-->
8 ವಾರದಲ್ಲಿ ಡಿಸಿಸಿ ಬ್ಯಾಂಕ್‌ ಚುನಾವಣೆ ಪೂರ್ಣಗೊಳಿಸಿ: ಹೈಕೋರ್ಟ್‌ ನಿರ್ದೇಶನ

8 ವಾರದಲ್ಲಿ ಡಿಸಿಸಿ ಬ್ಯಾಂಕ್‌ ಚುನಾವಣೆ ಪೂರ್ಣಗೊಳಿಸಿ: ಹೈಕೋರ್ಟ್‌ ನಿರ್ದೇಶನ

8 ವಾರದಲ್ಲಿ ಡಿಸಿಸಿ ಬ್ಯಾಂಕ್‌ ಚುನಾವಣೆ ಪೂರ್ಣಗೊಳಿಸಿ: ಹೈಕೋರ್ಟ್‌ ನಿರ್ದೇಶನ





ಮೈಸೂರು-ಚಾಮರಾಜನಗರ ಮತ್ತು ದಾವಣಗೆರೆ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ಗಳ ಚುನಾವಣೆಯನ್ನು ಎಂಟು ವಾರಗಳಲ್ಲಿ ಪೂರ್ಣಗೊಳಿಸುವಂತೆ ಸಹಕಾರ ಚುನಾವಣಾ ಪ್ರಾಧಿಕಾರಕ್ಕೆ ಕರ್ನಾಟಕ ಹೈಕೋರ್ಟ್ ನಿರ್ದೇಶನ ನೀಡಿದೆ.


ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ. ವರಾಳೆ ಮತ್ತು ನ್ಯಾ. ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ನಿರ್ದೇಶನ ನೀಡಿದೆ.


ತಕ್ಷಣ ಆಡಳಿತಾಧಿಕಾರಿಗಳು ಸಹಕಾರ ಬ್ಯಾಂಕುಗಳ ಕಾರ್ಯಭಾರವನ್ನು ವಹಿಸಿಕೊಳ್ಳಬೇಕು. ನ್ಯಾಯಾಲಯ ನೀಡಿರುವ ಎಲ್ಲ ಮಧ್ಯಂತರ ಆದೇಶಗಳು ರದ್ದಾಗಿದ್ದು, ಸಂಬಂಧಪಟ್ಟ ಪ್ರಾಧಿಕಾರಗಳು ತಕ್ಷಣ ಕಾನೂನು ರೀತಿ ಕ್ರಮ ಕೈಗೊಂಡು ಎಂಟು ವಾರಗಳಲ್ಲಿ ಚುನಾವಣೆ ನಡೆಸಬೇಕು ಎಂದು ನ್ಯಾಯಪೀಠ ನಿರ್ದೇಶನ ನೀಡಿದೆ.


ಮೈಸೂರು ಚಾಮರಾಜನಗರ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ಆಡಳಿತ ಮಂಡಳಿಗೆ 2018ರ ನವೆಂಬರ್ 12ಕ್ಕೆ ಚುನಾವಣೆ ನಡೆದಿತ್ತು. 2023ರ ನವೆಂಬರ್ 11ಕ್ಕೆ ಈ ಆಡಳಿತ ಮಂಡಳಿಯ ಐದು ವರ್ಷದ ಕಾಲಾವಧಿ ಪೂರ್ಣಗೊಂಡಿದೆ. ಚುನಾವಣೆ ನಡೆಸುವಂತೆ ಅವಧಿ ಮುಗಿಯುವ ಆರು ತಿಂಗಳ ಮುನ್ನ ಸಹಕಾರ ಚುನಾವಣಾ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಲಾಗಿತ್ತು.


ಈ ಮಧ್ಯೆ, ಚುನಾವಣೆಗೆ ಅಧಿಸೂಚನೆ ಹೊರಡಿಸಿದ್ದರೂ ಮತದಾರ ಪಟ್ಟಿಯಲ್ಲಿ ಉಂಟಾದ ಗೊಂದಲಗಳ ಹಿನ್ನೆಲೆಯಲ್ಲಿ 2023ರ ಸೆಪ್ಟೆಂಬರ್‌ನಲ್ಲಿ ಚುನಾವಣಾ ವೇಳಾಪಟ್ಟಿಯನ್ನು ಹಿಂದಕ್ಕೆ ಪಡೆಯಲಾಗಿತ್ತು. ಇದನ್ನು ಪ್ರಶ್ನಿಸಿ ಬ್ಯಾಂಕಿನ ಕೆಲ ನಿರ್ದೇಶಕರು ಹೈಕೋರ್ಟ್‌ ಮೊರೆ ಹೋಗಿದ್ದರು.


ಈ ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್ ಏಕಸದಸ್ಯ ಪೀಠ, 120 ದಿನದೊಳಗೆ ಚುನಾವಣೆ ನಡೆಸಬೇಕು, ಚುನಾವಣೆ ವಿಳಂಬಕ್ಕೆ ಸರ್ಕಾರ ಮತ್ತು ಬ್ಯಾಂಕ್‌ನ ಆಡಳಿತ ಎರಡೂ ಕಡೆಗಳಿಂದ ಲೋಪ ಆಗಿದ್ದರಿಂದ ಅವಧಿ ಮುಗಿದ ಆಳಿತ ಮಂಡಳಿಯಲ್ಲಿ ಇದ್ದ ನಿರ್ದೇಶಕರಿಗೆ ಚುನಾವಣಾ ಸ್ಪರ್ಧೆಯಿಂದ ಅನರ್ಹಗೊಳಿಸಬಾರದು ಎಂದು ಆದೇಶ ನೀಡಿತ್ತು.


ದಾವಣಗೆರೆ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ವಿಷಯವೂ ಒಂದೇ ಆದ ಕಾರಣ ಈ ಅರ್ಜಿಯನ್ನು ಒಟ್ಟಿಗೆ ಸೇರಿಸಿ ಏಕಸದಸ್ಯ ಪೀಠ ವಿಚಾರಣೆ ನಡೆಸಿದ್ದರಿಂದ ಈ ಆದೇಶ ಎರಡೂ ಬ್ಯಾಂಕ್‌ಗಳಿಗೂ ಅನ್ವಯವಾಗುತ್ತದೆ.



ಈ ಆದೇಶದ ಪುನರ್‌ವಿಮರ್ಶೆಗೆ ಕೋರಿ ಮೇಲ್ಮನವಿ ಸಲ್ಲಿಸಲಾಗಿತ್ತು. ಈ ಮೇಲ್ಮನವಿಗಳನ್ನು ವಿಲೇ ಮಾಡಿದ ವಿಭಾಗೀಯ ಪೀಠ, ಎಂಟು ವಾರಗಳಲ್ಲಿ ಚುನಾವಣೆ ನಡೆಸುವಂತೆ ಸಹಕಾರ ಪ್ರಾಧಿಕಾರಕ್ಕೆ ನಿರ್ದೇಶನ ನೀಡಿದೆ.



Ads on article

Advertise in articles 1

advertising articles 2

Advertise under the article