ಎಸ್ಪಿ ಅನುಮೋದನೆ ಇಲ್ಲದೆ ವಕೀಲರಿಗೆ ಸಮನ್ಸ್ ನೀಡುವಂತಿಲ್ಲ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು
ಎಸ್ಪಿ ಅನುಮೋದನೆ ಇಲ್ಲದೆ ವಕೀಲರಿಗೆ ಸಮನ್ಸ್ ನೀಡುವಂತಿಲ್ಲ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು
ಕ್ರಿಮಿನಲ್ ಪ್ರಕರಣಗಳ ತನಿಖೆ ಸಂದರ್ಭದಲ್ಲಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಅನುಮೋದನೆ ಇಲ್ಲದ ಹೊರತು ಪ್ರಕರಣದ ತನಿಖಾಧಿಕಾರಿಗಳು (ಐಒಗಳು) ವಕೀಲರಿಗೆ ಸಮನ್ಸ್ ಜಾರಿಗೊಳಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಹಿರಿಯ ವಕೀಲರಾದ ಅರವಿಂದ್ ದಾತರ್ ಹಾಗೂ ಪ್ರತಾಪ್ ವೇಣುಗೋಪಾಲ್ ಅವರಿಗೆ ಇ.ಡಿ ಜಾರಿಗೊಳಿಸಿದ್ದ ಸಮನ್ಸ್ಗೆ ಸಂಬಂಧಿಸಿದಂತೆ ಸ್ವಯಂ ಪ್ರೇರಿತ ವಿಚಾರಣೆ ಕೈಗೆತ್ತಿಕೊಂಡಿದ್ದ ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಬಿ. ಆರ್. ಗವಾಯಿ, ನ್ಯಾಯಮೂರ್ತಿಗಳಾದ ವಿನೋದ್ ಚಂದ್ರನ್, ಎನ್. ವಿ. ಅಂಜಾರಿಯಾ ಅವರಿದ್ದ ನ್ಯಾಯಪೀಠ ಈ ಮಹತ್ವದ ತೀರ್ಪು ನೀಡಿದೆ.
ಕಕ್ಷಿದಾರರಿಗೆ ಸಲಹೆ ನೀಡಿದ ಕಾರಣಕ್ಕೆ ವಕೀಲರಿಗೆ ಜಾರಿ ನಿರ್ದೇಶನಾಲಯ (ಇ.ಡಿ.) ಸೇರಿದಂತೆ ಯಾವುದೇ ತನಿಖಾ ಸಂಸ್ಥೆಗಳು ಸಮನ್ಸ್ ನೀಡುವಂತಿಲ್ಲ ಎಂದು ನ್ಯಾಯಪೀಠ ತನ್ನ ತೀರ್ಪಿನಲ್ಲಿ ಹೇಳಿದೆ.
ಭಾರತೀಯ ಸಾಕ್ಷ್ಯ ಅಧಿನಿಯಮ-2023 (ಬಿಎಸ್ಎ) ಸೆಕ್ಷನ್ 132ರ ಅಡಿಯಲ್ಲಿ ಉಲ್ಲೇಖಿಸಿದಂತೆ ಅಸಾಧಾರಣ ಸಂದರ್ಭಗಳಲ್ಲಿ ಮಾತ್ರ ವಕೀಲರಿಗೆ ಸಮನ್ಸ್ ನೀಡಬಹುದು. ಕಕ್ಷಿದಾರರ ಜತೆಗಿನ ವಕೀಲರ ಗೌಪ್ಯ ಸಂವಹನಗಳನ್ನು ಬಹಿರಂಗಪಡಿಸುವುದನ್ನು ಬಿಎಸ್ಎ ಸೆಕ್ಷನ್ 132 ನಿಷೇಧಿಸುತ್ತದೆ ಎಂದು ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ಮತ್ತೊಮ್ಮೆ ಸ್ಪಷ್ಟಪಡಿಸಿತು.
ಆರೋಪಿಗಳ ಪರ ವಾದಿಸುವ ವಕೀಲರಿಗೆ ಯಾವುದೇ ಸಂದರ್ಭದಲ್ಲಿ ತನಿಖಾಧಿಕಾರಿಗಳು ಸಮನ್ಸ್ ನೀಡಬಾರದು. ಒಂದು ವೇಳೆ ಸಮನ್ಸ್ ನೀಡುವುದಿದ್ದರೆ ಯಾವ ಕಾರಣಕ್ಕೆ ಸಮನ್ಸ್ ನೀಡಲಾಗಿದೆ ಎಂಬುದನ್ನು ನೋಟಿಸ್ನಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಬೇಕು ಎಂದು ಹೇಳಿರುವ ನ್ಯಾಯಪೀಠ, ದಾತಾರ್ ಹಾಗೂ ಇನ್ನಿತರರಿಗೆ ಜಾರಿ ನಿರ್ದೇಶನಾಲಯ ನೀಡಿದ್ದ ಸಮನ್ಸ್ ರದ್ದುಗೊಳಿಸಿತು.
