-->
ಪುತ್ರಿಯ ಮೃತದೇಹ ಸಾಗಿಸಲು ಹೆಜ್ಜೆ ಹೆಜ್ಜೆಗೂ ಲಂಚ: ನಿವೃತ್ತ ಅಧಿಕಾರಿಯಿಂದ ಲಿಂಕ್ಡ್‌ ಇನ್ ಪೋಸ್ಟ್‌- ಪಿಎಸ್‌ಐ, ಕಾನ್ಸ್‌ಟೆಬಲ್ ಅಮಾನತು

ಪುತ್ರಿಯ ಮೃತದೇಹ ಸಾಗಿಸಲು ಹೆಜ್ಜೆ ಹೆಜ್ಜೆಗೂ ಲಂಚ: ನಿವೃತ್ತ ಅಧಿಕಾರಿಯಿಂದ ಲಿಂಕ್ಡ್‌ ಇನ್ ಪೋಸ್ಟ್‌- ಪಿಎಸ್‌ಐ, ಕಾನ್ಸ್‌ಟೆಬಲ್ ಅಮಾನತು

ಪುತ್ರಿಯ ಮೃತದೇಹ ಸಾಗಿಸಲು ಹೆಜ್ಜೆ ಹೆಜ್ಜೆಗೂ ಲಂಚ: ನಿವೃತ್ತ ಅಧಿಕಾರಿಯಿಂದ ಲಿಂಕ್ಡ್‌ ಇನ್ ಪೋಸ್ಟ್‌- ಪಿಎಸ್‌ಐ, ಕಾನ್ಸ್‌ಟೆಬಲ್ ಅಮಾನತು





ತನ್ನ ಪುತ್ರಿಯ ಮೃತದೇಹ ಸಾಗಿಸಲು ಹೆಜ್ಜೆ ಹೆಜ್ಜೆಗೂ ಲಂಚ ಪಡೆದ ಬೆಂಗಳೂರು ಅಧಿಕಾರಿಗಳ ವಿರುದ್ಧ ಭಾರತ್ ಪೆಟ್ರೋಲಿಯಂ ನಿಗಮದ ನಿವೃತ್ತ ಅಧಿಕಾರಿ ಲಂಚದ ಕರ್ಮಕಾಂಡವನ್ನು ಲಿಂಕ್ಡ್‌ ಇನ್ ನಲ್ಲಿ ಹಂಚಿಕೊಂಡಿದ್ದು, ಇದು ವೈರಲ್ ಆದ ಬೆನ್ನಲ್ಲೇ ಬೆಳ್ಳಂದೂರು ಪೊಲೀಸ್‌ ಠಾಣೆಯ ಪಿಎಸ್‌ಐ ಮತ್ತು ಕಾನ್ಸ್‌ಟೆಬಲ್ ಅವರನ್ನು ಅಮಾನತು ಮಾಡಲಾಗಿದೆ.


ಪುತ್ರಿಯ ಮೃತದೇಹ ಸಾಗಿಸಲು ಹಾಗೂ ಮರಣೋತ್ತರ ಪರೀಕ್ಷೆ ನಡೆಸಲು ಪಟ್ಟ ಸಂಕಷ್ಟ ಹಾಗೂ ಆಂಬುಲೆನ್ಸ್ ಚಾಲಕ, ಪೊಲೀಸರು, ಸ್ಮಶಾನದ ಸಿಬ್ಬಂದಿ ಮತ್ತು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಧಿಕಾರಿಗಳಿಂದ ಅನುಭವಿಸಿದ ನೋವು ಹಾಗೂ ಸಿಬ್ಬಂದಿ ಹಣಕ್ಕೆ ಬೇಡಿಕೆಯಿಟ್ಟ ಬಗೆಯನ್ನು ಭಾರತ್ ಪೆಟ್ರೋಲಿಯಂ ನಿಗಮದ ನಿವೃತ್ತ ಸಿಎಫ್‌ಒ ಕೆ.ಶಿವಕುಮಾರ್ ಅವರು 'ಲಿಂಕ್ಸ್‌ಇನ್'ನಲ್ಲಿ ಎಳೆಎಳೆಯಾಗಿ ತೆರೆದಿಟ್ಟಿದ್ದಾರೆ.


