![ಸಾಗುವಳಿ ಚೀಟಿ ಮಂಜೂರು ವಿಳಂಬ: ತಹಶೀಲ್ದಾರ್ ವಿರುದ್ಧ ದೋಷಾರೋಪ ನಿಗದಿ ಸಾಗುವಳಿ ಚೀಟಿ ಮಂಜೂರು ವಿಳಂಬ: ತಹಶೀಲ್ದಾರ್ ವಿರುದ್ಧ ದೋಷಾರೋಪ ನಿಗದಿ](https://i.ytimg.com/vi/280I5erM8bU/hqdefault.jpg)
ಸಾಗುವಳಿ ಚೀಟಿ ಮಂಜೂರು ವಿಳಂಬ: ತಹಶೀಲ್ದಾರ್ ವಿರುದ್ಧ ದೋಷಾರೋಪ ನಿಗದಿ
ಸಾಗುವಳಿ ಚೀಟಿ ಮಂಜೂರು ವಿಳಂಬ: ತಹಶೀಲ್ದಾರ್ ವಿರುದ್ಧ ದೋಷಾರೋಪ ನಿಗದಿ
ನ್ಯಾಯಾಲಯದ ಆದೇಶ ಇದ್ದರೂ ಜಮೀನು ಮಾಲೀಕರಿಗೆ ಸಾಗುವಳಿ ಚೀಟಿ ಮಂಜೂರು ಮಾಡಲು ವಿಳಂಬ ಮಾಡಿದ ತಹಶೀಲ್ದಾರ್ ವಿರುದ್ಧ ಕರ್ನಾಟಕ ಹೈಕೋರ್ಟ್ ದೋಷಾರೋಪ ನಿಗದಿಪಡಿಸಲು ನಿರ್ಧರಿಸಿದೆ.
ತಾರಹುಣಸೆ ಅಗ್ರಹಾರ ನಿವಾಸಿ ದೊಡ್ಡಣ್ಣ ಅವರು ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿಯನ್ನು ವಿಚಾರಣೆ ನಡೆಸಿದ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ವರಾಳೆ ಮತ್ತು ನ್ಯಾ. ಎಂ.ಜಿ.ಎಸ್. ಕಮಲ್ ಅವರಿದ್ದ ವಿಭಾಗೀಯ ಪೀಠ ಈ ಆದೇಶ ಮಾಡಿದೆ.
ಸಾಗುವಳಿ ಚೀಟಿ ನೀಡಬೇಕು ಎಂಬ ನ್ಯಾಯಾಲಯದ ಆದೇಶವನ್ನು ಆಗಿನ ಬೆಂಗಳೂರು ಉತ್ತರ (ಈಗ ಯಲಹಂಕ ತಾಲೂಕು) ತಹಶೀಲ್ದಾರ ಪಾಲಿಸದೆ ವಿಳಂಬ ಮಾಡಿದ್ದರು. ಈ ಬಗ್ಗೆ ಸಂತ್ರಸ್ತರಾದ ದೊಡ್ಡಣ್ಣ ಹೈಕೋರ್ಟ್ ಮೊರೆ ಹೋಗಿ ತಹಶೀಲ್ದಾರ್ ವಿರುದ್ಧ ಸಿವಿಲ್ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದರು.
ಸಾಗುವಳಿ ಚೀಟಿ ಮಂಜೂರು ಮಾಡುವಂತೆ ಕೋರಿ ಅರ್ಜಿದಾರರು ಮನವಿ ಸಲ್ಲಿಸಿದರೆ, ಅದನ್ನು ಕಾನೂನು ರೀತಿ ಪರಿಶೀಲಿಸಿ ತಹಶೀಲ್ದಾರರು ಕ್ರಮ ಕೈಗೊಳ್ಳಲಿದ್ದಾರೆ ಎಂದು ಸರ್ಕಾರದ ಪರ ವಕೀಲರು ನ್ಯಾಯಪೀಠಕ್ಕೆ ತಿಳಿಸಿದರು.
ಆದರೆ, ಸರ್ಕಾರಿ ವಕೀಲರ ವಾದಕ್ಕೆ ನ್ಯಾಯಪೀಠ ಮಣೆ ಹಾಕಲಿಲ್ಲ. 2005ರಲ್ಲಿ ಸಾಗುವಳಿ ಚೀಟಿ ನೀಡಲು ಆದೇಶ ಹೊರಡಿಸಲಾಗಿದೆ. ಅರ್ಜಿದಾರರು ತಹಶೀಲ್ದಾರರಿಗೆ ಮನವಿಯನ್ನೂ ನೀಡಿದ್ಧಾರೆ. ಆದರೆ, ಸಾಗುವಳಿ ಚೀಟಿ ನೀಡಲು ಸಾಧ್ಯವಿಲ್ಲ ಎಂಬ ತಹಶೀಲ್ದಾರರ ಹಿಂಬರಹವನ್ನು ಹೈಕೋರ್ಟ್ ಪೀಠ ರದ್ದುಪಡಿಸಿದೆ.
ಮಾತ್ರವಲ್ಲ, ಎರಡು ತಿಂಗಳೊಳಗೆ ಸಾಗುವಳಿ ಚೀಟಿ ಮಂಜೂರು ಮಾಡಬೇಕು ಎಂದು 28-09-2022ರಲ್ಲಿ ಆದೇಶ ಹೊರಡಿಸಿತ್ತು. ಆದರೂ ತಹಶೀಲದಾರರು ಆಧಾರರಹಿತ ತಾಂತ್ರಿಕ ಕಾರಣಗಳನ್ನು ಮುಂದಿಟ್ಟುಕೊಂಡು ವಿಳಂಬ ಮಾಡಿದ್ದಾರೆ ಎಂದು ನ್ಯಾಯಪೀಠ ಗಮನಿಸಿತು.
ಸುಲಭವಾಗಿ ಇತ್ಯರ್ಥ ಆಗುವ ಇಂತಹ ಪ್ರಕರಣಗಳು ನ್ಯಾಯಾಲಯಕ್ಕೆ ಬರುವುದರಿಂದ ನ್ಯಾಯಾಲಯದ ಅಮೂಲ್ಯ ಸಮಯ ವ್ಯಯವಾಗುತ್ತದೆ. ಇದಕ್ಕೆ ಅಧಿಕಾರಿಗಳ ಬೇಜವಾಬ್ದಾರಿಯುತ ವರ್ತನೆ ಮತ್ತು ನಡವಳಿಕೆಯೇ ಕಾರಣ. ನ್ಯಾಯಾಲಯಗಳ ಆದೇಶದ ಬಗ್ಗೆ ತಹಶೀಲ್ದಾರರಿಗೆ ಗಂಭೀರತೆ ಇಲ್ಲದಿರುವುದು ಸ್ಪಷ್ಟ. ಆದ್ದರಿಂದ ಮುಂದಿನ ವಿಚಾರಣೆ ವೇಳೆ, ತಹಶೀಲ್ದಾರರ ವಿರುದ್ಧ ನ್ಯಾಯಾಂಗ ನಿಂದನೆ ಆರೋಪದಡಿ ದೋಷಾರೋಪಣೆ ನಿಗದಿಪಡಿಸಲಾಗುವುದು. ಆ ದಿನ ತಹಶೀಲ್ದಾರರು ವಿಚಾರಣೆಗೆ ಖುದ್ದು ಹಾಜರಾಗಬೇಕು ಎಂದು ನಿರ್ದೇಶನ ನೀಡಿತು.