![ಹೈಕೋರ್ಟ್ ಕಲಾಪ ವೀಡಿಯೋ ಕಾನ್ಫರೆನ್ಸ್ ವೇಳೆ ಅಶ್ಲೀಲ ಚಿತ್ರ: ಲೈವ್ ಸ್ಟ್ರೀಮಿಂಗ್ ಕ್ಯಾನ್ಸಲ್! ಹೈಕೋರ್ಟ್ ಕಲಾಪ ವೀಡಿಯೋ ಕಾನ್ಫರೆನ್ಸ್ ವೇಳೆ ಅಶ್ಲೀಲ ಚಿತ್ರ: ಲೈವ್ ಸ್ಟ್ರೀಮಿಂಗ್ ಕ್ಯಾನ್ಸಲ್!](https://blogger.googleusercontent.com/img/b/R29vZ2xl/AVvXsEjfYtLABSHvMO40EQXbDrp4UBxc8f8StPob28fez-DW1g3fTvXgAUi4uRiyNRgxlHoR1BYJDcX16p9-SSUfCxfQCqHeSgjJLFrPFn5KjAk3DiLhbMu07UEnOeWK_oRcXnfoQ8wJTjZ9kvTqmDA72XaOPAKV0gzxMlbZ1vDkdbDP1f0ZifncJWtkyNMIuYax/w640-h384/vc-hearing.jpg)
ಹೈಕೋರ್ಟ್ ಕಲಾಪ ವೀಡಿಯೋ ಕಾನ್ಫರೆನ್ಸ್ ವೇಳೆ ಅಶ್ಲೀಲ ಚಿತ್ರ: ಲೈವ್ ಸ್ಟ್ರೀಮಿಂಗ್ ಕ್ಯಾನ್ಸಲ್!
ಹೈಕೋರ್ಟ್ ಕಲಾಪ ವೀಡಿಯೋ ಕಾನ್ಫರೆನ್ಸ್ ವೇಳೆ ಅಶ್ಲೀಲ ಚಿತ್ರ: ಲೈವ್ ಸ್ಟ್ರೀಮಿಂಗ್ ಕ್ಯಾನ್ಸಲ್!
ಕರ್ನಾಟಕ ಹೈಕೋರ್ಟ್ನ ಕೆಲವು ನ್ಯಾಯಾಲಯಗಳ ವೀಡಿಯೋ ಕಾನ್ಫರೆನ್ಸ್ ವೇಳೆ ಅಶ್ಲೀಲ ಚಿತ್ರ ಪ್ರದರ್ಶನದ ಆಘಾತಕಾರಿ ಘಟನೆ ನಡೆದಿರುವ ಬಗ್ಗೆ ವರದಿಯಾಗಿದೆ. ದುಷ್ಕರ್ಮಿಗಳು ಹೈಕೋರ್ಟ್ನ ಅಂತರ್ಜಾಲವನ್ನು ಹ್ಯಾಕ್ ಮಾಡಿರುವ ಸಾಧ್ಯತೆ ಇದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅನಾಮಿಕರ ವಿರುದ್ಧ ಹೈಕೋರ್ಟ್ ರಿಜಿಸ್ಟ್ರಾರ್ ಕಚೇರಿಯ ಎನ್. ಸುರೇಶ್ ಅವರು ದೂರು ನೀಡಿದ್ದು, ಮಾಹಿತಿ ತಂತ್ರಜ್ಞಾನ ಕಾಯಿದೆಯ ಸೆಕ್ಷನ್ 67 ಮತ್ತು 67ಎ ಅಡಿ ಕೇಂದ್ರೀಯ ಸೈಬರ್ ಅಪರಾಧ ಠಾಣೆ ಪೊಲೀಸರು ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿದ್ದಾರೆ.