ಪುತ್ರಿಯ ಅಂತ್ಯಸಂಸ್ಕಾರಕ್ಕೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಹೆಜ್ಜೆ ಹೆಜ್ಜೆಗೂ ಲಂಚ ಕೇಳಿದ ಸಂಗತಿಯನ್ನೂ ಕೇಂದ್ರ ಸರ್ಕಾರದ ಸ್ವಾಮ್ಯದ ಕಂಪನಿಯಲ್ಲಿ ಮುಖ್ಯ ಹಣಕಾಸು ಅಧಿಕಾರಿ (ಚೀಫ್‌ ಫೈನಾನ್ಸ್ ಆಫೀಸರ್- ಸಿಎಫ್‌ಒ) ಆಗಿದ್ದ ಶಿವಕುಮಾರ್ ಅವರು ನೋವಿನಿಂದ ಹೇಳಿಕೊಂಡಿದ್ದಾರೆ.


'ಪುತ್ರಿ ಅಕ್ಷಯಾ (34) ಅವರು ಮಿದುಳು ರಕ್ತಸ್ರಾವ ಸಮಸ್ಯೆಯಿಂದಾಗಿ ಸೆಪ್ಟೆಂಬರ್ 18ರಂದು ಮೃತಪಟ್ಟಿದ್ದರು. ಅಕ್ಷಯಾ ಅವರು ಅಹಮದಾಬಾದ್‌ನ ಐಐಎಂನಿಂದ ಬಿ.ಟೆಕ್ ಮತ್ತು ಎಂಬಿಎ ಪದವಿ ಪಡೆದಿದ್ದರು. ವೃತ್ತಿ ಜೀವನದ 11 ವರ್ಷಗಳ ಪೈಕಿ, ಗೋಲ್ಡ್‌ಮನ್‌ ಸ್ಯಾಚ್‌ನಲ್ಲಿ 8 ವರ್ಷ ಬೆಂಗಳೂರಿನ ಕೆಲಸ ಮಾಡಿದ್ದರು' ಎಂದು ಶಿವಕುಮಾರ್ ಅವರು ತಮ್ಮ ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದಾರೆ.


ಕೆ. ಶಿವಕುಮಾರ್ ಅವರು ಕೆಲವು ಗಂಟೆಗಳ ಬಳಿಕ ಪೋಸ್ಟ್ ಅಳಿಸಿ ಹಾಕಿದ್ದರು.


'ಕಸವನಹಳ್ಳಿಯ ಆಸ್ಪತ್ರೆಯಿಂದ ಕೋರಮಂಗಲದ ಸೇಂಟ್ ಜಾನ್ಸ್ ಆಸ್ಪತ್ರೆಗೆ ಶಿವಕುಮಾರ್ ಮೃತದೇಹ ಸಾಗಿಸಲು ಅಂಬುಲೆನ್ಸ್ ಚಾಲಕರೊಬ್ಬರು 3 ಸಾವಿರ ರೂಪಾಯಿ ಲಂಚ ಕೇಳಿದ್ದರು. ಮರಣೋತ್ತರ ಪರೀಕ್ಷೆಗೆ ಮೃತದೇಹ ಕೊಂಡೊಯ್ಯುವ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿ ದರ್ಪ ತೋರಿದ್ದರು.


ಆ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಮಾಜಿ ಸಹೋದ್ಯೋಗಿ ನನ್ನ ನೆರವಿಗೆ ಬಂದಿದ್ದರು. ಅವರ ಮಧ್ಯ-ಪ್ರವೇಶದಿಂದ ಪೊಲೀಸರು ಸುಮ್ಮನಾದರು. ನಂತರ, ಪುತ್ರಿಯ ಕಣ್ಣುಗಳನ್ನು ದಾನ ಮಾಡಲಾಯಿತು. ಮರಣೋತ್ತರ ಪರೀಕ್ಷೆ ಮುಗಿಸಿ ಅಂತ್ಯಸಂಸ್ಕಾರಕ್ಕೆ ಮೃತದೇಹ ತೆಗೆದು ಕೊಂಡು ಹೋದಾಗ ಸ್ಮಶಾನದ ಸಿಬ್ಬಂದಿ ಸಹ ಹಣ ಕೇಳಿದರು. ಸ್ಮಶಾನದ ಸಿಬ್ಬಂದಿಗೂ ಹಣ ನೀಡಿದ್ದೆವು' ಎಂದು ಅವರು ಉಲ್ಲೇಖಿಸಿದ್ದಾರೆ.


