ಹಿರಿಯ ನಾಗರಿಕರ ಕಾಯ್ದೆ: ಮನೆ ಖಾಲಿ ಮಾಡಲು ಸೊಸೆಗೆ ನಿರ್ದೇಶನ- ಎಸಿ ಕೋರ್ಟ್ ಎತ್ತಿಹಿಡಿದ ಕರ್ನಾಟಕ ಹೈಕೋರ್ಟ್
ಹಿರಿಯ ನಾಗರಿಕರ ಕಾಯ್ದೆ: ಮನೆ ಖಾಲಿ ಮಾಡಲು ಸೊಸೆಗೆ ನಿರ್ದೇಶನ- ಎಸಿ ಕೋರ್ಟ್ ಎತ್ತಿಹಿಡಿದ ಕರ್ನಾಟಕ ಹೈಕೋರ್ಟ್
ಅತ್ತೆಯ ಮನೆಯಲ್ಲಿ ಠಿಕಾಣಿ ಹೂಡಿ ಆಸ್ತಿ ಲಪಟಾಯಿಸಲು ಸಂಚು ಹೂಡಿದ್ದ ಆರೋಪದಡಿ ಸೊಸೆಗೆ ಮನೆ ಖಾಲಿ ಮಾಡುವಂತೆ ನಿರ್ದೇಶಿಸಿದ್ದ ಬಳ್ಳಾರಿ ಉಪವಿಭಾಗಾಧಿಕಾರಿ (ಎಸಿ) ಆದೇಶವನ್ನು ಕರ್ನಾಟಕ ಹೈಕೋರ್ಟ್ ಎತ್ತಿಹಿಡಿದಿದೆ.
ಕರ್ನಾಟಕ ಹೈಕೋರ್ಟ್ನ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ (ಧಾರವಾಡ) ಈ ತೀರ್ಪು ಪ್ರಕಟಿಸಿದೆ.
'ಬಳ್ಳಾರಿ ಉಪವಿಭಾಗಾಧಿಕಾರಿ 2025ರ ಜೂನ್ 17ರಂದು ಹೊರಡಿಸಿರುವ ಆದೇಶವನ್ನು ರದ್ದುಗೊಳಿಸಬೇಕು' ಎಂದು ಕೋರಿ ಸೊಸೆ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿದೆ.
'ಪೋಷಕರು ಮತ್ತು ಹಿರಿಯ ನಾಗರಿಕರ ನಿರ್ವಹಣೆ ಮತ್ತು ಕಲ್ಯಾಣ ಕಾಯ್ದೆ-2007ರ ಅನುಸಾರ ಅತ್ಯಂತ ಅಪರೂಪದ ಸಂದರ್ಭಗಳಲ್ಲಿ ಮಾತ್ರವೇ ಹಿರಿಯರನ್ನು ಮನೆಯಿಂದ ಹೊರಹಾಕುವ ಆದೇಶವನ್ನು ಸಮರ್ಥನೀಯ ಎಂದು ನಿರ್ಣಯಿಸಬಹುದು' ಎಂಬ ಅಭಿಪ್ರಾಯವನ್ನು ನ್ಯಾಯಪೀಠ ವ್ಯಕ್ತಪಡಿಸಿದೆ.
ಪ್ರಕರಣವೇನು?:
ಪ್ರಕರಣದಲ್ಲಿ ಪೋಷಕರ ಮಗ ಸುಮಾರು ಎಂಟು ವರ್ಷಗಳ ಹಿಂದೆ ಸಾವನ್ನಪ್ಪಿದ್ದರು. ಸೊಸೆ ಮತ್ತು ಅತ್ತೆಯ (65) ನಡುವಿನ ಸಂಬಂಧ ಹಳಸಿತ್ತು. ಸರ್ಕಾರಿ ಕೆಲಸ ಸಿಗಲಿದೆ ಎಂಬ ಕಾರಣಕ್ಕೆ ಸೊಸೆ ಆಂಧ್ರಪ್ರದೇಶಕ್ಕೆ ತಮ್ಮ ವಾಸವನ್ನು ಬದಲಿಸಿಕೊಂಡಿದ್ದರು.
ಈ ಮಧ್ಯೆ, ಬಳ್ಳಾರಿಯ ಸಿದ್ಧಾರ್ಥ ನಗರದಲ್ಲಿ ಸ್ವಯಾರ್ಜಿತವಾಗಿ ನಿಮಿಸಿದ ಮನೆಯಲ್ಲಿ ಅತ್ತೆ ವಾಸವಿದ್ದರು. ಹಣಕಾಸಿನ ತೊಂದರೆಯಿಂದ ಮನೆಯನ್ನು ಮಾರಾಟ ಮಾಡಲು ಉದ್ದೇಶಿಸಿ, ಮುಂಗಡ ಹಣ ಪಡೆದಿದ್ದರು.
