![ಸಿವಿಲ್ ವ್ಯಾಜ್ಯದಲ್ಲಿ ಪೊಲೀಸರ ಮಧ್ಯಪ್ರವೇಶ: ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದ ವ್ಯಕ್ತಿ ಅರೆಸ್ಟ್! ಮುಂದೇನಾಯಿತು..? ಸಿವಿಲ್ ವ್ಯಾಜ್ಯದಲ್ಲಿ ಪೊಲೀಸರ ಮಧ್ಯಪ್ರವೇಶ: ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದ ವ್ಯಕ್ತಿ ಅರೆಸ್ಟ್! ಮುಂದೇನಾಯಿತು..?](https://blogger.googleusercontent.com/img/b/R29vZ2xl/AVvXsEifuUZmxuEfc71aE2cxROyO6PIoEn61PvUxD7wOzmr1xZpF2bZi05Fm7tpLPAHWOGFONVAWxaCa6nXVYCsl-4DAGEpKDYRhgk3BRgxg4fA5C46BXKOTxV2GXZH_woivjdhpXkv7yl_i7XaR6jg_Z73bikc5mQhlOtI7jn7Z2wke55ZuIMU06ytHj1VVxw/w640-h418/Police-2.jpg)
ಸಿವಿಲ್ ವ್ಯಾಜ್ಯದಲ್ಲಿ ಪೊಲೀಸರ ಮಧ್ಯಪ್ರವೇಶ: ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದ ವ್ಯಕ್ತಿ ಅರೆಸ್ಟ್! ಮುಂದೇನಾಯಿತು..?
ಸಿವಿಲ್ ವ್ಯಾಜ್ಯದಲ್ಲಿ ಪೊಲೀಸರ ಮಧ್ಯಪ್ರವೇಶ: ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದ ವ್ಯಕ್ತಿ ಅರೆಸ್ಟ್! ಮುಂದೇನಾಯಿತು..?
ಪೊಲೀಸರು ಸಿವಿಲ್ ವ್ಯಾಜ್ಯಗಳಲ್ಲಿ ಮಧ್ಯಪ್ರವೇಶಿಸುವಂತಿಲ್ಲ ಎಂಬುದಾಗಿ ಸುಪ್ರೀಂ ಕೋರ್ಟ್, ಹೈಕೋರ್ಟ್ ಗಳು ಹಲವು ಬಾರಿ ತೀರ್ಪುಗಳನ್ನು, ನಿರ್ದೇಶನಗಳನ್ನು ನೀಡಿವೆ. ಆದರೆ, ಪೊಲೀಸರು ಮಾತ್ರ ಇದರ ಬಗ್ಗೆ ಪದೇ ಪದೇ ನಿರ್ಲಕ್ಷ್ಯ ತೋರುತ್ತಿದ್ಧಾರೆ. ಬೆಂಗಳೂರಿನ ಇನ್ಸ್ಪೆಕ್ಟರ್ವೊಬ್ಬ ಸಿವಿಲ್ ವ್ಯಾಜ್ಯದಲ್ಲಿ ಮಧ್ಯಪ್ರವೇಶ ಮಾಡಿದ್ದು, ಆತನ ವಿರುದ್ಧ ದೂರು ದಾಖಲಾಗಿದೆ.
ಸ್ಥಿರಾಸ್ತಿ ಮಾಲಕತ್ವಕ್ಕೆ ಸಂಬಂಧಿಸಿದಂತೆ ಪೊಲೀಸ್ ಅಧಿಕಾರಿ ತಮ್ಮ ಅಧಿಕಾರ ಮಿತಿಯನ್ನು ಮೀರಿದ್ದರು. ಸಿವಿಲ್ ವ್ಯಾಜ್ಯವಾಗಿದ್ದರೂ ಬನಶಂಕರಿ ಇನ್ಸ್ಪೆಕ್ಟರ್ ಗಿರೀಶ್ ಎಂಬವರು ಎದುರುದಾರರ ಪರ ವಹಿಸಿದ್ದರು. ಆದುದರಿಂದ, ಪ್ರಕರಣದಲ್ಲಿ ತಮಗೆ ರಕ್ಷಣೆ ಒದಗಿಸಬೇಕು ಹಾಗೂ ಪೊಲೀಸ್ ಅಧಿಕಾರಿ ಗಿರೀಶ್ ವಿರುದ್ಧ ಕ್ರಮ ಜರುಗಿಸಬೇಕು ಎಂದು ಮನವಿ ಮಾಡಿ ಬನಶಂಕರಿ ನಿವಾಸಿ ಧನಂಜಯ ಹಿರಿಯ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ. ಬೆಂಗಳೂರು ನಗರ ಪೊಲೀಸ್ ಆಯುಕ್ತರು ಹಾಗೂ ದಕ್ಷಿಣ ವಿಭಾಗದ ಉಪ ಪೊಲೀಸ್ ಅಯುಕ್ತರಿಗೆ ಅವರು ಲಿಖಿತ ದೂರು ಸಲ್ಲಿಸಿದ್ದಾರೆ.
