ ವೇಜಸ್(ಹಿಂಬಾಕಿ), ಸಕಲ ಕಾನೂನುಬದ್ಧ ಪ್ರಯೋಜನ, ಸೌಲಭ್ಯ ಹಾಗೂ ಪರಿಹಾರ ನೀಡಬೇಕು. ಅಲ್ಲದೆ, ನಿವೃತ್ತಿಯಾದ ಕಾರ್ಮಿಕನಿಗೆ ಎಲ್ಲ ಹಣಕಾಸು ಪ್ರಯೋಜನ ಕಲ್ಪಿಸಬೇಕು ಎಂದು ನಿರ್ದೇಶಿಸಿತ್ತು.
ಈ ಆದೇಶ ಪ್ರಶ್ನಿಸಿ 2018ರಲ್ಲಿ ತುಮಕೂರು ನಗರ ಪಾಲಿಕೆ ಹೈಕೋರ್ಟ್ ಮೆಟ್ಟಿಲೇರಿತು. ಆದರೆ, ಅದು ಸಲ್ಲಿಸಿದ ತಕರಾರು ಅರ್ಜಿಯನ್ನು ಹೈಕೋರ್ಟ್ ಇದೀಗ ವಜಾಗೊಳಿಸಿದೆ ಹಾಗೂ ನ್ಯಾಯಮಂಡಳಿಯ ಆದೇಶ ಜಾರಿಗೆ ಪಾಲಿಕೆಗೆ ಮೂರು ತಿಂಗಳು ಗಡುವು ನೀಡಿದೆ.
ಇದನ್ನೂ ಓದಿ
20 ವರ್ಷಗಳ ಕಾಲಬದ್ಧ ವೇತನ ಭಡ್ತಿ: ಸರ್ಕಾರಿ ಆದೇಶ ಪೂರ್ವಾನ್ವಯಗೊಳಿಸಿ ಜಾರಿ- ಹೈಕೋರ್ಟ್ ಮಹತ್ವದ ಆದೇಶ
ಸರ್ಕಾರಿ ನೌಕರರ ಪದೋನ್ನತಿ: ಭಾಗ್ಯದ ಬಾಗಿಲು ತೆರೆದ ಮಹತ್ವದ ಸುಪ್ರೀಂ ಕೋರ್ಟ್ ತೀರ್ಪು
ವಿಮೆ ಪರಿಹಾರಕ್ಕೆ HDFC ಹಿಂದೇಟು: ಬಿಸಿ ಮುಟ್ಟಿಸಿದ ಗ್ರಾಹಕ ನ್ಯಾಯಾಲಯ, ಬಡ್ಡಿ ಸಹಿತ 30 ಲಕ್ಷ ಪಾವತಿಗೆ ಆದೇಶ
ಮಹಿಳಾ ನ್ಯಾಯಾಧೀಶರಿಗೆ ಚಾಕು ತೋರಿಸಿ ಬೆದರಿಸಿದ ಆರೋಪಿ: ಕೋರ್ಟನ್ನೇ ಬೆಚ್ಚಿಬೀಳಿಸಿದ ಪ್ರಸಂಗ!