
ಬೆಕ್ಕು ಅಪಹರಣ ಪ್ರಕರಣ: ಕ್ರಿಮಿನಲ್ ಕೇಸ್ ದಾಖಲಿಸಿದ್ದ ಪೊಲೀಸರ ಕ್ರಮದಿಂದ ನ್ಯಾಯಾಲಯದ ಆತ್ಮಸಾಕ್ಷಿಗೆ ಆಘಾತ- ಕರ್ನಾಟಕ ಹೈಕೋರ್ಟ್
ಬೆಕ್ಕು ಅಪಹರಣ ಪ್ರಕರಣ: ಕ್ರಿಮಿನಲ್ ಕೇಸ್ ದಾಖಲಿಸಿದ್ದ ಪೊಲೀಸರ ಕ್ರಮದಿಂದ ನ್ಯಾಯಾಲಯದ ಆತ್ಮಸಾಕ್ಷಿಗೆ ಆಘಾತ- ಕರ್ನಾಟಕ ಹೈಕೋರ್ಟ್
ಬೆಕ್ಕಿನ ಅಪಹರಣ ಆರೋಪಿಸಿ ನೀಡಲಾದ ದೂರಿಗೆ ಸಂಬಂಧಿಸಿದ ಪ್ರಕರಣದಲ್ಲಿ ಕ್ರಿಮಿನಲ್ ಕೇಸ್ ದಾಖಲಿಸಿದ್ದ ಪೊಲೀಸರ ಕ್ರಮದಿಂದ ನ್ಯಾಯಾಲಯದ ಆತ್ಮಸಾಕ್ಷಿಗೆ ಆಘಾತವಾಗಿದೆ ಎಂದು ಕರ್ನಾಟಕ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.
ಭಾರೀ ಚರ್ಚೆಗೆ ಗ್ರಾಸವಾಗಿದ್ದ ಡೈಸಿ ಬೆಕ್ಕಿನ ಅಪಹರಣ ಪ್ರಕರಣದಲ್ಲಿ ಪೊಲೀಸರು ನ್ಯಾಯದ ವಿಕ್ಷಿಪ್ತ ಅನ್ವೇಷಣೆಯಲ್ಲಿ ತಲ್ಲೀನರಾಗಿರುವ ಬಗ್ಗೆ ಹೈಕೋರ್ಟ್ ನ್ಯಾಯಪೀಠ ತೀವ್ರ ಬೇಸರ ವ್ಯಕ್ತಪಡಿಸಿದೆ.
ಕರ್ನಾಟಕ ಹೈಕೋರ್ಟ್ನ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ, ನೆರೆಮನೆಯ ಬೆಕ್ಕನ್ನು ಅಪಹರಿಸಿದ ಸಂಬಂಧ ವ್ಯಕ್ತಿಯೊಬ್ಬರ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ವಜಾಗೊಳಿಸಿತು.
ಡೈಸಿ ಎಂಬ ಹೆಸರಿನ ಬೆಕ್ಕು ಎಲ್ಲರ ಮತಿಗೆಡಿಸಿದೆ. ಇದಕ್ಕೆ ಕ್ರಿಮಿನಲ್ ನ್ಯಾಯದಾನದ ವ್ಯವಸ್ಥೆಯೂ ಹೊರತಾಗಿಲ್ಲ ಎಂದು ಟಿಪ್ಪಣಿ ಮಾಡಿದ ನ್ಯಾಯಪೀಠ, ಆರೋಪಿಯು ತಮ್ಮ ಮನೆಯಲ್ಲಿ ಬೆಕ್ಕನ್ನು ಇಟ್ಟುಕೊಂಡಿದ್ದಾರೆ ಎಂಬ ಆರೋಪದ ಹೊರತಾಗಿ ಬೇರಾವುದೇ ಆಪರಾಧ ಕಾಣುತ್ತಿಲ್ಲ ಎಂದು ಹೇಳಿತು.
2022ರಲ್ಲಿ ನಿಖಿತಾ ಅಂಜನಾ ಐಯ್ಯರ್ ಎಂಬವರು ಅನ್ವಯ ತಾಹ ಹುಸೇನ್ ವಿರುದ್ಧ ಈ ಪ್ರಕರಣ ದಾಖಲಿಸಿದ್ದರು. ಆರಂಭದಲ್ಲಿ ಪೊಲೀಸರು ಹುಸೇನ್ ವಿರುದ್ಧ 428 ಮತ್ತು 429 ಅಡಿ ಪ್ರಕರಣ ದಾಖಲಿಸಿದ್ದರು. ಆ ಬಳಿಕ, ಐಪಿಸಿ ಸೆಕ್ಷನ್ 504, 506 ಮತ್ತು 509 ಅನ್ನು ಉಳಿಸಿಕೊಂಡಿದ್ದರು. ಇದೀಗ ಇಡೀ ಪ್ರಕರಣವನ್ನು ಹೈಕೋರ್ಟ್ ವಜಾಗೊಳಿಸಿದೆ.
ನಾಪತ್ತೆಯಾಗಿರುವ ಬೆಕ್ಕಿನ ಪ್ರಕರಣದಲ್ಲಿ ಇಡೀ ಪೊಲೀಸ್ ವ್ಯವಸ್ಥೆ ಭಾಗಿಯಾಗಿದ್ದು, ಸಿಸಿಟಿವಿ ತುಣುಕು ಪರಿಶೀಲಿಸಿ ಏನೂ ಸಿಗದಿದ್ದರೂ ಪೊಲೀಸರು ಆರೋಪ ಪಟ್ಟಿ ಸಲ್ಲಿಸಿದ್ದಾರೆ. ದೂರಿನಲ್ಲಿ ಇರದ ಅಂಶಗಳನ್ನೂ ಆರೋಪ ಪಟ್ಟಿ ಒಳಗೊಂಡಿದೆ ಎಂಬುದನ್ನು ನ್ಯಾಯಪೀಠ ಗಮನಿಸಿತು.
ದೂರುದಾರೆಯನ್ನು ನಿಂದಿಸಿರುವುದು ಮತ್ತು ಲೈಂಗಿಕ ಸಂಜ್ಞೆಗಳನ್ನು ಮಾಡಿರುವುದು ಆರೋಪಪಟ್ಟಿ ಒಳಗೊಂಡಿದೆ. ಈ ಅಂಶಗಳು ದೂರಿನಲ್ಲಿ ಇಲ್ಲದಿದ್ದರೂ ಆರೋಪಪಟ್ಟಿಯಲ್ಲಿ ಸ್ಥಾನ ಪಡೆದಿವೆ ಎಂದು ಪೊಲೀಸರ ಕ್ರಮಕ್ಕೆ ನ್ಯಾಯಾಲಯ ತೀವ್ರ ಅಸಮಾಧಾನ ವ್ಯಕ್ತಪಡಿಸಿತು.