
ಸಿಜೆಐ ಆಗಿ ಬಿ.ಆರ್. ಗವಾಯಿ ನಿಯುಕ್ತಿ: ಮೇ 14ರಂದು ಪ್ರಮಾಣವಚನ - ಗವಾಯಿ ಅವರ ಪ್ರಮುಖ ತೀರ್ಪುಗಳ ವಿವರ ಇಲ್ಲಿದೆ
ಸಿಜೆಐ ಆಗಿ ಬಿ.ಆರ್. ಗವಾಯಿ ನಿಯುಕ್ತಿ: ಮೇ 14ರಂದು ಪ್ರಮಾಣವಚನ - ಗವಾಯಿ ಅವರ ಪ್ರಮುಖ ತೀರ್ಪುಗಳ ವಿವರ ಇಲ್ಲಿದೆ-
ದೇಶದ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಆಗಿ ನ್ಯಾಯಮೂರ್ತಿ ಬಿ ಆರ್ ಗವಾಯಿ ಮೇ 14ರಿಂದ ಅನ್ವಯವಾಗುವಂತೆ ನೇಮಕಗೊಂಡಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಈ ನೇಮಕಾತಿ ಮಾಡಿದ್ದಾರೆ.
ನೂತನ ಮುಖ್ಯ ನ್ಯಾಯಮೂರ್ತಿ ಶ್ರೀ ಬಿ ಆರ್ ಗವಾಯಿ ಮೇ 14ರಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಕೆ ಜಿ ಬಾಲಕೃಷ್ಣನ್ ಅವರ ಬಳಿಕ ಡಿಜೆ ಸ್ಥಾನ ಅಲಂಕರಿಸುವ ದಲಿತ ಸಮುದಾಯದ ವ್ಯಕ್ತಿಯಾಗಿ ಗವಾಯಿ ಗುರುತಿಸಿಕೊಂಡಿದ್ದಾರೆ.
ಶ್ರೀ ಬಿ.ಆರ್. ಗವಾಯಿ ಅವರು 1960ರ ನವಂಬರ್ 24ರಂದು ಜನಿಸಿದರು. 1985ರ ಮಾರ್ಚ್ ನಲ್ಲಿ ವಕೀಲ ವೃತ್ತಿಯನ್ನು ಆರಂಭಿಸಿದ ಬಿ ಆರ್ ಗವಾಯಿ, 1987ರಿಂದ 1990ರ ವರೆಗೆ ಬಾಂಬೆ ಹೈಕೋರ್ಟಿನಲ್ಲಿ ಸ್ವತಂತ್ರವಾಗಿ ವಕೀಲ ವೃತ್ತಿಯನ್ನು ನಡೆಸಿದರು. 1990ರ ನಂತರದಲ್ಲಿ ಅವರು ನಾಗ್ಪುರ ಪೀಠದಲ್ಲಿ ಸ್ವತಂತ್ರವಾಗಿ ವಕೀಲ ವೃತ್ತಿ ಕೈಗೊಂಡರು.
2003ರಲ್ಲಿ ಅವರು ಬಾಂಬೆ ಹೈಕೋರ್ಟ್ಗೆ ಹೆಚ್ಚುವರಿ ನ್ಯಾಯಮೂರ್ತಿಯಾಗಿ ನೇಮಕವಾದರು. 2005ರಲ್ಲಿ ಖಾಯಂ ನ್ಯಾಯಮೂರ್ತಿಯಾಗಿ ಹುದ್ದೆ ವಹಿಸಿಕೊಂಡರು. 2019ರಲ್ಲಿ ಸುಪ್ರೀಂ ಕೋರ್ಟ್ನ ನ್ಯಾಯಮೂರ್ತಿಯಾಗಿ ಪದೋನ್ನತಿ ಹೊಂದಿದ್ದರು.
ಗವಾಯಿ ಅವರು ಇದ್ದ ನ್ಯಾಯ ಪೀಠದ ಪ್ರಮುಖ ತೀರ್ಪುಗಳ ವಿವರ:
ನ್ಯಾಯಮೂರ್ತಿ ಗವಾಯಿ ಅವರು ಮಹತ್ವದ ತೀರ್ಪುಗಳನ್ನು ಪ್ರಕಟಿಸಿದ ಸುಪ್ರೀಂ ಕೋರ್ಟ್ ನ ಸಂವಿಧಾನದ ಪೀಠದ ಭಾಗವಾಗಿ ಕರ್ತವ್ಯ ನಿರ್ವಹಿಸಿದ್ದಾರೆ.
ಅವರು ನೀಡಿದ ಕೆಲವು ತೀರ್ಪುಗಳ ವಿವರ ಇಲ್ಲಿದೆ.
# ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ ವಿಶೇಷ ಸ್ಥಾನಮಾನ ರದ್ದುಪಡಿಸಿದ ಕೇಂದ್ರದ ತೀರ್ಮಾನ ಎತ್ತಿ ಹಿಡಿದ ಇವರು ನ್ಯಾಯಮೂರ್ತಿಗಳ ಪೀಠದ ಭಾಗವಾಗಿದ್ದರು.
# ಚುನಾವಣಾ ಬಾಂಡ್ ಯೋಜನೆಯನ್ನು ರದ್ದುಪಡಿಸಿದ ಸಂವಿಧಾನ ಪೀಠದಲ್ಲೂ ಇವರು ಪ್ರಮುಖರಾಗಿದ್ದರು
# ನೋಟು ರದ್ದತಿ ತೀರ್ಮಾನವನ್ನು ಬಹುಮತದ ಮೂಲಕ ಎತ್ತಿ ಹಿಡಿದ ಸಂವಿಧಾನ ಪೀಠದಲ್ಲಿಯೂ ಅವರು ಇದ್ದರು.
# ಮೀಸಲಾತಿಗಾಗಿ ಪರಿಶಿಷ್ಟ ಜಾತಿಗಳ ಒಳ ವರ್ಗೀಕರಣದ ಸಂವಿಧಾನಿಕ ಅಧಿಕಾರ ರಾಜ್ಯ ಸರ್ಕಾರಗಳಿಗೆ ಇದೆ ಎಂದು ಬಹುಮತದ ಆಧಾರದಲ್ಲಿ ತೀರ್ಪು ನೀಡಿದ ಏಳು ನ್ಯಾಯಮೂರ್ತಿಗಳ ಪೀಠದಲ್ಲಿ ಅವರು ಒಬ್ಬರಾಗಿದ್ದರು.
# ಗವಾಯಿ ನೇತೃತ್ವದ ನ್ಯಾಯ ಪೀಠವು ಇಡೀ ದೇಶಕ್ಕೆ ಅನ್ವಯವಾಗುವ ಮಾರ್ಗಸೂಚಿ ಒಂದನ್ನು ಹೊರಡಿಸಿ ಶೋಕಾಸ್ ನೋಟಿಸ್ ಕೊಡದೆ ಯಾವ ಆಸ್ತಿಯನ್ನು ಧ್ವಂಸಗೊಳಿಸುವಂತಿಲ್ಲ ಎಂದು ತೀರ್ಪು ನೀಡಿತ್ತು. ಸಂಬಂಧಪಟ್ಟ ವ್ಯಕ್ತಿಗೆ ನೋಟಿಸ್ ನೀಡಿ, ಅವರ ಪ್ರತಿಕ್ರಿಯೆ ನೀಡಲು 15 ದಿವಸಗಳ ಕಾಲಾವಕಾಶ ಕೊಡಬೇಕು ಎಂದು ಈ ನ್ಯಾಯ ಪೀಠ ಹೇಳಿತ್ತು.