
ನ್ಯಾ. ವರ್ಮಾ ಮನೆಯಲ್ಲಿ ನಗದು ಪತ್ತೆ ಪ್ರಕರಣ: ಆಂತರಿಕ ಸಮಿತಿ ವರದಿ ಮಾಹಿತಿ ನೀಡಲಾಗದು: ಆರ್ಟಿಐ ಅರ್ಜಿಯನ್ನು ತಿರಸ್ಕರಿಸಿದ ಸುಪ್ರೀಂ ಕೋರ್ಟ್
ನ್ಯಾ. ವರ್ಮಾ ಮನೆಯಲ್ಲಿ ನಗದು ಪತ್ತೆ ಪ್ರಕರಣ: ಆಂತರಿಕ ಸಮಿತಿ ವರದಿ ಮಾಹಿತಿ ನೀಡಲಾಗದು: ಆರ್ಟಿಐ ಅರ್ಜಿಯನ್ನು ತಿರಸ್ಕರಿಸಿದ ಸುಪ್ರೀಂ ಕೋರ್ಟ್
ನ್ಯಾ. ವರ್ಮಾ ಮನೆಯಲ್ಲಿ ನಗದು ಪತ್ತೆ ಪ್ರಕರಣಕ್ಕೆ ಸಂಬಂಧಿಸಿದ ಆಂತರಿಕ ಸಮಿತಿ ವರದಿ ಮಾಹಿತಿ ನೀಡಲಾಗದು ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದ್ದು, ಈ ಸಂಬಂಧ ಸಲ್ಲಿಸಲಾಗಿದ್ದ ಆರ್ಟಿಐ ಅರ್ಜಿಯನ್ನು ತಿರಸ್ಕರಿಸಿದೆ.
ನ್ಯಾಯಮೂರ್ತಿ ಯಶವಂತ ವರ್ಮ ಅವರ ದೆಹಲಿಯ ನಿವಾಸದಲ್ಲಿ ಅಪಾರ ಪ್ರಮಾಣದ ನಗದು ಪತ್ತೆಯಾಗಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸುಪ್ರೀಂ ಕೋರ್ಟ್ ನ ಆಂತರಿಕ ವಿಚಾರಣಾ ಸಮಿತಿ ನೀಡಿದ್ದ ವರದಿ ಮತ್ತು ಆಗಿನ ಸಿಜೆಐ ಪ್ರಧಾನಿ ಮತ್ತು ರಾಷ್ಟ್ರಪತಿಗೆ ಬರೆದ ಪತ್ರದ ಪ್ರತಿಯನ್ನು ನೀಡುವಂತೆ ಮಾಹಿತಿ ಹಕ್ಕು ಕಾಯ್ದೆ(ಆರ್ಟಿಐ ) ಯಡಿ ಸಲ್ಲಿಸಲಾಗಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ನಿರಾಕರಿಸಿದೆ.
ಆಂತರಿಕ ವಿಚಾರಣಾ ವರದಿ ಮತ್ತು ಆಗಿನ ಸಿಜೆಐ ಸಂಜೀವ್ ಖನ್ನಾ ಅವರು ಮುಂದಿನ ಕ್ರಮಕ್ಕಾಗಿ ಪ್ರಧಾನಿ ಮತ್ತು ರಾಷ್ಟ್ರಪತಿಗೆ ಬರೆದ ಪತ್ರದ ಪ್ರತಿಯನ್ನು ನೀಡುವಂತೆ ಕೋರಿ ಮಹಾರಾಷ್ಟ್ರದ ವಕೀಲ ಅಮೃತ್ ಪಾಲ್ ಸಿಂಗ್ ಅವರು ಮೇ 9ರಂದು ಮಾಹಿತಿ ಹಕ್ಕಿನಡಿ ಅರ್ಜಿ ಸಲ್ಲಿಸಿದ್ದರು. ಸುಪ್ರೀಂ ಕೋರ್ಟ್ ನ ಕೇಂದ್ರೀಯ ಸಾರ್ವಜನಿಕ ಮಾಹಿತಿ ಅಧಿಕಾರಿ ಹಿಮಾನಿ ಶರದ್ ಅವರು ಮೇ 21ರಂದು ಅರ್ಜಿಯನ್ನು ತಿರಸ್ಕರಿಸಿದ್ದಾರೆ.
