![ತಲಾಖ್ ವಿಚ್ಚೇದನವನ್ನು ದಾಖಲಿಸಲು ಕೋರ್ಟ್ ಆದೇಶ ಬೇಕಾಗಿಲ್ಲ: ಹೈಕೋರ್ಟ್ ತಲಾಖ್ ವಿಚ್ಚೇದನವನ್ನು ದಾಖಲಿಸಲು ಕೋರ್ಟ್ ಆದೇಶ ಬೇಕಾಗಿಲ್ಲ: ಹೈಕೋರ್ಟ್](https://blogger.googleusercontent.com/img/b/R29vZ2xl/AVvXsEggLEjzjgjZFZl69pyrJkNogD820i0xkIhnPqU-LE84L55pUNELVMpyWJ5VH2tkK5ydcJIZHCsDYtYQWdNMixqpiqtDAp5CzxwDCt6UloHJUf73q8Cjnt3GPkRDyo_kdA8MteWT4WMwDz4YN6QvZ46SxOX8JGiYJ_Z5A3sNDX4YfQ9FGj4XgPK9Io8eYPzb/w640-h356/1235.jpg)
ತಲಾಖ್ ವಿಚ್ಚೇದನವನ್ನು ದಾಖಲಿಸಲು ಕೋರ್ಟ್ ಆದೇಶ ಬೇಕಾಗಿಲ್ಲ: ಹೈಕೋರ್ಟ್
ತಲಾಖ್ ವಿಚ್ಚೇದನವನ್ನು ದಾಖಲಿಸಲು ಕೋರ್ಟ್ ಆದೇಶ ಬೇಕಾಗಿಲ್ಲ: ಹೈಕೋರ್ಟ್
ಮುಸ್ಲಿಂ ವೈಯಕ್ತಿಕ ಕಾನೂನಿನ ಅಡಿಯಲ್ಲಿ ತಲಾಖ್ ಮೂಲಕ ಪಡೆಯಲಾದ ವಿಚ್ಚೇದನವನ್ನು ದಾಖಲಿಸಿಕೊಳ್ಳಲು ಜನನ, ಮರಣ ಮತ್ತು ವಿವಾಹ ನೋಂದಣಾಧಿಕಾರಿಯವರಿಗೆ ಕೋರ್ಟ್ ಆದೇಶದ ಮೂಲಕವೇ ಒತ್ತಾಯಿಸಬೇಕಾಗಿಲ್ಲ ಎಂದು ಕೇರಳ ಹೈಕೋರ್ಟ್ ತೀರ್ಪು ನೀಡಿದೆ.
ನ್ಯಾ. ಪಿ.ವಿ. ಕುಂಞಿಕೃಷ್ಣನ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ತೀರ್ಪು ನೀಡಿದ್ದು, ವೈಯಕ್ತಿಕ ಕಾನೂನು ಪ್ರಕಾರ ವಿಚ್ಚೇದನ ಕ್ರಮಬದ್ಧವಾಗಿದ್ದರೆ ತಲಾಖ್ ದಾಖಲಿಸಲು ಮುಸ್ಲಿಂ ಮಹಿಳೆಯರು ನ್ಯಾಯಾಲಯದ ಮೊರೆ ಹೋಗುವ ಅಗತ್ಯವಿಲ್ಲ ಎಂದು ಹೇಳಿದೆ.
ಇದಕ್ಕೆ ಬದಲಾಗಿ ಸಕ್ಷಮ ಪ್ರಾದಿಕಾರ ಯಾ ಸಂಬಂಧಪಟ್ಟ ವ್ಯಾಪ್ತಿಯ ನೋಂದಣಾದಿಕಾರಿ ಈ ವಿಚ್ಚೇದನವನ್ನು ಸ್ವತಃ ದಾಖಲಿಸಬಹುದು ಎಂದು ನ್ಯಾಯಪೀಠ ಹೇಳಿದೆ.
ಕೇರಳದ ವಿವಾಹ ನೋದಣಿ (ಸಾಮಾನ್ಯ) ನಿಯಮಾವಳಿ-2008ರಲ್ಲಿ ವೈಯಕ್ತಿಕ ಕಾನೂನಿನಡಿ ಪಡೆದ ವಿಚ್ಚೇದನದ ನೋಂದಣಿಗೆ ಅವಕಾಶ ಇಲ್ಲ. ಈ ವ್ಯತ್ಯಾಸವನ್ನು ಗಮನಿಸಿದ ಕೇರಳ ಹೈಕೋರ್ಟ್ ನ್ಯಾಯಪೀಠ, ಸದ್ರಿ ತೀರ್ಪು ನೀಡುವ ಮೂಲಕ ಆ ಲೋಪವನ್ನು ಸರಿಪಡಿಸಿದೆ.
ವಿಚ್ಚೇದನವನ್ನು ನೋಂದಾಯಿಸುವ ಅಧಿಕಾರ ಮದುವೆಯನ್ನು ನೋಂದಾಯಿಸಿಕೊಳ್ಳುವ ಅಧಿಕಾರಕ್ಕೆ ಪೂರಕವಾಗಿದೆ. ಆದ್ದರಿಂದ ಕಾನೂನಿನ ಅಡಿಯಲ್ಲಿ ಪಡೆದ ವಿಚ್ಚೇದನಗಳನ್ನು ದಾಖಲಿಸಿಕೊಳ್ಳಲು ನೋಂದಣಾಧಿಕಾರಿಗಳು ನ್ಯಾಯಾಲಯದ ಆದೇಶಗಳಿಗೆ ಕಾಯಬೇಕಾಗಿಲ್ಲ ಎಂಬುದನ್ನು ನ್ಯಾಯಪೀಠ ಸ್ಪಷ್ಟಪಡಿಸಿತು.
ಇದೇ ವೇಳೆ, 2008ರ ನಿಯಮಾವಳಿಗಳಲ್ಲಿ ಇರುವ ನ್ಯೂನ್ಯತೆಯನ್ನು ಸರಿಪಡಿಸಲು ಶಾಸಕಾಂಗ ಪರಿಶೀಲನೆ ನಡೆಸುವುದು ಸೂಕ್ತ ಎಂದು ಕೋರ್ಟ್ ಅಭಿಪ್ರಾಯಪಟ್ಟಿತು.
ಪ್ರಕರಣ: ನೇಯನ್ ವೀಟ್ಟಿಲ್ ಬೆಹ್ಸಾನಾ Vs ಜನನ ಮರಣ ಮತ್ತು ವಿವಾಹ ಸ್ಥಳೀಯ ನೋಂದಣಾಧಿಕಾರಿ
ಕೇರಳ ಹೈಕೋರ್ಟ್, WP(c) 9162/2015, Dated 10-01-2024