![ಉದ್ಯೋಗಕ್ಕೆ ರಾಜೀನಾಮೆ ನೀಡಿದರೆ ಅನ್ಯರಿಗೆ ವಾಪಸ್ ಪಡೆಯುವ ಹಕ್ಕಿಲ್ಲ: ಕರ್ನಾಟಕ ಹೈಕೋರ್ಟ್ ಉದ್ಯೋಗಕ್ಕೆ ರಾಜೀನಾಮೆ ನೀಡಿದರೆ ಅನ್ಯರಿಗೆ ವಾಪಸ್ ಪಡೆಯುವ ಹಕ್ಕಿಲ್ಲ: ಕರ್ನಾಟಕ ಹೈಕೋರ್ಟ್](https://blogger.googleusercontent.com/img/b/R29vZ2xl/AVvXsEgP6kmYNsgV273SSkGkHFYn3BLLVP1ZhNvv1VNXJIT8_D6CnzYjT4GI1kCiD65oXh45Fbzk3uUjdd4cPVuwLGOvk5X2ps5vfcZQtu3gsXSCDzoAfZJnV9AFvVVaq4SGysEnKPDuKIdsWGz3Jqaxr3aeVOedyi5i2MVmY_clMZDjIlG0f4wfZy9ZfYOL_t1B/w640-h480/images.jpg)
ಉದ್ಯೋಗಕ್ಕೆ ರಾಜೀನಾಮೆ ನೀಡಿದರೆ ಅನ್ಯರಿಗೆ ವಾಪಸ್ ಪಡೆಯುವ ಹಕ್ಕಿಲ್ಲ: ಕರ್ನಾಟಕ ಹೈಕೋರ್ಟ್
ಉದ್ಯೋಗಕ್ಕೆ ರಾಜೀನಾಮೆ ನೀಡಿದರೆ ಅನ್ಯರಿಗೆ ವಾಪಸ್ ಪಡೆಯುವ ಹಕ್ಕಿಲ್ಲ: ಕರ್ನಾಟಕ ಹೈಕೋರ್ಟ್
ಉದ್ಯೋಗಿಯು ತನ್ನ ಉದ್ಯೋಗಕ್ಕೆ ಅಧಿಕೃತವಾಗಿ ನೀಡಿದ್ದ ರಾಜೀನಾಮೆ ಪತ್ರವನ್ನು ಅವರ ಪರವಾಗಿ ಅವರ ಪತ್ನಿಯೋ ಪುತ್ರರೋ ವಾಪಸ್ ಪಡೆಯುವಂತಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಮುಖ್ಯ ನ್ಯಾ. ಪ್ರಸನ್ನ ಬಿ. ವರಾಳೆ ಮತ್ತು ನ್ಯಾ. ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ವಿಭಾಗೀಯ ನ್ಯಾಯಪೀಠವು ಮದ್ದೂರಿನ ಡಿ. ವೆಂಕಟೇಶ್ ಅವರು ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿ ಈ ತೀರ್ಪು ಪ್ರಕಟಿಸಿದೆ.
ರಾಜೀನಾಮೆ ಎಂಬುದು ಉದ್ಯೋಗಿಯ ಸ್ವಯಂ ಪ್ರೇರಿತ ಕ್ರಿಯೆ. ರಾಜೀನಾಮೆ ನೀಡಿದ ಮೇಲೆ ಅವರು ಮನಸ್ಸು ಬದಲಾಯಿಸಿ ಉದ್ಯೋಗದಲ್ಲಿ ಮುಂದುವರಿಯುವ ಇಚ್ಚೆ ಹೊಂದಿದರೆ ರಾಜೀನಾಮೆ ಅಂಗೀಕಾರ ಆಗುವ ಮುನ್ನವೇ ಅವನ್ನು ವಾಪಸ್ ಪಡೆಯಬೇಕು. ಇದನ್ನು ಅವರೇ ಸ್ವತಃ ಮಾಡಬೇಕು. ರಾಜೀನಾಮೆ ವಾಪಸ್ ಪಡೆಯುವ ಕ್ರಿಯೆಯನ್ನು ಅವರ ಪರವಾಗಿ ಅವರ ಪತ್ನಿ ಯಾ ಪುತ್ರರು ಅಥವಾ ಅನ್ಯರು ಮಾಡಲಾಗದು ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
ಪ್ರಕರಣದ ವಿವರ:
ಅರ್ಜಿದಾರರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉದ್ಯೋಗಿಯಾಗಿದ್ದರು. 11-11-2021ರಂದು ಅವರು ತಮ್ಮ ಉದ್ಯೋಗಕ್ಕೆ ರಾಜೀನಾಮೆ ನೀಡಿದ್ದರು. ಸಂಘವು ರಾಜೀನಾಮೆ ಅಂಗೀಕರಿಸುವ ನಿರ್ಣಯದ ಮೂಲಕ ಅವರನ್ನು ಕೆಲಸದಿಂದ ಕೈಬಿಡಲಾಗಿತ್ತು.
ಇದಾದ ನಂತರ, ಅವರ ಪತ್ನಿಯು ರಾಜೀನಾಮೆ ಹಿಂದಕ್ಕೆ ಪಡೆಯಲು ಅನುಮತಿ ಕೋರಿ ಸಹಕಾರ ಸಂಘಕ್ಕೆ ಪತ್ರ ಬರೆದಿದ್ದರು. ಇದನ್ನು ಆಧರಿಸಿ ರಾಜೀನಾಮೆಯನ್ನು ಅಂಗೀಕರಿಸದೇ ಇರಲು ಸಂಘವು ನಿರ್ಣಯ ಕೈಗೊಂಡಿತ್ತು.
ಇದನ್ನು ಪ್ರಶ್ನಿಸಿ ಸಂಘದ ಉದ್ಯೋಗಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ್ದ ಏಕಸದಸ್ಯ ಪೀಠ, ರಾಜೀನಾಮೆ ಅಂಗೀಕರಿಸದೇ ಇರುವ ಸಂಘದ ನಿರ್ಣಯ ರದ್ದುಪಡಿಸಿ ಆದೇಶ ನೀಡಿತ್ತು.
ಈ ಆದೇಶವನ್ನು ಪ್ರಶ್ನಿಸಿ ಬಾಧಿತರಾದ ವೆಂಕಟೇಶ್ ಅವರು ಮೇಲ್ಮನವಿ ಸಲ್ಲಿಸಿದ್ದರು. ಇದೀಗ ವಿಭಾಗೀಯ ನ್ಯಾಯಪೀಠವೂ ಏಕಸದಸ್ಯ ನ್ಯಾಯಪೀಠ ನೀಡಿದ್ದ ತೀರ್ಪನ್ನು ಎತ್ತಿಹಿಡಿದಿದೆ.