"ಸುಪ್ರೀಂ ಕೋರ್ಟ್ Vs ಸುಭಾಷ್ ಚಂದ್ರ ಅಗರವಾಲ್" ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನಲ್ಲಿ ನಿಗದಿಪಡಿಸಿದ ಮಾನದಂಡಗಳ ಆಧಾರದಲ್ಲಿ ಈ ಮಾಹಿತಿಯನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಕಾರಣ ನೀಡಲಾಗಿದೆ.
ಅರ್ಜಿದಾರರು ಕೇಳಿರುವ ಮಾಹಿತಿ ನೀಡುವುದನ್ನು ನಿರಾಕರಿಸಲು 'ನ್ಯಾಯಾಂಗದ ಸ್ವಾತಂತ್ರ್ಯ', 'ವಿಶ್ವಾಸಾರ್ಹ ಸಂಬಂಧ', 'ಖಾಸಗೀಕರಣದ ಹಕ್ಕಿನ ಮೇಲಿನ ದಾಳಿ' ಹಾಗೂ 'ಗೌಪ್ಯತೆಯ ಕರ್ತವ್ಯ ಉಲ್ಲಂಘನೆ' ಮುಂತಾದ ಕಾರಣಗಳನ್ನು ನೀಡಲಾಗಿದೆ.
ವರ್ಮ ಅವರ ದೆಹಲಿಯ ಅಧಿಕೃತ ನಿವಾಸದಲ್ಲಿ ಅಪಾರ ಪ್ರಮಾಣದ ಹಣ ಪತ್ತೆಯಾಗಿದೆ ಎನ್ನಲಾದ ಪ್ರಕರಣವು ನ್ಯಾಯಾಂಗ ವಲಯದಲ್ಲಿ ವ್ಯಾಪಕ ಕೋಲಾಹಲ ಉಂಟು ಮಾಡಿದ್ದು ವರ್ಮಾ ಅವರ ಮನೆಗೆ ಬಿದ್ದ ಬೆಂಕಿಯನ್ನು ನಂದಿಸಲು ತೆರಳಿದ್ದ ಅಗ್ನಿಶಾಮಕ ದಳದ ಸಿಬ್ಬಂದಿ ಭಾರಿ ಪ್ರಮಾಣದ ನಗದು ಪತ್ತೆ ಮಾಡಿದ್ದರು.
ಘಟನೆಯ ತನಿಖೆಗಾಗಿ ಹರಿಯಾಣ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಶೀಲ್ ನಾಗು, ಹಿಮಾಚಲ ಪ್ರದೇಶ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಜಿಎಸ್ ಸಂಧವಾಲಿಯ ಹಾಗೂ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಅನು ಶಿವರಾಮನ್ ಅವರಿಂದ ಸಮಿತಿ ರಚಿಸಲಾಗಿತ್ತು.
ಆ ಸಮಿತಿ ನೀಡಿದ್ದ ವರದಿಯನ್ನು ಸ್ವೀಕರಿಸಿದ್ದ ಅಂದಿನ ಸಿಜೆಐ ಸಂಜೀವ ಖನ್ನಾ ಅವರು, ನ್ಯಾಯಮೂರ್ತಿ ವರ್ಮ ಅವರು ರಾಜೀನಾಮೆ ನೀಡಬೇಕು, ಇಲ್ಲವೇ ವಾಗ್ದಂಡನೆ ಎದುರಿಸಬೇಕು ಎಂದು ಹೇಳಿದ್ದರು. ಆದರೆ ರಾಜೀನಾಮೆ ನೀಡಲು ನ್ಯಾಯಮೂರ್ತಿ ವರ್ಮ ನಿರಾಕರಿಸಿದ್ದರು.
ಅದರ ಬೆನ್ನಲ್ಲೇ ವರ್ಮ ಅವರನ್ನು ಹುದ್ದೆಯಿಂದ ವಜಾ ಗೊಳಿಸುವಂತೆ ಮನವಿ ಮಾಡಿ ಸಿಜೆಐ ಸಂಜೀವ ಖನ್ನಾ ಅವರು, ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಿಜೆ ಪತ್ರ ಬರೆದಿದ್ದರು.