ಈ ವಿಷಯ ತಿಳಿದುಕೊಂಡ ಸೊಸೆ, ಪೋಷಕರ ಮನೆಗೆ ಬಂದು, 'ನನಗೂ ಆಸ್ತಿಯಲ್ಲಿ ಪಾಲು ನೀಡಬೇಕು ಇಲ್ಲವೇ 60 ಲಕ್ಷ ರೂ. ನೀಡಬೇಕು' ಎಂದು ಹೇಳಿ ಮನೆಯಲ್ಲಿದ್ದ ಅತ್ತೆಗೆ ಸಂಬಂಧಿಸಿದ ವಸ್ತುಗಳನ್ನು ಹೊರಹಾಕಿ, ಮನೆಯಲ್ಲಿ ಠಿಕಾಣಿ ಹೂಡಿದ್ದರು.
ಪೋಷಕರ ಸಕ್ಷಮ ಪ್ರಾಧಿಕಾರವಾದ ಹಿರಿಯ ನಾಗರಿಕರ ನಿರ್ವಹಣಾ ನ್ಯಾಯಮಂಡಳಿಯ ಅಧ್ಯಕ್ಷರೂ ಆದ ಬಳ್ಳಾರಿ ಉಪವಿಭಾಗಾಧಿಕಾರಿಗೆ ಅರ್ಜಿ ಸಲ್ಲಿಸಿದ್ದ ಅತ್ತೆ, ನಮ್ಮ ಆಸ್ತಿ ರಕ್ಷಣೆ, ಮಾನಸಿಕ ಶಾಂತಿ ಮತ್ತು ಪ್ರಾಣ ರಕ್ಷಣೆ ನೀಡಬೇಕು' ಎಂದು ಕೋರಿದ್ದರು.
ಅರ್ಜಿ ವಿಚಾರಣೆ ನಡೆಸಿದ್ದ ಸಕ್ಷಮ ಪ್ರಾಧಿಕಾರ, 'ಸೊಸೆ ಮನೆಯನ್ನು ಖಾಲಿ ಮಾಡಬೇಕು. ಸದರಿ ಆಸ್ತಿಯನ್ನು ಮನವಿದಾರರ ಹೆಸರಿಗೆ ನೋಂದಾಯಿಸಬೇಕು' ಎಂದು ಬಳ್ಳಾರಿ ಉಪನೋಂದಣಾಧಿಕಾರಿಗೆ ಆದೇಶಿಸಿದ್ದರು. ಈ ಆದೇಶವನ್ನು ಸೊಸೆ ಹೈಕೋರ್ಟ್ನಲ್ಲಿ ಪ್ರಶ್ನಿಸಿ 'ರದ್ದುಗೊಳಿಸಬೇಕು' ಎಂದು ಕೋರಿದ್ದರು.
ಹಿರಿಯ ನಾಗರಿಕರ ಗೌರವ ಕಾಪಾಡಬೇಕು
'ಹಿರಿಯ ನಾಗರಿಕರು ಎನಿಸಿರುವ ಅತ್ತೆಯನ್ನು ಸೊಸೆ ಔಟ್ ಔಸ್ನಲ್ಲಿ (ಹೊರಮನೆ) ಇರಿಸಿದ್ದಾರೆ. ಇದರಿಂದ ಅತ್ತೆ ತಮ್ಮ ಸ್ವಂತ ಮನೆಗೆ ಗೌರವಯುತ ಪ್ರವೇಶ ಹೊಂದುವ ಅವಕಾಶ ಕಳೆದುಕೊಳ್ಳುತ್ತಿದ್ದಾರೆ. ಮನೆಯು ಸೊಸೆಯ ವಶದಲ್ಲಿದ್ದು, ಅವರು ಆ ಆವರಣದಲ್ಲಿ ವಾಸಿಸುತ್ತಿಲ್ಲ. ಪತಿಯ ಮರಣದ ನಂತರ ಸೊಸೆ ಆಂಧ್ರಪ್ರದೇಶಕ್ಕೆ ತಮ್ಮ ನಿವಾಸವನ್ನು ಬದಲಾಯಿಸಿದ್ದಾರೆ. ಅತ್ತೆಯೊಂದಿಗೆ ಸೊಸೆಯ ಸಂಬಂಧ ಹಳಸಿದೆ. ಈ ಆಧಾರದಡಿ ಮನೆಯ ಆವರಣವನ್ನು ಉಳಿಸಿಕೊಳ್ಳಲು ಸೊಸೆಗೆ ಒತ್ತಾಯಿಸಲು ಸಾಧ್ಯವಿಲ್ಲ' ಎಂದು ನ್ಯಾಯಪೀಠ ಆದೇಶದಲ್ಲಿ ವಿವರಿಸಿದೆ.