ವಕೀಲರ ಡಿಜಿಟಲ್ ಸಾಧನಗಳನ್ನು ವಶಪಡಿಸಿಕೊಂಡಿದ್ದರೆ ಸಂಬಂಧಪಟ್ಟ ಕ್ರಿಮಿನಲ್ ವಿಚಾರಣಾ ನ್ಯಾಯಾಲಯದ ಮುಂದೆ ಹಾಜರುಪಡಿಸಬೇಕು. ಜೊತೆಗೆ ವಕೀಲರು ಮತ್ತು ಸಂಬಂಧಪಟ್ಟ ಇತರ ಪಕ್ಷಕಾರರ ಸಮ್ಮುಖದಲ್ಲಿ ಮಾತ್ರವೇ ಅವುಗಳನ್ನು ತೆರೆಯಬೇಕು ಎಂದು ನ್ಯಾಯಾಲಯ ತಿಳಿಸಿದೆ.
ಕಕ್ಷಿದಾರರಿಗೆ ಕಾನೂನು ಸಲಹೆ ನೀಡುವ ವಕೀಲರಿಗೆ ಕಾನೂನು ರಕ್ಷಣೆ ಇದೆ. ತನಿಖಾ ಸಂಸ್ಥೆಗಳು ಮನಸ್ಸಿಗೆ ತೋಚಿದಂತೆ ವಕೀಲರಿಗೆ ಸಮನ್ಸ್ ನೀಡುವಂತಿಲ್ಲ. ಇದಕ್ಕೆ ಕಡಿವಾಣ ಹಾಕುವುದಕ್ಕಾಗಿ ಸುಪ್ರೀಂ ಕೋರ್ಟ್ ಈ ತೀರ್ಪಿನ ಮೂಲಕ ಮಾರ್ಗಸೂಚಿಯನ್ನು ಹೊರಡಿಸಿತು.
ಹಣ ಅಕ್ರಮ ವರ್ಗಾವಣೆ ಕುರಿತು ನಡೆಸುತ್ತಿರುವ ತನಿಖೆ ಭಾಗವಾಗಿ ಜಾರಿ ನಿರ್ದೆಶನಾಲಯವು ದಾತಾರ್ ಹಾಗೂ ಪ್ರತಾಪ್ ವೇಣುಗೋಪಾಲ್ ಅವರಿಗೆ ಸಮನ್ಸ್ ನೀಡಿತ್ತು. ಈ ವಿಚಾರವಾಗಿ ಸುಪ್ರೀಂ ಕೋರ್ಟ್ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿತ್ತು.
ದಾತಾರ್ ಹಾಗೂ ಪ್ರತಾಪ್ ಅವರಿಗೆ ಸಮನ್ಸ್ ನೀಡಿದ ಜಾರಿ ನಿರ್ದೇಶನಾಲಯದ ಕ್ರಮಕ್ಕೆ ಸುಪ್ರೀಂ ಕೋರ್ಟ್ ವಕೀಲರ ಸಂಘ (ಎಸ್ಸಿಬಿಎ) ಹಾಗೂ ಸುಪ್ರೀಂ ಕೋರ್ಟ್ ಆನ್ ರೆಕಾರ್ಡ್ ವಕೀಲರ ಸಂಘ (ಸ್ಕೋರಾ) ಆಕ್ರೋಶ ವ್ಯಕ್ತಪಡಿಸಿದ್ದು, ವಕೀಲರ ಸಮುದಾಯದಿಂದ ವ್ಯಾಪಕ ಟೀಕೆ ವ್ಯಕ್ತವಾಗಿತ್ತು.
ಇದು ವಿವಾದದ ಸ್ವರೂಪ ಪಡೆದ ಕೂಡಲೇ ಸುತ್ತೋಲೆ ಹೊರಡಿಸಿದ ಜಾರಿ ನಿರ್ದೇಶನಾಲಯ, ಇ.ಡಿ ನಿರ್ದೇಶಕರಿಂದ ಪೂರ್ವಾನುಮತಿ ಮತ್ತು ಬಿಎಸ್ಎ ಸೆಕ್ಷನ್ 132ಕ್ಕೆ ಅನುಗುಣವಾಗಿ ಇಲ್ಲದ ಹೊರತು, ಹಣ ಅಕ್ರಮ ವರ್ಗಾವಣೆ ಪ್ರಕರಣಗಳಲ್ಲಿ ವಕೀಲರಿಗೆ ಸಮನ್ಸ್ ನೀಡದಂತೆ ತನ್ನ ಅಧಿಕಾರಿಗಳಿಗೆ ಸೂಚನೆ ನೀಡಿತ್ತು.
ಸುಪ್ರೀಂ ಕೋರ್ಟ್ನ ಈ ತೀರ್ಪು ವಕೀಲರು ಹಾಗೂ ಕಕ್ಷಿದಾರರ ಹಕ್ಕಗಳ ರಕ್ಷಣೆಗೆ ಸಂಬಂಧಿಸಿ ಮಹತ್ವದ ಕ್ರಮ ಎಂದು ವಿಶ್ಲೇಷಿಸಲಾಗಿದೆ.