ಅನುಕಂಪದ ನೌಕರಿ ಅರ್ಜಿ 90 ದಿನದೊಳಗೆ ಕಾಲಮಿತಿಯಲ್ಲಿ ಇತ್ಯರ್ಥ- ನಿರ್ವಹಣೆಗೆ ಹೊಸ ಮಾರ್ಗಸೂಚಿ ಹೊರಡಿಸಿದ ಕರ್ನಾಟಕ ಹೈಕೋರ್ಟ್
ಅನುಕಂಪದ ನೌಕರಿ ಅರ್ಜಿ 90 ದಿನದೊಳಗೆ ಕಾಲಮಿತಿಯಲ್ಲಿ ಇತ್ಯರ್ಥ- ನಿರ್ವಹಣೆಗೆ ಹೊಸ ಮಾರ್ಗಸೂಚಿ ಹೊರಡಿಸಿದ ಕರ್ನಾಟಕ ಹೈಕೋರ್ಟ್
ಅನುಕಂಪದ ಆಧಾರದಲ್ಲಿ ನೇಮಕಾತಿಗಳಿಗಾಗಿ ಹಾಕಲಾದ ಅರ್ಜಿಗಳನ್ನು ನಿರ್ವಹಿಸುವ ಕುರಿತಂತೆ ಏಕರೂಪದ ಪ್ರಮಾಣಿತ ಕಾರ್ಯಾಚರಣೆಯ ವಿಧಾನವನ್ನು ರೂಪಿಸಬೇಕು ಎಂದು ಕರ್ನಾಟಕ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ.
ಕರ್ನಾಟಕ ಹೈಕೋರ್ಟ್ನ ನ್ಯಾಯಮೂರ್ತಿಗಳಾದ ಶ್ರೀ ಮೊಹಮ್ಮದ್ ನವಾಜ್ ಮತ್ತು ಕೆ.ಎಸ್. ಹೇಮಲೇಖಾ ಅವರಿದ್ದ ವಿಭಾಗೀಯ ನ್ಯಾಯಪೀಠ ಅನುಕಂಪದ ನೇಮಕಾತಿಗಳಿಗೆ ಸಲ್ಲಿಕೆಯಾಗುವ ಅರ್ಜಿಗಳನ್ನು ಹೇಗೆ ನಿರ್ವಹಣೆ ಮಾಡಬೇಕು ಎಂಬುದರ ಕುರಿತು ಮಾರ್ಗಸೂಚಿಯನ್ನು ಹೊರಡಿಸಿದೆ.
ಅರ್ಜಿಗಳನ್ನು ಸಲ್ಲಿಸಿದ 90 ದಿನಗಳಲ್ಲಿ ಈ ಅರ್ಜಿಯನ್ನು ಇತ್ಯರ್ಥ ಮಾಡಬೇಕು. ತಿರಸ್ಕರಿಸಿದ ಅರ್ಜಿಗಳಿಗೆ ಸಮಂಜಸವಾದ ಕಾರಣಗೊಂದಿಗೆ ಆದೇಶಗಳನ್ನು ಹೊರಡಿಸಬೇಕು ಮತ್ತು ಆದೇಶದಲ್ಲಿನ ಅಂಶಗಳನ್ನು ಅರ್ಜಿದಾರರಿಗೆ ತಕ್ಷಣ ತಿಳಿಸಬೇಕು ಎಂದು ನ್ಯಾಯಪೀಠ ನಿರ್ದೇಶನ ನೀಡಿದೆ.
ಅನುಕಂಪದ ನೇಮಕಾತಿ ಅರ್ಜಿಗಳನ್ನು ಸಲ್ಲಿಕೆ ಮಾಡಿದ ಬಳಿಕ ಅದರಲ್ಲಿ ಯಾವುದೇ ಲೋಪಗಳಿದ್ದರೂ 30 ದಿನಗಳಲ್ಲಿ ಲಿಖಿತವಾಗಿ ಸ್ವೀಕರಿಸಬೇಕು. ಅವರ ಅವಲಂಬಿತರ ಹಕ್ಕುಗಳು ಮತ್ತು ಅನ್ವಯವಾಗುವ ಮಿತಿಯ ಅವಧಿಯನ್ನು ನಿರ್ದಿಷ್ಟಪಡಿಸಬೇಕು ಎಂದು ನ್ಯಾಯಪೀಠ ಹೇಳಿದೆ.
ಅನಕ್ಷರಸ್ಥ ವಿಧವೆಯರಿಗೆ ಅರ್ಜಿ ಸಲ್ಲಿಸುವಲ್ಲಿ ಸಹಾಯ ಮಾಡಬೇಕು. ಇತರೆ ಅವಲಂಬಿತರಿಗೆ ಮಾರ್ಗದರ್ಶನ ನೀಡಬೇಕು ಎಂದು ನ್ಯಾಯಪೀಠ ಸರ್ಕಾರಿ ಅಧಿಕಾರಿಗಳಿಗೆ ಸೂಚನೆ ನೀಡಿದೆ.
ಜೇವರ್ಗಿಯ ತಹಶೀಲ್ದಾರ್ ಕಚೇರಿಯಲ್ಲಿ ಜವಾನ ಹುದ್ದೆಯಲ್ಲಿ ಇದ್ದ ಪತಿ ಮೃತಪಟ್ಟ ಬಳಿಕ ಮನಿಗೆ ಅನುಕಂಪದ ಉದ್ಯೋಗ ನಿರಾಕರಿಸಿದ್ದ ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಮಹಿಳೆಯೊಬ್ಬರು ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಈ ನ್ಯಾಯಪೀಠ ನಡೆಸಿತ್ತು.
ಈ ಪ್ರಕರಣದಲ್ಲಿ ಅನುಕಂಪದ ಆಧಾರದ ಹುದ್ದೆಗಳಿಗೆ ಸಲ್ಲಿಕೆಯಾಗುವ ಅರ್ಜಿಗಳನ್ನು ಹೇಗೆ ನಿರ್ವಹಣೆ ಮಾಡಬೇಕು ಎಂಬುದರ ಬಗ್ಗೆ ಮಾರ್ಗಸೂಚಿಯನ್ನೇ ಹೊರಡಿಸಿದೆ. ಎಲ್ಲ ಇಲಾಖೆಗಳೂ ಏಕರೂಪದ ವಿಧಾನವನ್ನು ಅನುಸರಿಸಬೇಕು ಎಂದು ನಿರ್ದೇಶನ ನೀಡಿದ್ದು, ಅನುಕಂಪದ ಅರ್ಜಿಗಳ ವಿಲೇಯಲ್ಲಿ ಯಾವುದೇ ಲೋಪವಾಗದಂತೆ ನಿರ್ವಹಣೆ ಮಾಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ತರಬೇತಿ ನೀಡಬೇಕು ಎಂದು ನ್ಯಾಯಪೀಠ ಸೂಚನೆಯನ್ನು ಹೊರಡಿಸಿದೆ.