'ಯುಡಿಆರ್ ಹಾಗೂ ಮರಣೋತ್ತರ ಪರೀಕ್ಷೆ ವರದಿಯ ಪ್ರತಿಗಾಗಿ ನಾಲ್ಕು ಬಾರಿ ಪೊಲೀಸರನ್ನು ಭೇಟಿ ಮಾಡಿದ್ದೆ. ವರದಿ ನೀಡುವುದಕ್ಕೂ ಪೊಲೀಸರು ಹಣ ಕೇಳಿದ್ದರು. ಠಾಣೆಯಲ್ಲೇ ಹಣ ತೆಗೆದುಕೊಂಡರು. ಆದರೆ, ಅವರು ಲಂಚ ಪಡೆದ ಜಾಗದಲ್ಲಿ ಸಿಸಿಟಿವಿ ಕ್ಯಾಮೆರಾ ಇರಲಿಲ್ಲ. ಆರಂಭದಲ್ಲಿ ಪಿಎಸ್‌ಐ ಚೆನ್ನಾಗಿ ಮಾತನಾಡಿದ್ದರು. ದಾಖಲೆಗಳಿಗೂ ಸಹಿ ಹಾಕಿದ್ದರು. ಆದರೆ, ಲಂಚ ನೀಡಲು ಅವರ ಸಹಾಯಕರನ್ನು ಭೇಟಿಯಾಗಲು ಹೇಳಿದ್ದರು' ಎಂದು ಶಿವಕುಮಾರ್ ಆರೋಪಿಸಿದ್ದಾರೆ.


'ಮರಣ ಪ್ರಮಾಣಪತ್ರಕ್ಕಾಗಿ ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಕಚೇರಿಗೆ ಅಲೆಯಬೇಕಾದ ಸ್ಥಿತಿ ಬಂದಿತ್ತು. ಐದು ಬಾರಿ ಕಚೇರಿಗೆ ಅಲೆದಿದ್ದೆ. ಕಚೇರಿಯಲ್ಲಿ ಸಿಬ್ಬಂದಿ ಇಲ್ಲ. ಆರ್ಥಿಕ ಮತ್ತು ಸಾಮಾಜಿಕ ಸಮೀಕ್ಷೆಗೆ ತೆರಳಿದ್ದಾರೆ ಎಂದು ಅಲ್ಲಿದ್ದವರು ಹೇಳಿದ್ದರು. ಬಳಿಕ ಹಿರಿಯ ಅಧಿಕಾರಿಯನ್ನು ಸಂಪರ್ಕಿಸಿದೆ. ಅವರೂ ಸಹ ಹಣ ಪಡೆದು ಪತ್ರ ನೀಡಿದರು' ಎಂದು ದೂರಿದ್ದಾರೆ.


'ನನ್ನ ಸ್ಥಿತಿಯೇ ಈ ರೀತಿಯಾದರೆ ಜನಸಾಮಾನ್ಯರ ಪಾಡೇನು' ಎಂದು ಪೋಸ್ಟ್ ನಲ್ಲಿ ಉಲ್ಲೇಖಿಸಿದ್ದಾರೆ.


ಪಿಎಸ್‌ಐ, ಕಾನ್ಸ್‌ಟೆಬಲ್ ಅಮಾನತು

ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಪೋಸ್ಟ್ ಗಮನಿಸಿ ಪ್ರಾಥಮಿಕ ತನಿಖೆ ನಡೆಸಲಾಗಿದೆ. ವಿಚಾರಣೆ ವೇಳೆ ಬೆಳ್ಳಂದೂರು ಪೊಲೀಸ್‌ ಠಾಣೆಯ ಪಿಎಸ್‌ಐ ಸಂತೋಷ್ ಹಾಗೂ ಕಾನ್‌ಸ್ಟೆಬಲ್‌ ಗೋರಖ್‌ನಾಥ್ ಅವರು ಕರ್ತವ್ಯ ಲೋಪ ಎಸಗಿರುವುದು ಸಾಬೀತಾಗಿದೆ.


ಹಣ ಪಡೆದುಕೊಂಡಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಇಲಾಖಾ ತನಿಖೆ ಕಾಯ್ದಿರಿಸಿ, ಇಬ್ಬರನ್ನೂ ಅಮಾನತು ಮಾಡಲಾಗಿದೆ' ಎಂದು ಪೊಲೀಸ್ ಮೂಲಗಳು ತಿಳಿಸಿವೆ.




Ads on article

Advertise in articles 1

advertising articles 2

Advertise under the article