MVC Case- ರಸ್ತೆ ಅಪಘಾತದ ಮಾಹಿತಿ ನೀಡುವಲ್ಲಿ ಆಸ್ಪತ್ರೆ ವಿಳಂಬ: ಹಕ್ಕುದಾರನ ಕ್ಲೇಮು ಮೇಲೆ ಪರಿಣಾಮ ಬೀರದು- ಕರ್ನಾಟಕ ಹೈಕೋರ್ಟ್
MVC Case- ರಸ್ತೆ ಅಪಘಾತದ ಮಾಹಿತಿ ನೀಡುವಲ್ಲಿ ಆಸ್ಪತ್ರೆ ವಿಳಂಬ: ಹಕ್ಕುದಾರನ ಕ್ಲೇಮು ಮೇಲೆ ಪರಿಣಾಮ ಬೀರದು- ಕರ್ನಾಟಕ ಹೈಕೋರ್ಟ್
ಮೋಟಾರು ವಾಹನ ಅಪಘಾತ ಕ್ಲೇಮು ಪ್ರಕರಣಗಳಲ್ಲಿ ರಸ್ತೆ ಅಪಘಾತದ ಮಾಹಿತಿ ನೀಡುವಲ್ಲಿ ಆಸ್ಪತ್ರೆ ವಿಳಂಬ ಮಾಡಿರುವುದು ಹಕ್ಕುದಾರನ ಕ್ಲೇಮು ಮೇಲೆ ಪರಿಣಾಮ ಬೀರದು ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
"ಪಾಂಡುರಂಗ ವಿರುದ್ಧ ದುರ್ದುಂಡಿ ಮಾಲಗೌಡ ಪಾಟೀಲ್" ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್ನ ನ್ಯಾಯಮೂರ್ತಿ ಚಿಲ್ಲಕೂರು ಸುಮಲತಾ ಅವರಿದ್ದ ನ್ಯಾಯಪೀಠ ಈ ತೀರ್ಪು ನೀಡಿದೆ.
ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪರಿಹಾರ ಕೋರಿ ಮೋಟಾರು ಅಪಘಾತ ನ್ಯಾಯಮಂಡಳಿಯಲ್ಲಿ ಕ್ಲೇಮು ಮಂಡಿಸಿದ ಅರ್ಜಿಯನ್ನು ಬೆಳಗಾವಿಯ ಮೋಟಾರು ಅಪಘಾತ ಪರಿಹಾರ ನ್ಯಾಯಮಂಡಳಿ ವಜಾಗೊಳಿಸಿತ್ತು.
ಅಪಘಾತಕ್ಕೀಡಾಗಿ ಆಸ್ಪತ್ರೆಗೆ ದಾಖಲಾಗಿದ್ದರೂ, ಈ ಬಗ್ಗೆ ಆಸ್ಪತ್ರೆ ಪೊಲೀಸರಿಗೆ ಯಾವುದೇ ಮಾಹಿತಿ ನೀಡಿಲ್ಲ. ಗಾಯಾಳು ಅಪಘಾತದ ಬಗ್ಗೆ ತಕ್ಷಣ ದೂರು ನೀಡುವಲ್ಲಿ ನಿರ್ಲಕ್ಷ್ಯ ತೋರಿದ್ದಾರೆ. ಸದ್ರಿ ಪ್ರಕರಣದಲ್ಲಿ ಎಫ್ಐಆರ್ ದಾಖಲಿಸುವಲ್ಲಿ ವಿಳಂಬವಾಗಿದೆ ಎಂಬ ಕಾರಣಕ್ಕೆ ಅಪಘಾತ ಪರಿಹಾರ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಲಾಗಿತ್ತು.
ಆದರೆ. ವಿಳಂಬವಾಗಿ ದೂರು ಸಲ್ಲಿಸಿದ್ದಾರೆ ಎಂಬ ಕಾರಣಕ್ಕೆ ಕ್ಲೇಮುದಾರನ ಅರ್ಜಿಯನ್ನು ಅನುಮಾನದ ದೃಷ್ಟಿಯಿಂದ ನೋಡಲಾಗದು. ಆಸ್ಪತ್ರೆ ಅಧಿಕಾರಿಗಳು ಪೊಲೀಸರಿಗೆ ಅಪಘಾತದ ಬಗ್ಗೆ ಮಾಹಿತಿ ರವಾನಿಸಲು ನಿರ್ಲಕ್ಷ್ಯ ತೋರಿದರು ಎಂಬ ಕಾರಣಕ್ಕೆ ಕ್ಲೇಮುದಾರ ಅರ್ಜಿಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
ಪೊಲೀಸರಿಗೆ ದೂರು ನೀಡುವ ಯಾವುದೇ ಕಾನೂನು ಸಮಯ ನಿಗದಿಪಡಿಸಿಲ್ಲ. ಆದರೆ, ಆ ವಿಳಂಬ ಎಷ್ಟು ಸಮಂಜಸ ಅಥವಾ ಅಪಾಯಕಾರಿ ಎಂಬುದನ್ನು ಆಯಾ ಪ್ರಕರಣದ ವಾಸ್ತವಾಂಶ ಮತ್ತು ಸನ್ನಿವೇಶವನ್ನು ಅವಲಂಬಿಸಿರುತ್ತದೆ ಎಂದು ಹೇಳಿರುವ ನ್ಯಾಯಪೀಠ, ಎರಡೂ ಮೇಲ್ಮನವಿಗಳನ್ನು ಪುರಸ್ಕರಿಸಿದ್ದು, ಅರ್ಹತೆಯ ಆಧಾರದಲ್ಲಿ ಪ್ರಕರಣವನ್ನು ಮತ್ತೆ ಇತ್ಯರ್ಥಪಡಿಸಬೇಕು ಎಂದು ಟ್ರಿಬ್ಯೂನಲ್ಗೆ ನಿರ್ದೇಶನ ನೀಡಿದೆ.
ಪ್ರಕರಣ:ಪಾಂಡುರಂಗ ವಿರುದ್ಧ ದುರ್ದುಂಡಿ ಮಾಲಗೌಡ ಪಾಟೀಲ್
ಕರ್ನಾಟಕ ಹೈಕೋರ್ಟ್, MFA 103215/2014 Dated 05-11-2025