ಬೆಂಗಳೂರು ಬನಶಂಕರಿಯ ಎರಡನೇ ಹಂತದಲ್ಲಿ ಧನಂಜಯ ಅವರ ಸೋದರ ಜಯಪಾಲ್ ಎಂಬುವರಿಗೆ ಎರಡು ಅಂತಸ್ತಿನ ಮನೆ ಇದೆ. ಜಯಪಾಲ್ ಮಕ್ಕಳಿಲ್ಲದೇ ಮೃತಪಟ್ಟಿದ್ದಾರೆ. ಸಾಯುವ ಮುನ್ನ ಜಯಪಾಲ್ ವಿಲ್ ಮಾಡಿದ್ದು, ತಮ್ಮ ಆಸ್ತಿಯನ್ನು ಅವರ ಮನೆಯಲ್ಲಿ ಬಾಡಿಗೆಗೆ ಇದ್ದ ನಿವೇದಿತಾ ಎಂಬುವರ ಹೆಸರಿಗೆ ವಿಲ್ ಮಾಡಿದ್ದರು ಎನ್ನಲಾಗಿದೆ.
ವಾರಸುದಾರರಿಲ್ಲದ ಮೃತ ಅಣ್ಣನ ಆಸ್ತಿ ತಮಗೆ ಸೇರಬೇಕೆಂದು ಧನಂಜಯ ಅವರು ಕೋರ್ಟ್ ನಲ್ಲಿ ನಿವೇದಿತಾ ವಿರುದ್ಧ ಪ್ರಕರಣ ದಾಖಲಿಸಿದ್ದರು. ಕೋರ್ಟ್ ವ್ಯಾಜ್ಯ ನಡೆಯುತ್ತಿದ್ದ ಸಂದರ್ಭದಲ್ಲೇ ಪೊಲೀಸ್ ಅಧಿಕಾರಿ ಗಿರೀಶ್, ನಿವೇದಿತಾ ಪರ ವಹಿಸಿದ್ದರು. ಅಲ್ಲದೆ, ತಮಗೆ ಮನೆ ಬಿಟ್ಟುಕೊಡುವಂತೆ ಒತ್ತಡ ಹೇರುತ್ತಿದ್ದಾರೆ ಎಂದು ದೂರುದಾರ ಧನಂಜಯ ಆರೋಪಿಸಿದ್ದಾರೆ.
ಕಳೆದ ಡಿಸೆಂಬರ್ 17 ರಂದು ಆಸ್ತಿ ಒಡೆತನದ ವಿಚಾರದಲ್ಲಿ ನಿವೇದಿತಾ ಹಾಗೂ ಧನಂಜಯ ಅವರು ಮನೆ ನೋಡಿಕೊಳ್ಳಲು ಇರಿಸಿದ್ದ ವ್ಯಕ್ತಿಗಳ ನಡುವೆ ಗಲಾಟೆ ಉಂಟಾಯಿತು. ಈ ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲೇರಿತ್ತು. ಎರಡೂ ಕಡೆಯವರು ಪರಸ್ಪರ ದೂರು ನೀಡಿದ್ದರೂ ಗಿರೀಶ್ ನಾಯಕ್ FIR ದಾಖಲಿಸಿಲ್ಲ. ಅದರ ಬದಲು ಧನಂಜಯ ಅವರು ಮನೆ ನೋಡಿಕೊಳ್ಳಲು ಇರಿಸಿದ್ದವರನ್ನು ಮನೆ ಖಾಲಿ ಮಾಡುವಂತೆ ಮಾಡಿ ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ.
ಆರೋಪಿತ ಪೊಲೀಸರಪ್ಪನ ವಿರುದ್ಧ ಧನಂಜಯ ಅವರು ನಗರ ಪೊಲೀಸ್ ಆಯುಕ್ತರು ಹಾಗೂ ದಕ್ಷಿಣ ವಿಭಾಗದ ಡಿಸಿಪಿ ಅವರಿಗೆ ಲಿಖಿತ ದೂರು ನೀಡಿದ್ದಾರೆ. ಗಿರೀಶ್ ನಾಯಕ್ ಈ ಆಸ್ತಿಯನ್ನು ಕಬಳಿಸಲು ಎಲ್ಲ ರೀತಿಯ ಒಳಸಂಚು ಮಾಡುತ್ತಿದ್ದಾರೆ ಹಾಗಾಗಿ, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಮತ್ತು ತನಗೆ ರಕ್ಷಣೆ ನೀಡಬೇಕು ಎಂದು ಧನಂಜಯ ದೂರಿನಲ್ಲಿ ವಿನಂತಿಸಿದ್ದಾರೆ.