ಸಕಾಲಿಕ ವೇತನ ಪಾವತಿಸದೆ ಕಿರುಕುಳ: ಗ್ರಂಥಪಾಲಕ ಆತ್ಮಹತ್ಯೆ- ನಿರ್ಲಕ್ಷ್ಯ ತೋರಿದ್ದ ಪಿಡಿಒ ಗೀತಾಮಣಿ ಸಸ್ಪೆಂಡ್!
ಸಕಾಲಿಕ ವೇತನ ಪಾವತಿಸದೆ ಕಿರುಕುಳ: ಗ್ರಂಥಪಾಲಕ ಆತ್ಮಹತ್ಯೆ- ನಿರ್ಲಕ್ಷ್ಯ ತೋರಿದ್ದ ಪಿಡಿಒ ಗೀತಾಮಣಿ ಸಸ್ಪೆಂಡ್!
ಗ್ರಂಥಪಾಲಕ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನೆಲಮಂಗಲ ತಾಲ್ಲೂಕಿನ ಕಳಲುಘಟ್ಟ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗೀತಾಮಣಿ ಅವರನ್ನು ಅಮಾನತು ಮಾಡಲಾಗಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕೆ. ಎಸ್. ಅನುರಾಧ ಅವರು ಈ ಸಂಬಂಧ ಆದೇಶ ಹೊರಡಿಸಿದ್ದಾರೆ.
ಕಳಲುಘಟ್ಟ ಗ್ರಾಮ ಪಂಚಾಯತ್ನಲ್ಲಿ ಗ್ರಂಥಾಲಯದ ಗ್ರಂಥಪಾಲಕರಾಗಿ 25 ವರ್ಷಗಳಿಂದ ಕೆಲಸ ಮಾಡುತ್ತಿದ್ದ ಗೋವೇನಹಳ್ಳಿಯ ರಾಮಚಂದ್ರಯ್ಯ ಅವರು ಅಕ್ಟೋಬರ್ 27ರಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು.
'ರಾಮಚಂದ್ರಯ್ಯ ಅವರ ಸಾವಿಗೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಗೀತಾಮಣಿ ಕಾರಣ. ಸುಮಾರು ಮೂರು ತಿಂಗಳಿಂದ ಸಂಬಳ ಪಾವತಿಸಿಲ್ಲ. ಹಾಜರಾತಿ ನಮೂದಿಸಲು ಬಯೊಮೆಟ್ರಿಕ್ ಕೊಡದೇ ಕಿರುಕುಳ ನೀಡಿದ್ದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ' ಎಂದು ಮೃತರ ಸಹೋದರನ ಪುತ್ರ ಕಾಂತರಾಜು ಪೊಲೀಸರಿಗೆ ದೂರು ನೀಡಿದ್ದರು.
ಆ ದೂರು ಆಧರಿಸಿ ಪಿಡಿಒ ಗೀತಾಮಣಿ ವಿರುದ್ಧ ತ್ಯಾಮಗೊಂಡ್ಲು ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ಈ ಎಫ್ಐಆರ್ನಲ್ಲಿ ಗೀತಾಮಣಿ ಅವರನ್ನು ಪ್ರಮುಖ ಆರೋಪಿಯನ್ನಾಗಿ ಹೆಸರಿಸಲಾಗಿತ್ತು.
'ಪಂಚಾಯತ್ ಸಿಬ್ಬಂದಿಯ ಅಸ್ವಾಭಾವಿಕ ಸಾವಿನ ಘಟನೆ ನಡೆದು 24 ಗಂಟೆ ಕಳೆದರೂ ಸಹ ಪಿಡಿಒ ಸಂಪರ್ಕಕ್ಕೆ ಸಿಕ್ಕಿಲ್ಲ. ಘಟನೆಯ ಬಗ್ಗೆ ಮೇಲಿನ ಅಧಿಕಾರಿಗಳಿಗೂ ಮಾಹಿತಿ ನೀಡಿಲ್ಲ. ರಾಮಚಂದ್ರಯ್ಯ ಅವರಿಗೆ ಜೂನ್ವರೆಗೆ ಮಾತ್ರ ಸಂಬಳ ಪಾವತಿಸಲಾಗಿದೆ. ಜುಲೈ ಹಾಗೂ ಆಗಸ್ಟ್ ತಿಂಗಳ ವೇತನವನ್ನು ಪಾವತಿಸದೇ ಇರುವುದು ಕಂಡುಬಂದಿದೆ. ಸಿಬ್ಬಂದಿಗೆ ಸಕಾಲದಲ್ಲಿ ವೇತನ ಪಾವತಿಸುವುದು ಕರ್ತವ್ಯ. ಸಕಾಲದಲ್ಲಿ ಸಿಬ್ಬಂದಿಗೆ ವೇತನ ಪಾವತಿಸದೇ ಪಿಡಿಒ ಗೀತಾಮಣಿ ಅವರು ನಿರ್ಲಕ್ಷ್ಯ ವಹಿಸಿದ್ದಾರೆ' ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.