ಕರ್ನಾಟಕ ಹೈಕೋರ್ಟ್ನ ವಿವಿಧ ಕೋರ್ಟ್ ಹಾಲ್ಗಳಲ್ಲಿ ಮಾನ್ಯ ನ್ಯಾಯಮೂರ್ತಿಗಳು ಕಲಾಪ ನಡೆಸುತ್ತಿದ್ದಾಗ ಅಪರಿಚಿತರು ಅಶ್ಲೀಲ ಚಿತ್ರಗಳನ್ನು ಪ್ರದರ್ಶಿಸಿ ನ್ಯಾಯಾಲಯದ ಕಲಾಪಕ್ಕೆ ಅಡ್ಡಿ ಉಂಟು ಮಾಡಿದ್ದಾರೆ. ಈ ಕೃತ್ಯ ಎಸಗಿರುವ ಅಪರಿಚಿತ ವ್ಯಕ್ತಿಗಳ ಕಂಪ್ಯೂಟರ್ ಐಪಿ ವಿಳಾಸ ಸಂಬಂಧಿಸಿದ ಮಾಹಿತಿ ಪಡೆದು ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಕೋರಲಾಗಿದೆ.
ಈ ಘಟನೆಯ ಹಿನ್ನೆಲೆಯಲ್ಲಿ ಬೆಂಗಳೂರು, ಧಾರವಾಡ ಮತ್ತು ಕಲ್ಬುರ್ಗಿ ಪೀಠಗಳಲ್ಲಿ ನೇರ ಪ್ರಸಾರ ಮತ್ತು ವೀಡಿಯೋ ಕಾನ್ಫರೆನ್ಸ್ಗಳನ್ನು ಹೈಕೋರ್ಟ್ ನಿರ್ಬಂಧಿಸಿದೆ.
ನಾವು ಎಲ್ಲ ನೇರ ಪ್ರಸಾರಗಳನ್ನು ನಿರ್ಬಂಧಿಸುತ್ತಿದ್ದೇವೆ. ವಿಡಿಯೋ ಕಾನ್ಫರೆನ್ಸ್ಗೂ ಅವಕಾಶ ಇರುವುದಿಲ್ಲ. ಕೆಲವು ವ್ಯಕ್ತಿಗಳಿಂದ ತಂತ್ರಜ್ಞಾನದ ದುರ್ಬಳಕೆ ಮತ್ತು ಅನುಚಿತ ವರ್ತನೆ ನಡೆದಿದೆ. ಇದೊಂದು ರೀತಿಯ ಅನಿರ್ಬಂಧಿತ ಪರಿಸ್ಥಿತಿ. ಸಾರ್ವಜನಿಕ ಹಿತದೃಷ್ಟಿ ಮತ್ತು ವಿಸ್ತೃತ ನೆಲೆಯಲ್ಲಿ ತಂತ್ರಜ್ಞಾನ ಬಳಕೆ ಮಾಡುವ ಪರವಾಗಿ ಕರ್ನಾಟಕ ಹೈಕೋರ್ಟ್ ಸದಾ ಇರಲಿದೆ. ಈಗಿನ ನಿರ್ಬಂಧಕ್ಕೆ ನೀವು ಸಹಕರಿಸಬೇಕು. ವ್ಯವಸ್ಥೆಯ ಹಿತದೃಷ್ಟಿಯಿಂದ ಈ ನಿರ್ಧಾರ ಮಾಡಲಾಗಿದೆ. ಮಾಧ್ಯಮಕ್ಕೂ ಮಾಹಿತಿ ನೀಡಿ. ನಮಗೆ ಸಹಕರಿಸಿ ಎಂದು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮನವಿ ಮಾಡಿದರು.
ಸೈಬರ್ ಭದ್ರತಾ ಕಾರಣಗಳಿಗಾಗಿ ಬೆಂಗಳೂರು, ಧಾರವಾಡ ಮತ್ತು ಕಲ್ಬುರ್ಗಿ ಪೀಠಗಳಲ್ಲಿ ನೇರ ಪ್ರಸಾರ ಮತ್ತು ವೀಡಿಯೋ ಕಾನ್ಫರೆನ್ಸ್ಗಳನ್ನು ಹೈಕೋರ್ಟ್ ಸದ್ಯಕ್ಕೆ ನಿರ್ಬಂಧಿಸಿದೆ ಎಂದು ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಕೆ.ಎಸ್. ಭರತ್ ಕುಮಾರ್ ಮಾಹಿತಿ ನೀಡಿದರು.